Citizen Journalism : ಹಾದಿಯೇ ತೋರಿದ ಹಾದಿ : ‘ಇಲ್ಲೊಂದು ಶವ ಸಿಕ್ಕಿದೆ ಬನ್ನಿ’ ಯಾವ ಹೊತ್ತಿನಲ್ಲಿಯೂ ಸಿದ್ಧ ಈ ಆಶಾ ವಿ. ಸ್ವಾಮಿ

Strong Woman : ‘ಅತ್ತೆ ಮಾವ ಇಬ್ಬರೂ, ನೀನು ಈ ಕೆಲಸ ಮಾಡುವ ಹಾಗಿದ್ದರೆ ನಮ್ಮ ಮನೆಯಲ್ಲಿರಬೇಡ. ಇದನ್ನು ಬಿಟ್ಟರೆ ಮಾತ್ರ ಗಂಡನ ಜೊತೆಗೆ ಬದುಕಬಹುದು ಎಂದರು. ನಂತರ ಅಮ್ಮನೂ ಎರಡು ವರ್ಷಗಳವರೆಗೆ ಮಾತನಾಡಿರಲಿಲ್ಲ. ನನ್ನ ಮಕ್ಕಳಿಬ್ಬರೊಂದಿಗೆ ಬಾಡಿಗೆ ಮನೆಗೆ ಬಂದೆ. ಆ್ಯಂಬುಲೆನ್ಸ್​ ಓಡಿಸಲು ಕಲಿತೆ.’ ಆಶಾ ವಿ. ಸ್ವಾಮಿ

Citizen Journalism : ಹಾದಿಯೇ ತೋರಿದ ಹಾದಿ : ‘ಇಲ್ಲೊಂದು ಶವ ಸಿಕ್ಕಿದೆ ಬನ್ನಿ’ ಯಾವ ಹೊತ್ತಿನಲ್ಲಿಯೂ ಸಿದ್ಧ ಈ ಆಶಾ ವಿ. ಸ್ವಾಮಿ
ಸಮಾಜ ಸೇವಕಿ ಆಶಾ ವಿ. ಕೃಷ್ಣಸ್ವಾಮಿ, ರಾಮನಗರ
Follow us
|

Updated on:Jan 13, 2022 | 1:06 PM

ಹಾದಿಯೇ ತೋರಿದ ಹಾದಿ | Haadiye Torida Haadi : ಆಶಾ ವಿ. ಸ್ವಾಮಿ (Asha V. Swami) ಶವ ಎಂದರೆ ಶಿವನಿಗೆ ಸಮ ಎಂಬ ಮಾತಿದೆ. ಆತ್ಮಹತ್ಯೆ ಮಾಡಿಕೊಂಡೋ ಅಪಘಾತಗಳಲ್ಲಿ ಸಿಕ್ಕೋ ಸತ್ತವರ ದೇಹಗಳನ್ನ ನೋಡಿಯೇ ಬಹುತೇಕರು ಬೆಚ್ಚಿಬೀಳುವಾಗ ಈ ಹೆಣ್ಣುಮಗಳು ಗೊತ್ತುಗುರಿಯಿಲ್ಲದ ಸುಮಾರು 5000ಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತಿ ಕೊಡುವ ಕೆಲಸ ಮಾಡಿದ್ದಾರೆ. ಇವರು ಹುಟ್ಟಿದ್ದು ರಾಮನಗರ ಬಳಿಯ ಜಯಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ, ಕೂಟಗಲ್ಲಿನಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸ. ನಂತರ ಪ್ರಥಮ ಪಿ.ಯು.ಸಿ.ಗಾಗಿ ರಾಮನಗರದ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರಿದರು. ಅಷ್ಟರಲ್ಲಿ ಅಜ್ಜಿ ತಾತನ ಆಸೆಯಂತೆ ಇವರ ಮದುವೆಯಾಯಿತು. ಗಂಡನ ಮನೆಯಲ್ಲಿ ಇವತ್ತು ಕೂಲಿ ಮಾಡಿದರೆ ಮಾತ್ರ ಊಟ ಎನ್ನುವ ಪರಿಸ್ಥಿತಿಯಿತ್ತು. ಸದ್ಯ ಇವರು ವಾಸಿಸುತ್ತಿರುವುದು ರಾಮನಗರದಿಂದ ಎರಡು ಕಿ.ಮೀ. ದೂರದಲ್ಲಿರುವ ಚಾಮುಂಡಿಪುರ, ಬೆಳಗುಂಬ ರಸ್ತೆಯಲ್ಲಿ. ನನಗಿವರು ಮಾತಿಗೆ ಸಿಕ್ಕಿದ್ದು 15.12.2021 ರಂದು ನೆಲಮಂಗಲದ ಕಾರ್ಯಕ್ರಮವೊಂದರಲ್ಲಿ. ಸಮಾಜದ ಎಲ್ಲ ವಿರೋಧಾಭಾಸಗಳನ್ನ ಮೆಟ್ಟಿನಿಂತ ಈ ಅಸೀಮಳ ಜೀವನಗಾಥೆಯನ್ನು ಅವರ ಮಾತುಗಳಲ್ಲೇ ಓದಿಕೊಳ್ಳಿ. ಜ್ಯೋತಿ ಎಸ್, ಬೆಂಗಳೂರು, ಸಿಟಿಝೆನ್ ಜರ್ನಲಿಸ್ಟ್  * (ಹಾದಿ -1)

ಯಾರೂ ಅನಾಥರಲ್ಲ. ಹುಟ್ಟುವ ಪ್ರತಿಯೊಬ್ಬರೂ ಸಂಬಂಧದೊಂದಿಗೆ ಹುಟ್ಟಿರುತ್ತಾರೆ. ಯಾರಿಲ್ಲದಿದ್ದರೂ ತಾಯಿ-ಮಗು ಎನ್ನುವ ಸಂಬಂಧ ಅಂತೂ ಇದ್ದೇ ಇರುತ್ತದೆ. ಹಾಗಾಗಿ ಯಾರೂ ಅನಾಥರಲ್ಲ. ನಾವು ಎಂಟಹತ್ತು ಜನರ ಗುಂಪು ಮಾಡಿಕೊಂಡಿದ್ದೆವು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ನಮಗೆ ಬರುತ್ತಿದ್ದ ಸಂಬಳದಲ್ಲಿ ಸ್ವಲ್ಪ ಹಣ ಉಳಿಸಿ ರಸ್ತೆ ಬದಿಯ ಅಸಹಾಯಕ ಜನರಿಗೆ ಊಟ, ಮೆಡಿಸಿನ್ ಕೊಡುತ್ತಿದ್ದೆವು. ಕೆಲವರಿಗೆ ಓದಲು ಕೂಡ ಆ ಹಣ ಖರ್ಚು ಮಾಡುತ್ತಿದ್ದೆವು. ಆ್ಯಂಬುಲೆನ್ಸ್​ ಚಾಲಕ ನನ್ನ ಸೋದರ ಮಾವ ಪ್ರವೀಣ್ ಕೆಲವೊಮ್ಮೆ ತೀರಾ ಸಂಕಷ್ಟದಲ್ಲಿರುವವರನ್ನು ನಮಗೆ ಪರಿಚಯಿಸುತ್ತಿದ್ದರು. ನಾವು ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿ ಬರುತ್ತಿದ್ದೆವು. ಹೀಗೆ ನಮ್ಮ ಸಮಾಜಸೇವೆಯ ಪ್ರಯಾಣ ಶುರುವಾಯಿತು.

ಒಮ್ಮೆ ನಾಲ್ಕೈದು ಜನ ಚಿಕ್ಕ ಹೆಣ್ಣುಮಕ್ಕಳಿರುವ ತೀರ ಬಡ ಕುಟುಂಬದ ಮುಸ್ಲಿಂ ಮಹಿಳೆಯೊಬ್ಬರನ್ನು ಪ್ರವೀಣ್ ಮಾವ, ಚನ್ನಪಟ್ಟಣದಿಂದ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಬಂದರು. ನಾನಾಗ ತೋಟದಲ್ಲಿ ನೀರು ಕಟ್ಟುತ್ತಿದ್ದೆ. ತಕ್ಷಣವೇ ಸ್ನೇಹಿತರ ಸಹಾಯದಿಂದ ಹಣ ಹೊಂದಿಸಿ ಆ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ವಾಪಸ್ ಬರುವಾಗ  ರಾಮನಗರ ರೈಲ್ವೆ ಪೊಲೀಸರಿಂದ ಮಾವನಿಗೆ ಫೋನ್ ಬಂದಿತು, ‘ಇಲ್ಲೊಂದು ಶವಸಿಕ್ಕಿದೆ ಬನ್ನಿ’ ಎಂದು. ನನಗೂ ಕುತೂಹಲವುಂಟಾಗಿ ನಾನೂ ನಿಮ್ಮೊಂದಿಗೆ ಬರುತ್ತೇನೆ ಎಂದು ಹಠ ಹಿಡಿದೆ. ಆಗ ಮಾವ, ‘ಬೇಡಮ್ಮ ನಿನಗೆ ಚಿಕ್ಕಮಕ್ಕಳಿವೆ ಬರಬೇಡ’ ಎಂದರೂ ನಾನು ಕೇಳಲಿಲ್ಲ.

ರಾಮನಗರದ ಎಸ್.ಪಿ. ಆಫೀಸ್ ಹಿಂದಿನ ರಸ್ತೆಯಲ್ಲಿ ಆ ದೇಹ ಛಿದ್ರವಾಗಿ ಬಿದ್ದಿತ್ತು. ನೂರಾರು ಜನ ಗುಂಪುಗಟ್ಟಿ ನೋಡುತ್ತಿದ್ದರಷ್ಟೇ, ಯಾರೂ ಮುಂದೆ ಬರಲಿಲ್ಲ. ಒಬ್ಬ ಪೊಲೀಸ್ ಜೊತೆಗೆ ಮಾವ ಕೂಡ ಹೋದರು. ಪೊಲೀಸ್ ಚೀಲ ಹಿಡಿದುಕೊಂಡಿದ್ದರು, ಸಾಕ್ಷಿಗೆ ಸಂಬಂಧಿಸಿದ ಏನೂ ಬಿಡುವ ಹಾಗಿರಲಿಲ್ಲ. ಹಾಗಾಗಿ ದೇಹ ಛಿದ್ರವಾಗಿದ್ದರೂ ಎಲ್ಲವನ್ನು ಆಯ್ದು ಚೀಲಕ್ಕೆ ತುಂಬಬೇಕಿತ್ತು. ನಾನು ದೂರದಿಂದಲೇ ಒಂದು ಫೋಟೋ ತೆಗೆದೆ. ರಕ್ತದ ವಾಸನೆಯಿಂದ ಹತ್ತಿರಕ್ಕೂ ಹೋಗುವಂತಿರಲಿಲ್ಲ. ಅವರಷ್ಟೇ ಇದೆಲ್ಲ ಮಾಡುತ್ತಿದ್ದಾರಲ್ಲ ಅಂತ ಜೀವ ತಡೆಯಲಾಗದೆ ಅವರ ಹತ್ತಿರ ಮಾಸ್ಕ್, ಗ್ಲೌಸ್ ಕೇಳಿ ನಾನೂ ಚೀಲ ಹಿಡಿದುಕೊಂಡು ಮಾಂಸದ ತುಂಡುಗಳನ್ನು ಎತ್ತಿಹಾಕಿದೆ. ಆಗ ಪೊಲೀಸರು, ಇದು ಹೆಣ್ಣುಮಕ್ಕಳು ಮಾಡುವ ಕೆಲಸವಲ್ಲ ಎಂದು ನಿರಾಕರಿಸಿದರು. ಆದರೆ ನಾನು ಹಿಂದೆ ಸರಿಯಲಿಲ್ಲ. ಕ್ರಮೇಣ ಇಂಥ ಪ್ರಕರಣಗಳಿಗೆ ಫೋನ್ ಮಾಡಿ ಕರೆಯಲಾರಂಭಿಸಿದರು.

ಹೀಗೇ ಒಂದು ದಿನ ಫೋನ್ ಬಂದಿತು. ವೃದ್ಧೆಯೊಬ್ಬರು ರೈಲಿಗೆ ಸಿಲುಕಿದ್ದರು. ಅವರ ಪರ್ಸಿನಲ್ಲಿ ಮೊಬೈಲ್ ನಂಬರ್ ಇತ್ತು. ಆ ನಂಬರಿಗೆ ಫೋನ್ ಮಾಡಿ ವಿಚಾರ ತಿಳಿಸಿದಾಗ ದೇವಸ್ಥಾನದಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿಯಿತು. ಅವರ ಶವವನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ತಂದೆವು. ಆಗ ನಮ್ಮಣ್ಣ ಓಡಿ ಬಂದು, ‘ಅವ್ವ, ಅಜ್ಜಿ ರೈಲಿಗೆ ಸಿಕ್ಕಿದೆಯಂತೆ ಬಾಡಿ ಎಲ್ಲಿದೆ?’ ಎಂದ. ನಾನು ತಂದಿದ್ದೇನೆ ನೋಡು ಇಲ್ಲಿದೆ ಎಂದೆ. ಆ ಅಜ್ಜಿ ನಮ್ಮ ದೂರದ ಸಂಬಂಧಿಯಾಗಿದ್ದರು. ಬದುಕಿದಾಗ ಅವರನ್ನು ನೋಡಿದ ನೆನಪೂ ನನಗಿರಲಿಲ್ಲ. ಮುಖದ ಅರ್ಧ ಭಾಗವೇ ಇರದ ಅಜ್ಜಿಯನ್ನು ನೋಡಲು ಅಣ್ಣನಿಗೆ ಧೈರ್ಯ ಸಾಲದೆ ಹಿಂದೆ ಸರಿದುಬಿಟ್ಟ. ಕೊನೆಗೆ ಸ್ಮಶಾನದಲ್ಲಿಯೂ ಅಂತ್ಯಸಂಸ್ಕಾರಕ್ಕೂ ಯಾರೂ ಬರಲಿಲ್ಲ. ಅಜ್ಜಿಯ ಹೊಟ್ಟೆಯಲ್ಲಿ ಗಡ್ಡೆ ಇತ್ತಂತೆ. ಅದು ವಾಸಿಯಾಗದ ಕಾಯಿಲೆ ಎಂದು ಹೆದರಿ ರೈಲಿಗೆ ತಲೆಕೊಟ್ಟಿದ್ದಾರೆ. ಅಜ್ಜಿ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಇದ್ದವರು. ಅಕಸ್ಮಾತ್ ಆಸ್ತಿವಂತರಾಗಿದ್ದರೆ ಸಂಬಂಧಿಕರು ಅವರನ್ನು ಮುಟ್ಟೋಕೂ ಆಸ್ಪದ ಕೊಡುತ್ತಿರಲಿಲ್ಲವೋ ಏನೋ.

Haadiye Torida Haadi Column Kannada Citizen Journalist Jyothi S interviewed Asha V Swamy Good Samaritan Performs last rights of unidentified bodies 

ಕೆಲಸದಲ್ಲಿ ನಿರತ ಆಶಾ

ಮನೆ ಮಕ್ಕಳನ್ನು ನೋಡಿಕೊಂಡು ಇರು ಎಂದು ಮಾವ ಕೂಡ ಹೇಳಿದರೂ ನಾನು ಕೇಳಲಿಲ್ಲ. ನಿಮ್ಮ ಕೆಲಸವನ್ನು ನಾನೇ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಆ್ಯಂಬುಲೆನ್ಸ್ ಓಡಿಸಲು ಕಲಿತೆ. ಸಿವಿಲ್ ಪೊಲೀಸ್ ಮತ್ತು ರೈಲ್ವೆ ಪೊಲೀಸರ ಕಡೆಯಿಂದ ಆಗಾಗ ಬರುತ್ತಿದ್ದವು. 2016-2017ರಲ್ಲಿ ನಾನು ಸಂಪೂರ್ಣವಾಗಿ ಈ ಕೆಲಸದಲ್ಲಿ ತೊಡಗಿಕೊಂಡೆ. ಕೆಲವು ಸ್ನೇಹಿತರು ಇಷ್ಟೊಂದು ಹೆಣ ಎತ್ತುತ್ತೀಯಾ ಯಾರದ್ದಾದರೂ ಸಹಾಯ ತಗೋ, ಒಬ್ಬಳೇ ಎಷ್ಟು ಮಾಡಲು ಸಾಧ್ಯ. ಅಲ್ಲಿ ಹೋಗಿ ಹೆಣ ಎತ್ತೋದು ಇಲ್ಲಿ ಬಂದು ವ್ಯವಸಾಯ ಮಾಡೋದು ನಿನಗೊಬ್ಬಳಿಗೆ ಕಷ್ಟ. ನಿಮ್ಮ ತಂದೆಯಂತೂ ನಿನ್ನನ್ನ ಒಳ್ಳೆಯ ಮನೆಗೆ ಮದುವೆ ಮಾಡಿಕೊಟ್ಟಿಲ್ಲ. ಹೀಗೇ ಆದರೆ ನಿನ್ನ ಮತ್ತು ಮಕ್ಕಳ ಭವಿಷ್ಯ ಹೇಗೆ? ಎಂದರು. ನನಗೆ ಯಾವ ಸಹಾಯ ಬೇಡ. ನಾನು ಈ ಕೆಲಸದಲ್ಲಿ ಖುಷಿ ಕಾಣುತ್ತಿದ್ದೇನೆ. ಯಾರೂ ಇಲ್ಲ ಎಂದವರಿಗೆ ನಾನು ತಂಗಿಯಾಗಿಯೋ, ಮಗಳಾಗಿಯೋ ಅವರ ಕಾರ್ಯ ನಿರ್ವಹಿಸುತ್ತಿರುವುದು ನನಗೆ ತುಂಬ ಖುಷಿ ಕೊಡುತ್ತಿದೆ ಎಂದು ನಾನು ಈ ಕೆಲಸ ಮುಂದುವರೆಸಿಕೊಂಡು ಬಂದೆ.

ಆದರೆ ಅತ್ತೆ ಮಾವ ಇಬ್ಬರೂ ನೀನು ಈ ಕೆಲಸ ಮಾಡುವ ಹಾಗಿದ್ದರೆ ನಮ್ಮ ಮನೆಯಲ್ಲಿರಬೇಡ ಇದನ್ನು ಬಿಟ್ಟರೆ ಮಾತ್ರ ಗಂಡನ ಜೊತೆಗೆ ಬದುಕಬಹುದು ಎಂದರು. ಇದನ್ನು ಪ್ರವೀಣ್ ಮಾವನಿಗೆ ಹೇಳಿದೆ. ಅವರೂ ಕೂಡ ಅತ್ತೆಮಾವ ಹೇಳಿದ ಹಾಗೆ ಕೇಳು ಎಂದರು. ನಾನು ಏನೇ ಆದರೂ ಈ ಕೆಲಸ ಬಿಡಲಾಗುವುದಿಲ್ಲ ಎಂದಾಗ ಅವರೇ ಒಂದು ಬಾಡಿಗೆ ಮನೆಮಾಡಿಕೊಟ್ಟು ನಿನ್ನಿಷ್ಟದ ಕೆಲಸ ಮಾಡಿಕೊಂಡು ಬದುಕು ಎಂದರು. ಆಗ ಒಂದಷ್ಟು ಹುಡುಗರನ್ನು ಕರೆಸಿ ಒಂದು ಸಂಸ್ಥೆ ಮಾಡೋಣ ಎಂದಾಗ ಎಲ್ಲರೂ ಒಪ್ಪಿಕೊಂಡು ನಾಳೆ ಬರುತ್ತೇವೆಂದವರು ಯಾರೂ ಫೋನ್ ಕೂಡ ರಿಸೀವ್ ಮಾಡಲಿಲ್ಲ. ಬೇರೆ ನಂಬರಿನಿಂದ ಕರೆಮಾಡಿದಾಗ, ಕಷ್ಟ ಅಂದಾಗ ಹತ್ತಿಪ್ಪತ್ತು ರೂಪಾಯಿ ಕೊಟ್ಟು ಸಹಾಯ ಮಾಡಬಹುದು. ಆದರೆ, ಹೆಣ ಎತ್ತು ಅಂದರೆ ಆಗಲ್ಲ, ನಿಮ್ಮ ಸಹವಾಸವೇ ಬೇಡ ಎಂದು ದೂರ ಉಳಿದರು. ಆನಂದ ಎನ್ನುವ ಒಬ್ಬ ಹುಡುಗ ಮಾತ್ರ ಏನಾದರೂ ಆಗಲಿ ಅಕ್ಕ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದ.

Haadiye Torida Haadi Column Kannada Citizen Journalist Jyothi S interviewed Asha V Swamy Good Samaritan Performs last rights of unidentified bodies 

ಆಶಾ ಅವರ ಕೆಲಸಕ್ಕೆ ಬೆನ್ನೆಲುಬಾಗಿ ನಿಂತ ಅವರ ಸೋದರ ಮಾವ ಪ್ರವೀಣ್ 

ಒಮ್ಮೆ ನಾನು ಮತ್ತು ಮಾವ ಬೈಕಿನಲ್ಲಿ ಹೋಗುವಾಗ ಅಪಘಾತವಾಯ್ತು. ಅದರಲ್ಲಿ ನಾವಿಬ್ಬರೂ ಬದುಕುಳಿದದ್ದೇ ಹೆಚ್ಚು. ಅಲ್ಲಿದ್ದ ಜನರೇ ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ನಮ್ಮವರೇ ಆ ಆಸ್ಪತ್ರೆಯಲ್ಲಿದ್ದರೂ ಯಾರೂ ನಮ್ಮನ್ನು ಉಪಚರಿಸಲಿಲ್ಲ. ಸಾಲದ್ದಕ್ಕೆ ಇವರಿಬ್ಬರೂ ಎಲ್ಲರ ಹೆಣ ಎತ್ತುತ್ತಾರೆ, ಅದಕ್ಕೆ ಯಾವುದೋ ಆತ್ಮ ಹಿಂಬಾಲಿಸಿ ಹೀಗಾಗಿದೆ ಎಂಬ ಮೂಢನಂಬಿಕೆಯ ಮಾತುಗಳನ್ನಾಡಿದರೇ ಹೊರತು ಸಹಾಯಕ್ಕೆ ಬರಲಿಲ್ಲ. ಆಗ ನಮ್ಮ ಜೊತೆ ನಿಂತದ್ದು ಬೆಟ್ಟಸ್ವಾಮಿ ಅಣ್ಣ ಎಂಬುವವರು.

ಸುಧಾರಿಸಿಕೊಂಡು ಮತ್ತೆ ಕೆಲಸ ಮುಂದುವರೆಸಿದೆ. ಒಮ್ಮೆ ರಾಮನಗರದ ಬಳಿ ರೈಲಿಗೆ ಸಿಕ್ಕ ಹುಡುಗನ ದೇಹವನ್ನು ತೆಗೆದೆವು. ಮೂರು ನಾಲ್ಕು ದಿನದ ಹಿಂದೆಯಷ್ಟೇ ಮೊಬೈಲ್​ ಖರೀದಿಸಿದ್ದ. ಕಾರಣ ಗೊತ್ತಿಲ್ಲ, ರೈಲಿಗೆ ತಲೆ ಕೊಟ್ಟಿದ್ದಾನೆ. ಆ ಹುಡುಗ ಮೊಬೈಲಿಗೆ ಪಾಸ್ವರ್ಡ್​ ಬೇರೆ ಹಾಕಿದ್ದ. ಪೊಲೀಸರು ಅನ್​ಲಾಕ್​ ಮಾಡಿದರು. ನೋಡಿದರೆ ಅವನು ಆ ಮೊಬೈಲಿನಿಂದ ಯಾವ ನಂಬರಿಗೂ ಫೋನ್ ಮಾಡಿಲ್ಲ. ಸಿಮ್ ಟ್ರೇಸಿಗೆ ಕೊಟ್ಟು ಸುಮಾರು ಹದಿನೈದು ದಿನ ಅವನ ಶವವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಟ್ಟೆವು. ಸಿಮ್ ಟ್ರೇಸ್ ಆದಾಗ ಅವನು ಆಂಧ್ರದವನೆಂದು ತಿಳಿಯಿತು. ಅವನ ತಂದೆತಾಯಿ ತಂಗಿ ಬಂದರು. ಆ ತಾಯಿ ಉಡಿತುಂಬಾ ಒಂದು, ಐದು ರೂಪಾಯಿ ನಾಣ್ಯಗಳು, ಹತ್ತುರೂಪಾಯಿಯ ನೋಟುಗಳಿದ್ದವು. ಈಗ ಶವ ತೆಗೆದುಕೊಂಡು ಹೋಗದಿದ್ದರೆ, ಊರವರು ಕಳ್ಳತನದಲ್ಲಿ ದುಡ್ಡು ತೆಗೆದುಕೊಂಡು ಹೋಗಿದ್ದೀಯಾ ಎಂದು ಊರಿನಿಂದಲೇ ಹೊರಹಾಕುತ್ತಾರೆ ಎಂದು ಸಂಕಟಪಟ್ಟರು. ಅವರ ಪರಿಸ್ಥಿತಿ ನೋಡಿ ಬಹಳ ಸಂಕಟವಾಯಿತು. ನಮ್ಮ ಗಾಡಿ ರಿಪೇರಿಯಿದ್ದ ಕಾರಣ ಪೊಲೀಸಿನವರು, ನಾವು ಎಲ್ಲರೂ ಸ್ವಲ್ಪ ಸ್ವಲ್ಪ ಹಣ ಹಾಕಿ ಬೇರೆ ಗಾಡಿಯನ್ನು ಬಾಡಿಗೆಗೆ ತಂದು ಅವರನ್ನು ಊರಿಗೆ ಕಳುಹಿಸಿಕೊಟ್ಟೆವು. ಇದಾದ ಮೇಲೆ ಎಷ್ಟೋ ಸಲ ಹೀಗಾಗಿದೆ. ಮಣ್ಣಾದ ಮೇಲೆ ಫೇಸ್​ಬುಕ್ಕಿನಲ್ಲಿ ನೋಡಿ, ಇವರು ನನ್ನ ತಂದೆ ನೀವು ಮಣ್ಣು ಮಾಡಿಬಿಟ್ಟಿದ್ದೀರಾ… ಎಂದವರೂ ಇದ್ದಾರೆ.

ಸ್ನೇಹಿತರ ಸಲಹೆಯಂತೆ 2018-2019ರಲ್ಲಿ “ಜೀವರಕ್ಷಾ ಚಾರಿಟಬಲ್ ಟ್ರಸ್ಟ” ರಿಜಿಸ್ಟರ್ ಮಾಡಿಸಿದ್ದೇನೆ. ಸಂಸ್ಥೆಯ ಮುಖೇನ ಶಾಲಾ ಮಕ್ಕಳಿಗೆ ಪುಸ್ತಕ ಕೊಡುವುದು. ಮದುವೆ, ಗೃಹಪ್ರವೇಶಗಳಂತಹ ಕಾರ್ಯಕ್ರಮಗಳಲ್ಲಿ ಮಿಕ್ಕ ಊಟವನ್ನು ಸಂಗ್ರಹ ಮಾಡಿ ಅವಶ್ಯವಿದ್ದವರಿಗೆ ಹಂಚುವಂತಹ ಕೆಲಸಗಳನ್ನೂ ಮಾಡುತ್ತಾ ಬಂದಿದ್ದೇನೆ. ಇದಾದ ಮೇಲೆ “ಪ್ರಕೃತಿ ಮಡಿಲು” ಎಂಬ ಆಶ್ರಮ ಮಾಡಿಕೊಂಡು, ಗ್ಯಾಂಗ್ರೀನ್ ಆದವರಿಗೆ ಚಿಕಿತ್ಸೆ ಕೊಡಿಸಿದ್ದೇನೆ. ಅನಾರೋಗ್ಯಪೀಡಿತ ಅನಾಥರನ್ನ ಕರೆದುಕೊಂಡು ಬಂದು ಅವರ ನೀಡಿದ ಮಾಹಿತಿ ಮೇರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕುತ್ತೇನೆ. ಸಂಬಂಧಪಟ್ಟವರು ಖಚಿತಪಡಿಸಿದಾಗ ಪರಿಶೀಲಿಸಿ ಅವರ ಜಾಗಕ್ಕೆ ತಲುಪಿಸಿಬರುತ್ತೇನೆ. ಎಲ್ಲರೂ ಅವರವರ ಸಂಬಂಧಗಳನ್ನು ಸರಿಯಾಗಿ ನಿಭಾಯಿಸಿದರೆ ಹೀಗೆ ಯಾರೂ ಬೀದಿಗೆ ಬರುವುದಿಲ್ಲ ಅಲ್ಲವಾ?

Haadiye Torida Haadi Column Kannada Citizen Journalist Jyothi S interviewed Asha V Swamy Good Samaritan Performs last rights of unidentified bodies 

ರೈಲುಹಳಿಗೆ ಸಿಲುಕಿದ ಶವವನ್ನು ಸಾಗಿಸುತ್ತಿರುವ ಆಶಾ

ಈ ಕೆಲಸ ಪ್ರಾರಂಭಿಸಿದಂದಿನಿಂದ ನನ್ನ ಗಂಡ ಮತ್ತವರ ಕುಟುಂಬ ನನ್ನಿಂದ ದೂರವೇ ಉಳಿದಿದೆ. ನನ್ನಮ್ಮ ಕೂಡ ಮೊದಲು ಎರಡು ವರ್ಷ ನನ್ನೊಂದಿಗೆ ಮಾತಾಡಿರಲಿಲ್ಲ. ಅಪ್ಪ ಖುಷಿಯಿಂದ ಧೈರ್ಯ ತುಂಬುತ್ತಿದ್ದಾರೆ. ಇವತ್ತೂ ನಾನಿರೋದು ಬಾಡಿಗೆ ಮನೆಯಲ್ಲಿ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಭತ್ತ, ರಾಗಿ ಬೆಳೆಯುತ್ತೇವೆ. ರಾಗಿ ಚೆನ್ನಾಗಿ ಬೆಳೆದರೆ ವರ್ಷಪೂರ್ತಿ ಊಟಮಾಡುತ್ತೇವೆ. ಈ ವರ್ಷ ರಾಗಿಬೆಳೆ ಪೂರ್ತಿ ಹಾಳಾಗಿದೆ.

ಬಿಳಗುಂಬ ರಸ್ತೆಯಲ್ಲಿ ಆಶ್ರಮ ಕಟ್ಟಿಸುತ್ತಿದ್ದೇವೆ. ತೇಜಸ್, ಮನೀಷ್ ನನ್ನಿಬ್ಬರು ಗಂಡುಮಕ್ಕಳು. ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಆದರೆ ಅವರು ಎ.ಸಿ. ರೂಮಿನಲ್ಲಿ ನೌಕರಿ ಮಾಡುವುದು ಬೇಡ, ನಮ್ಮಂತೆಯೇ ಸಮಾಜಸೇವಕರಾಗಿ ನಾಲ್ಕು ಜನರಿಗೆ ಉಪಕಾರಿಗಳಾಗಬೇಕು ಎನ್ನುವ ಕನಸಿದೆ. ನೋಡೋಣ ಅವರವರ ಆಯ್ಕೆ.

ಈ ಅಂಕಣದ ಆಶಯ : Citizen Journalist : ‘ಹಾದಿಯೇ ತೋರಿದ ಹಾದಿ’ ಜ್ಯೋತಿ ಎಸ್​. ಅಂಕಣ ನಾಳೆಯಿಂದ ಪ್ರಾರಂಭ

Published On - 12:52 pm, Thu, 13 January 22