Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.

ಕಳೆದ ವಾರ ಇ.ಡಿ.  ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ. 

Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.
ನವಾಬ್​ ಮಲ್ಲಿಕ್​
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Feb 23, 2022 | 4:41 PM

ಭೂಗತ ಪಾತಕಿ ದಾವೂದ್​ ಇಬ್ರಾಹಿಂ (Dawood Ibrahim) ಮತ್ತು ಅಂಡರ್​ವರ್ಲ್ಡ್​​ನ ಇನ್ನಿತರ ಕೇಸ್​ಗೆ ಸಂಬಂಧಪಟ್ಟಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ ಅದರ ಒಂದು ಭಾಗವಾಗಿ ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲಿಕ್​ರನ್ನೂ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಮುಗಿದ ತಕ್ಷಣ ಇ.ಡಿ. ಅಧಿಕಾರಿಗಳು (Enforcement Directorate) ನವಾಬ್​ ಮಲ್ಲಿಕರ್​ರನ್ನು ಬಂಧಿಸಿದ್ದಾರೆ.

ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್​ ಇಬ್ರಾಹಿಂ, ಆತನ ಸಹೋದರ ಅನೀಸ್​ ಇಕ್ಬಾಲ್​, ಸಹಾಯಕ ಚೋಟಾ ಶಕೀಲ್​ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್​ ದಾಖಲಿಸಿರುವ ಇ.ಡಿ., ಇದೇ ವಿಚಾರದಲ್ಲಿ ಅನೇಕ ರಾಜಕಾರಣಿಗಳ ಮೇಲೆ ಕಣ್ಗಾವಲು ಇಟ್ಟಿತ್ತು. ದಾವೂದ್ ಇಬ್ರಾಹಿಂ ಹಲವು ರಾಜಕಾರಣಿಗಳೊಂದಿಗೆ ಆಸ್ತಿ, ಹಣಕಾಸು ವ್ಯವಹಾರ ನಡೆಸಿದ್ದಾನೆ ಎಂಬ ಶಂಕೆಯಡಿ ವಿಚಾರಣೆ ನಡೆಸುತ್ತಿದೆ. ಹಾಗೇ, ನವಾಬ್​ ಮಲಿಕ್​​ರನ್ನು ಇಂದು ಬೆಳಗ್ಗೆ 8ಗಂಟೆಯಿಂದ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಕಳೆದ ವಾರ ಇ.ಡಿ.  ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ.  ಈ ಹಿಂದೆ ದೇವೇಂದ್ರ ಫಡ್ನವೀಸ್​ ಮತ್ತು ನವಾಬ್​ ಮಲಿಕ್ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಫಡ್ನವೀಸ್​ಗೆ ಭೂಗತ ಜಗತ್ತಿನ ನಂಟಿದೆ ಎಂದು ಮಲಿಕ್ ಆರೋಪಿಸಿದ್ದರು. ಅಷ್ಟೇ ಅಲ್ಲ, ಕೆಲವು ಅಂಡರ್​ವರ್ಲ್ಡ್​​ ಡಾನ್​​ಗಳ ಜತೆ ದೇವೇಂದ್ರ ಫಡ್ನವೀಸ್​ ಮತ್ತು ಅವರ ಪತ್ನಿ ಅಮೃತಾ ಫಡ್ನವೀಸ್ ನಿಂತಿದ್ದ ಫೋಟೋವನ್ನೂ ಬಿಡುಗಡೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಆರೋಪ ಮಾಡಿದ್ದ ದೇವೇಂದ್ರ ಫಡ್ನವೀಸ್​, ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಸರ್ದಾರ್​ ಶಹವ್ಲಿ ಖಾನ್​ ಮತ್ತು ಸಲೀಂ ಪಟೇಲ್​​ನಿಂದ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಕೇವಲ 30 ಲಕ್ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದರು. ಇದರಲ್ಲಿ ಶಹವ್ಲಿ ಖಾನ್​ ಎಂಬಾತ ದಾವೂದ್​ ಇಬ್ರಾಹಿಂನ ಆಪ್ತರಲ್ಲಿ ಒಬ್ಬ. ಹಾಗೇ, ಸಲೀಂ ಪಟೇಲ್​ ಎಂದರೆ ದಾವೂದ್ ಸಹೋದರಿ ಹಸೀನಾ ಪರ್ಕರ್​​ಗೆ ಅಂಗರಕ್ಷಕನಾಗಿದ್ದವನು.  ಈ ಆಸ್ತಿ ವ್ಯವಹಾರದ ಬಗ್ಗೆ ಸಹ ಇ.ಡಿ. ತನಿಖೆ ನಡೆಸುತ್ತಿದೆ.

ಇಂದು ಬಂಧಿತರಾದ ಬಳಿಕ ಪ್ರತಿಕ್ರಿಯೆ ನೀಡಿದ ನವಾಬ್​ ಮಲಿಕ್​, “ನಾನು ಖಂಡಿತ ಗೆಲ್ಲುತ್ತೇನೆ, ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲ,” ಎಂದು ಹೇಳಿದ್ದಾರೆ.  ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಬಂಧನವಾದಾಗ, ಆ ಕೇಸ್​ ಉಸ್ತುವಾರಿ ವಹಿಸಿದ್ದ ಎನ್​ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನವಾಬ್​ ಮಲಿಕ್​ ಸಮರ ಸಾರಿದ್ದು ಗೊತ್ತೇ ಇದೆ. ಸಮೀರ್​ ವಾಂಖೆಡೆ ಜಾತಿಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಮೀರ್ ವಾಂಖೆಡೆ, ಡ್ರಗ್ಸ್​ ಕೇಸ್​​​ನಲ್ಲಿ ನವಾಬ್​ ಮಲಿಕ್ ಅಳಿಯನನ್ನು ಅಂದರೆ ಮಗಳ ಗಂಡನನ್ನು ಬಂಧಿಸಿದ್ದಕ್ಕೆ ನನ್ನ ವಿರುದ್ಧ ದ್ವೇಷ ಸಾಧಿಸುತ್ತಾರೆ ಎಂದಿದ್ದರು. ಹೀಗೆ ನವಾಬ್​ ಮಲಿಕ್​ ಕಳೆದ ಹಲವು ತಿಂಗಳುಗಳಿಂದಲೂ ವಿವಾದದ ಕೇಂದ್ರಬಿಂದುವಾಗಿ ಉಳಿದಿದ್ದರು.

ಬಂಧಿತರಾದ ಎರಡನೇ ಸಚಿವ ಮಹಾರಾಷ್ಟ್ರದಲ್ಲಿ ಇ.ಡಿ.ಬಂಧಿಸುತ್ತಿರುವ ಎರಡನೇ ಸಚಿವ ಈ ನವಾಬ್​ ಮಲಿಕ್​. ಈ ಹಿಂದೆ 2021ರ ನವೆಂಬರ್​1ರಂದು ತಡರಾತ್ರಿ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.  ಅವರನ್ನು ಬಂಧಿಸುವುದಕ್ಕೂ ಮೊದಲು ಸತತ 12 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸ್‌ ಇಲಾಖೆಯಲ್ಲಿ ₹100 ಕೋಟಿ ರೂಪಾಯಿ ಲಂಚ ವಸೂಲಿ, ಸುಲಿಗೆ ಕುರಿತು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಅವರು ದೇಶ್​ಮುಖ್​ ವಿರುದ್ಧ ಆರೋಪ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇ.ಡಿ., ಅನಿಲ್​ ದೇಶ್​ಮುಖ್​ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸುತ್ತಿಲ್ಲ. ನುಣುಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿತ್ತು.

ಇದನ್ನೂ ಓದಿ: Health Tips: ವರ್ಕ್​ಔಟ್ ಮಾಡುವಾಗ ಎಷ್ಟು ಲೀಟರ್ ನೀರು ಕುಡಿಯಬೇಕು?; ಸರಿಯಾಗಿ ನೀರು ಕುಡಿಯದಿದ್ದರೆ ಏನಾಗುತ್ತದೆ?

Published On - 3:22 pm, Wed, 23 February 22