AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19: ಕೊರೊನಾ ಮೂರನೇ ಅಲೆಯಲ್ಲಿ ದಿನಕ್ಕೆ 1.5 ಲಕ್ಷ ಪ್ರಕರಣ ದಾಖಲಾಗುವ ಸಾಧ್ಯತೆ; ನಿಯಮಾವಳಿ ಪಾಲಿಸಿದರೆ ಕಡಿಮೆ ಅಪಾಯ

ಪ್ರೊ.ಮಣೀಂದ್ರ ಅಗರ್​ವಾಲ್ ಹೇಳುವ ಪ್ರಕಾರ ಭಾರತದಲ್ಲಿ ಈ ವರ್ಷದ (2021) ಫೆಬ್ರವರಿ ತಿಂಗಳಲ್ಲೇ ಡೆಲ್ಟಾ ರೂಪಾಂತರಿ ಕಾಣಿಸಿಕೊಂಡಿದ್ದು ಈಗಾಗಲೇ ಹೆಚ್ಚಿನ ಜನರಲ್ಲಿ ಪ್ರತಿಕಾಯಗಳು ಉತ್ತಮ ಪ್ರಮಾಣದಲ್ಲಿ ವೃದ್ಧಿಸಿರುತ್ತವೆ.

Covid 19: ಕೊರೊನಾ ಮೂರನೇ ಅಲೆಯಲ್ಲಿ ದಿನಕ್ಕೆ 1.5 ಲಕ್ಷ ಪ್ರಕರಣ ದಾಖಲಾಗುವ ಸಾಧ್ಯತೆ; ನಿಯಮಾವಳಿ ಪಾಲಿಸಿದರೆ ಕಡಿಮೆ ಅಪಾಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 06, 2021 | 9:30 AM

Share

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ತಗ್ಗುತ್ತಿದೆಯಾದರೂ ಡೆಲ್ಟಾ ರೂಪಾಂತರಿ ಹಾಗೂ ಸಂಭವನೀಯ ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಸದ್ಯದ ಮಟ್ಟಿಗೆ ಆತಂಕ ಕಡಿಮೆಯಾಗಿಲ್ಲ. ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನುವ ಚರ್ಚೆಯೂ ಚಾಲ್ತಿಯಲ್ಲಿರುವುದು ಸಹಜವಾಗಿಯೇ ಭಯ ವೃದ್ಧಿಸಲು ಕಾರಣವಾಗಿದೆ. ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ವೇಳೆಗೆ ಕೊರೊನಾ ಮೂರನೇ ಅಲೆ ದೇಶವನ್ನು ಬಾಧಿಸಲಿದೆ ಎಂಬ ವಿಚಾರವನ್ನಿಟ್ಟುಕೊಂಡೇ ಅದರ ಪರಿಣಾಮ ಹಾಗೂ ತೀವ್ರತೆಯ ಸಾಧ್ಯಾಸಾಧ್ಯತೆಗಳನ್ನು ಕೆಲ ತಜ್ಞರು ವಿಶ್ಲೇಷಿಸಿದ್ದಾರೆ. ಐಐಟಿ ಪ್ರೊ.ಮಣೀಂದ್ರ ಅಗರ್​ವಾಲ್​ ಹೇಳುವಂತೆ, ಈಗಾಗಲೇ ಜನರ ದೇಹದಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಸೆಣೆಸಬಲ್ಲ ಪ್ರತಿಕಾಯಗಳ ಬೆಳವಣಿಗೆ ಆಗಿರುವುದರಿಂದ ಮೂರನೇ ಅಲೆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಬಹುದು. ಆದರೆ, ರೂಪಾಂತರ ಹೊಂದುವ ವೈರಾಣು ಇನ್ನೂ ಬಲಶಾಲಿಯಾದರೆ ಅಪಾಯ ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸೂತ್ರ ಮಾದರಿಯನ್ನಿಟ್ಟುಕೊಂಡು ಕೊರೊನಾ ಮೂರನೇ ಅಲೆ ಬಗ್ಗೆ ಲೆಕ್ಕಾಚಾರ ಹಾಕಿರುವ ಪ್ರೊ.ಮಣೀಂದ್ರ ಅಗರ್​ವಾಲ್, ಎರಡನೇ ಅಲೆ ಉತ್ತುಂಗಕ್ಕೆ ತಲುಪಿದಾಗ ಇದ್ದ ಪ್ರಕರಣಗಳ ಅರ್ಧದಷ್ಟು ಪ್ರಮಾಣ ಮೂರನೇ ಅಲೆಯಲ್ಲಿ ದಾಖಲಾಗಬಹುದು. ಕೊರೊನಾ ನಿಯಮಾವಳಿಗಳನ್ನು ಪಾಲಿಸದೇ ಇದ್ದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳ ನಡುವಲ್ಲಿ ಮೂರನೇ ಅಲೆ ಉಚ್ಛ್ರಾಯ ಹಂತಕ್ಕೆ ತಲುಪಬಹುದು ಎಂದು ಹೇಳಿದ್ದಾರೆ.

ಒಂದುವೇಳೆ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದು ಭಾವಿಸಿ ಲೆಕ್ಕಾಚಾರ ಹಾಕಿದರೆ, ದಿನಕ್ಕೆ 1.5ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ರೂಪಾಂತರಿ ವೈರಾಣು ಈಗ ಇರುವುದಕ್ಕಿಂತಲೂ ವೇಗವಾಗಿ ಹಬ್ಬಲಿದೆ ಎಂದು ಊಹಿಸಿಕೊಂಡು ಯೋಚಿಸಿದರೆ ಈ ಅಂಶ ಕಾಣುತ್ತಿದೆ. ಆದರೆ, ದಾಖಲಾಗುವ ಪ್ರಕರಣಗಳಲ್ಲಿ ಬಹುಪಾಲು ಗಂಭೀರಾವಸ್ಥೆಯನ್ನು ತಲುಪುವುದು ಅನುಮಾನ. ಕೊರೊನಾ ವಿರುದ್ಧ ದೇಹದಲ್ಲಿ ಪ್ರತಿಕಾಯಗಳ ಅಭಿವೃದ್ಧಿ ಆಗಿರುವುದರಿಂದ ತಕ್ಕಮಟ್ಟಿಗೆ ರಕ್ಷಣೆ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಬದುಕಿಗೆ ಮರಳುವುದು ಯಾವಾಗ? ಪ್ರೊ.ಮಣೀಂದ್ರ ಅಗರ್​ವಾಲ್ ಹೇಳುವ ಪ್ರಕಾರ ಭಾರತದಲ್ಲಿ ಈ ವರ್ಷದ (2021) ಫೆಬ್ರವರಿ ತಿಂಗಳಲ್ಲೇ ಡೆಲ್ಟಾ ರೂಪಾಂತರಿ ಕಾಣಿಸಿಕೊಂಡಿದ್ದು ಈಗಾಗಲೇ ಹೆಚ್ಚಿನ ಜನರಲ್ಲಿ ಪ್ರತಿಕಾಯಗಳು ಉತ್ತಮ ಪ್ರಮಾಣದಲ್ಲಿ ವೃದ್ಧಿಸಿರುತ್ತವೆ. ಹೀಗಾಗಿ ಡೆಲ್ಟಾ ತಳಿಯಿಂದ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ವಿರಳವಿದೆ. ಅಲ್ಲದೇ ಕೊರೊನಾ ಲಸಿಕೆಯೂ ಇದಕ್ಕೆ ಇನ್ನಷ್ಟು ಸಹಕಾರಿಯಾಗಲಿದ್ದು ಆಗಸ್ಟ್​ ತಿಂಗಳ ವೇಳೆಗೆ ಜನಜೀವನ ಸಹಜ ಸ್ಥಿತಿಗೆ ಮರಳಬಹುದು ಎನ್ನಲಾಗಿದೆ.

ಆದರೆ, ಕೊರೊನಾ ಮೂರನೇ ಹಾಗೂ ನಾಲ್ಕನೇ ಅಲೆ ನಿಯಂತ್ರಿಸುವಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಲಿದ್ದು, ಜುಲೈ ತಿಂಗಳಲ್ಲಿ 13ರಿಂದ14ಕೋಟಿ ಡೋಸ್​ ಹಾಗೂ ಆಗಸ್ಟ್​ನಲ್ಲಿ 20 ಕೋಟಿಗೂ ಅಧಿಕ ಡೋಸ್​ ವಿತರಣೆಯಾಗಬೇಕಿದೆ. ಒಂದುವೇಳೆ, ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗಿ 10 ಕೋಟಿಗೂ ಕಡಿಮೆ ಡೋಸ್​ ನೀಡಿದಲ್ಲಿ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನೂ ಪ್ರೊ.ಮಣೀಂದ್ರ ಅಗರ್​ವಾಲ್ ನೀಡಿದ್ದಾರೆ.