ಮಹಾಕುಂಭಮೇಳದಲ್ಲಿ ರವಿಶಂಕರ್ ಗುರೂಜಿಯೊಂದಿಗೆ ಸತ್ಸಂಗ, ಧ್ಯಾನ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
ಪ್ರಯಾಗರಾಜ್ನ ಮಹಾಕುಂಭ ಮೇಳದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ಧ್ಯಾನ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಶ್ರೀ ಶ್ರೀ ರವಿಶಂಕರ್ ಅವರು ಸತ್ಸಂಗವನ್ನು ನಡೆಸಿ, ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ಮಹತ್ವವನ್ನು ವಿವರಿಸಿ್ದಾರೆ. ಜ್ಞಾನ, ಭಕ್ತಿ ಮತ್ತು ಕರ್ಮದ ಏಕತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಪ್ರಯಾಗರಾಜ್, ಫೆಬ್ರವರಿ 06: ಮಹಾಕುಂಭ ಮೇಳವು (Mahakumbh) ಆಧ್ಯಾತ್ಮಿಕ ಪರಂಪರೆಗಳ ಮತ್ತು ಸಂಸ್ಕೃತಿಯ ಭವ್ಯ ಸಂಗಮವಾಗಿದ್ದು, ಈ ವರ್ಷ ಅದಕ್ಕೆ ಮತ್ತೊಂದು ವಿಶೇಷವನ್ನು ಸೇರ್ಪಡಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ, “ಮಹಾಕುಂಭದಿಂದ ಗುರುದೇವರೊಡನೆ ಧ್ಯಾನ ಮಾಡಿ” ಕಾರ್ಯಕ್ರಮದಲ್ಲಿ ಅನೇಕ ಸಾವಿರ ಸಾಧಕರು ಭಾಗವಹಿಸಿದ್ದರು.
ಮಂಗಳವಾರ ಸಂಜೆಯಂದು ಜಾಗತಿಕ ಆಧ್ಯಾತ್ಮಿಕ ಗುರು, ಮಾನವತಾವಾದಿ ಗುರುದೇವ್ ಶ್ರೀ ಶ್ರೀ ರವಿಶಂಕರರು ಸತ್ಸಂಗವನ್ನು ನಡೆಸಿಕೊಟ್ಟರು. ಈ ಸತ್ಸಂಗದಲ್ಲಿ ಅನೇಕ ಸಾವಿರ ತೀರ್ಥಯಾತ್ರಿಗಳೊಡನೆ ಸಂತರೂ ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದರು. 180 ದೇಶಗಳ ಭಕ್ತರಿಗೆ ಮಹಾಕುಂಭದ ಪವಿತ್ರ ಭೂಮಿಯಿಂದ ಜಾಗತಿಕ ಧ್ಯಾನವನ್ನು ನಡೆಸಿಕೊಟ್ಟರು. ಈ ಧ್ಯಾನವನ್ನು ಗುರುದೇವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಮತ್ತು ಆರ್ಟ್ ಆಫ್ ಲಿವಿಂಗ್ನ ಸತ್ವ ಆ್ಯಪ್ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು ಆನ್ಲೈನ್ ಮೂಲಕ ಪಾಲ್ಗೊಂಡರು. 250 ಟನ್ಗಳಷ್ಟು ಆಹಾರ ಮತ್ತಿನ್ನಿತರ ಅವಶ್ಯಕ ವಸ್ತುಗಳನ್ನು ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ನ ಸ್ವಯಂಸೇವಕರು ವಿತರಿಸಿದರು.
ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಿಷ್ಟು
ಈ ಸಂದರ್ಭದಲ್ಲಿ ಮಾತನಾಡಿದ ಗುರುದೇವರು, ಕುಂಭ ಪರ್ವದ ಸಾರವೆಂದರೆ ನಿಮ್ಮೊಳಗಿನ ಪೂರ್ಣತೆಯನ್ನು ತಿಳಿಯುವುದು. ಜ್ಞಾನ, ಭಕ್ತಿ ಮತ್ತು ಕರ್ಮ ಒಂದಾಗಿ ಬಂದಾಗ ಮಾತ್ರ ಇದು ನಡೆಯಲು ಸಾಧ್ಯ. ಇಲ್ಲಿ ಹರಿಯುತ್ತಿರುವ ಗಂಗೆಯು ಜ್ಞಾನದ ಪ್ರತೀಕವಾದರೆ, ಯಮುನೆ ಭಕ್ತಿಯ ಪ್ರತೀಕ ಮತ್ತು ಅಗೋಚರವಾಗಿರುವ ಸರಸ್ವತಿ ಕರ್ಮದ ಪ್ರತೀಕ” ಎಂದು ಹೇಳಿದ್ದಾರೆ.

ಇದು ಐಕ್ಯತೆಯ, ಶಾಂತಿಯ, ಮಾನವತೆಗೆ ಕರುಣೆಯ ಸಂದೇಶವನ್ನು ನೀಡಿದರು. ಗುರುದೇವರು, “ಗಂಗ, ಯಮುನಾ ಮತ್ತು ಸರಸ್ವತಿಯ ಸಂಗಮವು ಇಡ, ಪಿಂಗಳ ಮತ್ತು ಸುಷುಮ್ನ ಶಕ್ತಿ ನಾಡಿಗಳನ್ನು ಪ್ರತಿನಿಧಿಸುತ್ತವೆ. ಧ್ಯಾನದಲ್ಲಿ ನಾವು ಸ್ತಬ್ಧರಾದಾಗ ಅಮರತ್ವದ ಅಮೃತವನ್ನು ಅನುಭವಿಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: Video: ಮಹಾಕುಂಭ ಮೇಳ, ಸಂಗಮದಲ್ಲಿ ಗಂಗಾ ಮಾತೆಗೆ ನಮಸ್ಕರಿಸಿದ ಮೋದಿ
ಮಹಾಕುಂಭದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳು. ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಉಚಿತ ಆಹಾರ, ಆಯುರ್ವೇದದ ಆರೈಕೆ ಮತ್ತು ತೀರ್ಥಯಾತ್ರಿಗಳ ಒಳಿತಿನ ಸೇವೆಯನ್ನು 25 ಸೆಕ್ಟರ್ಗಳಲ್ಲೂ ನಡೆಸುತ್ತಿದೆ. ಆರ್ಟ್ ಆಫ್ ಲಿವಿಂಗ್ನ ಶಿಬಿರದಲ್ಲಿ ಪ್ರತಿನಿತ್ಯ ಒಂದು ಟನ್ ಕಿಚಡಿಯನ್ನು ಪ್ರತಿನಿತ್ಯ ಎರಡು ಸಲ ಸಿದ್ಧಪಡಿಸಿ, 25,000-30,000 ಭಕ್ತರಿಗೆ ಹಂಚಲಾಗುತ್ತಿದೆ.

ಇದರೊಡನೆ ಶ್ರೀ ಶ್ರೀ ತತ್ವದ ಎಂಟು ತಜ್ಞ ನಾಡಿ ವೈದ್ಯರು 5000 ಜನರಿಗೆ ನಾಡಿ ಪರೀಕ್ಷೆಯನ್ನು ನಡೆಸಿ, ಆಯುರ್ವೈದ್ಯಕೀಯ ಸಲಹೆಗಳನ್ನು ನೀಡಿದರು. ಮಂಗಳವಾರ ಬೆಳಗ್ಗೆ ಗುರುದೇವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಪ್ರಯಾಗರಾಜ್ನ ಐತಿಹಾಸಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದರು. ಆರ್ಟ್ ಆಫ್ ಲಿವಿಂಗ್ನ ಶಿಬಿರದಲ್ಲಿ ಗುರುದೇವರ ಸಾನ್ನಿಧ್ಯದಲ್ಲಿ ರುದ್ರ ಪೂಜೆ, ಅರುಣಪ್ರಶ್ನ ಹೋಮ, ಸೂರ್ಯಸೂಕ್ತ ಹೋಮಗಳು ನಡೆದವು. ಸೋಮವಾರದ ಸತ್ಸಂಗದಲ್ಲಿ ಜುನಾ ಅಖಾಡದ ನಾಗಾ ಸಾಧುಗಳು ಮತ್ತಿನ್ನಿತರ ಗಣ್ಯರು ಗುರುದೇವರನ್ನು ಭೇಟಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.