ದೇವರ ಜಮೀನು ಉಳಿಮೆ ಮಾಡುವ ಸಂಪ್ರದಾಯ ದಾವಣಗೆರೆಯಲ್ಲಿ ಜೀವಂತ; ಏನಂತ ನೀವೆ ನೋಡಿ

ಜಿಲ್ಲೆಯ ನ್ಯಾಮತಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದ ಅನ್ನದಾತರು ಸಂಪ್ರದಾಯದಂತೆ ದೇವರು ಜಮೀನನಲ್ಲಿ ಗ್ರಾಮಸ್ಥರು ಸಾಮೂಹಿಕ ಪೂಜೆ ಮಾಡಿ ಚಾಲನೆ ನೀಡಿದರು. ಮಲ್ಲಿಗೆನಹಳ್ಳಿ ಗ್ರಾಮದ ಅನ್ನದಾತರು ಈ ಬಾರಿಯಾದರೂ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳಿಗೆ ನೀರು ತುಂಬಿ ಉತ್ತಮ ಬೆಳೆಯಾಗಲಿ ಎಂದು ಭೂತಾಯಿಯನ್ನು ಪ್ರಾರ್ಥಿಸಿದ್ದಾರೆ.

ದೇವರ ಜಮೀನು ಉಳಿಮೆ ಮಾಡುವ ಸಂಪ್ರದಾಯ ದಾವಣಗೆರೆಯಲ್ಲಿ ಜೀವಂತ; ಏನಂತ ನೀವೆ ನೋಡಿ
ಜೋಡೆತ್ತುಗಳನ್ನು ಜಮೀನಿಗೆ ಕರೆದೊಯ್ಯುತ್ತಿರುವ ರೈತರು

ದಾವಣಗೆರೆ: ಎಲ್ಲರು ಮಾಡುವುದು ತುತ್ತು ಅನ್ನಕ್ಕಾಗಿ ಎಂಬ ಮಾತೊಂದಿದೆ. ಆ ತುತ್ತು ಅನ್ನ ಸಿಗುವುದೇ ರೈತನ ಬೇವರಿನ ಫಲದಿಂದ. ಹೀಗೆ ಇದಕ್ಕೆ ತನ್ನದೆ ಆದ ಕೆಲ ಸಂಪ್ರದಾಯ, ಆಚಾರ ವಿಚಾರಗಳಿವೆ. ವರ್ಷದ ಮೊದಲ ಬೇಸಾಯ ಆರಂಭಿಸಬೇಕು ಎಂದರೆ ಆ ಸಂಪ್ರದಾಯ ಆದ ಮೇಲೆ ರೈತ ತನ್ನ ಜಮೀನಿಗೆ ಹೋಗಿ ಉಳುಮೆ ಶುರುಮಾಡುವುದು. ಇದಕ್ಕೆ ಮೊದಲ ಬೇಸಾಯ ಎನ್ನುತ್ತಾರೆ. ಇಂತಹ ವಿಶಿಷ್ಟ ಬೇಸಾಯ ದಾವಣಗೆರೆ ಜಿಲ್ಲೆಯಲ್ಲಿ ಜೀವಂತವಿದೆ. ಕಾಲ ಬದಲಾದರು ಸಂಪ್ರದಾಯ ಮಾತ್ರ ಜೀವಂತವಿದೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದ ಅನ್ನದಾತರು ಸಂಪ್ರದಾಯದಂತೆ ದೇವರು ಜಮೀನನಲ್ಲಿ ಗ್ರಾಮಸ್ಥರು ಸಾಮೂಹಿಕ ಪೂಜೆ ಮಾಡಿ ಚಾಲನೆ ನೀಡಿದರು. ಮಲ್ಲಿಗೆನಹಳ್ಳಿ ಗ್ರಾಮದ ಅನ್ನದಾತರು ಈ ಬಾರಿಯಾದರೂ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳಿಗೆ ನೀರು ತುಂಬಿ ಉತ್ತಮ ಬೆಳೆಯಾಗಲಿ ಎಂದು ಭೂತಾಯಿಯನ್ನು ಪ್ರಾರ್ಥಿಸಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದ ಬಳಿಕ ಇಡೀ ಗ್ರಾಮಸ್ಥರು ಭೂಮಿಗೆ ಪೂಜೆ ನೆರವೇರಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ಕೃಷಿ ಚಟುವಟಿಕೆಗೆ ಸಾಮೂಹಿಕವಾಗಿ ಚಾಲನೆ ನೀಡಿರುವುದು ವಿಶೇಷವಾಗಿದೆ.

ಅರೆ ಮಲೆನಾಡಿನ ನ್ಯಾಮತಿ ಭಾಗಗಳಲ್ಲಿ ಅನ್ನದಾತರು ಮೊದಲ ಬೇಸಾಯ ಮಾಡಬೇಕಾದರೆ ಗ್ರಾಮದ ಜಂಗಮರ, ಪುರೋಹಿತರ ಪಂಚಾಂಗದ ಪ್ರಕಾರ ಅದಿದೇವತೆಯ ಅಪ್ಪಣೆಯನ್ನು ಕೇಳುತ್ತಾರೆ. ನಂತರ ಹೇಳಿದ ಅಣತಿಯಂತೆ ಯಾರ ಹೆಸರಿಗೆ ಬಲ ಬರುತ್ತದಯೋ ಬಲಚಾರದ ವ್ಯಕ್ತಿಯು ಗ್ರಾಮ ದೇವತೆಗೆ, ಗ್ರಾಮದ ಅಗಸೆ ಬಾಗಿಲು, ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ, ಮೊದಲ ಬೇಸಾಯ ವರ್ಷಧಾರೆ ಉಳುಮೆಗೆ ಚಾಲನೆ ನೀಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ.

ತಮ್ಮ ತಮ್ಮ ಜಮೀನುಗಳಲ್ಲಿ ಮೊದಲ ಬೇಸಾಯ ಮಾಡುವುದು ಸಂಪ್ರದಾಯ. ಅದರೆ ನ್ಯಾಮತಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಮಾತ್ರ ವಿಶೇಷವಾಗಿ ಸುಮಾರು ಐದು ಎಕರೆಯ ವಿಸ್ತೀರ್ಣದ ದೇವರ ಜಮೀನನಲ್ಲಿ ಗ್ರಾಮಸ್ಥರು ಸಾಮೂಹಿಕ ಪೂಜೆ ಮಾಡಿ ಚಾಲನೆ ನೀಡುತ್ತಾರೆ. ಪುರಾತನ ಕಾಲದಿಂದಲೂ ದೇವರ ಜಮೀನನಲ್ಲಿ ಈಗಲೂ ಕೂಡ ಚಾಚು ತಪ್ಪದೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ದೇವತೆಗಳ ಅಣತಿಯಂತೆ ಗ್ರಾಮದ ಹೆಸರಿನ ಬಲಚಾರ ಹೊಂದಿದ ರೈತಾಪಿ ಕುಟುಂಬ ಆ ದಿನ ಗ್ರಾಮ ದೇವತೆಗಳಿಗೆ ಹಾಗೂ ಕರಿಗಲ್ಲಿಗೆ ಪೂಜೆ ಸಲ್ಲಿಸಿ ಮೊದಲ ಬೇಸಾಯ ಮಾಡುವಂತಹ ಸಂಪ್ರದಾಯವನ್ನು ಹೊಂದಿದೆ.

ಕೃಷಿ ಸಾಮಾಗ್ರಿಗಳನ್ನು ಪೂಜೆಗೆ ಸಾಗಿಸುತ್ತಿರುವ ಗ್ರಾಮಸ್ಥರು

ವಿಶಿಷ್ಟ ಹಬ್ಬವಿದು
ಇದಕ್ಕೂ ಮೊದಲು ಮನೆಯಲ್ಲಿರುವ ಎತ್ತು, ದನ ಕರುಗಳ ಮೈ ತೊಳೆದು, ಕೃಷಿ ಪರಿಕರಿಗಳನ್ನು ಸ್ವಚ್ಛಗೊಳಿಸಿ, ಮಾವಿನ ಸೊಪ್ಪು, ಬಾಳೆಕಂದುಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಮನೆಯಲ್ಲಿ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ಮಾಡಿಕೊಂಡು ಯಾರ ಹೆಸರಿಗೆ ಬಲ ಬಂದಿರುತ್ತದೆಯೋ ಅವರು ಕುಟುಂಬದ ಸದಸ್ಯರೊಂದಿಗೆ ಬೇಸಾಯದ ಜೊತೆ ದೇವರ ಜಮೀನಿಗೆ ತೆರಳಿ ಭೂಮಿ ಪೂಜೆ ನೆರವೇರಿಸುತ್ತಾರೆ. ಏಕಕಾಲದಲ್ಲಿ ನೇಗಿಲನ್ನು ಹೊತ್ತ ಜೋಡೆತ್ತುಗಳೊಂದಿಗೆ ಹಬ್ಬದ ಅಡುಗೆಯೊಂದಿಗೆ ಪೂಜಾ ಸಾಮಗ್ರಿಗಳನ್ನು ಹೊತ್ತು ಹೊಲದ ಕಡೆ ಮುಖ ಮಾಡುತ್ತಾರೆ. ಇಲ್ಲಿ ದೇವರ ಭೂಮಿಯಲ್ಲಿ ಬೇಸಾಯ ಮಾಡಿದರೆ ಮುಗಿಯಿತು ಮತ್ತೆ ತಮ್ಮ ಸ್ವಂತ ಜಮೀನುಗಳಲ್ಲಿ ಮಾದಲ ಬೇಸಾಯದ ಪೂಜೆ ಮಾಡುವುದಿಲ್ಲ.

ಹೀಗೆ ದೇವರ ಜಮೀನು ಉಳುಮೆ ಮಾಡಿದ ಬಳಿಕ ತಮ್ಮ ಜಮೀನಿನಲ್ಲಿ ಬೇಸಾಯ ಶುರು ಮಾಡುತ್ತಾರೆ. ಇದೊಂದು ವಿಶಿಷ್ಟ ಹಬ್ಬ. ರೈತಾಪಿ ಜನ ತಮ್ಮ ಕುಟುಂಬದ ಸದಸ್ಯರನ್ನೆಲ್ಲ ಕರೆದುಕೊಂಡು ಹೋಗಿ ದೇವರ ದರ್ಶನ ಪಡೆದು ಗ್ರಾಮದ ಹೊರ ವಲಯದಲ್ಲಿ ಇರುವ ಗ್ರಾಮ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿಯೆ ಉಳಿಮೆ ಮಾಡಬೇಕು. ಇದರಿಂದ ಮಳೆ ಬೆಳೆ ಚೆನ್ನಾಗಿ ಬರುತ್ತದೆ. ರೈತರು ನೆಮ್ಮದಿಯಿಂದ ಬದುಕಬಹುದು ಎಂಬುದು ಜನರ ನಂಬಿಕೆ.

ಇದನ್ನೂ ಓದಿ

ದಿನಪತ್ರಿಕೆಗಳಲ್ಲಿ ನಗುಮುಖದ ಜಾಹೀರಾತು! ಕೇಂದ್ರ-ರಾಜ್ಯ ಸರ್ಕಾರಕ್ಕೆ ಸೂಕ್ಷ್ಮತೆ ಇಲ್ಲವೇ ಎಂದು ಝಾಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಚಿತ್ರದುರ್ಗದಲ್ಲಿ ಮಂಗಗಳ ಸರಣಿ ಸಾವು; ಸತ್ತ ಮಂಗಗಳಿಗೆ ಸಾಂಪ್ರದಾಯಿಕ ಅಂತ್ಯ ಸಂಸ್ಕಾರ

(Unique tradition of land cultivating is still active in Davanagere)