
ಮಥುರಾ, ಜೂನ್ 4: ಇಂದಿನ ಆಧುನಿಕ ಯುಗದಲ್ಲಿ ಅತ್ತೆ-ಸೊಸೆಯರ ಸಂಬಂಧದ ಬಗ್ಗೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕೇಳಿಬರುವಾಗ ಹರಿಯಾಣದ ಪ್ರಸಿದ್ಧ ಜಾನಪದ ಗಾಯಕಿ ಕಾಜಲ್ ಚೌಧರಿ (Kajal Chaudhary) ಅವರು ಇಡೀ ಸಮಾಜಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ನಡೆಯಲು ಸಾಧ್ಯವಾಗದ ತಮ್ಮ 90 ವರ್ಷದ ಅತ್ತೆಯನ್ನು ವಿಶೇಷವಾಗಿ ಸಿದ್ಧಪಡಿಸಿದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೂರಿಸಿಕೊಂಡು, ಆ ಬುಟ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಬರೋಬ್ಬರಿ 260 ಕಿಲೋಮೀಟರ್ ದೂರದ ಪವಿತ್ರ ‘ಬ್ರಜ್ ಪರಿಕ್ರಮ’ (Brij Parikrama) ಯಾತ್ರೆಯನ್ನು ಕೈಗೊಂಡಿದ್ದಾರೆ!
ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಾಜಲ್ ಅವರ 90 ವರ್ಷದ ಅತ್ತೆ ಚಂದ್ರಿ ದೇವಿ ಅವರಿಗೆ ಶ್ರೀಕೃಷ್ಣನ ಪವಿತ್ರ ಭೂಮಿಯಾದ ಬ್ರಜ್ ಪ್ರದೇಶದ ಸುಮಾರು 260 ಕಿ.ಮೀ ಉದ್ದದ ಧಾರ್ಮಿಕ ಪ್ರದಕ್ಷಿಣೆ ಮಾಡಬೇಕೆಂಬುದು ಬಹುಕಾಲದ ಆಸೆಯಾಗಿತ್ತು. ಆದರೆ ವಯೋಸಹಜ ನಿಶ್ಯಕ್ತಿಯಿಂದಾಗಿ ಅವರಿಗೆ ನಡೆಯಲು ಸಾಧ್ಯವಿರಲಿಲ್ಲ. ಅತ್ತೆಯ ಈ ಕೊನೆಯ ಆಸೆಯನ್ನು ತಿಳಿದ ಸೊಸೆ ಕಾಜಲ್, ತಾವೇ ಅವರನ್ನು ಹೊತ್ತುಕೊಂಡು ಹೋಗಲು ನಿರ್ಧರಿಸಿದರು. ನೆಟ್ಟಿಗರು ಕಾಜಲ್ ಚೌಧರಿ ಅವರನ್ನು ಆಧುನಿಕ ಕಾಲದ ‘ಶ್ರವಣ ಕುಮಾರ’ ಎಂದು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ: ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ
“ಇದು ಸಂಪೂರ್ಣವಾಗಿ ನನ್ನದೇ ನಿರ್ಧಾರ. ನನ್ನ ಅತ್ತೆ ನನ್ನ ಬಳಿ ಈ ರೀತಿ ಮಾಡುವಂತೆ ಎಂದಿಗೂ ಹೇಳಿರಲಿಲ್ಲ. ಅವರು ನನ್ನನ್ನು ಮಗಳಿಗಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದಾರೆ. ಅವರ ಮುಖದಲ್ಲಿ ಸಂತೋಷ ನೋಡುವುದು ಮತ್ತು ನನ್ನ ಆತ್ಮತೃಪ್ತಿಗಾಗಿ ನಾನು ಈ ಕಠಿಣ ಯಾತ್ರೆಯನ್ನು ಮಾಡುತ್ತಿದ್ದೇನೆ” ಎಂದು ಕಾಜಲ್ ಚೌಧರಿ ಹೇಳಿದ್ದಾರೆ.
ಹರಿಯಾಣದ ಬಂಚಾರಿ ಗ್ರಾಮದಿಂದ ಆರಂಭವಾದ ಈ ಪಯಣವು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಗಡಿಗಳ ಮೂಲಕ ಸಾಗುತ್ತಿದೆ. ತಲೆಯ ಮೇಲೆ ಅತ್ತೆಯನ್ನು ಹೊತ್ತು ಸಾಗುತ್ತಿರುವ ಕಾಜಲ್ ಅವರನ್ನು ಕಂಡ ಸ್ಥಳೀಯ ಗ್ರಾಮೀಣರು ಮತ್ತು ಇತರ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ದಾರಿಯುದ್ದಕ್ಕೂ ಜನ ಇವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ
ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಯಾತ್ರೆಯು ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಪ್ರಮುಖ ದೇವಸ್ಥಾನಗಳು, ಕಾಡುಗಳು ಮತ್ತು ಪವಿತ್ರ ಸರೋವರಗಳ ಮೂಲಕ ಹಾದುಹೋಗುತ್ತದೆ. ಸಾಮಾನ್ಯವಾಗಿ ಭಕ್ತರು ಈ 260 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ಹಿಂದೂ ಕ್ಯಾಲೆಂಡರ್ನ ಪವಿತ್ರ ‘ಅಧಿಕ ಮಾಸ’ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ಪರಿಕ್ರಮ ಮಾಡುವುದರಿಂದ ವಿಶೇಷ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ