ಪ್ರೊ. ಅಶೋಕ್ ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು: ಡಿ.ಕೆ ಶಿವಕುಮಾರ್ | We demand a judicial probe into prof Ashok Kumar’s death: DK Shivakumar
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳ ಹುದ್ದೆಗೆ ನಡೆಯುವ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಎನ್ ಎಸ್ ಅಶೋಕ್ ಕುಮಾರ್ ಅವರ ಆತ್ಮಹತ್ಯೆಗೆ ಭ್ರಷ್ಟಾಚಾರವೇ ಎಂದು ಹೇಳಲಾಗುತ್ತಿದೆ, ಅವರ ಸಾವಿನ ಕುರಿತು ಸಮಗ್ರ ತನಿಖೆಯಾಗಬೇಕು ಅಂತ ಆಗ್ರಹಿಸಿದ್ದಾರೆ. ಸೋಮವಾರದಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡಿದ ಶಿವಕುಮಾರ್, ‘‘ರಾಜ್ಯದಲ್ಲಿ ಉಪಕುಲಪತಿ […]

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳ ಹುದ್ದೆಗೆ ನಡೆಯುವ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಎನ್ ಎಸ್ ಅಶೋಕ್ ಕುಮಾರ್ ಅವರ ಆತ್ಮಹತ್ಯೆಗೆ ಭ್ರಷ್ಟಾಚಾರವೇ ಎಂದು ಹೇಳಲಾಗುತ್ತಿದೆ, ಅವರ ಸಾವಿನ ಕುರಿತು ಸಮಗ್ರ ತನಿಖೆಯಾಗಬೇಕು ಅಂತ ಆಗ್ರಹಿಸಿದ್ದಾರೆ.
ಸೋಮವಾರದಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡಿದ ಶಿವಕುಮಾರ್, ‘‘ರಾಜ್ಯದಲ್ಲಿ ಉಪಕುಲಪತಿ ಹುದ್ದೆಯನ್ನು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಈ ಭ್ರಷ್ಟಾಚಾರವೇ ಪತ್ರಿಕೊದ್ಯಮದ ಪ್ರೊಫೆಸರ್ ಆಗಿದ್ದ ಅಶೋಕ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣ ಎಂದು ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಸಾವು ಕುರಿತು ನ್ಯಾಯಾಂಗ ತನಿಖೆಯಾಗಬೇಕು,‘’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯಕ್ಕೆ ಸಾವಿರಾರು ಪತ್ರಕರ್ತರನ್ನು ನೀಡಿದ ಅಶೋಕ್ ಕುಮಾರ್ ಅವರ ಆತ್ಮಹತ್ಯೆ ಆಘಾತವನ್ನುಂಟು ಮಾಡಿದೆ ಎಂದು ಈ ಸಂದರ್ಭದಲ್ಲಿ ಶಿವಕುಮಾರ್ ಹೇಳಿದರು.
‘‘ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಕಾರ ನಾಲ್ಕು ಮಂದಿಯ ಹೆಸರು ಉಪಕುಲಪತಿ ಹುದ್ದೆಗೆ ಆಗ ಕೇಳಿಬಂದಿತ್ತು. ನೇಮಕಾತಿ ವಿಷಯದಲ್ಲಿ ತೀವ್ರ ಸ್ವರೂಪದ ಪೈಪೋಟಿ ಉಂಟಾಗಿ ನೇಮಕಾತಿ ಪ್ರಕ್ರಿಯೆ ವ್ಯಾಪಾರಕ್ಕೆ ತಿರುಗಿತ್ತು. ಅಶೋಕ್ ಬಡ್ಡಿಗೆ ಹಣ ತಂದು ಕೊಟ್ಟರೂ ಅವರ ನೇಮಕವಾಗಿರಲಿಲ್ಲ. ತಮಗೆ ಹುದ್ದೆಯಂತೂ ಸಿಗಲಿಲ್ಲ ಹಾಗೆಯೇ ಕೊಟ್ಟ ಹಣವೂ ವಾಪಸ್ಸು ಬಾರದ ಕಾರಣ ಅವರು ಆತ್ಮಹತ್ಯೆಗೆ ಶರಣಾದರು ಎಂಬ ಮಾತುಗಳು ತೇಲಿಬರುತ್ತಿವೆ,’’ ಎಂದು ಶಿವಕುಮಾರ್ ಹೇಳಿದರು.
ಅಶೋಕ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿದ್ದು ಬಹಳ ನೋವಿನ ಸಂಗತಿ. ಅವರ ಸಾವಿನ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡವಿರುವ ಶಂಕೆಯಿದೆ. ಅವರು ಹಣವನ್ನು ಅಧಿಕಾರಿಗಳಿಗೆ ನೀಡಿದರೋ, ಮಂತ್ರಿಗಳು ಲಪಟಾಯಿಸಿದರೋ ಅಥವಾ ಮಧ್ಯವರ್ತಿ ಅವರಿಗೆ ಪಂಗನಾಮ ಹಾಕಿದನೋ ಎನ್ನುವುದು ತನಿಖೆಯಾಗಬೇಕು ಎಂದು ಶಿವಕುಮಾರ್ ಹೇಳಿದರು.
‘‘ಡೆತ್ನೋಟ್ನಲ್ಲಿ ತನ್ನ ಸಾವಿಗೆ ತಾವೇ ಕಾರಣ ಎಂದು ಅಶೋಕ್ ಬರೆದಿದ್ದರೂ, ಸರ್ಕಾರದಲ್ಲಿವವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಾರ್ವಜನಿಕ ವಲಯ ಹಾಗೂ ವಿಧಾನಸೌಧ ಸುತ್ತಮುತ್ತ ಚರ್ಚೆಗಳು ಕೇಳಿಬರುತ್ತಿದೆ,’’ ಎಂದು ಶಿವಕುಮಾರ್ ಹೇಳಿದರು
‘‘ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಭೋದಕೇತರ ಸಿಬ್ಬಂದಿಯಿಂದ ಹಿಡಿದು ಉಪಕುಲಪತಿಗಳವರೆಗಿನ ಹುದ್ದೆಗಳು ಮಾರಾಟಕ್ಕಿವೆ ಎಂಬ ಚರ್ಚೆಯಾಗುತ್ತಿದೆ. ಈ ಪ್ರಕರಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಈ ಕಾರಣಕ್ಕಾಗಿಯೇ ಸದರಿ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ,’’ ಅಂತ ಕೆಪಿಸಿಸಿ ಅಧ್ಯಕ್ಷ ಹೇಳಿದರು.
‘‘ಅಶೋಕ್ ಕುಮಾರ್ ಅವರು ಅತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗಿರಲಿಲ್ಲ. ಅವರಿಂದ ಪಾಠ ಹೇಳಿಸಿಕೊಂಡು ಇಂದು ದೊಡ್ಡಮಟ್ಟದ ಪತ್ರಕರ್ತರಾಗಿರುವ ಹಲವಾರು ಜನರಿಗೆ ಅದು ಗೊತ್ತಿದೆ. ನಮಗೆ ದೊರೆತಿರುವ ಖಚಿತ ಮಾಹಿತಿಯ ಆಧಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಚಾರವನ್ನು ಪ್ರಸ್ತಾಪಿಸುತ್ತಿದೆ. ಈ ವಿಷಯದಲ್ಲ್ಲಿ ಮಾಧ್ಯಮಗಳು ಕಾರ್ಯಪ್ರವೃತ್ತಗೊಂಡು ಸತ್ಯ ಹೊರತರಲು ಪ್ರಯತ್ನಿಸಬೇಕು,’’ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕ ಮತ್ತು ನಿವೃತ್ತಿಗೆ ಮೊದಲು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲ ಸಚಿವರಾಗಿದ್ದ 64 ವರ್ಷ ವಯಸ್ಸಿನ ಅಶೋಕ್ ಕುಮಾರ್ ಅವರ ಮೃತದೇಹ ಬೆಂಗಳೂರಿನ ಮೈಕೊ ಲೇಔಟ್ನಲ್ಲಿ ರವಿವಾರದಂದು ಪತ್ತೆಯಾಗಿತ್ತು.