ಪುರುಷಾಧಿಪತ್ಯ ವಿರುದ್ಧ ರಾಹುಲ್ ಭಾಷಣದ ಬೆನ್ನಲ್ಲೇ ಮುಸ್ಲಿಂ ಧರ್ಮಗುರುವಿನ ಫರ್ಮಾನು, ಮಹಿಳೆಯರು ಮನೆಯೊಳಗೆ ಇರಬೇಕು
ಕೇರಳದ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್, ಮಹಿಳೆಯರು ಮನೆಯೊಳಗೆ ಇರಬೇಕು, ಸಾರ್ವಜನಿಕ ಕ್ಷೇತ್ರಕ್ಕೆ ಬಂದರೆ ಸಮಾಜಕ್ಕೆ ವಿನಾಶ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಮಹಿಳೆಯರನ್ನು ಚಿನ್ನಕ್ಕೆ ಹೋಲಿಸಿ, ಸಂವಿಧಾನ ನೀಡಿರುವ ಸಮಾನ ಹಕ್ಕುಗಳಿಗೆ ವಿರುದ್ಧವಾದ ಈ ಹೇಳಿಕೆಯನ್ನು ಎಡಪಕ್ಷ, ಬಿಜೆಪಿ ಖಂಡಿಸಿದ್ದು, ಕಾಂಗ್ರೆಸ್ಗೆ ಇಕ್ಕಟ್ಟು ತಂದಿದೆ. ಮಹಿಳಾ ಹಕ್ಕುಗಳು ಹಾಗೂ ಸಂವಿಧಾನದ ಮೌಲ್ಯಗಳ ಕುರಿತು ಗಂಭೀರ ಚರ್ಚೆ ನಡೆದಿದೆ.

ತಿರುವನಂತಪುರಂ, ಆಗಸ್ಟ್ 31: ಮಹಿಳೆಯರು ತಮ್ಮ ಮನೆಗಳ ಗೋಡೆಗಳ ಒಳಗೆ ಸೀಮಿತವಾಗಿರಬೇಕು ಮತ್ತು ಸಾರ್ವಜನಿಕ ವೇದಿಕೆಗಳನ್ನು ಪ್ರವೇಶಿಸಬಾರದು, ಮಹಿಳೆಯರು ಸಾರ್ವಜನಿಕ ಕ್ಷೇತ್ರಕ್ಕೆ ಬಂದರೆ ಸಮಾಜದಲ್ಲಿ “ದೊಡ್ಡ ವಿನಾಶ” ಉಂಟಾಗುತ್ತದೆ ಎಂದು ಕೇರಳದ ಮುಸ್ಲಿಂ(Muslim) ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ಹೇಳಿರುವುದು ತೀವ್ರ ರಾಜಕೀಯ ಹಾಗೂ ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ.
ಆಭರಣ vs ರುಬ್ಬುವ ಕಲ್ಲು: ಚಿನ್ನದ ಅಂಗಡಿಯಲ್ಲಿ ಚಿನ್ನದ ಹಾರವನ್ನು ಪೆಟ್ಟಿಗೆಯಲ್ಲಿ ಎಚ್ಚರಿಕೆಯಿಂದ ಮುಚ್ಚಿಡಲಾಗುತ್ತದೆ, ರಸ್ತೆಯ ಬದಿಯಲ್ಲಿ ಇಟ್ಟರೆ ಅದರ ಸೌಂದರ್ಯ ಮತ್ತು ಮೌಲ್ಯ ಹಾಳಾಗುತ್ತದೆ. ಆದರೆ ರಸ್ತೆಬದಿಯ ಕಲ್ಲು ರುಬ್ಬುವ ಯಂತ್ರವನ್ನು ಯಾರೂ ಕಾಳಜಿಯಿಂದ ಮುಚ್ಚಿಡುವುದಿಲ್ಲ. ಅದೇ ರೀತಿ ಮಹಿಳೆಯರು ಚಿನ್ನದಂತೆ ಅಮೂಲ್ಯವಾಗಿದ್ದು, ಅವರು ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಂದು ವಿಶ್ಲೇಷಿಸಿದರು.
ಪವಿತ್ರ ಕುರಾನ್ ಮಹಿಳೆಯರು ಮನೆಗಳಲ್ಲೇ ಇರಬೇಕೆಂದು ಹೇಳುತ್ತದೆ. ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಕಳೆದ 100 ವರ್ಷಗಳಿಂದ ಇದನ್ನೇ ಬೋಧಿಸುತ್ತಿದೆ. ಇದನ್ನು ಹೇಳುವುದು ನಮ್ಮ ಕರ್ತವ್ಯ, ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮತ್ತಷ್ಟು ಓದಿ: Raksha Bandhan: ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋಗೆ ಭಾರೀ ಮೆಚ್ಚುಗೆ
ಸಿಪಿಐ(ಎಂ) ಮತ್ತು ಬಿಜೆಪಿ ತೀವ್ರ ಖಂಡನೆ: ಎಡಪಕ್ಷದ (CPI-M) ಹಿರಿಯ ನಾಯಕಿ ಪಿ.ಕೆ. ಶ್ರೀಮತಿ ಹಾಗೂ ಕೆ.ಕೆ. ಶೈಲಜಾ ಈ ಹೇಳಿಕೆಯನ್ನು ಮಧ್ಯಕಾಲೀನ ಊಳಿಗಮಾನ್ಯ ಮನಸ್ಥಿತಿ ಎಂದು ಕರೆದು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, “ಮಹಿಳೆಯರಿಗೆ ಸಂವಿಧಾನಬದ್ಧ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕಿದೆ, ಧರ್ಮಗುರುಗಳ ಆದೇಶಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ಗೆ ಇಕ್ಕಟ್ಟು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಲ್ಲಿ ಪುರುಷಾಧಿಪತ್ಯ ಸಮಾಜವನ್ನು ಕೊನೆಗಾಣಿಸಬೇಕು ಎಂದು ಕರೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಕೇರಳದಲ್ಲಿ ಅಲ್ಪಸಂಖ್ಯಾತ ಸಮುದಾಯವು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಪ್ರಮುಖ ಮತಬ್ಯಾಂಕ್ ಆಗಿರುವುದರಿಂದ ಕಾಂಗ್ರೆಸ್ ಪಕ್ಷವು ಯಾವ ನಿಲುವು ತಾಳುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಹಿಂದಿನ ವಿವಾದಗಳು: ಕಾಂತಪುರಂ ಅಬೂಬಕರ್ ಈ ಹಿಂದೆಯೂ ಲಿಂಗ ಸಮಾನತೆಯು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಮತ್ತು ಸಿಎಎ (CAA) ಪ್ರತಿಭಟನೆಯಲ್ಲಿ ಮಹಿಳೆಯರು ರಸ್ತೆಗಿಳಿದು ಘೋಷಣೆ ಕೂಗಬಾರದು ಎಂದು ಹೇಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಮಹಿಳಾ ಹಕ್ಕುಗಳು ಹಾಗೂ ಸಂವಿಧಾನ: ಭಾರತದ ಸಂವಿಧಾನದ 14 ಮತ್ತು 21ನೇ ವಿಧಿಯು ಮಹಿಳೆಯರಿಗೆ ಸಮಾನತೆ, ಸಂಚಾರ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿದೆ. ಇಂತಹ ಸಂದರ್ಭದಲ್ಲಿ ಧರ್ಮಗುರುಗಳ ಇಂತಹ ಹೇಳಿಕೆಗಳು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಪ್ರಗತಿಪರ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




