ದೆಹಲಿ ಕಟ್ಟಡ ಕುಸಿತದಲ್ಲಿ 7 ಜನ ಸಾವು; ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕನ ಬಂಧನ
ದೆಹಲಿಯ ಸತ್ಯ ನಿಕೇತನದಲ್ಲಿ 7 ಜನರ ಪ್ರಾಣ ಬಲಿ ಪಡೆದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾನನ್ನು ದೆಹಲಿ ಪೊಲೀಸರು ಇಂದು ರಾಜಸ್ಥಾನದ ಭಿವಾಡಿಯಲ್ಲಿ ಬಂಧಿಸಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಅಪಘಾತದ ನಂತರ ಹರಿರಾಮ್ ವಿರುದ್ಧ ದೆಹಲಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಸೌತ್ ಕ್ಯಾಂಪಸ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಬಳಿ ಇದ್ದ 5 ದಶಕಗಳಷ್ಟು ಹಳೆಯದಾದ ಈ 5 ಅಂತಸ್ತಿನ ಕಟ್ಟಡದಲ್ಲಿ ಹುಡುಗರ ಪಿಜಿ ನಡೆಸಲಾಗುತ್ತಿತ್ತು. ಭಾನುವಾರ ಮಧ್ಯಾಹ್ನ ಈ ಕಟ್ಟಡ ಕುಸಿದು ಬಿದ್ದಿತ್ತು.

ನವದೆಹಲಿ, ಸೆಪ್ಟೆಂಬರ್ 7: ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಉಂಟಾದ ಪಿಜಿ ಕಟ್ಟಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾನನ್ನು ದೆಹಲಿ ಪೊಲೀಸರು ರಾಜಸ್ಥಾನದ ಭಿವಾಡಿಯಲ್ಲಿ ಬಂಧಿಸಿದ್ದಾರೆ. ಈ ಭೀಕರ ದುರಂತದಲ್ಲಿ ಈವರೆಗೆ 7 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಟ್ಟಡ ಕುಸಿತದ ನಂತರ ಹರಿರಾಮ್ ಗುಪ್ತಾ ತಲೆಮರೆಸಿಕೊಂಡಿದ್ದರಿಂದ ಆತನ ಪತ್ತೆಗೆ ದೆಹಲಿ ಪೊಲೀಸರು 10 ವಿಶೇಷ ತಂಡಗಳನ್ನು ರಚಿಸಿ, ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.
ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಬಳಿಯ ಸತ್ಯ ನಿಕೇತನದಲ್ಲಿದ್ದ 50 ವರ್ಷ ಹಳೆಯದಾದ 5 ಅಂತಸ್ತಿನ ಕಟ್ಟಡದಲ್ಲಿ ದುರಸ್ತಿ ಮತ್ತು ನವೀಕರಣ ಕಾಮಗಾರಿ ನಡೆಯುತ್ತಿದ್ದಾಗ ಭಾನುವಾರ ಈ ಕುಸಿತ ಸಂಭವಿಸಿತ್ತು. ಈ ಕಟ್ಟಡವನ್ನು ವಿದ್ಯಾರ್ಥಿಗಳ ‘ಪೇಯಿಂಗ್ ಗೆಸ್ಟ್’ (ಪಿಜಿ) ಹಾಸ್ಟೆಲ್ ಆಗಿ ಬಳಸಲಾಗುತ್ತಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸೌತ್ ಕ್ಯಾಂಪಸ್ ಪೊಲೀಸ್ ಠಾಣೆಯಲ್ಲಿ ಮಾಲೀಕ ಹರಿರಾಮ್ ಗುಪ್ತಾ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ
ಅಧಿಕಾರಿಗಳ ಅಮಾನತು:
ದುರಂತದ ಗಂಭೀರತೆಯನ್ನು ಪರಿಗಣಿಸಿ ದೆಹಲಿ ಮಹಾನಗರ ಪಾಲಿಕೆ ದಕ್ಷಿಣ ವಲಯದ ಡೆಪ್ಯೂಟಿ ಕಮಿಷನರ್ ಸೇರಿದಂತೆ 5 ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ದೆಹಲಿಯ ಎಲ್ಲಾ ಪಿಜಿ ಮತ್ತು ಸಾರ್ವಜನಿಕ ಕಟ್ಟಡಗಳ ಸ್ಟ್ರಕ್ಚರಲ್ ಆಡಿಟ್ ಕಡ್ಡಾಯಗೊಳಿಸುವ ಹೊಸ ನೀತಿಯನ್ನು ಘೋಷಿಸಿದ್ದಾರೆ. ಘಟನಾ ಸ್ಥಳದಲ್ಲಿ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಆಡಳಿತದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




