
ನವದೆಹಲಿ, ಜೂನ್ 17: ಕಳೆದ ವಾರ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ದುರಂತದ (Air India Tragedy) ಪರಿಣಾಮಗಳಿಂದ ಭಾರತದ ವಾಯುಯಾನ ವಲಯವು ಇನ್ನೂ ತತ್ತರಿಸಿದೆ. ಏಕೆಂದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ (Air India Plane Crash) ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆಗೆ ಕರೆ ನೀಡಿದೆ. ಇಂದು ಏರ್ ಇಂಡಿಯಾದ 3 ವಿಮಾನಗಳ ಹಾರಾಟ ರದ್ದು ಹಿನ್ನೆಲೆಯಲ್ಲಿ ಏರ್ ಇಂಡಿಯಾ ಅಧಿಕಾರಿಗಳ ಜೊತೆ ಡಿಜಿಸಿಎ ವರ್ಚುವಲ್ ಮೂಲಕ ತುರ್ತು ಸಭೆ ನಡೆಸಿದೆ. ಅಹಮದಾಬಾದ್ನಿಂದ ಲಂಡನ್ಗೆ ಹೋಗುತ್ತಿದ್ದಾಗ 241 ಪ್ರಯಾಣಿಕರು ಮತ್ತು ಕನಿಷ್ಠ 30 ಜನರ ಪ್ರಾಣವನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ AI171ರ ದುರಂತ ಅಪಘಾತದ ತನಿಖೆ ಮುಂದುವರೆಯುತ್ತಿರುವಾಗಲೇ ಈ ಸಭೆ ನಡೆದಿದೆ.
ಏರ್ ಇಂಡಿಯಾ ಫ್ಲೈಟ್ 171 ಅಪಘಾತ ಮತ್ತು ಅದರ ವಿಮಾನ ಜಾಲದಲ್ಲಿ ನಡೆಯುತ್ತಿರುವ ಅಡಚಣೆಗಳ ತನಿಖೆಯ ನಡುವೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಕಾರ್ಯನಿರ್ವಾಹಕರನ್ನು ಸಮನ್ಸ್ ಮಾಡಿದೆ. ಡಿಜಿಸಿಎ ಡಿಜಿ ಫಾಜಿ ಅಹ್ಮದ್ ಕಿದ್ವಾಯಿ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಏರ್ ಇಂಡಿಯಾ ಕಾರ್ಯನಿರ್ವಾಹಕರಿಗೆ ಸಮನ್ಸ್ ನೀಡಿದೆ. ಸಮನ್ಸ್ ಜಾರಿಯಲ್ಲಿರುವವರಲ್ಲಿ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ವಿಮಾನ ಕಾರ್ಯಾಚರಣೆಗಳ ನಿರ್ದೇಶಕ ಕ್ಯಾಪ್ಟನ್ ಪಂಕುಲ್ ಮಾಥುರ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಇಒ ಅಲೋಕ್ ಸಿಂಗ್ ಸೇರಿದಂತೆ ಕಾರ್ಯಾಚರಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಇತರ ಪ್ರಮುಖ ನಿರ್ವಹಣಾ ಸಿಬ್ಬಂದಿ ಸೇರಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಇದನ್ನೂ ಓದಿ: Plane Crash: ಉನ್ನತ ಸಮಿತಿಯಿಂದ 3 ತಿಂಗಳಲ್ಲಿ ವರದಿ ಸಲ್ಲಿಕೆ, ದೇಶದ ಎಲ್ಲ ಬೋಯಿಂಗ್ 787 ವಿಮಾನಗಳ ಪರಿಶೀಲನೆ; ವಿಮಾನಯಾನ ಸಚಿವ
ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾದ ಲಂಡನ್ಗೆ ಹೊರಟಿದ್ದ ಫ್ಲೈಟ್ 171 ವಿಮಾನವು ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೇವಲ 30 ಸೆಕೆಂಡುಗಳಲ್ಲಿ ಅಹಮದಾಬಾದ್ನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ನಂತರ ಈ ಸಮನ್ಸ್ ಜಾರಿಯಾಗಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ 241 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ, ಅಪಘಾತದಲ್ಲಿ ಕನಿಷ್ಠ 271 ಜನರು ಸಾವನ್ನಪ್ಪಿದ್ದಾರೆ. ಹಾಸ್ಟೆಲ್ನಲ್ಲಿದ್ದ 30 ಜನರು ಸಹ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇದು ಭಾರತೀಯ ವಾಯುಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ವಾಯುಯಾನ ದುರಂತವಾಗಿದೆ.
ಇದನ್ನೂ ಓದಿ: Plane Crash: ಅಹಮದಾಬಾದ್ ವಿಮಾನ ಅಪಘಾತದ ವೇಳೆ ಹಾಸ್ಟೆಲ್ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು; ಹೊಸ ವಿಡಿಯೋ ಇಲ್ಲಿದೆ
271 ಜನರನ್ನು ಬಲಿ ತೆಗೆದುಕೊಂಡ ವಿಮಾನ ಅಪಘಾತದ ಘಟನೆಯ ತನಿಖೆಯ ಭಾಗವಾಗಿ ಕಳೆದ ವಾರ ಅಪಘಾತಕ್ಕೀಡಾದ ವಿಮಾನದ ಪೈಲಟ್ಗಳು ಮತ್ತು ರವಾನೆದಾರರ ತರಬೇತಿ ದಾಖಲೆಗಳನ್ನು ನೀಡಲು ಡಿಜಿಸಿಎ ಏರ್ ಇಂಡಿಯಾಕ್ಕೆ ಸೂಚಿಸಿದೆ. 8,200 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದ ಮತ್ತು ಏರ್ ಇಂಡಿಯಾ ಬೋಧಕರೂ ಆಗಿದ್ದ ಸುಮೀತ್ ಸಭರ್ವಾಲ್ AI171 ವಿಮಾನದ ಕಮಾಂಡಿಂಗ್ ಪೈಲಟ್ ಆಗಿದ್ದರು ಎಂದು ಭಾರತ ಸರ್ಕಾರ ಹೇಳಿತ್ತು. ಅವರ ಸಹ-ಪೈಲಟ್ ಕ್ಲೈವ್ ಕುಂದರ್ ಅವರು 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಪೈಲಟ್ ತರಬೇತಿ ಡೇಟಾಕ್ಕಾಗಿ ವಿನಂತಿಯನ್ನು ಡಿಜಿಸಿಎ ಕಳುಹಿಸಿದ್ದರೂ ಈ ಅಪಘಾತದ ತನಿಖೆಯನ್ನು ವಾಯುಯಾನ ಸಚಿವಾಲಯದ ಮತ್ತೊಂದು ವಿಭಾಗವಾದ ವಿಮಾನ ಅಪಘಾತ ತನಿಖಾ ಬ್ಯೂರೋ ನೇತೃತ್ವ ವಹಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ