ಐಪಿಎಸ್, ಸೈನಿಕ, ಗುಪ್ತಚರ ಅಧಿಕಾರಿ ಹೆಸರಿನಲ್ಲಿ ವಂಚನೆ; ಉತ್ತರಾಖಂಡದ ಐಎಎಸ್ ಆಫೀಸರ್ ಮಗನ ಬಂಧನ
ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ರಾಮಸ್ವಾಮಿ ಅವರ ಮಗ ಯಶವರ್ಧನ್ನನ್ನು ಡೆಹ್ರಾಡೂನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯಶವರ್ಧನ್ ತಾನು ಐಪಿಎಸ್ ಅಧಿಕಾರಿ, RAW ಸಂಸ್ಥೆಯ ಗುಪ್ತಚರ ಏಜೆಂಟ್ ಹಾಗೂ ಸೇನಾ ಅಧಿಕಾರಿ ಎಂದು ಸಾರ್ವಜನಿಕರನ್ನು ನಂಬಿಸಿ, ಕೆಲಸ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚಿಸಿದ್ದಾನೆ. ಇಂದು ಮುಸ್ಸೋರಿ ರಸ್ತೆಯಲ್ಲಿ ಪೊಲೀಸರು ನಡೆಸುತ್ತಿದ್ದ ವಾಹನ ತಪಾಸಣೆ ವೇಳೆ ಆರೋಪಿ ಯಶವರ್ಧನ್ ಸಿಕ್ಕಿಬಿದ್ದಿದ್ದಾನೆ.

ಡೆಹ್ರಾಡೂನ್, ಜುಲೈ 16: ಸರ್ಕಾರದ ಉನ್ನತ ಅಧಿಕಾರಿಗಳು, ಐಪಿಎಸ್ ಅಧಿಕಾರಿ ಹಾಗೂ ದೇಶದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ ‘ರಾ’ (RAW) ಏಜೆಂಟ್ ಎಂದು ಸೋಗು ಹಾಕಿಕೊಂಡು ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣ ವಂಚಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗನನ್ನು ಉತ್ತರಾಖಂಡದ (Uttarakhand) ಡೆಹ್ರಾಡೂನ್ ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ರಾಮಸ್ವಾಮಿ ಅವರ ಮಗ ಯಶವರ್ಧನ್ ಬಂಧಿತ ಆರೋಪಿಯಾಗಿದ್ದು, ಇಂದು ಮುಸ್ಸೋರಿ ರಸ್ತೆಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಆತನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ ನಕಲಿ ದಾಖಲೆಗಳು ಮತ್ತು ವಸ್ತುಗಳನ್ನು ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಆತನಿಂದ 5 ನಕಲಿ ಗುರುತಿನ ಚೀಟಿಗಳು ಮತ್ತು 8 ವಿಸಿಟಿಂಗ್ ಕಾರ್ಡ್ಗಳು, ಪೊಲೀಸ್ ಮತ್ತು ಸೇನೆಗೆ ಸೇರಿದ 25 ಅಧಿಕೃತ ಲೋಗೋಗಳು, ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗೆ ಸೇರಿದ 3 ಜೊತೆ ಸಮವಸ್ತ್ರಗಳು ಹಾಗೂ ನಕಲಿ ಮೆಡಲ್ ರಿಬ್ಬನ್ಗಳು, ಒಂದು ಲ್ಯಾಪ್ಟಾಪ್ ಹಾಗೂ ವೈರ್ಲೆಸ್ ಸೆಟ್ (ವಾಕಿ-ಟಾಕಿ)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮೊಬೈಲ್ನಿಂದ ಹೊಡೆದು ಗಂಡನನ್ನು ಕೊಂದ ಹೆಂಡತಿ! ಅಚ್ಚರಿಯಾದರೂ ಇದು ಸತ್ಯ
ಆರೋಪಿ ಯಶವರ್ಧನ್ ತನ್ನ ತಂದೆಯ ಪ್ರಭಾವ ಬಳಸಿಕೊಂಡು ಹಾಗೂ ಈ ನಕಲಿ ಸಮವಸ್ತ್ರ, ಐಡಿ ಕಾರ್ಡ್ಗಳನ್ನು ತೋರಿಸಿ ತಾನು ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದ. ಸರ್ಕಾರಿ ಕೆಲಸ ಕೊಡಿಸುವುದು, ಕಂಪನಿಗಳ ನೋಂದಣಿ ಪ್ರಕ್ರಿಯೆಯನ್ನು ಬೇಗನೆ ಮುಗಿಸುವುದು ಹಾಗೂ ಸರ್ಕಾರಿ ಟೆಂಡರ್ಗಳನ್ನು ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.
ಯುಪಿಎಸ್ಸಿ ಫೇಲ್ ಆಗಿದ್ದ:
ಪೊಲೀಸ್ ವಿಚಾರಣೆ ವೇಳೆ ಆರೋಪಿ ಯಶವರ್ಧನ್ ತನ್ನ ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾಗ ಅಧಿಕಾರಿಗಳಿಗಿದ್ದ ಗೌರವ ಮತ್ತು ಪ್ರಭಾವವನ್ನು ನೋಡಿ ಬೆಳೆದಿದ್ದರಿಂದ ತನಗೂ ಐಎಎಸ್ ಅಥವಾ ಐಪಿಎಸ್ ಆಗಬೇಕೆಂಬ ತೀವ್ರ ಆಸೆ ಇತ್ತು ಎಂದು ಹೇಳಿದ್ದಾನೆ. ಇದಕ್ಕಾಗಿ ಆತ ಹಲವು ವರ್ಷಗಳ ಕಾಲ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಇದರಿಂದ ನಿರಾಶೆಗೊಂಡು, ಸಮಾಜದಲ್ಲಿ ಸುಲಭವಾಗಿ ಪ್ರಭಾವ ಮತ್ತು ಹಣ ಗಳಿಸಲು ಈ ರೀತಿ ನಕಲಿ ಅಧಿಕಾರಿಯ ಸೋಗು ಹಾಕಲು ಪ್ರಾರಂಭಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




