AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ ಸಿಎಂ ಕೆಸಿಆರ್​ ಘೋಷಿಸಿದ ಏರ್​ಪೋರ್ಟ್​ ಎಕ್ಸ್​ಪ್ರೆಸ್​ ಮೆಟ್ರೋ ಕೇವಲ ವಿಷಯಾಂತರದ ಹುನ್ನಾರ: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ

‘ಹೈದರಾಬಾದ್​ ಮೆಟ್ರೋ ನಿರ್ಮಾಣ ವಿಚಾರದಲ್ಲಿ ಕೆಸಿಆರ್ ಎಡವಿದ್ದಾರೆ. ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಕಿಶನ್ ರೆಡ್ಡಿ ಹೇಳಿದರು.

ತೆಲಂಗಾಣ ಸಿಎಂ ಕೆಸಿಆರ್​ ಘೋಷಿಸಿದ ಏರ್​ಪೋರ್ಟ್​ ಎಕ್ಸ್​ಪ್ರೆಸ್​ ಮೆಟ್ರೋ ಕೇವಲ ವಿಷಯಾಂತರದ ಹುನ್ನಾರ: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ
ಜಿ ಕಿಶನ್ ರೆಡ್ಡಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 09, 2022 | 10:16 AM

Share

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K Chandrashekhar Rao) ಅವರು ಏರ್​ಪೋರ್ಟ್​ ಎಕ್ಸ್​ಪ್ರೆಸ್​ ಮೆಟ್ರೋಗೆ ಶಿಲಾನ್ಯಾಸ ನೆರವೇರಿಸುವ ಮೂಲಕ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆ ಸಚಿವ ಜಿ.ಕಿಶನ್ ರೆಡ್ಡಿ (G Kishan Reddy) ಆರೋಪಿಸಿದರು. ಹೈದರಾಬಾದ್​ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ವಿಫಲರಾಗಿರುವ ಅವರು, ಹೈದರಾಬಾದ್​ನ ಬಹುಮಾದರಿ ಸಾರಿಗೆ ವ್ಯವಸ್ಥೆಗೆ (Hyderabad Multi-Modal Transport System – MMTS) ರಾಜ್ಯದ ಪಾಲಿನ ಅನುದಾನ ನೀಡುವಲ್ಲಿಯೂ ಎಡವಿದರು. ಇದೀಗ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಏರ್​ಪೋರ್ಟ್​ ಎಕ್ಸ್​ಪ್ರೆಸ್ ಮೆಟ್ರೋಗೆ ಅಡಿಗಲ್ಲು ಹಾಕಿದ್ದಾರೆ ಎಂದು ದೂರಿದರು. ಡಿಸೆಂಬರ್ 9ರಂದು ಏರ್​ಪೋರ್ಟ್​ ಮೆಟ್ರೋಗೆ ಶಿಲಾನ್ಯಾಸ ನೆರವೇರಿಸುವುದಾಗಿ ಕೆಸಿಆರ್ ಘೋಷಿಸಿದ್ದರು.

‘ಹೈದರಾಬಾದ್​ ಮೆಟ್ರೋ ನಿರ್ಮಾಣ ವಿಚಾರದಲ್ಲಿ ಕೆಸಿಆರ್ ಎಡವಿದ್ದಾರೆ. ಇದೀಗ ಹೊಸದಾಗಿ ಮತ್ತೊಂದು ಮೆಟ್ರೋ ಲೈನ್​ಗೆ ಅಡಿಗಲ್ಲು ಹಾಕಿರುವ ಅವರ ನಡೆಯಿಂದ ನಮಗೆ ಅಚ್ಚರಿಯೇನೂ ಆಗಿಲ್ಲ. ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಕಿಶನ್ ರೆಡ್ಡಿ ಹೇಳಿದರು.

‘ಹೈದರಾಬಾದ್​ ಮೆಟ್ರೋದ ಗ್ರೀನ್​ ಲೈನ್ (ಕಾರಿಡಾರ್-2) ಸಿಕಂದರಾಬಾದ್​ನ ಜುಬಿಲಿ ಬಸ್ ನಿಲ್ದಾಣದಿಂದ ಹೈದರಾಬಾದ್​ನ ಓಲ್ಡ್​ ಸಿಟಿಯನ್ನು ಚಾರ್​ಮಿನಾರ್ ಮಾರ್ಗವಾಗಿ ಸಂಪರ್ಕ ಕಲ್ಪಿಸಬೇಕಿತ್ತು. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಪ್ಪಂದವೂ ಆಗಿತ್ತು. ಆದರೆ, ಹೈದರಾಬಾದ್​ನ ಮಹಾತ್ಮಾ ಗಾಂಧಿ ಬಸ್ ನಿಲ್ದಾಣದ ಅಫ್ಜಲ್​ ಗಂಜ್ ಬಳಿಯೇ ಗ್ರೀನ್​ ಲೈನ್ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ಓಲ್ಡ್​ ಸಿಟಿಯ ಪಶ್ಚಿಮ ಭಾಗದಲ್ಲಿರುವ ಜನರು ಹಲವು ಕಷ್ಟಗಳನ್ನು ಅನುಭವಿಸುವಂತಾಗಿದೆ. ಓಲ್ಡ್​ ಸಿಟಿಯ ಪೂರ್ವ ಭಾಗದಲ್ಲಿರುವ ಜನರು ಮಾಲಕ್​ಪೆಟ್ ಮೆಟ್ರೋ ಸ್ಟೇಷನ್ ಮೆಟ್ರೋ ಜಾಲವನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಓಲ್ಡ್ ಸಿಟಿಯ ಪಶ್ಚಿಮ ಭಾಗದಲ್ಲಿರುವವರು ಮೆಟ್ರೋ ಮತ್ತು ಎಂಎಂಟಿಎಸ್​ ಸಂಪರ್ಕಕ್ಕಾಗಿ ಹೆಚ್ಚಿನ ಹಣ ಮತ್ತು ಸಮಯವನ್ನು ವ್ಯಯಿಸಬೇಕಾಗಿದೆ’ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

‘ಅನುಮೋದನೆಗೊಂಡಿದ್ದ ಯೋಜನೆಯನ್ನು ಮುಖ್ಯಮಂತ್ರಿ ಏಕಪಕ್ಷೀಯವಾಗಿ ಬದಲಿಸಿದರು. ಇದರಿಂದಾಗಿ ಯೋಜನಾ ವೆಚ್ಚವು ₹ 3,500 ಕೋಟಿಗಳಷ್ಟು ಹೆಚ್ಚಾಯಿತು. ಯೋಜನೆ ಪೂರ್ಣಗೊಳ್ಳುವುದೂ ತಡವಾಯಿತು. ಈ ಮೊದಲು ಯೋಜನೆಯು 2016ಕ್ಕೆ ಪೂರ್ಣಗೊಂಡು ಅನುಷ್ಠಾನಗೊಳ್ಳಬೇಕು ಎಂಬ ಲೆಕ್ಕಾಚಾರವಿತ್ತು. ಅನುಷ್ಠಾನದಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಮೊದಲೇ ತೆಲಂಗಾಣ ಸರ್ಕಾರವು ಹೊಸ ಯೋಜನೆಗಳನ್ನು ಪ್ರಕಟಿಸುವ ಮೂಲಕ ಜನರ ಗಮನ ಬದಲಿಸಲು ಯತ್ನಿಸುತ್ತಿದೆ. ಮೆಟ್ರೋ ರೈಲು ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದ ಮತ್ತು ಹೈದರಾಬಾದ್​ ಎಂಎಂಟಿಎಸ್ ಯೋಜನೆಗೆ ರಾಜ್ಯದ ಪಾಲಿನ ಬಂಡವಾಳ ಒದಗಿಸಲು ವಿಫಲವಾದ ಸರ್ಕಾರವು ಹೊಸ ಯೋಜನೆ ಪ್ರಕಟಿಸುತ್ತಿದೆ’ ಎಂದು ಅವರು ಆಕ್ಷೇಪಿಸಿದ್ದಾರೆ.

‘ಎಂಎಂಟಿಎಸ್ 2ನೇ ಹಂತದ ಕಾಮಗಾರಿಯ ಬಗ್ಗೆ ದಕ್ಷಿಣ ಮಧ್ಯ ರೈಲ್ವೆ ಮತ್ತು ತೆಲಂಗಾಣ ಸರ್ಕಾರದ ನಡುವೆ ಒಡಂಬಡಿಕೆಯಾಗಿತ್ತು. ಈ ಯೋಜನೆಗಾಗಿ ಈವರೆಗೆ ₹ 832 ಕೋಟಿ ಮೊತ್ತವನ್ನು ವ್ಯಯಿಸಲಾಗಿದೆ. ಕಾಮಗಾರಿಯ ಒಟ್ಟು ಮೊತ್ತದ ಮೂರನೇ ಎರಡರಷ್ಟು ಭಾಗವನ್ನು ರಾಜ್ಯ ಸರ್ಕಾರವು ನೀಡಬೇಕಿತ್ತು. ಆದರೆ ಈ ಹಣ ನೀಡಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕಾಮಗಾರಿ ಅನುಷ್ಠಾನ ತಡವಾಯಿತು. ಇದರಿಂದಾಗಿ ಕಾಮಗಾರಿ ವೆಚ್ಚವೂ ವಿಪರೀತ ಎನ್ನುವಷ್ಟು ಹೆಚ್ಚಾಯಿತು’ ಎಂದು ಕಿಶನ್ ರೆಡ್ಡಿ ವಿವರಿಸಿದ್ದಾರೆ.