
ನವದೆಹಲಿ, ಆಗಸ್ಟ್ 26: ನೇಪಾಳದಲ್ಲಿ ಉಂಟಾದ ಭೀಕರ ಜಲಪ್ರಳಯದಿಂದಾಗಿ (Nepal Flash Floods) ಗಡಿಯಲ್ಲಿರುವ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೂಡ ಹೈ ಅಲರ್ಟ್ ಘೋಷಿಸಲಾಗಿದೆ. ಈ ಭೀಕರ ಪ್ರಕೃತಿ ವಿಕೋಪದ ಬೆನ್ನಲ್ಲೇ ಭಾರತವು ನೇಪಾಳ ಗಡಿ ಭಾಗದಲ್ಲಿ ಪ್ರವಾಹ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ. ಗಂಡಕ್ ನದಿ ತೀರದ ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರೊಂದಿಗೆ ಮಾತುಕತೆ ನಡೆಸಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕೇಂದ್ರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
NDRF ನಿಯೋಜನೆ:
ಬಿಹಾರದಲ್ಲಿ ಎಲ್ಲ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಭಾರತ-ನೇಪಾಳದ 1,751 ಕಿಮೀ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಸಶಸ್ತ್ರ ಸೀಮಾ ಬಲದ (SSB) ಎಲ್ಲಾ ವಿಭಾಗಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ 18 ತಂಡಗಳನ್ನು ರವಾನಿಸಲಾಗಿದೆ.
ಇದನ್ನೂ ಓದಿ: Nepal Flood: ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ; ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿಯ ಸೇತುವೆ
ಬಿಹಾರದಲ್ಲಿ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲಗಂಜ್, ಸಾರನ್, ಮುಜಫ್ಫರ್ಪುರ ಮತ್ತು ವೈಶಾಲಿ ಹಾಗೂ ಸೀತಾಮರ್ಹಿ ಮತ್ತು ಶೇಹರ್ ಸೇರಿದಂತೆ ಪ್ರವಾಹ ಪೀಡಿತ ಅಪಾಯಕಾರಿ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲು ಆದೇಶಿಸಲಾಗಿದೆ. ಸ್ಥಿತಿಗತಿಯನ್ನು ನಿಯಂತ್ರಣದಲ್ಲಿಡಲು ವಾಲ್ಮೀಕಿನಗರದ ಗಂಡಕ್ ನದಿ ಬ್ಯಾರೇಜ್ನ ಎಲ್ಲಾ 36 ಗೇಟ್ಗಳನ್ನು ತೆರೆಯಲಾಗಿದೆ.
#Bihar has stepped up flood preparedness following flash floods in Nepal and the possibility of a sudden rise in the water level of the Gandak River.
Six districts of the state — West Champaran, East Champaran, Gopalganj, Saran, Muzaffarpur and Vaishali — have been placed under… pic.twitter.com/vqSc9Gybl8
— All India Radio News (@airnewsalerts) August 26, 2026
ನೇಪಾಳದ ದೇವ್ಘಾಟ್ ಕೇಂದ್ರದಲ್ಲಿ ನಾರಾಯಣಿ ನದಿಯ ನೀರಿನ ಮಟ್ಟ 4.77 ಮೀಟರ್ನಷ್ಟಿದೆ (ಅಪಾಯದ ಮಟ್ಟ 9 ಮೀಟರ್ ಆಗಿದೆ). ನೇಪಾಳದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿದರೆ, ಆ ನೀರು ಸುಮಾರು 3-5 ಗಂಟೆಗಳಲ್ಲಿ ಗಂಡಕ್ ಬ್ಯಾರೇಜ್ ತಲುಪುವ ನಿರೀಕ್ಷೆಯಿದೆ.
ಉತ್ತರ ಪ್ರದೇಶದಲ್ಲಿ ಮುನ್ನೆಚ್ಚರಿಕೆ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೇಪಾಳದ ಪ್ರವಾಹ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮಹಾರಾಜ್ಗಂಜ್ ಮತ್ತು ಕುಶಿನಗರ ಜಿಲ್ಲೆಗಳಿಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಗಂಡಕ್ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಭೋಟೆಕೋಶಿ-ತ್ರಿಶೂಲಿ ನದಿ ವ್ಯವಸ್ಥೆಯ ಮೂಲಕ ನೀರು ಹರಿದುಬರುವ ಸಾಧ್ಯತೆಯಿದ್ದು, 24 ಗಂಟೆಯೂ ನಿರಂತರ ಕಣ್ಗಾವಲು ಇಡಲು ಜಿಲ್ಲಾಧಿಕಾರಿ ಗೌರವ್ ಸಿಂಗ್ ಸೊಗರ್ವಾಲ್ ನಿರ್ದೇಶಿಸಿದ್ದಾರೆ.
ನೇಪಾಳದಿಂದ ಹರಿದುಬರುವ ನದಿಗಳಿಂದಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಗಡಿ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಎರಡೂ ರಾಜ್ಯಗಳ ಆಡಳಿತ ಮಂಡಳಿಗಳು ಪರಿಸ್ಥಿತಿಯನ್ನು ಅತ್ಯಂತ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ