ಪುತ್ರನಿಗೆ ತಿಂಡಿ ಕೊಡಿಸಲು ಹೋಗಿ ಬಚಾವ್! ಪಹಲ್ಗಾಮ್ ದಾಳಿ ವೇಳೆ ಸ್ವಲ್ಪದರಲ್ಲೇ ಪಾರಾದ ಶಿರಸಿ ಕುಟುಂಬ
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಕರ್ನಾಟಕದ ಶಿರಸಿ ತಾಲ್ಲೂಕಿನ ಗುಬ್ಬಿಗದ್ದೆಯ ಪ್ರದೀಪ್ ಹೆಗಡೆ ಕುಟುಂಬ ಪವಾಡವೆಂಬಂತೆ ಪಾರಾಗಿ ಬಂದಿದೆ. ಬೈಸರನ್ ಕಣಿವೆ ಬಳಿ ಉಗ್ರರ ದಾಳಿಗೆ ಎದುರಲ್ಲೇ ಶವಗಳು ಬಿದ್ದಿರೋದನ್ನ ಕಂಡು ಭಯಪಟ್ಟಿದ್ದರು. ಹೇಗೋ ಹೊಂಡದಲ್ಲಿ ಬಚ್ಚಿಟ್ಟುಕೊಂಡು ಬಚಾವ್ ಆಗಿ ತಾಯ್ನಾಡಿಗೆ ವಾಪಸ್ಸ್ ಆಗಿದ್ದು ಮಾತ್ರ ಅಚ್ಚರಿ.

ಕಾರವಾರ, ಏಪ್ರಿಲ್ 28: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam) ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರರನ್ನು ಸದೆಬಡಿಯಲು ಭಾರತ ಸರ್ಕಾರ ಮತ್ತು ಯೋಧರು ಇಬ್ಬರು ಸಿದ್ಧರಾಗಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಬೇಟೆಗೆ ರಣರೋಚಕ ಆಕ್ರಮಣ್ ಆಪರೇಷನ್ ಕೂಡ ನಡೆಯುತ್ತಿದೆ. ಇನ್ನು ಈ ದಾಳಿಯಲ್ಲಿ ಈಗಾಗಲೇ ಕರ್ನಾಟಕದ ಇಬ್ಬರು ಸೇರಿದಂತೆ 26 ಪ್ರವಾಸಿಗರು ಸಾವಪ್ಪಿದ್ದಾರೆ. ಆದರೆ ಇದೇ ಪಹಲ್ಗಾಮ್ ಉಗ್ರರ ದಾಳಿಯಿಂದ ಶಿರಸಿಯ (Sirsi) ಕುಟುಂಬವೊಂದು ಕೊಂಚದರಲ್ಲೇ ತಪ್ಪಿಸಿಕೊಂಡು ಬಂದಿದೆ. ಪಹಲ್ಗಾಮ್ನಲ್ಲಿ ಕಣ್ಣಾರೆ ಕಂಡ ಆ ಭಯಾನಕ ಘಟನೆಯನ್ನು ಶಿರಸಿಯ ಪ್ರದೀಪ್ ಕುಟುಂಬ ಬಿಚ್ಚಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಬ್ಬಿಗದ್ದೆ ಗ್ರಾಮದ ಪ್ರದೀಪ್ ಹೆಗಡೆ ಕುಟುಂಬ ಏಪ್ರಿಲ್ 21 ರಂದು, ಪತ್ನಿ ಶುಭಾ ಮತ್ತು ಮಗ ಸಿದ್ಧಾಂತನ ಜೊತೆ ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಕ್ಕೆ ತೆರಳಿದ್ದರು. 7ಕಿಮೀ ದೂರ ಪಹಲ್ಗಾಮ್ಗೆ ಗುಡ್ಡ ಹತ್ತಿ ತೆರಳಬೇಕು. ಹೀಗಾಗಿ ಕುದುರೆ ಹತ್ತಿ ಪ್ರದೀಪ್ ಕುಟುಂಬ ಹೊರಟ್ಟಿತ್ತು.
ಇದನ್ನೂ ಓದಿ: ಉಗ್ರರು ದಾಳಿ ಮಾಡುವಾಗ ಧರ್ಮ ಕೇಳುತ್ತಾ ಕೂತಿರಲ್ಲ: ಸಚಿವ ಆರ್ಬಿ ತಿಮ್ಮಾಪುರ ಹೇಳಿಕೆಗೆ ವ್ಯಾಪಕ ಆಕ್ರೋಶ
ಕಾಶ್ಮೀರದಲ್ಲಿ ಎಲ್ಲೆಡೆ ಸೆಕ್ಯೂರಿಟಿ ಇದೆ. ಭೈಸರನ್ ಮೇಲ್ಭಾಗ, ಕೆಳಭಾಗ ಯಾಕೆ ಸೆಕ್ಯೂರಿಟಿ ಇಲ್ಲ ಎಂದು ನಾನು ಮತ್ತು ಶುಭಾ ಮಾತನಾಡಿಕೊಂಡಿದ್ದೇವು. ಭೈಸರನ್ ಕಾಡು ಪ್ರದೇಶದಿಂದ ಕೂಡಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಸುತ್ತಾ ಬೇಲಿ ಹಾಕಲಾಗಿದೆ. ಘಟನಾ ಸ್ಥಳದಲ್ಲಿ ಫೋಟೊ ತೆಗೆದ ಬಳಿಕ ಅಲ್ಲೇ ಇನ್ನೊಂದು ಸ್ಥಳಕ್ಕೆ ತೆರಳಲು ಮುಂದಾದಾಗ ಪುತ್ರ ಸಿದ್ಧಾಂತ್ ತಿಂಡಿ ಬೇಕೆಂದಿದ್ದ. ಹಾಗಾಗಿ ತಿಂಡಿ ಮಾಡಲು ಹೋಗಿದ್ದೇ ನಮ್ಮ ಪಾಲಿನ ಅದೃಷ್ಟವಾಗಿತ್ತು ಎನ್ನುತ್ತಾರೆ.
ತಿಂಡಿ ತಿನ್ನುತ್ತಿದ್ದಂತೆ ಮತ್ತೊಂದು ಕಡೆಯಲ್ಲಿ ಏನೋ ಸದ್ದು ಕೇಳಿಸಿತ್ತು. ಹೋಟೆಲ್ನವರು ಪಟಾಕಿ ಆಗಿರಬಹುದು ಅಂದಿದ್ದರು. ನಾವು ಫೋಟೊ ತೆಗೆಯುತ್ತಿದ್ದ ಸ್ಥಳದಿಂದ ಓರ್ವ ಗನ್ ಫೈರ್ ಮಾಡುತ್ತಾ ಬರುತ್ತಿದ್ದು, ಓರ್ವನಿಗೆ ಶೂಟ್ ಮಾಡಿದ್ದು ಕಂಡಿತ್ತು. ಏನೂ ಗೊತ್ತಾಗದೇ ಸ್ಥಳದಲ್ಲೇ ಮಲಗಿಕೊಂಡೆವು. ಈ ನಡುವೆ ಪತ್ನಿ ಬ್ಯಾಗ್ ಎತ್ತಿಕೊಳ್ಳಲು ಪ್ರಯತ್ನಿಸಿದಾಗ ಬುಲೆಟ್ ಕಿವಿ ಪಕ್ಕದಲ್ಲೇ ಪಾಸಾಗಿತ್ತು ಎಂದರು.
ಸ್ಥಳೀಯರು ಬಂದು ಓಡಲು ಹೇಳಿದಾಗ ಎದ್ದು ಓಡಿದೆವು. ಗೇಟ್ ಬಳಿ ನೂಕು ನುಗ್ಗಲಾಗಿ ನಾವು ಬಿದ್ದೆವು. ಕೆಸರಲ್ಲಿ ಕಾಲು ಹೂತು ಹೋಗುತ್ತಿತ್ತು, ಶೂ ಕಳಚಿ ಹೋಗಿತ್ತು. ಆದರೂ ಓಡಿದ್ವಿ. 20 ನಿಮಿಷ ಬುಲೆಟ್ ಸದ್ದು ಕೇಳಿಸಿತ್ತು. ಹಿಂತಿರುಗಿ ಬಂದಾಗ ಸ್ವಲ್ಪ ದೂರಕ್ಕೆ ಕುದುರೆ ಸವಾರಿ ಮಾಡಿಕೊಂಡು ಬಂದೆವು. ಉಳಿದವರು ಒಂದು ಕಡೆ ಹೋದರೆ, ನಮ್ಮನ್ನು ಇನ್ನೊಂದೆಡೆ ಕರೆದುಕೊಂಡು ಹೋದರು. ಕೆಳಗೆ ಬಂದಮೇಲೂ ಮೂರು ಜನ ಗನ್ ಹಿಡಿದುಕೊಂಡು ಸಿವಿಲ್ ಡ್ರೆಸ್ನಲ್ಲಿ ಇದ್ದದ್ದನ್ನು ನೋಡಿ ಭಯವಾಗಿತ್ತು.
ಇದನ್ನೂ ಓದಿ: ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳಿವು
ಮೇಲಿಂದ ಬದುಕಿ ಬಂದೆವು. ಇಲ್ಲಿ ಸಾಯೋದಿದ್ದರೆ ಹೇಗೋ ಸಾಯೋದೆ ಅಂತಾ ಧೈರ್ಯ ಮಾಡಿ ಹೋದೆವು. ಪುಣ್ಯಕ್ಕೆ ಅವರು ಪೊಲೀಸ್ ಆಗಿದ್ದರು. ಆಗ ಸ್ವಲ್ಪ ಸಮಾಧಾನವಾಯ್ತು. ಆದರೂ ಸುತ್ತ ಕಾಡಿನ ಮಧ್ಯೆ ಯಾರು ಶೂಟ್ ಮಾಡುತ್ತಾರೆ ಅಂತಾ ಭಯವಿತ್ತು. ಸೇನೆಯವರನ್ನು ಕಂಡಾಗ ಸಮಾಧಾನವಾಗಿತ್ತು. ಹೇಗೋ ಶ್ರೀನಗರಕ್ಕೆ ಬಂದರೂ ಘಟನೆಯ ಭಯ ಮಾತ್ರ ಹೋಗಿರಲಿಲ್ಲ ಎಂದು ಭಯಾನಕ ಅನುಭವವನ್ನು ಪ್ರದೀಪ್ ಕುಟುಂಬ ತೆರೆದಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:20 am, Mon, 28 April 25