ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ, ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದ ಖಾದರ್

ಕರ್ನಾಟಕದಲ್ಲಿ ನಿಕೋಟಿನ್​​​​ ಯುಕ್ತ ಗುಟ್ಕಾ, ಪಾನ್​​​ ಮಸಾಲ ನಿಷೇಧಿಸಿರುವ ಸರ್ಕಾರದ ಕ್ರಮದ ಬಗ್ಗೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ರಾಜ್ಯ ಸರ್ಕಾರದ ಕ್ರಮಕ್ಕೆ ಅಡಿಕೆ ಬೆಳೆಯುವ ಪ್ರದೇಶದ ಶಾಸಕರುಗಳು ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಮತ್ತು ಬಿಜೆಪಿ ಶಾಸಕರು ಅಡಿಕೆ ಬೆಳೆಗಾರರಿಗೆ ಮಾರಕವಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಆದೇಶ ವಾಪಸ್​ಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಸಚಿವ ಖಾದರ್ ಆದೇಶ ಪಡೆದಿಲ್ಲ ಎಂದಿದ್ದಾರೆ.

ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ, ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದ ಖಾದರ್
Ut Khader
Edited By:

Updated on: Aug 15, 2026 | 5:14 PM

ಬೆಂಗಳೂರು, (ಆಗಸ್ಟ್ 15): ಕರ್ನಾಟಕದಲ್ಲಿ ನಿಕೋಟಿನ್​​​​ ಯುಕ್ತ ಗುಟ್ಕಾ, ಪಾನ್​​​ ಮಸಾಲ (Gutka And Pan Masala) ನಿಷೇಧಿಸುವ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆದಿವೆ. ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಕೆಲ ಶಾಸಕರು, ಸಿಎಂ ಡಿಕೆ ಶಿವಕುಮಾರ್​​​​​​​ (DK Shivakumar) ಅವರನ್ನ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ, ಆದೇಶ ವಾಪಸ್​ ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚಿಸಿದ್ದರು. ಆದ್ರೆ, ಇದೀಗ ಆರೋಗ್ಯ ಸಚಿವ ಯುಟಿ ಖಾದರ್ (UT Khader), ನಾನು ಆದೇಶ ಮಾಡಿದ್ದು ಮಾತ್ರ, ಅದನ್ನು ವಾಪಸು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುಟಿ ಖಾದರ್, ಪಾನ್ ಮಸಾಲಾದಲ್ಲಿ ನಿಕೋಟಿನ್ ಇರಬಾರದು ಎಂಬ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದಾಗಿ ಅಡಿಕೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಇಲಾಖೆ ಮತ್ತು ಸರ್ಕಾರ ಅಡಿಕೆ‌ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಪಾನ್ ಮಸಾಲದಲ್ಲಿ ನಿಕೋಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರಿಗೆ ಏನೂ ಸಮಸ್ಯೆ ಆಗುವುದಿಲ್ಲ.‌ ನಾನು ಆ ಆದೇಶವನ್ನು ವಾಪಸ್​ ಪಡೆದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಹಿಂದೆಯೂ ಮಾಡಿಲ್ಲ, ಈಗಲೂ ಮಾಡಲ್ಲ, ಮುಂದೆಯೂ ಮಾಡಲ್ಲ. ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಈ ತೀರ್ಮಾನದಿಂದ ಬೆಲೆ ಹೆಚ್ಚಾಗುತ್ತದೆ. ಗುಟ್ಕಾಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ನೇಪಾಳ, ಬಾಂಗ್ಲಾದೇಶದಿಂದ ಆಮದು ಮಾಡಿ ಬಳಕೆ ಮಾಡುತ್ತಾರೆ. ಗುಟ್ಕಾ, ನಿಕೊಟಿನ್ ನಿಷೇಧದಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.ಅಂದು ನಾನು ಗುಟ್ಕಾ ನಿಷೇಧ ಮಾಡುವಾಗ ಇದೇ ವಿಚಾರ ಮುನ್ನಲೆಗೆ ಬಂದಿತ್ತು. ಆಗ ನಾನು ಬಲವಾಗಿ ಅದನ್ನು ಸಮರ್ಥಿಸಿಕೊಂಡಿದ್ದೆ, ಸಿಎಂ‌ ಕೂಡಾ ಸಮರ್ಥಿಸಿದ್ದರು. ಅಡಿಕೆ ಬೆಲೆ ಕುಸಿತ ಆಗುವುದಿಲ್ಲ‌ ಎಂದಿದ್ದೆವು‌ . ಮೂರು ತಿಂಗಳ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು. ಹಾಗಾಗಿ ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಅಡಿಕೆ ವ್ಯಾಪಾರಿಗಳಿಗೂ ಯಾವುದೇ ತೊಂದರೆ ಇಲ್ಲ . ಮೂರು ತಿಂಗಳು ಸಮಯಾವಕಾಶ ಕೊಟ್ಟು ನೋಡಿ. ಸಿಎಂ ಅವರು ಈ ಬಗ್ಗೆ ಚರ್ಚೆ ಮಾಡಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ತೀರ್ಮಾನ ಅಂದಿದ್ದಾರೆ. ಅಡಿಕೆ ಬೆಳೆಗಾರರಿಗೂ ತೊಂದರೆ ಆಗಬಾರದು ಎಂದು ಸಿಎಂ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sat, 15 August 26

Loading...
Unable to load recommendations.
Follow Us