ಸಾಲ ಮಾಡಿದ ಅಪ್ಪ ತೀರಿ ಹೋದರೆ ಮಗನ ಮೇಲೆ ಬೀಳುತ್ತಾ ಆ ಸಾಲದ ಹೊರೆ?
ಹಣಕಾಸಿನ ತೀರಾ ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ಪಡೆಯಲು ಹೆಚ್ಚಿನವರು ಸಾಲದ ಮೊರೆ ಹೋಗುತ್ತಾರೆ. ಬ್ಯಾಂಕ್ನಲ್ಲಿ ಇಂತಿಷ್ಟು ಹಣವನ್ನು ಸಾಲ ಪಡೆದು ನಂತರ ಆ ಸಾಲವನ್ನು ಬಡ್ಡಿ ಸಮೇತ ಮರು ಪಾವತಿ ಮಾಡುತ್ತಾರೆ. ಆದರೆ ಈ ಸಾಲ ಸಂದಾಯವಾಗುವ ಮೊದಲೇ ಸಾಲಗಾರ ಒಂದು ವೇಳೆ ತೀರಿ ಹೋದರೆ ಆ ಸಾಲವನ್ನು ಯಾರು ಸಂದಾಯ ಮಾಡುತ್ತಾರೆ? ಆ ಸಾಲದ ಹೊರೆ ಆತನ ಮಕ್ಕಳ ತಲೆ ಮೇಲೆ ಬೀಳುತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮನೆ ಕಟ್ಟುವ ಸಲುವಾಗಿ, ಬ್ಯುಸಿನೆಸ್ ಶುರು ಮಾಡಲು, ಮಗಳ ಮದುವೆಗೆ ಹೀಗೆ ಅನೇಕರು ಹಲವು ಕಾರಣಗಳಿಗೆ ಬ್ಯಾಂಕುಗಳಿಂದ ಸಾಲ (loan ) ಪಡೆಯುತ್ತಾರೆ. ಮತ್ತು ವರ್ಷಾನುಗಟ್ಟಲೆ ಅಸಲು, ಬಡ್ಡಿಯನ್ನು ಪಾವತಿಸುತ್ತಿರುತ್ತಾರೆ. ಆದ್ರೆ ಕೆಲವರು ಸಾಲ ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಸಾಲ ಸಂದಾಯವಾಗುವ ಮೊದಲೇ ತೀರಿ ಹೋದದ್ದೂ ಇದೆ. ಹೀಗೆ ಸಾಲಗಾರರು ತೀರಿ ಹೋದಾಗ ಅವರ ಸಾಲವನ್ನು ಮಗ ಅಥವಾ ಮಕ್ಕಳು ತೀರಿಸಬೇಕೇ? ಆ ಸಾಲವನ್ನು ಯಾರು ಸಂದಾಯ ಮಾಡ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾರು ಇದಕ್ಕೆ ಹೊಣೆಗಾರರು, ಬ್ಯಾಂಕ್ ಹೇಗೆ ಹಣವನ್ನು ರಿಕವರಿ ಮಾಡಿಕೊಳ್ಳುತ್ತದೆ ಗೊತ್ತಾ? ಈ ಹಿಂದೆ ಸುಪ್ರೀಂ ಕೋರ್ಟ್ 2001ರ ಕೆ. ರಾಜಮೌಳಿ (K. Rajamouli) vs ಎವಿಕೆಎನ್ ಸ್ವಾಮಿ (AVKN Swamy) ಪ್ರಕರಣದಲ್ಲಿ ಇಂತಹ ಗೊಂದಲಕ್ಕೆ ತೆಗೆದುಕೊಂಡ ನಿರ್ಧಾರ ಏನು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸಾಲ ಸಂದಾಯವಾಗದೆ ಸಾಲಗಾರ ತೀರಿ ಹೋದರೆ ಆ ಸಾಲದ ಹೊರೆ ಮಕ್ಕಳ ತಲೆ ಮೇಲೆ ಬೀಳುತ್ತಾ?
ತಂದೆ ಸಾಲ ತೆಗೆದುಕೊಂಡು ಅದನ್ನು ಪಾವತಿಸುವ ಮೊದಲೇ ತೀರಿ ಹೋದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಮಗನು ತನ್ನ ತಂದೆಯ ಸಾಲವನ್ನು ತೀರಿಸಬೇಕಾಗಬಹುದು ಆದರೆ ಅದು ಸಂಪೂರ್ಣವಾಗಿ ಸಂದರ್ಭಗಳನ್ನು ಅವಲಂಬಿಸಿರುತ್ತದೆ.
ಭಾರತೀಯ ಉತ್ತರಾಧಿಕಾರ ಕಾಯ್ದೆ 1925-ಈ ಉತ್ತರಾಧಿಕಾರ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ಮರಣ ಹೊಂದಿದ್ದು, ಅವನು ಮಾಡಿದ ಸಾಲ ಸಂದಾಯವಾಗಿರದೇ ಇದ್ದರೆ, ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ಮಗನ ಆಸ್ತಿಯಿಂದ ಸಾಲವನ್ನು ರಿಕವರಿ ಮಾಡಿಕೊಳ್ಳುತ್ತವೆ. ಜೊತೆಗೆ ಸಿಪಿಸಿ ಸೆಕ್ಷನ್ 50 ರ ಪ್ರಕಾರ ಉತ್ತರಾಧಿಕಾರಿ ತನ್ನ ತಂದೆಯ ಸಾಲವನ್ನು ಮರು ಪಾವತಿಸಲು ಹೊಣೆಗಾರನಾಗಿರುತ್ತಾನೆ. ಇದು ಯಾವಾಗ ಅನ್ವಯವಾಗುತ್ತದೆ ಎಂದರೆ, ಮಗನು ತಂದೆಯಿಂದ ಆಸ್ತಿ ಪಡೆದಿದ್ದಾಗ ಮಾತ್ರ. ಒಂದು ವೇಳೆ ಉತ್ತರಾಧಿಕಾರಿ ಅಂದರೆ ಮಗ ಮೃತ ತಂದೆಯಿಂದ ಪಿತ್ರಾರ್ಜಿತ ಆಸ್ತಿಯನ್ನು ಪಡೆದಿಲ್ಲದಿದ್ದರೆ, ಅಂತಹ ಸಂದರ್ಭದಲ್ಲಿ ಆ ಸಾಲದ ಹೊರೆ ಮಗನ ತಲೆಯ ಮೇಲೆ ಬೀಳುವುದಿಲ್ಲ. ಮತ್ತು ಆ ಸಾಲವನ್ನು ಮರು ಪಾವತಿ ಮಾಡಲು ಅವರನ್ನು ಒತ್ತಾಯಿಸಲಾಗುವುದಿಲ್ಲ.
ಇದನ್ನೂ ಓದಿ: ಸಂಬಂಧಿಕರ ಮುಂದೆ ಬೆಳೆಯಬೇಕು ಅಂದ್ರೆ ಚಾಣಕ್ಯನ ಈ ಸಲಹೆ ಪಾಲಿಸಿ
ಭಾರತೀಯ ಒಪ್ಪಂದ ಕಾಯ್ದೆ 1872 ರ ಪ್ರಕಾರ, ಯಾವುದೇ ಸಾಲಕ್ಕೆ ಕಾನೂನುಬದ್ಧ ಹೊಣೆಗಾರಿಕೆಯು ಒಪ್ಪಂದ ಮಾಡಿಕೊಂಡ ವ್ಯಕ್ತಿಗೆ ಮಾತ್ರ ಅನ್ವಯಿಸುತ್ತದೆ. ಮಗ ಯಾವುದೇ ರೀತಿಯಲ್ಲಿ ತಂದೆ ಪಡೆದ ಸಾಲಕ್ಕೆ ಜಾಮೀನುದಾರನಾಗದಿದ್ದರೆ, ಅವನು ವೈಯಕ್ತಿಕವಾಗಿ ಇದಕ್ಕೆ ಹೊಣೆಗಾರನಾಗಿರುವುದಿಲ್ಲ. ಮಗ ಏನಾದರೂ ಜಾಮೀನುದಾರನಾಗಿದ್ದರೆ ಸಂಪೂರ್ಣವಾಗಿ ಸಾಲ ತೀರಿಸುವ ಜವಬ್ದಾರಿ ಮಗನ ಮೇಲೆ ಬೀಳುತ್ತದೆ.
ಇದಲ್ಲದೆ ಸುಪ್ರೀಂ ಕೋರ್ಟ್ ಕೆ. ರಾಜಮೌಳಿ vs ಎವಿಕೆಎನ್ ಸ್ವಾಮಿ (2001) 5 ಎಸ್ಸಿಸಿ 37 ರ ಕೇಸ್ನ ತನ್ನ ತೀರ್ಪಿನಲ್ಲಿ, ಉತ್ತರಾಧಿಕಾರಿ ಯಾವುದೇ ಆಸ್ತಿಯನ್ನು ಪಡೆಯದಿದ್ದರೆ, ಅವರು ಸಾಲಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂಬುದನ್ನು ಹೇಳಿದೆ. ಹಿಂದೂ ಉತ್ತರಾಧಿಕಾರದ ಕಾನೂನಿನ ಪ್ರಕಾರ, ಆಸ್ತಿಯು ಅವಿಭಕ್ತ ಕುಟುಂಬಕ್ಕೆ ಸೇರಿದ್ದರೆ ಮತ್ತು ಸಾಲವನ್ನು ದತ್ತಿ, ಸಾಮಾಜಿಕ ಅಥವಾ ಕೌಟುಂಬಿಕ ಉದ್ದೇಶಗಳಿಗಾಗಿ ತೆಗೆದುಕೊಂಡಿದ್ದರೆ, ಇಂತಹ ಸಂದರ್ಭಗಳಲ್ಲಿ ಉತ್ತರಾಧಿಕಾರಿಗಳು ಪಿತ್ರಾರ್ಜಿತವಾಗಿ ಬಂದ ಆಸ್ತಿಯಿಂದ ಸಾಲವನ್ನು ಮರುಪಾವತಿಸಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ, ತಂದೆಯ ಸಾಲದ ಮರುಪಾವತಿಗೆ ಮಗ ವೈಯಕ್ತಿಕವಾಗಿ ಹೊಣೆಗಾರನಲ್ಲ. ಅವನು ತನ್ನ ತಂದೆಯಿಂದ ಪಿತ್ರಾರ್ಜಿತ ಆಸ್ತಿಯನ್ನು ಪಡೆದಿದ್ದರೆ ಮಾತ್ರ ಆತ ಆಸ್ತಿಯ ಮಟ್ಟಿಗೆ ಹೊಣೆಗಾರನಾಗಿರುತ್ತಾನೆ. ಯಾವುದೇ ಆಸ್ತಿಯನ್ನು ಆನುವಂಶಿಕವಾಗಿ ಪಡೆಯದಿದ್ದರೆ, ಆ ಸಾಲ ಮರುಪಾವತಿಗೆ ಅವನು ಜವಬ್ದಾರನಾಗಿರುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Sat, 12 April 25