AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Theatre : ಗಂಡುಹೆಣ್ಣುಗಳ ನಡುವಿನ ಅಭೀಪ್ಸೆಯ ತೊಳಲಾಟದ ‘ಚದುರಂಗ ಮತ್ತು ಕತ್ತೆ’ ನಾಳೆ ರಂಗಶಂಕರದಲ್ಲಿ

Marathi-Kannada-Play : ‘ಆ್ಯಕ್ಟರ್ ಓರಿಯೆಂಟೆಡ್ ಪ್ಲೇ’ ಇದಾಗಿರುವುದರಿಂದ ಪ್ರತಿ ಪಾತ್ರದ ಮನದಾಳಕ್ಕೆ ಇಳಿದು ಬಗೆದು ನಾನು ಪಾತ್ರವಾಗಿ ಅವತರಿಸಬೇಕಿತ್ತು. ನಟವರ್ಗ ಗಟ್ಟಿ ಇದ್ದರೆ ಮಾತ್ರ ಗೆಲ್ಲಬಹುದಾದ ಮತ್ತು ಮನದ ಸೂಕ್ಷ್ಮ ಎಳೆಗಳನ್ನು, ಸಂವೇದನೆಗಳನ್ನು ಅನುಭವಿಸಿ ಅಭಿನಯಿಸಬಹುದಾದ ಒಂದು ಪನ್, ಪಂಚ್ ಕೊಡುವ ನನ್ನ ರಂಗಪಠ್ಯವನ್ನು ರಚಿಸುತ್ತ ನಡೆದೆ.’ ಡಾ. ಡಿ.ಎಸ್. ಚೌಗಲೆ

Theatre : ಗಂಡುಹೆಣ್ಣುಗಳ ನಡುವಿನ ಅಭೀಪ್ಸೆಯ ತೊಳಲಾಟದ ‘ಚದುರಂಗ ಮತ್ತು ಕತ್ತೆ’ ನಾಳೆ ರಂಗಶಂಕರದಲ್ಲಿ
‘ಚದುರಂಗ ಮತ್ತು ಕತ್ತೆ’ ನಾಟಕದ ದೃಶ್ಯ
ಶ್ರೀದೇವಿ ಕಳಸದ
|

Updated on: Jan 18, 2022 | 11:42 AM

Share

ಚದುರಂಗ ಮತ್ತು ಕತ್ತೆ | Chaduranga Mattu Katthe : ಈ ನಾಟಕವನ್ನು ಕನ್ನಡದ ಹಲವು ದಿಗ್ಗಜರಿಗೆ ಪ್ರಯೋಗಿಸಲು ರಂಗಪಠ್ಯವನ್ನು ನೀಡಿದೆ. ಆದರೆ ಯಾರೊಬ್ಬರು ಸಿದ್ಧರಿರಲಿಲ್ಲ. ಅದರಲ್ಲಿ ಕೆಲವರು ಹೇಳಿದ್ದು- ‘ಇದು ಬೋಲ್ಡ್ ಮತ್ತು ಪಕ್ವ ನಟರನ್ನು ಬಯಸುತ್ತದೆ. ನಮ್ಮಲ್ಲಿ ಅಂಥ ನಟವರ್ಗವಿಲ್ಲ…’ ಎಂದು. ಇದು ಅರ್ಧಸತ್ಯವಾದರೂ ಕನ್ನಡ ರಂಗಭೂಮಿ (ವೃತ್ತಿ ರಂಗಭೂಮಿ ಹೊರತು ಪಡಿಸಿ) ನಟರನ್ನು ಸೃಷ್ಟಿಸಲಿಲ್ಲ. ಕೇವಲ ನಿರ್ದೇಶಕ ಮತ್ತು ನಾಟಕಕಾರನ್ನು ಹುಟ್ಟು ಹಾಕಿತು. ಆದರೆ ಸದ್ಯ ಪ್ರಸ್ತುತ ಪಡಿಸುತ್ತಿರುವ ಬೆಂಗಳೂರಿನ ಪಂಚಮುಖಿ ನಟರ ಸಮೂಹ ತಂಡದ ಎಲ್ಲ ಕಲಾವಿದರ ಈ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಲೇಬೇಕು. ದೊಡ್ಡವರು ಕೈಚೆಲ್ಲಿದ ಒಂದು ರಂಗಪಠ್ಯವನ್ನು ಕೈಗೆತ್ತಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದು ಸಾಮಾನ್ಯ ಸಾಧನೆಯೇನಲ್ಲ! ಯುವ ಕಲಾವಿದ ಮಹೇಶ ನನಗೆ ಕಾಲ್ ಮಾಡಿ- ‘ಸರ್ ನಾನು ಮಹೇಶ ಅಂತ, ನಿಮ್ಮ ನಾಟಕ ‘ಚದುರಂಗ ಮತ್ತು ಕತ್ತೆ’ಯನ್ನು ಪ್ರಯೋಗಕ್ಕೆ ತೆಗೆದುಕೊಳ್ಳುತೀವಿ. ಒಪ್ಪಿಗೆ ಕೊಡಿ…’ ಎಂದು ಕೇಳಿದ. ಅಷ್ಟೇ ಅಲ್ಲ ಈ ನಾಟಕವನ್ನು ನಾವು ಮಾಡಲೇಬೇಕೆಂದು ಠರಾಯಿಸಿ ಕಳೆದ ಏಳೆಂಟು ವರ್ಷಗಳಿಂದ ಓದುತ್ತ, ಚರ್ಚಿಸುತ್ತ, ಮನನ ಮಾಡುತ್ತಲೇ ಬಂದಿದ್ದೇವೆ… ಅಂತ ಹೇಳಿದಾಗ ಅವರ ಆತ್ಮವಿಶ್ವಾಸಕ್ಕೆ ನಿಜಕ್ಕೂ ಬೆರಗಾದೆ.

ಡಾ. ಡಿ. ಎಸ್. ಚೌಗಲೆ ನಾಟಕಕಾರರು, ಬೆಳಗಾವಿ

*

ಜಗದೀಪ: ಯಾವುದು ಪರಸ್ಪರ ಒಪ್ಪಂದದಿಂದ ನಡೀತದನೋ ಅದಕ್ಕ ಸಂಪೂರ್ಣ ನಿರ್ಭಯತೆ ಇರಬೇಕು.

ನಯನತಾರಾ: ನೀನು ನಿನ್ನ ವಿಷಯವನ್ನ ಬಿಡೋದಿಲ್ಲ. ಆದರ ನನ್ನೊಳಗ ವಿಷಯದ ರುಚಿಯನ್ನ ಕಟ್ಟಿಕೊಟ್ಟಿದ್ದಿ… ಆದರೂ ಒಂದು ವಿಚಾರ ನನ್ನ ಲಕ್ಷ್ಯಕ್ಕೆ ಬಂತು. ಹೆಣ್ಣನ್ನು ಉಪಭೋಗದ ವಸ್ತು ಎಂದು ತಿಳಿದಿರುವಿ ನೀ…

ಜಗದೀಪ: ಪ್ರತಿಸಲ ಹೆಣ್ಣು ದೈಹಿಕವಾಗಿಯೇ ಕೂಡಬೇಕೆಂದೇನಿಲ್ಲ. ಕೇವಲ ಮನಸ್ಸಿನ ಸಹವಾಸವೂ ಕೂಡ ಉತ್ಸವ ಆಗಲಿಕ್ಕೆ ಸಾಧ್ಯದ.

ಅಂದಾಜು ಹತ್ತು ವರ್ಷಗಳ ಹಿಂದಿರಬಹುದು. ಒಂದು ದಿನ ‘ದೇಶಕಾಲ’ ಪತ್ರಿಕೆಯ ಸಂಪಾದಕ ಮಿತ್ರ ವಿವೇಕ ಶಾನಭಾಗ ಫೋನು ಮಾಡಿದರು. ‘ಈ ಬಾರಿ ಮರಾಠಿ ಸಾಹಿತ್ಯದ ವಿಶೇಷಾಂಕ ತರತಿದೀನಿ, ನೀವು ಒಂದು ಮರಾಠಿ ನಾಟಕ ಅನುವಾದ ಮಾಡಿಕೊಡಬೇಕು. ಅದರ ಸಾಫ್ಟ್ ಕಾಪಿ ಕಳಿಸುವೆ…’ ಎಂದರು. ನಾಟಕದ ಹೆಸರು-‘ಝಬ್ಬು ಆಣಿ ಬುದ್ಧೀಬಳ’ ಎಂದು. ಲೇಖಕ ಚಂಪ್ರ ದೇಶಪಾಂಡೆ. ಝಬ್ಬು ಅಂದರೆ ಕತ್ತೆ. ಬುದ್ಧಿಬಳದರ್ಥ ಚದುರಂಗ. ನಮ್ಮ ಭಾಗದಲ್ಲಿ ಇಸ್ಪೀಟ್ ಎಲೆ ಆಟದಲ್ಲಿ ಸಮಯ ಕಳೆಯಲು ಕತ್ತೆ ಆಟ ಅಂತ ಒಂದಿದೆ. ಚದುರಂಗದ ಆಟ ಮತ್ತು ಕತ್ತೆ ಆಟ. ಮೆಟಾಫರ್ ಥರದ ಶೀರ್ಷಿಕೆ. ನಾಟಕ ಓದಿದೆ. ಗಂಡುಹೆಣ್ಣುಗಳ ಮಧ್ಯದ ಮೊಗವಾಡ ತೊಟ್ಟ ಬದುಕಿನ ಮಾನಸಿಕತೆಯ ಆಟದ ವಸ್ತು. ವಯಸ್ಸಿನ ಆದರೆ ಮದುವೆಯಾದ ಎರಡು ಗಂಡು, ಎರಡು ಹೆಣ್ಣು ಪಾತ್ರಗಳು. ಚಂಪ್ರ ದೇಶಪಾಂಡೆ ಅವರು ಬಳಸಿದ ರಂಗಪಠ್ಯ ಪುಣೇರಿ ಗ್ರಾಂಥಿಕ ಮರಾಠಿಯ ಆಡುಮಾತು. ಅದನ್ನು ನನ್ನ ಉತ್ತರಕರ್ನಾಟಕದ ಕೊಂಚ ನಗರಕೇಂದ್ರಿತ ಆಡುಮಾತನ್ನು ನಾಟ್ಯಬರಹಕ್ಕೆ ಆಯ್ದುಕೊಂಡೆ.

ನಾಗರಿಕ ಸಮಾಜದಲ್ಲಿ ಸಭ್ಯತೆಯ ವರ್ತನೆ, ನಡವಳಿಕೆ ಒಂದು ಮಾನದಂಡ. ನಮ್ಮಗಳ ಆಸೆ ಆಕಾಂಕ್ಷೆಗಳನ್ನು ಸನ್ನಡತೆಯ ಚಾದರು ಹೊದಿಸಿಯೇ ವರ್ತಿಸುತ್ತಿರುತ್ತೇವೆ. ಆದರೂ ಸ್ತ್ರೀ-ಪುರುಷರ ಪ್ರೇಮ ಕಾಮಗಳ ವಿಚಾರದಲ್ಲಿ ಶೃಂಗಾರಭರಿತ ‘ಫ್ಲರ್ಟ್​’ ನಡೆಯ ಹಲವು ರೂಪ ಸ್ವರೂಪಗಳನ್ನು ನಾವು ನಮ್ಮ ಜಾನಪದ ಮತ್ತು ಇತರ ಸಾಹಿತ್ಯದಲ್ಲಿ, ನಾಟಕಗಳಲ್ಲಿ ಕಂಡಿದ್ದೇವೆ, ಓದಿದ್ದೇವೆ. ಶ್ರೀಕೃಷ್ಣಪಾರಿಜಾತ ಸಣ್ಣಾಟದ ‘ಗೊಲ್ಲತಿ’ ಪ್ರಕರಣ, ಮರಾಠಿ ತಮಾಶಾ ಲೋಕನಾಟಕದ ‘ಗೌಳಣ’ ಪ್ರಕರಣಗಳು ಹೆಣ್ಣುಗಂಡಿನ ಚೇಷ್ಟೆಗಳೆ ಆಗಿವೆ. ಕೃಷ್ಣ ಮಥುರೆಗೆ ಹಾಲು, ಬೆಣ್ಣೆ ಮಾರಲು ಹೊರಟ ಗೊಲ್ಲತಿಯರನ್ನು ತಡೆದು ಚೇಷ್ಟೆಗಳನ್ನು ಆಡುತ್ತಾನೆ. ಇಂಥ ಹಲವು ಆಚರಣೆಗಳು ಪ್ರಪಂಚದಾದ್ಯಂತ ದೊರೆಯುತ್ತವೆ.

ಈ ನಾಟಕದ ಪಾತ್ರಗಳು ಮನದೊಳಗೆ ಮಂಡಗಿ ತಿನ್ನುವಂಥವೇ ಆಗಿವೆ. ಚಂಪ್ರ ಇದನ್ನು ಡಾರ್ಕ್ ಅಥವಾ ಬ್ಲ್ಯಾಕ್ ಕಾಮೆಡಿಯ ಫಾರ್ಮ್​ನಲ್ಲಿ ಅಭಿವ್ಯಕ್ತಿಸಲು ಯತ್ನಿಸಿದ್ದಾರೆ. ನನಗೆ ನನ್ನ ಭಾಷೆಗೆ ತರುವಾಗ ಇದೊಂದು ಸವಾಲಿನದ್ದೇ ಅಗಿತ್ತು. ಈ ಮನೋವೈಜ್ಞಾನಿಕ ವೃತ್ತಿಯನ್ನು ಹಿಡಿದಿಡಬೇಕಾಗಿತ್ತು. ಮತ್ತು ‘ಆ್ಯಕ್ಟರ್ ಓರಿಯೆಂಟೆಡ್ ಪ್ಲೇ’ ಇದಾಗಿರುವುದರಿಂದ ಪ್ರತಿ ಪಾತ್ರದ ಮನದಾಳಕ್ಕೆ ಇಳಿದು ಬಗೆದು ನಾನು ಪಾತ್ರವಾಗಿ ಅವತರಿಸಬೇಕಿತ್ತು. ನಟವರ್ಗ ಗಟ್ಟಿ ಇದ್ದರೆ ಮಾತ್ರ ಗೆಲ್ಲಬಹುದಾದ ಮತ್ತು ಮನದ ಸೂಕ್ಷ್ಮ ಎಳೆಗಳನ್ನು, ಸಂವೇದನೆಗಳನ್ನು ಅನುಭವಿಸಿ ಅಭಿನಯಿಸಬಹುದಾದ ಒಂದು ಪನ್, ಪಂಚ್ ಕೊಡುವ ನನ್ನ ರಂಗಪಠ್ಯವನ್ನು ರಚಿಸುತ್ತ ನಡೆದೆ.‘ಆ್ಯಕ್ಟರ್ ಓರಿಯೆಂಟೆಡ್ ಪ್ಲೇ’ ಇದಾಗಿರುವುದರಿಂದ ಪ್ರತಿ ಪಾತ್ರದ ಮನದಾಳಕ್ಕೆ ಇಳಿದು ಬಗೆದು ನಾನು ಪಾತ್ರವಾಗಿ ಅವತರಿಸಬೇಕಿತ್ತು. ನಟವರ್ಗ ಗಟ್ಟಿ ಇದ್ದರೆ ಮಾತ್ರ ಗೆಲ್ಲಬಹುದಾದ ಮತ್ತು ಮನದ ಸೂಕ್ಷ್ಮ ಎಳೆಗಳನ್ನು, ಸಂವೇದನೆಗಳನ್ನು ಅನುಭವಿಸಿ ಅಭಿನಯಿಸಬಹುದಾದ ಒಂದು ಪನ್, ಪಂಚ್ ಕೊಡುವ ನನ್ನ ರಂಗಪಠ್ಯವನ್ನು ರಚಿಸುತ್ತ ನಡೆದೆ. ಪ್ರತಿ ಪಾತ್ರಗಳ ‘ಹುಳಿ’ಯ ತೊಳಲಾಟ, ತಾಕಲಾಟಗಳನ್ನು ಎಂಜಾಯ್ ಮಾಡುತ್ತಿದ್ದೆ. ಕೆಲವು ಭಾಗಗಳನ್ನು ವಿವೇಕ ಅವರಿಗೆ ಕಳಿಸಿದೆ. ಅವರು. ‘ಚೌಗಲೆ ಎಷ್ಟು ಚೆಂದ ಬರೆದಿದ್ದೀರಿ, ಈ ಆಶಯ ಕುತೂಹಲ ಕೆರಳಿಸಿದೆ. ಮುಂದಿನ ಭಾಗಗಳನ್ನು ಓದಲು ಮನಸ್ಸು ಕಾತರಿಸುತಿದೆ ಲಗೂನೆ ಕಳಿಸಿರಿ…’ ಎಂದು ನೆಚ್ಚಿ ಮಾತನಾಡಿದರು.

ಮನುಷ್ಯನ ಬದುಕು ನಿರಂತರ ಕಾಂಟ್ರಾಡಿಕ್ಷನ್‌ನಲ್ಲಿಯೇ ಇರುತ್ತದೆ. ಆತ, ಆಕೆ ತುಂಬಾ ಡಿಪ್ಲೊಮೆಟಿಕ್ ಆಗಿಯೇ ಬಹಳಷ್ಟು ಸಾರಿ ಬದುಕುತ್ತಿರುತ್ತಾರೆ. ಮನುಷ್ಯ ಮುಖವಾಡ ಧರಿಸಿ ಢೋಂಗಿತನ ಮೆರೆಯುತ್ತ ಸಮಯ ಸಾಧ್ಯತೆಗೆ ಕಾಯುತ್ತಿರುತ್ತಾನೆ. ತನ್ನ ಆಸ್ತಿತ್ವವನ್ನು ನಿರಂತರ ಬಿಟ್ಟುಕೊಡದೆ ಆದರೆ ತನ್ನೊಳಗೆ ಜ್ವಾಲಾರಸದಂತೆ ಕುದಿಕುದಿವ ಸುಪ್ತ ಭಾವನೆಗಳಿಗೆ ಕಾಲದ ಸುಳಿವು ಅರಿತು ಹೊರಹಾಕಿ ಎರಗುತ್ತಿರುತ್ತಾನೆ, ಎರಗುತ್ತಿರುತ್ತಾಳೆ. ಆ ಸಮಯದ ಅಸಂಗತತೆ ಮತ್ತು ಮನೋರಂಗದ ಒಳ ಪದರುಗಳ ದರುಶನವು ಆ ಪಾತ್ರಗಳ ಮಧ್ಯ ಹುಟ್ಟಿಕೊಂಡು ಪ್ರೇಕ್ಷಕನಿಗೆ ಆಗುತ್ತಿರುತ್ತದೆ. ಈ ನಾಟಕದ ಹೆಚ್ಚುಗಾರಿಕೆಯೇ ಇದೇ ಆಗಿದೆ. ಅಂದರೆ ಪಾತ್ರಗಳ ನಡುವಿನ ಹಳವಂಡಗಳನ್ನು ಬಿಚ್ಚಿಯಿಡುವಲ್ಲಿ ನಟರ ಮಧ್ಯದ ಸಂವಾದ ನಾಟಕದ ಉದ್ದಕ್ಕೂ ಸಾವಯವ ರೂಪದಲ್ಲಿ ನಡೆಯುತ್ತದೆ. ಇದನ್ನು ನಟವರ್ಗ ಆಗು ಮಾಡುತ್ತದೆ.

Chaduranga Mattu Katte Play By Champra Deshpande Translated by DS Chougale Directed by Abhimanyu Bhupati at Rangashankara

ನಾಟಕಕಾರ ಡಾ. ಡಿ. ಎಸ್. ಚೌಗಲೆ, ನಿರ್ದೇಶಕ ಅಭಿಮನ್ಯು ಭೂಪತಿ ಲೇಖಕ ಚಂಪ್ರ ದೇಶಪಾಂಡೆ

ಈ ನಾಟಕವನ್ನು ಕನ್ನಡದ ಹಲವು ದಿಗ್ಗಜರಿಗೆ ಪ್ರಯೋಗಿಸಲು ರಂಗಪಠ್ಯವನ್ನು ನೀಡಿದೆ. ಆದರೆ ಯಾರೊಬ್ಬರು ಸಿದ್ಧರಿರಲಿಲ್ಲ. ಅದರಲ್ಲಿ ಕೆಲವರು ಹೇಳಿದ್ದು-‘ಇದು ಬೋಲ್ಡ್ ಮತ್ತು ಪಕ್ವ ನಟರನ್ನು ಬಯಸುತ್ತದೆ. ನಮ್ಮಲ್ಲಿ ಅಂಥ ನಟವರ್ಗವಿಲ್ಲ…’ ಎಂದು. ಇದು ಅರ್ಧಸತ್ಯವಾದರೂ ಕನ್ನಡ ರಂಗಭೂಮಿ (ವೃತ್ತಿ ರಂಗಭೂಮಿ ಹೊರತು ಪಡಿಸಿ) ನಟರನ್ನು ಸೃಷ್ಟಿಸಲಿಲ್ಲ. ಕೇವಲ ನಿರ್ದೇಶಕ ಮತ್ತು ನಾಟಕಕಾರನ್ನು ಹುಟ್ಟು ಹಾಕಿತು.

ಆದರೆ ಸದ್ಯ ಪ್ರಸ್ತುತ ಪಡಿಸುತ್ತಿರುವ ಬೆಂಗಳೂರಿನ ಪಂಚಮುಖಿ ನಟರ ಸಮೂಹ ತಂಡದ ಎಲ್ಲ ಕಲಾವಿದರ ಈ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಲೇಬೇಕು. ದೊಡ್ಡವರು ಕೈಚೆಲ್ಲಿದ ಒಂದು ರಂಗಪಠ್ಯವನ್ನು ಕೈಗೆತ್ತಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದು ಸಾಮಾನ್ಯ ಸಾಧನೆಯೇನಲ್ಲ! ಯುವ ಕಲಾವಿದ ಮಹೇಶ ನನಗೆ ಕಾಲ್ ಮಾಡಿ- ‘ಸರ್ ನಾನು ಮಹೇಶ ಅಂತ, ನಿಮ್ಮ ನಾಟಕ ‘ಚದುರಂಗ ಮತ್ತು ಕತ್ತೆ’ಯನ್ನು ಪ್ರಯೋಗಕ್ಕೆ ತೆಗೆದುಕೊಳ್ಳುತೀವಿ. ಒಪ್ಪಿಗೆ ಕೊಡಿ…’ ಎಂದು ಕೇಳಿದ. ಅಷ್ಟೇ ಅಲ್ಲ ಈ ನಾಟಕವನ್ನು ನಾವು ಮಾಡಲೇಬೇಕೆಂದು ಠರಾಯಿಸಿ ಕಳೆದ ಏಳೆಂಟು ವರ್ಷಗಳಿಂದ ಓದುತ್ತ, ಚರ್ಚಿಸುತ್ತ, ಮನನ ಮಾಡುತ್ತಲೇ ಬಂದಿದ್ದೇವೆ… ಅಂತ ಹೇಳಿದಾಗ ಅವರ ಆತ್ಮವಿಶ್ವಾಸಕ್ಕೆ ನಿಜಕ್ಕೂ ಬೆರಗಾದೆ. ಅವರಿಗೆ ಕೊನೆಗೆ ನಾನು ಹೇಳಿದ್ದು-‘ನೀವು ನಾಟಕದ ವಿಷಯವಾಗಿ ನನ್ನ ಮತ್ತು ಚಂಪ್ರ ದೇಶಪಾಂಡೆ ಅವರನ್ನು ಸಂಪರ್ಕಿಸುತ್ತಿರಿ…’ಎಂದು.

ಮೊದಲ ಪ್ರಯೋಗ ಕೊರೊನಾದ ಎರಡನೆಯ ಅಲೆಗೆ ಮುಂಚೆ ಮಾರ್ಚ್ 4, 2021 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ತದನಂತರ ಲಾಕ್​ಡೌನ್ ಸಡಿಲುಗೊಂಡಾದ ಬಳಿಕ ಎರಡು ಪ್ರಯೋಗಗಳು ನಡೆದವು.

ಮತ್ತೆ ಇವತ್ತು ನಾಟಕ ಸಿದ್ಧಗೊಂಡು ನಾಲ್ಕನೆಯ ಪ್ರಯೋಗಕ್ಕೆ ಅಣಿಯಾಗಿದೆ. ಯುವ ನಿರ್ದೇಶಕ ಅಭಿಮನ್ಯು ಭೂಪತಿಯ ಗರಡಿಯಲ್ಲಿ ಮಹೇಶ ಎಸ್.ಪಿ., ಪ್ರಭಾಕರ, ಕಲಾವತಿ ಮತ್ತು ಅನುಲತಾ ಬಣ್ಣ ಹಚ್ಚಿ ಅಭಿನಯಸಲು ಸಜ್ಜಾಗಿದ್ದಾರೆ. ನೇಪಥ್ಯದಲ್ಲಿ ಬೆಳಕು ವಿನ್ಯಾಸದ ಹೊಣೆ ಮಂಜು ನಾರಾಯಣ ಅವರದ್ದು. ಅಭಿಮನ್ಯು ಭೂಪತಿಯ ಸಂಗೀತ ನಿರ್ದೇಶನಕ್ಕೆ ನೆರವು ನೀಡಿದವರು ಸಚಿನ್, ಪವನ್ ಅವರುಗಳು. ಪ್ರಸಾಧನ ಗುರುರಾಜ. ಇಡೀ ತಂಡದ ನಿರ್ವಹಣೆಯ ಸಾರಥ್ಯವು ಮಧುಸೂದನ್ ಕೆ.ಎಸ್. ಅವರ ಹೆಗಲ ಮೇಲೆಯಿದೆ.

ನಾಟಕ : ಚದುರಂಗ ಮತ್ತು ಕತ್ತೆ
ಮರಾಠಿ : ಚಂಪ್ರ ದೇಶಪಾಂಡೆ
ಕನ್ನಡಕ್ಕೆ : ಡಿ. ಎಸ್. ಚೌಗಲೆ
ನಿರ್ದೇಶನ : ಅಭಿಮನ್ಯು ಭೂಪತಿ
ತಂಡ : ಪಂಚಮುಖೀ ನಟರ ಸಮೂಹ
ಸ್ಥಳ : ರಂಗಶಂಕರ
ದಿನಾಂಕ 19.1.2022
ಸಮಯ : 7.30 ಸಂಜೆ
ಟಿಕೆಟ್ ದರ : ರೂ. 150, Book My Show

*

ಇದನ್ನೂ ಓದಿ : New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’