ಬೈಕ್ ನಿಲ್ಲಿಸಲಿಲ್ಲವೆಂದು ಉದ್ದೇಶಪೂರ್ವಕವಾಗಿಯೇ ಗುದ್ದಿದ್ರು: ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಬೆಚ್ಚಿಬೀಳಿಸುವ ಹೊಸ ಆ್ಯಂಗಲ್ ವಿಡಿಯೋ ವೈರಲ್
ಗುರುಗ್ರಾಮದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮಹಿಳಾ ಬೈಕರ್ ಸಿಯಾ ಅವರ ಮೇಲೆ ಉದ್ದೇಶಪೂರ್ವಕವಾಗಿ ಕಾರು ಗುದ್ದಿರುವುದು ಹೊಸ ವಿಡಿಯೋದಲ್ಲಿ ಬಹಿರಂಗವಾಗಿದೆ. ಮದ್ಯಪಾನ ಮಾಡಿದ್ದ ಚಾಲಕ ಕಲ್ಯಾಣ್ ಬೈನ್ಸ್ಲಾ ಬೈಕ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ. ಆರೋಪಿ ಪತ್ತೆಯಾಗಿದ್ದು, ಸಾರ್ವಜನಿಕರು ಮತ್ತು ರೈಡಿಂಗ್ ಸಮುದಾಯ ಭಾರತೀಯ ನ್ಯಾಯ ಸಂಹಿತೆಯಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಗುರುಗ್ರಾಮ, ಸೆಪ್ಟೆಂಬರ್ 15: ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ ಸಿಯಾ ಅವರ ‘ಬೈಕಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಯ ನೈಜ ಭೀಕರತೆಯನ್ನು ತೆರೆದಿಡುವ ಮತ್ತೊಂದು ಹೊಸ ಆ್ಯಂಗಲ್ ವಿಡಿಯೋ ಹೊರಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಸಿಯಾ ಅವರ ಹಿಂದೆಯೇ ಬೈಕ್ನಲ್ಲಿ ಬರುತ್ತಿದ್ದ ಅವರ ಸ್ನೇಹಿತ ಅಭಿಷೇಕ್ ಈ ದೃಶ್ಯಗಳನ್ನು ಹಂಚಿಕೊಂಡಿದ್ದು, ಕಾರು ಚಾಲಕ ಬೇಕೆಂದೇ ಸಿಯಾ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹೊಸ ವಿಡಿಯೋದಲ್ಲಿ ಏನಿದೆ?: ಸಿಯಾ ಅವರ ಬೈಕ್ ಕ್ಯಾಮೆರಾದಲ್ಲಿ ಡಿಕ್ಕಿಯ ಮುಂಭಾಗದ ದೃಶ್ಯ ಮಾತ್ರ ಇತ್ತು. ಆದರೆ ಅಭಿಷೇಕ್ ಅವರ ಹೆಲ್ಮೆಟ್ ಕ್ಯಾಮೆರಾದಲ್ಲಿ ಬಿಳಿ ಸೆಡಾನ್ ಕಾರು ವೇಗವಾಗಿ ಬಂದು ಸಿಯಾ ಅವರ ಬೈಕಿಗೆ ಬಲವಾಗಿ ಡಿಕ್ಕಿ ಹೊಡೆಯುವುದು ಮತ್ತು ರಭಸಕ್ಕೆ ಆಕೆ ರಸ್ತೆಗೆ ಉರುಳಿಬೀಳುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ.
ಕಾರಿನಲ್ಲಿ ಮೂವರು ಕುಡುಕರು: ಎನ್ಡಿಟಿವಿ ಜೊತೆ ಮಾತನಾಡಿದ ಅಭಿಷೇಕ್, “ಕಾರಿನಲ್ಲಿದ್ದ ಮೂವರು ಸಂಪೂರ್ಣವಾಗಿ ಮದ್ಯಪಾನ ಮಾಡಿದ್ದರು. ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಲಾಗಿತ್ತು. ಕಾರು ಸಿಯಾ ಅವರ ಬೈಕನ್ನು ಅತ್ಯಂತ ಅಪಾಯಕಾರಿಯಾಗಿ ಹಿಂಬಾಲಿಸುತ್ತಿತ್ತು . ಕಿಟಕಿ ಇಳಿಸಿ ಬೈಕ್ ನಿಲ್ಲಿಸುವಂತೆ ಸನ್ನೆ ಮಾಡಿದರು, ಆಕೆ ನಿರಾಕರಿಸಿ ದೂರವಿರಲು ಸೂಚಿಸಿದಾಗ ಆಕ್ರೋಶಗೊಂಡರು ಎಂದು ತಿಳಿಸಿದ್ದಾರೆ.
ತಿರುವಿನಲ್ಲಿ ನಡೆದ ಕೃತ್ಯ: ಸೆಂಟ್ರಲ್ ಪ್ಲಾಜಾ ಜಂಕ್ಷನ್ ಬಳಿ ಕಾರು ಸರಾಗವಾಗಿ ಮುಂದೆ ಹೋಗಲಿ ಎಂದು ಸಿಯಾ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದರು. ಆದರೆ ಚಾಲಕ ಬಲದಿಂದ ಎಡಕ್ಕೆ ಕಾರನ್ನು ತಿರುಗಿಸಿ ನೇರವಾಗಿ ಬೈಕಿಗೆ ಗುದ್ದಿ ಪರಾರಿಯಾದನು ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.
View this post on Instagram
ಆರೋಪಿಯ ಮುಖ ಸೆರೆಹಿಡಿದ ಸವಾರ: ಅಪಘಾತವಾದ ಕೂಡಲೇ ಸಿಯಾ ಅವರ ಬಳಿ ಸಾರ್ವಜನಿಕರು ಇದ್ದಿದ್ದರಿಂದ, ಅಭಿಷೇಕ್ ಕಾರನ್ನು ಬೆನ್ನಟ್ಟಿದ್ದಾರೆ. ಮುಂದೆ ಟ್ರಾಫಿಕ್ ಸಿಗ್ನಲ್ನಲ್ಲಿ ಕಾರು ನಿಂತಾಗ ಆರೋಪಿಯ ಬಳಿ ತೆರಳಿ ಪ್ರಶ್ನಿಸಿದ್ದಾರೆ, ಆ ವೇಳೆ ಆರೋಪಿ ಕಿಟಕಿ ಕೆಳಗಿಳಿಸಿದಾಗ ಆತನ ಮುಖ ಅಭಿಷೇಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮತ್ತಷ್ಟು ಓದಿ: ಗುರುಗ್ರಾಮದಲ್ಲಿ ಮಹಿಳಾ ಬೈಕರ್ ಮೇಲೆ ಕಾರು ಚಾಲಕನ ದರ್ಪ: ಅಂತರ ಕಾಯ್ದುಕೊಳ್ಳಲು ಹೇಳಿದ್ದಕ್ಕೆ ಗುದ್ದಿ ಪರಾರಿ, ಆಘಾತಕಾರಿ ವಿಡಿಯೋ ವೈರಲ್
ಆರೋಪಿ ಗುರುತು ಪತ್ತೆ: ಮಹಿಳಾ ಬೈಕರ್ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾದ ಕಾರು ಚಾಲಕನನ್ನು ಕಲ್ಯಾಣ್ ಬೈನ್ಸ್ಲಾ ಎಂದು ಗುರುತಿಸಲಾಗಿದ್ದು, ವಾಹನದ ನೋಂದಣಿ ವಿವರಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಕಾನೂನು ಕ್ರಮಕ್ಕೆ ಹೆಚ್ಚಿದ ಒತ್ತಡ: ಮೊದಲೇ ನಿರ್ಧರಿಸಿ ಕೊಲೆಯತ್ನ ನಡೆಸಿದಂತೆ ಕಾಣುತ್ತಿರುವ ಈ ವಿಡಿಯೋ ಸಾಕ್ಷ್ಯಗಳು ಹೊರಬರುತ್ತಿದ್ದಂತೆ, ಹರಿಯಾಣ ಪೊಲೀಸರು ಕೇವಲ ಸಾಮಾನ್ಯ ಅಪಘಾತ ಪ್ರಕರಣವಲ್ಲದೆ, ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ಸಾರ್ವಜನಿಕರು ಹಾಗೂ ರೈಡಿಂಗ್ ಸಮುದಾಯ ತೀವ್ರವಾಗಿ ಆಗ್ರಹಿಸಿದೆ.
ಗುರುಗ್ರಾಮದ ರಸ್ತೆಗಳು ಹೆಣ್ಣುಮಕ್ಕಳಿಗೆ ಎಷ್ಟು ಮಾತ್ರಕ್ಕೂ ಸುರಕ್ಷಿತವಾಗಿಲ್ಲ, ಬೈಕ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕಾರಿನಲ್ಲಿ ಬಂದು ಗುದ್ದಿ ಓಡಿಹೋಗುವಷ್ಟು ಪುಂಡರ ಅಟ್ಟಹಾಸ ಮಿತಿಮೀರಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




