ಇಂದೋರ್​ನ ಈ ಕೋಟ್ಯಧಿಪತಿ ಭಿಕ್ಷುಕನ ಬಳಿಯಿದೆ 3 ಮನೆ, ಕಾರುಗಳು!

ಇಂದೋರ್‌ನ ಕೋಟ್ಯಾಧಿಪತಿಯೊಬ್ಬರಿಗೆ ಭಿಕ್ಷೆ ಬೇಡುವುದು ಪಾರ್ಟ್ ಟೈಂ ಕೆಲಸ! ಭಿಕ್ಷೆ ಬೇಡಿದ ಹಣದಿಂದ ಇವರು 3 ಮನೆಗಳನ್ನು ನಿರ್ಮಿಸಿದ್ದು, 3 ಆಟೋಗಳು, 2 ಕಾರುಗಳನ್ನು ಕೂಡ ಹೊಂದಿದ್ದಾರೆ. ಈ ಶ್ರೀಮಂತ ಭಿಕ್ಷುಕ ಬೇರೆಯವರಿಗೆ ಹಣವನ್ನು ಸಾಲವಾಗಿ ನೀಡುತ್ತಾ ಬಡ್ಡಿದಂಧೆಯನ್ನು ಕೂಡ ನಡೆಸುತ್ತಾರೆ. ಹಾಗಾದರೆ, ಈ ಭಿಕ್ಷುಕ ಪ್ರತಿದಿನ ಎಷ್ಟು ಹಣ ಸಂಪಾದಿಸುತ್ತಾರೆ? ಎಂಬುದರ ಮಾಹಿತಿ ಇಲ್ಲಿದೆ.

ಇಂದೋರ್​ನ ಈ ಕೋಟ್ಯಧಿಪತಿ ಭಿಕ್ಷುಕನ ಬಳಿಯಿದೆ 3 ಮನೆ, ಕಾರುಗಳು!
Indore Crorepati Beggar

Updated on: Jan 19, 2026 | 3:43 PM

ನವದೆಹಲಿ, ಜನವರಿ 19: ಇಂದೋರ್ ನಗರವನ್ನು ಭಿಕ್ಷುಕ (Beggar) ಮುಕ್ತಗೊಳಿಸಲು ನಡೆಯುತ್ತಿರುವ ಅಭಿಯಾನದ ವೇಳೆ ಅನಿರೀಕ್ಷಿತ ವಿಷಯವೊಂದು ಹೊರಬಿದ್ದಿದೆ. ಬೀದಿಗಳಲ್ಲಿ ಭಿಕ್ಷೆ ಬೇಡುವ ಅಂಗವಿಕಲ ವ್ಯಕ್ತಿಯೊಬ್ಬರು ಕೋಟ್ಯಾಧಿಪತಿ ಎಂಬ ವಿಷಯ ಬಯಲಾಗಿದೆ. ಮಧ್ಯಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ತಂಡದಿಂದ ಗುರುತಿಸಲ್ಪಟ್ಟ ನಂತರ ಸಾಕಷ್ಟು ಗಮನ ಸೆಳೆದಿರುವ ಭಿಕ್ಷುಕರೊಬ್ಬರು ಪ್ರತಿದಿನ 500ರಿಂದ 1,000 ರೂ. ವರೆಗೆ ನಡುವೆ ಗಳಿಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಪ್ರಾರಂಭಿಸಲಾದ ಇಂದೋರ್ ಭಿಕ್ಷುಕ ನಿರ್ಮೂಲನಾ ಅಭಿಯಾನದಲ್ಲಿ, ಮಧ್ಯಪ್ರದೇಶ ಸರ್ಕಾರವು ಭಿಕ್ಷಾಟನೆಯ ಮೂಲಕ ಕೋಟಿಗಟ್ಟಲೆ ಸಂಪತ್ತನ್ನು ಸಂಗ್ರಹಿಸಿರುವ ಭಿಕ್ಷುಕರನ್ನು ಪತ್ತೆಹಚ್ಚಿದೆ. ಇವ ಹೆಸರು ಮಂಗಿಲಾಲ್. ಮಂಗಿಲಾಲ್ ನಗರದ ವಿವಿಧ ಭಾಗಗಳಲ್ಲಿ 3 ಮನೆಗಳನ್ನು ಹೊಂದಿದ್ದಾರೆ ಮತ್ತು ಅಗತ್ಯವಿರುವ ಜನರಿಗೆ ಸಾಲಗಳನ್ನು ಸಹ ನೀಡುತ್ತಾರೆ ಎಂದು ಸರ್ಕಾರಕ್ಕೆ ತಿಳಿದುಬಂದಿದೆ.

ಇದನ್ನೂ ಓದಿ: Viral: ಪತಿ ಹಾಗೂ ತನ್ನ ಆರು ಮಂದಿ ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ

ಇವರು ರಾಜ್ಯ ಸರ್ಕಾರ ಮತ್ತು ರೆಡ್ ಕ್ರಾಸ್‌ನ ಜಂಟಿ ಉಪಕ್ರಮದ ಭಾಗವಾಗಿ ಅಂಗವಿಕಲರಿಗೆ ನೀಡಲಾಗುವ ಒಂದು ಬೆಡ್ ರೂಂ ಮನೆಯ ಫಲಾನುಭವಿಯೂ ಆಗಿದ್ದಾರೆ. ಈಗಾಗಲೇ ಮನೆ ಹೊಂದಿದ್ದರೂ ಸಹ PMAY ಯೋಜನೆಯಡಿ ಮನೆ ಪಡೆಯಲು ಅವರನ್ನು ಜಿಲ್ಲಾಧಿಕಾರಿಗಳ ಮುಂದೆ ಹಾಜರುಪಡಿಸಲಾಗುವುದು. ಇಷ್ಟೆಲ್ಲ ಶ್ರೀಮಂತಿಕೆಯಿದ್ದರೂ ಅವರು ಭಿಕ್ಷೆ ಬೇಡುವುದನ್ನು ನಿಲ್ಲಿಸಿಲ್ಲ. ಇಂದಿಗೂ ಇಂದೋರ್‌ನ ಬೀದಿಗಳಲ್ಲಿ ನಿಯಮಿತವಾಗಿ ಭಿಕ್ಷೆ ಬೇಡುತ್ತಾರೆ. ಈ ಮಂಗಿಲಾಲ್ 3 ಆಟೋಗಳನ್ನು ಹೊಂದಿದ್ದಾರೆ. ಅದನ್ನು ಅವರು ಬಾಡಿಗೆಗೆ ನೀಡುತ್ತಾರೆ. ಇದರ ಜೊತೆಗೆ, ಅವರು ಮಾರುತಿ ಸುಜುಕಿ ಡಿಜೈರ್ ಕಾರನ್ನು ಹೊಂದಿದ್ದು, ಅದನ್ನು ಬಾಡಿಗೆಗೆ ನೀಡುತ್ತಾರೆ. ಇಂದೋರ್‌ನ ಭಗತ್ ಸಿಂಗ್ ನಗರ, ಶಿವನಗರ ಮತ್ತು ಆಳ್ವಾಸ್‌ನಲ್ಲಿ 3 ಅಂತಸ್ತಿನ ಕಟ್ಟಡವನ್ನು ಕೂಡ ಹೊಂದಿದ್ದಾರೆ.

ಇದನ್ನೂ ಓದಿ: ಸಾವನ್ನಪ್ಪಿದ ಭಿಕ್ಷುಕನ ಬ್ಯಾಗ್​​ನಲ್ಲಿತ್ತು 4.5 ಲಕ್ಷ ರೂ. ವಿದೇಶಿ ಕರೆನ್ಸಿ

ಕಾರುಗಳು ಮತ್ತು ಆಟೋಗಳನ್ನು ಬಾಡಿಗೆಗೆ ನೀಡುವುದರ ಜೊತೆಗೆ, ಮಂಗಿಲಾಲ್ ಇಂದೋರ್‌ನ ಸರಾಫಾ ಬಜಾರ್ ಪ್ರದೇಶದ ಜನರಿಗೆ ಹೆಚ್ಚಿನ ಬಡ್ಡಿಗೆ ಹಣವನ್ನೂ ನೀಡುತ್ತಾರೆ. ಇಂದೋರ್ ತನ್ನ ಬೀದಿಗಳನ್ನು ಭಿಕ್ಷುಕ ಮುಕ್ತಗೊಳಿಸುವ ನಿಟ್ಟಿನಲ್ಲಿ ಫೆಬ್ರವರಿ 2024 ರಿಂದ ಕೆಲಸ ಮಾಡುತ್ತಿದೆ. ಕೇವಲ ಎರಡು ವರ್ಷಗಳಲ್ಲಿ 6,500ಕ್ಕೂ ಹೆಚ್ಚು ಭಿಕ್ಷುಕರನ್ನು ಗುರುತಿಸಲಾಗಿದೆ ಮತ್ತು ಅಭಿಯಾನ ಪ್ರಾರಂಭವಾದಾಗಿನಿಂದ ಸುಮಾರು 5,000 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ