AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಚಿವ ನಾಗೇಂದ್ರ ಆಪ್ತ ಎಸ್​ಐಟಿ ವಶಕ್ಕೆ

ರಾಜ್ಯ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ರಾಜ್ಯ ರಾಜ್ಯರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ವಿಪಕ್ಷಗಳಾದ ಜೆಡಿಎಸ್​ ಹಾಗೂ ಬಿಜೆಪಿ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದೆ. ಇದರ ಮಧ್ಯೆ ಎಸ್​ಐಟಿ ಅಧಿಕಾರಿಗಳು ಸಚಿವ ನಾಗೇಂದ್ರ ಆಪ್ತನನ್ನು ವಶಕ್ಕೆ ಪಡೆದುಕೊಂಡಿದೆ.

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಚಿವ ನಾಗೇಂದ್ರ ಆಪ್ತ ಎಸ್​ಐಟಿ ವಶಕ್ಕೆ
ನೆಕ್ಕಂಟಿ ನಾಗರಾಜ್, ಸಚಿವ ನಾಗೇಂದ್ರ
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on:Jun 03, 2024 | 10:12 PM

Share

ಬೆಂಗಳೂರು, (ಜೂನ್ 03): ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಲ್ಲಿದ್ದ ಕೋಟ್ಯಂತರ ರೂ. ಅಕ್ರಮವಾಗಿ ವರ್ಗಾವಣೆ ಪ್ರಕರಣದ (Valmiki corporation’s illegal money transfer case) ತನಿಖೆಯನ್ನು ಎಸ್​ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಇದೀಗ ಸಚಿವ ನಾಗೇಂದ್ರ (Minister Nagendra) ಆಪ್ತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂದು (ಜೂನ್ 03) ಸಚಿವ ನಾಗೇಂದ್ರ ಆಪ್ತ, ಕಾಂಗ್ರೆಸ್ ಮುಖಂಡ ನೆಕ್ಕಂಟಿ ನಾಗರಾಜ್​ನನ್ನು ವಶಕ್ಕೆ ಪಡೆದುಕೊಂಡು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ನೆಕ್ಕಂಟಿ ನಾಗರಾಜ್ ಅವರು ವಾಲ್ಮೀಕಿ ಕಚೇರಿಗೆ ಹೋಗಿ ಅಧಿಕಾರಿಗಳು ಹಾಗೂ ಸಚಿವರ ಕಡೆಯಿಂದ ಫೋನ್ ನಲ್ಲಿ ಮಾತನಾಡಿಸಿದ್ದ. ಈ ಹಿನ್ನೆಲೆಯಲ್ಲಿ ಇದೀಗ ಸದ್ಯ ನೆಕ್ಕಂಟಿ ನಾಗರಾಜ್ ನನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ನಾಳೆ ನ್ಯಾಯಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ನಾಗೇಂದ್ರ ರಾಜೀನಾಮೆಗೆ ಸೂಚಿಸಿಲ್ಲವೆಂದ ಸಿಎಂ ಸಿದ್ದರಾಮಯ್ಯ 

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಲ್ಲಿದ್ದ ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿನ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿನ ಖಾತೆಗಳಿಗೆ ವರ್ಗಾವಣೆ ಮಾಡಿರುವ ಹಗರಣದಲ್ಲಿ ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರುಗಣ್ಣವರ್‌ ಅವರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಶನಿವಾರ ಬಂಧಿಸಿದೆ.

ಇನ್ನು ಪರಾರಿ ಯತ್ನದಲ್ಲಿದ್ದ ಪದ್ಮನಾಭ ಹಾಗೂ ಪರಶುರಾಮ್‌ ಅವರನ್ನು ಬಂಧಿಸಿ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ನಿಗಮದ ಖಾತೆಯಲ್ಲಿದ್ದ 187.33 ಕೋಟಿ ರೂ.ಗಳ ಅಕ್ರಮ ವರ್ಗಾವಣೆ ರಹಸ್ಯ ಭೇದಿಸುವ ಪ್ರಯತ್ನ ನಡೆಸಿದ್ದಾರೆ.

ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಷ್‌ ಖರ್ಬೀಕರ್‌ ನೇತೃತ್ವದ ಎಸ್‌ಐಟಿ ತಂಡವು ಹಗರಣದ ತನಿಖೆಯನ್ನು ಚುರುಕುಗೊಳಿಸಿರುವುದು ನಿಗಮದ ಇತರೆ ಅಧಿಕಾರಿಗಳು ಹಾಗೂ ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಸಿಬ್ಬಂದಿಗೆ ನಡುಕ ಹುಟ್ಟಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:53 pm, Mon, 3 June 24