ಮತ್ತೆ ಸದ್ದು ಮಾಡಿದ ಸತ್ತಿದ್ದಾನೆಂದು ತಿಳಿದಿದ್ದ ಭೂಗತ ಪಾತಕಿ ಹೆಸರು: ಯಾರು ಈ ಹೇಮಂತ್ ಪೂಜಾರಿ?
2013ರಲ್ಲಿ ಕಣ್ಮರೆಯಾಗಿ ಸತ್ತಿದ್ದಾನೆ ಎಂದೇ ಭಾವಿಸಲಾಗಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರು ಮುದರಂಗಡಿ ಉದ್ಯಮಿ ಡೇವಿಡ್ ಶೂಟೌಟ್ ಪ್ರಕರಣದ ತನಿಖೆ ವೇಳೆ ಮತ್ತೆ ಸದ್ದು ಮಾಡಿದ್ದು, ಆತ ಬದುಕಿರುವ ಶಂಕೆ ವ್ಯಕ್ತವಾಗಿದೆ. ಬಾಂಬೆಯ ಘಾಟ್ಗೋಪರ್ನಲ್ಲಿ ಹೋಟೆಲ್ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ ಹೇಮಂತ್ ಪೂಜಾರಿ 1999ರಿಂದ ಭೂಗತ ಲೋಕಕ್ಕೆ ಕಾಲಿಟ್ಟಿದ್ದ ಈತ ಛೋಟಾ ರಾಜನ್ ಗ್ಯಾಂಗಿನ ಪ್ರಮುಖ ಶೂಟರ್ ಆಗಿದ್ದ.

ಉಡುಪಿ, ಆಗಸ್ಟ್ 25: 2013ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಸತ್ತಿದ್ದಾನೆ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಆದರೀಗ ಆತನ ಹೆಸರು ಮತ್ತೆ ಸದ್ದು ಮಾಡಿದೆ. ಉಡುಪಿ ಜಿಲ್ಲೆಯ ಮುದರಂಗಡಿ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣದ ಆರೋಪಿಗೆ ಮುಂಬೈ ಭೂಗತ ಜಗತ್ತಿಗಲ್ಲಿ ಸಂಚಲನ ಮೂಡಿಸಿ, ಸುದ್ದಿಯಾಗಿದ್ದ ಹೆಚ್ಪಿ ಅಲಿಯಾಸ್ ಹೇಮಂತ್ ಪೂಜಾರಿ ನಂಟಿರುವ ಶಂಕೆ ಪೊಲೀಸರ ತನಿಖೆ ವೇಳೆ ವ್ಯಕ್ತವಾಗಿದೆ.
ಹೌದು, ಡೇವಿಡ್ ಹತ್ಯೆಯ ಬಳಿಕ ಶೂಟರ್ ರಾಜು ನೇರವಾಗಿ ವ್ಯಕ್ತಿಯೋರ್ವನಿಗೆ ಕರೆ ಮಾಡಿದ್ದು, ನಿನಗೆ ಸಲ್ಲಬೇಕಾದ ಹಣ ಸಲ್ಲುತ್ತದೆ ನೀನು ಸುರಕ್ಷಿತ ಜಾಗ ನೋಡಿ ಅಡಗಿಕೋ ಎಂದು ಆ ಕಡೆಯಿಂದ ಮಾತನಾಡಿರೋದು ಗೊತ್ತಾಗಿದೆ. ಶೂಟರ್ ಸಂಭಾಷಣೆ ನಡೆಸಿರೋದು ಹೇಮಂತ್ ಪೂಜಾರಿ ಬಳಿಯೇ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಡೇವಿಡ್ ಹತ್ಯೆಯ ಬಳಿಕ ಹೋಟೇಲ್ ಉದ್ಯಮಿಯ ಜೊತೆಗೂ ಹೆಚ್ಪಿಯೇ ಮಾತನಾಡಿದ್ದಾನೆ ಎಂದು ಹೇಳಲಾಗಿರುವ ಆಡಿಯೋ ಸಿಕ್ಕಿದ್ದು, ಅದರಲ್ಲಿ ಮೇ ಹೆಚ್ಪಿ ಬೋಲ್ ರಹಾ ಹೂಂ ಎಂದು ಮಾತನಾಡಿರೋದು ಗೊತ್ತಾಗಿದೆಯಂತೆ.
ಇದನ್ನೂ ಓದಿ: ಉಡುಪಿ ಕಾಂಗ್ರೆಸ್ ಮಖಂಡನ ಹತ್ಯೆ: ಶಾರ್ಪ್ ಶೂಟರ್ಸ್ಗಳ ಭಯಾನಕ ಕ್ರೈಂ ಡೈರಿ ತೆರೆದಿಟ್ಟ ಎಸ್ಪಿ
ಯೂರು ಈ ಹೇಮಂತ್ ಪೂಜಾರಿ?
ಬಾಂಬೆಯ ಘಾಟ್ಗೋಪರ್ನಲ್ಲಿ ಹೋಟೆಲ್ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ ಹೇಮಂತ್ ಪೂಜಾರಿ 1999ರಿಂದ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ಛೋಟಾ ರಾಜನ್ ಗ್ಯಾಂಗಿನ ಪ್ರಮುಖ ಶೂಟರ್ ಆಗಿದ್ದ ಈತ, ಮುಂಬೈನ ಗೋರೆಗಾಂವ್ನಲ್ಲಿ ಮಾರ್ಚ್ 2011ರಲ್ಲಿ 75 ವರ್ಷದ ಕೇಕ್ ಅಂಗಡಿ ಮಾಲೀಕ ಅಂಗಾರ ಪೂಜಾರಿ ಎಂಬವರನ್ನು ಶೂಟ್ ಮಾಡಿ ಕೊಂದಿದ್ದ. ನಂತರ ಯಾವುದೇ ಅಪರಾಧದಲ್ಲಿ ಭಾಗಿಯಾಗದೆ ಸೈಲೆಂಟ್ ಆಗಿದ್ದ ಹೆಚ್ಪಿ ಸತ್ತಿದ್ದಾನೆ ಎಂಬ ಬಗ್ಗೆ 2013ರಲ್ಲಿ ಸುದ್ದಿಯಾಗಿತ್ತು. ಆದರೆ ಆತನ ಹೆಸರೀಗ ಆಗಸ್ಟ್ 7ರಂದು ಮುದರಂಗಡಿಯಲ್ಲಿ ನಡೆದ ಡೇವಿಡ್ ಶೂಟೌಟ್ ಪ್ರಕರಣದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. ಹೀಗಾಗಿ ಆತ ಬದುಕಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆಯಾದರೂ, ಆಡಿಯೋದಲ್ಲಿರೋದು ನಿಜಕ್ಕೂ ಆತನ ಧ್ವನಿಯಾ ಎಂಬುದು ಇನ್ನಷ್ಟೇ ದೃಢಪಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




