‘ಮಗಳಿಗೆ ಏನೂ ಆಗದಿರುವುದು ನಮ್ಮ ಅದೃಷ್ಟ’: ಹಿಟ್ ಆ್ಯಂಡ್ ರನ್ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಹಿಳಾ ಬೈಕರ್ ಸಿಯಾ ತಂದೆ
ಗುರುಗ್ರಾಮದ ಗೋಲ್ಫ್ ಕೋರ್ಸ್ ರೋಡ್ನಲ್ಲಿ ಮಹಿಳಾ ಬೈಕರ್ ಸಿಯಾಗೆ ಡಿಕ್ಕಿ ಹೊಡೆದು ಕಾರಿನ ಸಮೇತ ಚಾಲಕ ಪರಾರಿಯಾದ ಘಟನೆ ಸಂಬಂಧ ಅವರ ತಂದೆ ಆತಂಕ ವ್ಯಕ್ತಪಡಿಸಿದ್ದಾರೆ. ಮಗಳಿಗೆ ಏನೂ ಆಗದಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಮತ್ತೊಂದೆಡೆ ತಮಗೆ ಬೆಂಬಲ ನೀಡಿದವರಿಗೆ ಸಿಯಾ ಧನ್ಯವಾದ ತಿಳಿಸಿದ್ದು, ನನ್ನ ಗುರುತು ಅಥವಾ ಮುಖವನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ದಯವಿಟ್ಟು ನನ್ನ ನಿರ್ಧಾರವನ್ನು ಗೌರವಿಸಿ ಎಂದಿದ್ದಾರೆ.

ಗುರುಗ್ರಾಮ, ಸೆಪ್ಟೆಂಬರ್ 14: ಗೋಲ್ಫ್ ಕೋರ್ಸ್ ರೋಡ್ನಲ್ಲಿ ಹಿಟ್ ಆ್ಯಂಡ್ ರನ್ ಆರೋಪಿಸಿ ಮಹಿಳಾ ಬೈಕರ್ ಸಿಯಾ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಬಗ್ಗೆ ತನಗೆ ಕೇವಲ ಒಂದು ಗಂಟೆ ಹಿಂದಷ್ಟೇ ತಿಳಿಯಿತು. ವಿಷಯ ಗೊತ್ತಿದ್ದರೆ ತಾನೇ ಪೊಲೀಸ್ ಠಾಣೆಗೆ ತೆರಳಿ ಎಫ್ಐಆರ್ ದಾಖಲಿಸುತ್ತಿದ್ದೆ ಎಂದು ಸಿಯಾ ತಂದೆ ಹೇಳಿದ್ದಾರೆ. ನಮ್ಮ ಮಗಳಿಗೆ ಯಾವುದೇ ಗಾಯವಾಗದಿರುವುದು ನಮ್ಮ ಅದೃಷ್ಟ ಎಂದವರು ಹೇಳಿದ್ದಾರೆ. ಜೊತೆಗೆ ವಕೀಲರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಎಫ್ಐಆರ್ ದಾಖಲಿಸುವುದಾಗಿ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಿಯಾ ತಂದೆ ಹೇಳಿದ್ದೇನು?
#WATCH | Delhi: Father of victim Sia says, “I only found out about the accident an hour ago. Otherwise, I would have gone and filed an FIR myself. It wasn’t even night; it happened during the day. We are fortunate that our daughter wasn’t hurt. I asked her, ‘If such an incident… https://t.co/m8JpGlS3Tj pic.twitter.com/83wjUaId6x
— ANI (@ANI) September 14, 2026
ಬೆಂಬಲಿಸಿದವರಿಗೆ ಮಹಿಳಾ ಬೈಕರ್ ಸಿಯಾ ಧನ್ಯವಾದ
ತನ್ನನ್ನು ಬೆಂಬಲಿಸಿದವರಿಗೆ ಸಿಯಾ ಧನ್ಯವಾದ ತಿಳಿಸಿದ್ದು, ಘಟನೆಗೆ ಸಂಬಂಧಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಹಲವರು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ. ಸುದ್ದಿವಾಹಿನಿಗಳು ಹಾಗೂ ಪತ್ರಕರ್ತರು ಸಂದರ್ಶನಕ್ಕಾಗಿ ಸಂಪರ್ಕಿಸುತ್ತಿದ್ದರೂ ತಾನು ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಗುರುತು ಅಥವಾ ಮುಖವನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ.ದಯವಿಟ್ಟು ನನ್ನ ನಿರ್ಧಾರವನ್ನು ಗೌರವಿಸಿ. ಹೆಚ್ಚಿನ ಮಾಹಿತಿ ಬೇಕಿರುವವರು ಇನ್ಸ್ಟಾಗ್ರಾಂ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಭಾನುವಾರ ಸಿಯಾ, ತನ್ನ ಬೈಕ್ಗೆ ಅಳವಡಿಸಿದ್ದ ಆ್ಯಕ್ಷನ್ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ಹಂಚಿಕೊಂಡಿದ್ದರು. ಬೈಕ್ ಸವಾರರ ಗುಂಪಿನೊಂದಿಗೆ ತೆರಳುತ್ತಿದ್ದ ವೇಳೆ ಕಾರೊಂದು ತನ್ನನ್ನು ಪದೇಪದೆ ಹಿಂಬಾಲಿಸಿ, ಬಳಿಕ ತನ್ನ ಬೈಕ್ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎಂದು ಅವರು ಆರೋಪಿಸಿದ್ದರು. ವಿಡಿಯೋ ದೃಶ್ಯಗಳಲ್ಲಿ ಕಾರು ಸಿಯಾ ಅವರ ಬೈಕ್ಗೆ ಡಿಕ್ಕಿ ಹೊಡೆದು, ಅವರನ್ನು ಕೆಳಗೆ ಬೀಳಿಸಿ, ಬೈಕ್ ಅನ್ನು ಹಲವು ಮೀಟರ್ಗಳಷ್ಟು ಎಳೆದೊಯ್ದು ಬಳಿಕ ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿತ್ತು.
ಇತ್ತ ಕಾರಿನ ಮಾಲೀಕ ಮನೀಶ್, ವಾಹನ ತನ್ನದೇ ಎಂದು ಒಪ್ಪಿಕೊಂಡಿದ್ದು, ಎರಡು ದಿನಗಳ ಹಿಂದೆ ತನ್ನ ಸ್ನೇಹಿತ ಕಲ್ಯಾಣ್ ಸಿಂಗ್ ಅದನ್ನು ಪಡೆದುಕೊಂಡು ಹೋಗಿದ್ದ ಎಂದು ತಿಳಿಸಿದ್ದಾರೆ. ತಾನು ಕೆಲಸದಲ್ಲಿದ್ದಾಗ ಸೋಮವಾರ ಬೆಳಗ್ಗೆ ಅಪಘಾತದ ಬಗ್ಗೆ ತಿಳಿಯಿತು. ಕಲ್ಯಾಣ್ ಸಿಂಗ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ ಎಂದು ಮನೀಶ್ ಹೇಳಿದ್ದಾರೆ. ವೈರಲ್ ವಿಡಿಯೋವನ್ನು ಗಮನಿಸಿದ ಗುರುಗ್ರಾಮ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಆರೋಪಿಯನ್ನು ಶೀಘ್ರದಲ್ಲೇ ಗುರುತಿಸಿ ಬಂಧಿಸುವುದಾಗಿ ತಿಳಿಸಿದ್ದಾರೆ. ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




