ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್; ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ಜಾಮೀನು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸುಪ್ರೀಂ ಕೋರ್ಟ್ ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಸೂಚನೆ ನೀಡಿದೆ. ಈ ತೀರ್ಪು ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಸಾಗಿದೆ.

ಧಾರವಾಡ, ಫೆಬ್ರವರಿ 27: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ (Supreme court) ಜಾಮೀನು ನೀಡಿದೆ. ಸುಪ್ರೀಂಕೋರ್ಟ್ ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದು, ಸಧ್ಯ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ. ಕುಲಕರ್ಣಿ ಪರ ವಾದ ಮಂಡಿಸಿದ್ದ ವಕೀಲ ಶರಣಗೌಡ ಪಾಟೀಲ್ ಅವರ ತಂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದೆ. ಶಾಸಕ ವಿನಯ್ ಕುಲಕರ್ಣಿ ಜಾಮೀನು ಪಡೆಯುವ ಮೂಲಕ ನ್ಯಾಯ ಪ್ರಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಸಾಗಿದ್ದಾರೆ.
ಸಾಕ್ಷಿಗಳನ್ನು ಬೆದರಿಸಿದ್ದ ಶಾಸಕನ ಜಾಮೀನು ರದ್ದಾಗಿತ್ತು
2016 ರ ಜುಲೈ 15ರಂದು ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜೆಡಿಪಿ ಸದಸ್ಯ ಯೋಗೇಶ ಗೌಡನನ್ನು ಜಿಮ್ನಲ್ಲಿ ಹತ್ಯೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಿಬಿಐಗೆ ಬಂಧಿತರಾಗಿದ್ದರು. ಸುಪ್ರೀಂಕೋರ್ಟ್ ಜಾಮೀನಿನ ಶರತ್ತಿನಂತೆ ಇವರಿಗೆ ಧಾರವಾಡ ಪ್ರವೇಶ ನಿಷೇಧವಿತ್ತು.
ವಿಚಾರಣೆ ವೇಳೆ ಸಾಕ್ಷಿಗಳನ್ನು ಪ್ರಭಾವಿಸುವ ಪ್ರಯತ್ನ, ಹಣದ ಆಮಿಷ ಮತ್ತಿತರ ಷರತ್ತುಗಳ ಉಲ್ಲಂಘನೆಯ ದಾಖಲೆ ಸಿಬಿಐ ಪತ್ತೆ ಹಚ್ಚಿತು. ಹೀಗಾಗಿ ಸುಪ್ರೀಂಕೋರ್ಟ್ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ರದ್ದುಪಡಿಸುವ ಆದೇಶ ನೀಡಿತ್ತು. ಅದಾದ ಬಳಿಕ ವಿಜಯಪುರ ಸೆಂಟ್ರಲ್ ಜೈಲಿನಲ್ಲಿ ಬಂಧಿತರಾಗಿದ್ದ ಕುಲಕರ್ಣಿ, ಹೈಕೋರ್ಟ್ ಸೂಚನೆಯಂತೆ ಜಾಮೀನುಗಾಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಇದನ್ನೂ ಓದಿ ಜೈಲಿನಿಂದ ಆಚೆ ಬರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಶಾಕ್
ಈ ಪ್ರಕರಣವನ್ನು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಸಿಬಿಐಗೆ ನೀಡಿದರೋ ಆಗ ನಿಜವಾದ ಕೊಲೆಗಾರರೇ ಬೇರೆ ಅನ್ನೋದು ಬಯಲಿಗೆ ಬಂದಿತ್ತು.ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಆರೋಪಿಸಿ, ವಿನಯ ಕುಲಕರ್ಣಿ ಅವರನ್ನು 2020 ನವೆಂಬರ್ 5 ರಂದು ಸಿಬಿಐ ಬಂಧಿಸಲಾಗಿತ್ತು. 9 ತಿಂಗಳು ಜೈಲಿನಲ್ಲಿದ್ದ ವಿನಯ ಕುಲಕರ್ಣಿ ಸುಪ್ರೀಂ ಕೋರ್ಟ್ ನೀಡಿದ್ದ ಜಾಮೀನಿನ ಮೇಲೆ ಆಗಸ್ಟ್ 11, 2021 ರಂದು ಬೇಲ್ ಸಿಕ್ಕಿತ್ತು ಆಗಷ್ಟ್ 13ರಂದು ಹೊರಗೆ ಬಂದಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ವಿನಯ ಕುಲಕರ್ಣಿ ಧಾರವಾಡ ಜಿಲ್ಲೆ ಪ್ರವೇಶ ಮಾಡುವಂತಿಲ್ಲ ಅನ್ನೋ ಷರತ್ತು ಕೂಡ ಇತ್ತು. ಇಂಥದ್ದರಲ್ಲಿಯೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವಿನಯ ಭರ್ಜರಿ ಗೆಲುವು ಸಾಧಿಸಿದ್ದರು.
ವಿನಯ್ ಫ್ಯಾನ್ಸ್ ಸಂಭ್ರಮ
ಶಾಸಕನಿಗೆ ಜಾಮೀನು ಸಿಕ್ಕ ಹಿನ್ನೆಲೆ ಧಾರವಾಡದಲ್ಲಿ ಕೈ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಡಿಸಿ ಕಚೇರಿ ಎದುರು ವಿನಯ್ ಪರ ಘೋಷಣೆ ಹಾಕಿ, ಪರಸ್ಪರ ಸಿಹಿ ತಿನ್ನಿಸಿ ಕಾರ್ಯಕರ್ತರು ಖುಷಿಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:08 pm, Fri, 27 February 26