AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kargil Vijay Diwas: ಕಾರ್ಗಿಲ್​ ಯುದ್ಧದ ಗೆಲುವಿಗೆ 22 ವರ್ಷ; ಭಾರತದ ಧೀರ ಯೋಧರ ಸಾಹಸಗಾಥೆಯ ಕಿರು ಪರಿಚಯ ಇಲ್ಲಿದೆ

ಕಾರ್ಗಿಲ್ ಯುದ್ಧಕ್ಕೆ ಮುನ್ನುಡಿ ಹಾಡಿದ ಸಂಗತಿ ಯಾವುದು? ಪಾಕಿಸ್ತಾನವನ್ನು ಭಾರತ ಬಗ್ಗುಬಡಿಯಬೇಕಾದರೆ ಮೆರೆದ ಸಾಹಸ ಎಂಥದ್ದು? ಎನ್ನುವುದನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ.

Kargil Vijay Diwas: ಕಾರ್ಗಿಲ್​ ಯುದ್ಧದ ಗೆಲುವಿಗೆ 22 ವರ್ಷ; ಭಾರತದ ಧೀರ ಯೋಧರ ಸಾಹಸಗಾಥೆಯ ಕಿರು ಪರಿಚಯ ಇಲ್ಲಿದೆ
ಗೆಲುವಿನ ಬಳಿಕ ಭಾರತೀಯ ಯೋಧರ ಸಂಭ್ರಮ (ಸಂಗ್ರಹ ಚಿತ್ರ)
TV9 Web
| Updated By: Skanda|

Updated on: Jul 26, 2021 | 8:50 AM

Share

ಇಂದು ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ. 1999ನೇ ಇಸವಿಯ ಜುಲೈ 26ರಂದು ಭಾರತೀಯ ಸೈನಿಕರು ಆಪರೇಶನ್​ ವಿಜಯ್ (Operation Vijay)​ ಮೂಲಕ ಕಾರ್ಗಿಲ್​ – ಡ್ರಾಸ್ ವಲಯದಲ್ಲಿ (Kargil-Drass Sector) ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ (Kargil Vijay Diwas)​ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್​ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 22 ವರ್ಷ (22 Years) ತುಂಬುತ್ತಿದೆ. ಅಂದಹಾಗೆ ಈ ಯುದ್ಧಕ್ಕೆ ಮುನ್ನುಡಿ ಹಾಡಿದ ಸಂಗತಿ ಯಾವುದು? ಪಾಕಿಸ್ತಾನವನ್ನು ಭಾರತ ಬಗ್ಗುಬಡಿಯಬೇಕಾದರೆ ಮೆರೆದ ಸಾಹಸ ಎಂಥದ್ದು? ಎನ್ನುವುದನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ.

1999ರ ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆದ ಕಾರ್ಗಿಲ್​ ಯುದ್ಧದಲ್ಲಿ ಲೇಹ್​ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್​ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಅಂದಹಾಗೆ, ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಲು ಕಾರ್ಗಿಲ್‌ ಪ್ರದೇಶವನ್ನೇ ಆರಿಸಿಕೊಂಡಿದ್ದಕ್ಕೂ ಕಾರಣವಿದೆ. ಶ್ರೀನಗರದಿಂದ ಲಡಾಖ್‌ನ ಲೇಹ್‌ ಪ್ರದೇಶವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌1ಡಿ ರಸ್ತೆ ಕಾರ್ಗಿಲ್‌ ಮೂಲಕ ಹಾದುಹೋಗುತ್ತದೆ. ಹೀಗಾಗಿ ಕಾರ್ಗಿಲ್‌ ಪರ್ವತ ಶ್ರೇಣಿಯನ್ನು ವಶಕ್ಕೆ ತೆಗೆದುಕೊಂಡರೆ, ಎನ್‌ಎಚ್‌1ಡಿ ರಸ್ತೆಯನ್ನು ಆಕ್ರಮಿಸಿಕೊಂಡು, ಭಾರತೀಯ ಸೇನೆ ಲೇಹ್‌ ತಲುಪದಂತೆ ಅಡ್ಡಿಪಡಿಸಬಹುದು. ನಂತರ ಸುಲಭವಾಗಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಿಂದ ಭಾರತೀಯ ಸೈನಿಕರನ್ನು ಹೊರದಬ್ಬಬಹುದು ಎಂದು ಪಾಕಿಸ್ತಾನ ತನ್ನ ಮೂಗಿನ ನೇರಕ್ಕೆ ಯೋಜನೆ ರೂಪಿಸಿಕೊಂಡಿತ್ತು.

ಈ ಯುದ್ಧದ ಆರಂಭಕ್ಕೆ ಮುನ್ನುಡಿ ಹಾಡಿದ್ದು ಪಾಕಿಸ್ತಾನದ ಯೋಜಿತ ಕುತಂತ್ರ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ. ಚಳಿಗಾಲದ ವೇಳೆ ಮಂಜಿನಿಂದ ಆವೃತವಾದ ಗಡಿ ನಿಯಂತ್ರಣ ರೇಖೆ ಸಮೀಪದ ಕೆಲ ಮುಂಚೂಣಿ ಶಿಬಿರಗಳನ್ನು ಹಾಗೆಯೇ ಬಿಟ್ಟು, ಅತಿಕ್ರಮಣಕ್ಕೆ ಹಾದಿ ಮಾಡಿಕೊಡಬಹುದಾದ ಪ್ರದೇಶಗಳ ಗಸ್ತನ್ನು ಕೂಡಾ ಕುಂಠಿತಗೊಳಿಸುವುದು ಭಾರತ ಮತ್ತು ಪಾಕಿಸ್ತಾನ ಸೇನೆಗಳು ಪರಿಪಾಲಿಸಿಕೊಂಡು ಬಂದಿದ್ದ ನಿಯಮ. ಚಳಿಯ ತೀವ್ರತೆ ಕಡಿಮೆಯಾದ ನಂತರ ಮುಂಚೂಣಿ ಪ್ರದೇಶಗಳನ್ನು ಮರುವಶಕ್ಕೆ ಪಡೆದು ಪಹರೆ ಆರಂಭಿಸುವುದು ರೂಢಿಯಲ್ಲಿತ್ತು. ಆದರೆ, 1999ರ ಫೆಬ್ರವರಿಯಲ್ಲಿ ನಿಯಮ ಮುರಿದ ಪಾಕಿಸ್ತಾನ ಪಾಕಿಸ್ತಾನ ಸೇನೆ ಕಾರ್ಗಿಲ್​ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿ ತಾನು ಬಿಟ್ಟುಹೋಗಿದ್ದ ಶಿಬಿರಗಳನ್ನು ಮರು ಆಕ್ರಮಿಸಿಕೊಳ್ಳಲು ಶುರುಮಾಡಿತು. ಅಷ್ಟಕ್ಕೇ ನಿಲ್ಲದೆ ಗಡಿ ನಿಯಂತ್ರಣ ರೇಖೆಯ ಭಾರತದ ಕಡೆಯಿದ್ದ ಶಿಬಿರಗಳ ಮೇಲೆ ಆಕ್ರಮಣ ಮಾಡಲು ತನ್ನ ಪಡೆಗಳನ್ನು ಛೂ ಬಿಟ್ಟಿತು. ಪಾಕಿಸ್ತಾನದ ಕಾಲು ಕೆರೆಯುವ ಈ ಬುದ್ಧಿಯೇ ಯುದ್ಧಕ್ಕೆ ಕಾರಣವಾಯಿತು.

ಆರಂಭದಲ್ಲಿ ಪಾಕಿಸ್ತಾನೀಯರು ಭಾರತದ ಒಳಗೆ ಸುಮಾರು ದೂರ ನುಸುಳಿ ಬಂದಿದ್ದರೂ ಅದು ಭಾರತೀಯ ಸೇನೆಯ ಅರಿವಿಗೆ ಬಂದಿರಲಿಲ್ಲ. ಆದರೆ, ಪಾಕಿಸ್ತಾನಿಯರನ್ನು ಕಂಡ ಕಾಶ್ಮೀರದ ಜನ ತಡಮಾಡದೇ ಭಾರತೀಯ ಸೇನೆಗೆ ವಿಷಯ ಮುಟ್ಟಿಸಿದರು. ಆಗ ಸೇನಾಧಿಕಾರಿಗಳು 5 ಯೋಧರನ್ನು ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು. ಆದರೆ, ಆಕ್ರಮಣದ ಮನಸ್ಥಿತಿಯಲ್ಲಿದ್ದ ಪಾಕಿಸ್ತಾನೀಯರು ಭಾರತದ ಐದು ಯೋಧರನ್ನೂ ಚಿತ್ರಹಿಂಸೆ ನೀಡಿ ಸಾಯಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ತಕ್ಷಣವೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ನಿರ್ಧರಿಸಿ ಸೇನೆಯನ್ನು ಸಿದ್ಧಗೊಳಿಸಿತು. ಭಾರತ ಸರ್ಕಾರ 20,000 ಭಾರತೀಯ ಪಡೆಗಳನ್ನು ಸಜ್ಜುಗೊಳಿಸಿ ಮೇ 3ರಿಂದ ಆಪರೇಷನ್‌ ವಿಜಯ ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭ ಮಾಡಿತು.

ಅತ್ತ ಭಾರತದ ಮೇಲೆ ಆಕ್ರಮಣ ಮಾಡಲೆಂದು ಪಾಕಿಸ್ತಾನ ತನ್ನ 5000 ಯೋಧರನ್ನು ಕಳುಹಿಸಿಕೊಟ್ಟಿತ್ತು. ಕಾಲುಕೆರೆದುಕೊಂಡು ಬಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲೇಬೇಕೆಂದು ಹೊರಟ ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಿ ಮುನ್ನುಗ್ಗಿತ್ತು. ಎತ್ತರದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಶೆಲ್‌ ದಾಳಿ ಮೂಲಕ ಭಾರತೀಯ ಸೇನೆ ಪಾಕಿಸ್ತಾನೀಯರ ಬಂಕರ್‌ಗಳತ್ತ ದೇಷ್ಟಿ ಇರಿಸಿತ್ತು. ಭಾರತದ ಪಾಲಿಗೆ ಬೋಫೋರ್ಸ್​ ಫಿರಂಗಿ, ವಾಯುಪಡೆಯ ಮಿಗ್‌-27, ಮಿಗ್‌-29 ಯುದ್ಧ ವಿಮಾನಗಳು ಹೆಚ್ಚಿನ ಬಲ ತುಂಬಿದವು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. 2ನೇ ವಿಶ್ವಯುದ್ಧದ ನಂತರ ಅಧಿಕ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ ಮೊದಲ ಯುದ್ಧ ಇದು ಎಂಬ ಖ್ಯಾತಿ ಕಾರ್ಗಿಲ್​ ಯುದ್ಧದ ಪಾಲಾಯಿತು.

ಇದನ್ನೂ ಓದಿ: ಕಾರ್ಗಿಲ್​ ದಿವಸ್​ ಆಚರಣೆಗಾಗಿ ಜಮ್ಮು-ಕಾಶ್ಮೀರ, ಲಡಾಖ್​ಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್​  

ಲಡಾಖ್​ ತಲುಪಿದ ಭಾರತೀಯ ಸೇನೆಯ ದಾಳಿಪಡೆ: ಇದು ಮಹತ್ವದ ಕಾರ್ಯತಂತ್ರಕ್ಕೆ ಮುನ್ನುಡಿ

(Kargil Vijay Diwas 22 years of war here is what you need to know about Indias Great Victory over Pakistan in 1999)