ಯಾದಗಿರಿ: ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು
ಯಾದಗಿರಿಯಲ್ಲಿ ದುರಂತ ಸುದ್ದಿಗಳು ವರದಿಯಾಗಿವೆ. ಸುರಪುರ ತಾಲೂಕಿನ ಏವೂರದ ಬಳಿ ಬಸವಸಾಗರ ಜಲಾಶಯದ ಜೆಸಿಬಿ ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿದ್ದಾರೆ. ನೀರುಪಾಲಾಗಿರುವ ಯುವಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಅಲ್ಲದೆ, ಕೌಟುಂಬಿಕ ಕಲಹದಿಂದಾಗಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಯಾದಗಿರಿ, ಮೇ 18: ಸುರಪುರ (Surapura) ತಾಲೂಕಿನ ಏವೂರ ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಜೆಬಿಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿದ್ದಾರೆ. ವಿಜಯಪುರ ಮೂಲದ ಜಟ್ಟೆಪ್ಪ (19), ಕರಿಯಪ್ಪ (19) ಮೃತರು. ರವಿವಾರ (ಮೇ.18) ಒಟ್ಟು ಆರು ಮಂದಿ ಕುರಿಗಾಯಿಗಳು ಕುರಿ ಮೇಯಿಸಲು ತೆರಳಿದ್ದರು. ಆರೂ ಮಂದಿ ಕಾಲುವೆಯಲ್ಲಿ ಈಜಲು ತೆರಳಿದ್ದಾರೆ. ಆರು ಮಂದಿ ಕುರಿಗಾಹಿಗಳ ಪೈಕಿ ಇಬ್ಬರು ನೀರುಪಾಲಾಗಿದ್ದು, ನಾಲ್ವರು ಪಾರಾಗಿದ್ದಾರೆ. ನೀರುಪಾಲಾಗಿರುವ ಕುರಿಗಾಹಿಗಳಿಗಾಗಿ ಕಾಲುವೆಯಲ್ಲಿ ಶೋಧ ಕಾರ್ಯಾ ನಡೆಯುತ್ತಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ
ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ನಗರದ ಅಶೋಕ್ ನಗರ ಬಡಾವಣೆಯಲ್ಲಿ ನಡೆದಿದೆ. ಪವನ್ (30) ಮೃತ ದುರ್ದೈವಿ. ಪವನ್ ಅವರ ಪತ್ನಿ ಪರ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sun, 18 May 25







