
ಮಹಾನ್ ವಿದ್ವಾಂಸ, ಶಿಕ್ಷಕ, ಅರ್ಥಶಾಸ್ತ್ರಜ್ಞ ಮತ್ತು ನೀತಿ ನಿರೂಪಕರಾಗಿದ್ದ ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ನೀತಿಗಳು ಮಾತ್ರವಲ್ಲದೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಉಪಯುಕ್ತ ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಯಾರ ಜೊತೆ ಸ್ನೇಹ ಮಾಡಿದರೆ ಉತ್ತಮ, ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು, ನಮ್ಮ ಶತ್ರುಗಳ್ಯಾರು, ಯಶಸ್ಸು ಸಾಧಿಸಲು ಏನು ಮಾಡಬೇಕು ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಆಚಾರ್ಯ ಚಾಣಕ್ಯರು ಜೀವನದ ಎಲ್ಲಾ ದುಃಖವನ್ನು ಹೋಗಲಾಡಿಸಿ ಸಂತೋಷದಿಂದ ಬಾಳ್ವೆ ನಡೆಸಲು ಈ ನಾಲ್ಕು ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ದುಃಖವನ್ನು ಹೋಗಲಾಡಿಸುವ ಆ ನಾಲ್ಕು ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ದಾನ ಮಾಡುವುದು: ದಾನ ಮಾಡುವುದು ತುಂಬಾನೇ ಶ್ರೇಷ್ಠ ಕಾರ್ಯ ಎಂದು ಚಾಣಕ್ಯರು ಹೇಳುತ್ತಾರೆ. ಇವರು ಹೇಳುವಂತೆ ನಿಯಮಿತವಾಗಿ ದಾನ ಮಾಡುವ ವ್ಯಕ್ತಿಯ ಮನೆಯಿಂದ ಬಡತನ ದೂರವಾಗುತ್ತದೆ ಮತ್ತು ಆತನಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ. ದಾನ ಎಂದರೆ ಹಣ ಮಾತ್ರವಲ್ಲ, ಆಹಾರ, ಜ್ಞಾನ, ಸಮಯ ಮತ್ತು ಇತರ ಸೇವೆಯನ್ನೂ ಸಹ ಒಳಗೊಂಡಿದೆ. ಹೀಗೆ ಇತರರಿಗೆ ಸಹಾಯ ಮಾಡುವ ವ್ಯಕ್ತಿಯ ಜೀವನದಲ್ಲಿ ಸಮೃದ್ಧಿ ಮತ್ತು ಗೌರವ ಎರಡೂ ಹೆಚ್ಚಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಉತ್ತಮ ನಡವಳಿಕೆ: ಉತ್ತಮ ನಡವಳಿಕೆ, ನೈತಿಕತೆ ಮತ್ತು ಉತ್ತಮ ಮೌಲ್ಯಗಳನ್ನು ಹೊಂದಿರುವ ಸದ್ಗುಣಶೀಲ ವ್ಯಕ್ತಿ ಸಮಾಜದಲ್ಲಿ ಎಂದಿಗೂ ತಲೆತಗ್ಗಿಸಿ ಬದುಕುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಈ ಸದ್ಗುಣವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಜೀವನದಲ್ಲಿ ಮುಂದುವರೆಯಲು ಅವಕಾಶಗಳು ಸಿಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಯಶಸ್ಸು ಸಾಧಿಸಬೇಕೆಂದರೆ ಬೆಳಗಿನ ದಿನಚರಿ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯ
ಜ್ಞಾನ : ನಮ್ಮ ಬೆಳವಣಿಗೆಗೆ ಅಜ್ಞಾನವೇ ದೊಡ್ಡ ಅಡಚಣೆ ಎಂದು ಚಾಣಕ್ಯರು ಹೇಳುತ್ತಾರೆ. ಪ್ರಜ್ಞಾ, ಅಂದರೆ ಸರಿಯಾದ ವಿವೇಚನೆ ಮತ್ತು ಆಳವಾದ ಜ್ಞಾನವು ನಮ್ಮನ್ನು ಕತ್ತಲೆಯಿಂದ ಹೊರತೆಗೆದು ಬೆಳಕಿನ ಕಡೆಗೆ ಕರೆದೊಯ್ಯುತ್ತದೆ. ನಿರಂತರವಾಗಿ ಕಲಿಯುವ, ಅನುಭವಗಳಿಂದ ಜ್ಞಾನವನ್ನು ಪಡೆಯುವ ಮತ್ತು ವಿವೇಚನೆಯಿಂದ ನಡೆದುಕೊಳ್ಳುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಹಿಂದುಳಿಯುವುದಿಲ್ಲ ಹಾಗಾಗಿ ಜ್ಞಾನವನ್ನು ಅಳವಡಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.
ದೇವರ ಮೇಲೆ ನಂಬಿಕೆ: ದೇವರಲ್ಲಿ ನಂಬಿಕೆ, ಸಕಾರಾತ್ಮಕ ಚಿಂತನೆ ಮತ್ತು ಭಕ್ತಿಯು ವ್ಯಕ್ತಿಯೊಳಗಿನ ಎಲ್ಲಾ ರೀತಿಯ ಭಯಗಳನ್ನು ನಿವಾರಿಸುತ್ತದೆ. ಭಕ್ತಿ ಮತ್ತು ನಿಜವಾದ ಭಾವನೆಗಳೊಂದಿಗೆ ತನ್ನ ಜೀವನವನ್ನು ನಡೆಸುವ ವ್ಯಕ್ತಿಯು ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸ ಎರಡನ್ನೂ ಪಡೆಯುತ್ತಾನೆ ಎನ್ನುತ್ತಾರೆ ಚಾಣಕ್ಯ.
ಆಚಾರ್ಯ ಚಾಣಕ್ಯರು ಹೇಳಿರುವ ಈ ನಾಲ್ಕು ಅಭ್ಯಾಸಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯ ಮಾಡುವುದಲ್ಲದೆ, ಆ ವ್ಯಕ್ತಿಯನ್ನು ಯಶಸ್ಸು, ಸಂತೋಷ ಮತ್ತು ನಿರ್ಭೀತ ಜೀವನದತ್ತ ಕೊಂಡೊಯ್ಯುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ