AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಕ್ಕಾಗಿ ಬ್ರೇಕಪ್; ಕಾಂಗ್ರೆಸ್-ಡಿಎಂಕೆ, ಬಿಜೆಪಿ-ಶಿವಸೇನೆ… ದಶಕಗಳ ಮೈತ್ರಿ ಮುರಿದುಕೊಂಡ ಪಕ್ಷಗಳಿವು

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಷರತ್ತುಬದ್ಧ ಬೆಂಬಲ ಘೋಷಿಸಿದ ಮೊದಲ ಪಕ್ಷ ಕಾಂಗ್ರೆಸ್. ಹೀಗಾಗಿ, ತಮಿಳುನಬಾಡಿನಲ್ಲಿ ಟಿವಿಕೆ-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಲಿದೆ. ಇದಕ್ಕಾಗಿ ಕಾಂಗ್ರೆಸ್ 55 ವರ್ಷಗಳ ಡಿಎಂಕೆ ಜೊತೆಗಿನ ತನ್ನ ಮಹಾಮೈತ್ರಿಯನ್ನು ಮುರಿದುಕೊಂಡಿದೆ. ಈ ರೀತಿ ಹಳೆಯ ಮೈತ್ರಿಯನ್ನು ಮುರಿದುಕೊಂಡ ಪಕ್ಷಗಳು ಯಾವುವು? ಯಾವ ಸಂದರ್ಭದಲ್ಲಿ ಈ ಬ್ರೇಕಪ್ ಆಯಿತು? ಎಂಬುದರ ವಿವರ ಇಲ್ಲಿದೆ.

ಅಧಿಕಾರಕ್ಕಾಗಿ ಬ್ರೇಕಪ್; ಕಾಂಗ್ರೆಸ್-ಡಿಎಂಕೆ, ಬಿಜೆಪಿ-ಶಿವಸೇನೆ... ದಶಕಗಳ ಮೈತ್ರಿ ಮುರಿದುಕೊಂಡ ಪಕ್ಷಗಳಿವು
Mk Stalin And Rahul GandhiImage Credit source: PTI
ಸುಷ್ಮಾ ಚಕ್ರೆ
|

Updated on: May 06, 2026 | 4:57 PM

Share

ನವದೆಹಲಿ, ಮೇ 6: ತಮಿಳುನಾಡು (Tamil Nadu Politics) ರಾಜಕೀಯದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ 108 ಸ್ಥಾನಗಳಲ್ಲಿ ಭಾರಿ ಜಯ ಸಾಧಿಸಿದೆ. ಇದರೊಂದಿಗೆ, ಇದು ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಟಿವಿಕೆ ಮೊದಲ ಚುನಾವಣೆಯಲ್ಲಿಯೇ ಗೆದ್ದು ಅಧಿಕಾರ ವಹಿಸಿಕೊಳ್ಳಲಿದೆ. ಬಹುಮತ ಸಿಗದ ಹಿನ್ನೆಲೆಯಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಈ ಮೂಲಕ ತಮಿಳುನಾಡಿನಲ್ಲಿ 5 ದಶಕಗಳ ಕಾಲದ ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿ ಮುರಿದುಬಿದ್ದಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಪಕ್ಷಕ್ಕೆ ಬಹುಮತಕ್ಕೆ 118 ಸ್ಥಾನಗಳು ಬೇಕಾಗುತ್ತವೆ. ಆದರೆ ಟಿವಿಕೆಗೆ ಇನ್ನೂ 11 ಸ್ಥಾನಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ, ವಿಜಯ್ ಸರ್ಕಾರ ರಚಿಸಲು ಇತರ ಪಕ್ಷಗಳಿಂದ ಬೆಂಬಲವನ್ನು ಕೋರಿದ್ದರು. ಅದಕ್ಕೆ ಕಾಂಗ್ರೆಸ್ ಮುಂದೆ ಬಂದು ಬೆಂಬಲ ನೀಡುವುದಾಗಿ ಘೋಷಿಸಿದೆ. ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಯಾವುದೇ ಕೋಮು ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರವಿಡಬೇಕು ಎಂಬ ಷರತ್ತನ್ನು ಹಾಕಿರುವ ಕಾಂಗ್ರೆಸ್ ತನ್ನ ಬೆಂಬಲ ಘೋಷಿಸಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಮೈತ್ರಿ ಪರ್ವ: ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ‘ಕೈ’ ಬಲ, ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಬೆಂಬಲಿಸಲು ಕಾಂಗ್ರೆಸ್ ಇಂದು ತನ್ನ 55 ವರ್ಷದ ಮಿತ್ರಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಹಾಗಂತ ಅಧಿಕಾರಕ್ಕಾಗಿ ಈ ರೀತಿ ಹಳೆಯ ಮೈತ್ರಿಯನ್ನು ರಾಜಕೀಯ ಪಕ್ಷಗಳು ಮುರಿದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.

ಈ ಹಿಂದೆ ಮುರಿದುಬಿದ್ದ ಮಹಾಮೈತ್ರಿಗಳು:

ಬಿಜೆಪಿ ಮತ್ತು ಶಿವಸೇನೆ (2014 ಮತ್ತು 2019):

25 ವರ್ಷಗಳ ಮೈತ್ರಿಯ ನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಯ ಕುರಿತು ವೈಮನಸ್ಸು ಉಂಟಾಗಿ 2014ರಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ ಮೊದಲು ಮುರಿದುಬಿದ್ದಿತು. ಬಳಿಕ ಅವರು ರಾಜಿ ಮಾಡಿಕೊಂಡರೂ 2019ರಲ್ಲಿ ಮತ್ತೆ ಬೇರ್ಪಟ್ಟರು. ಶಿವಸೇನೆ ಕೊನೆಗೆ ತನ್ನ ಸೈದ್ಧಾಂತಿಕ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸೇರಿಕೊಂಡು ಮಹಾ ವಿಕಾಸ್ ಅಘಾಡಿಯನ್ನು ರಚಿಸಿತು. ಇದರಿಂದಾಗಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು.

ಬಿಜೆಪಿ ಮತ್ತು ಜೆಡಿಯು (2013, 2017, ಮತ್ತು 2022):

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪದೇ ಪದೇ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ನೇಮಿಸುವುದನ್ನು ಪ್ರತಿಭಟಿಸಲು ಅವರು ಮೊದಲು 2013ರಲ್ಲಿ ಎನ್‌ಡಿಎ ತೊರೆದರು. 2017ರಲ್ಲಿ ಮತ್ತೆ ಎನ್​ಡಿಎಗೆ ಸೇರಿದರು. 2022ರಲ್ಲಿ ಬಿಹಾರದಲ್ಲಿ ಆರ್‌ಜೆಡಿಯೊಂದಿಗೆ ಹೊಸ ಸರ್ಕಾರವನ್ನು ರಚಿಸಿದರು.

ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗಿಲ್ಲ ಬಹುಮತ: ವಿಜಯ್​ ಮುಂದಿರುವ ಆಯ್ಕೆಗಳೇನು?

ಕಾಂಗ್ರೆಸ್ ಮತ್ತು ಎನ್‌ಸಿಪಿ (2014):

ಸೀಟು ಹಂಚಿಕೆ ಮತ್ತು ಮುಖ್ಯಮಂತ್ರಿ ಹುದ್ದೆಯ ಕುರಿತಾದ ಭಿನ್ನಾಭಿಪ್ರಾಯಗಳಿಂದಾಗಿ ಮಹಾರಾಷ್ಟ್ರದಲ್ಲಿ 15 ವರ್ಷಗಳ ಆಡಳಿತ ಮೈತ್ರಿಕೂಟವು 2014ರ ಚುನಾವಣೆಗೆ ಕೆಲವೇ ವಾರಗಳ ಮೊದಲು ಮುರಿದಬಿದ್ದಿತು.

ಜನತಾ ಪಕ್ಷ (1979):

ಭಾರತದ ಮೊದಲ ಕಾಂಗ್ರೆಸ್ಸೇತರ ಸಮ್ಮಿಶ್ರ ಸರ್ಕಾರವು ಕೇವಲ 2 ವರ್ಷಗಳ ನಂತರ ವಿಭಜನೆಯಾಯಿತು. ಆಂತರಿಕ ಅಧಿಕಾರ ಹೋರಾಟಗಳು ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಚರಣ್ ಸಿಂಗ್ ಪಕ್ಷಾಂತರವಾಗಿ ಪ್ರಧಾನಿಯಾಗಲು ಕಾರಣವಾಯಿತು. ಅವರ ಹಿಂದಿನ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಅವರು ಭಾರತದ ಪ್ರಧಾನಿಯಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us