Rahul Gandhi: ಅಸ್ಸಾಂನಲ್ಲಿ ನಿರಾಶ್ರಿತ ಮಣಿಪುರ ನಿವಾಸಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಲ್ಚಾರ್ ವಿಮಾನ ನಿಲ್ದಾಣವನ್ನು ತಲುಪಿದ ರಾಹುಲ್ ಗಾಂಧಿ ತಲೈನಲ್ಲಿನ ಪರಿಹಾರ ಶಿಬಿರದಲ್ಲಿ ತಂಗಿರುವ ಜನರನ್ನು ಭೇಟಿ ಮಾಡಲು ಕ್ಯಾಚಾರ್‌ನ ಲಖಿಪುರದ ಹ್ಮಾರ್‌ಖಾವ್ಲಿಯನ್ ಪ್ರದೇಶಕ್ಕೆ ತೆರಳಿದರು. ತಮ್ಮ ಭೇಟಿಯ ವೇಳೆ ಅಲ್ಲಿ ನೆಲೆಸಿದ್ದ ಜನರೊಂದಿಗೆ ಮಾತನಾಡಿದ ರಾಹುಲ್ ಅವರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

Rahul Gandhi: ಅಸ್ಸಾಂನಲ್ಲಿ ನಿರಾಶ್ರಿತ ಮಣಿಪುರ ನಿವಾಸಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
|

Updated on:Jul 08, 2024 | 12:47 PM

ದೆಹಲಿ ಜುಲೈ 08: ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸೋಮವಾರ ಮಣಿಪುರದ (Manipur) ಜಿರಿಬಾಮ್ ಜಿಲ್ಲೆಯಿಂದ ಅಸ್ಸಾಂನಲ್ಲಿ (Assam) ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಲ್ಚಾರ್ ವಿಮಾನ ನಿಲ್ದಾಣವನ್ನು ತಲುಪಿದ ರಾಹುಲ್ ಗಾಂಧಿ ತಲೈನಲ್ಲಿನ ಪರಿಹಾರ ಶಿಬಿರದಲ್ಲಿ ತಂಗಿರುವ ಜನರನ್ನು ಭೇಟಿ ಮಾಡಲು ಕ್ಯಾಚಾರ್‌ನ ಲಖಿಪುರದ ಹ್ಮಾರ್‌ಖಾವ್ಲಿಯನ್ ಪ್ರದೇಶಕ್ಕೆ ತೆರಳಿದರು. ತಮ್ಮ ಭೇಟಿಯ ವೇಳೆ ಅಲ್ಲಿ ನೆಲೆಸಿದ್ದ ಜನರೊಂದಿಗೆ ಮಾತನಾಡಿದ ರಾಹುಲ್ ಅವರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

ಸ್ಥಳಾಂತರಗೊಂಡ ಜನರು ತಮ್ಮ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ಗಾಂಧಿಯವರಿಗೆ ಜ್ಞಾಪಕ ಪತ್ರವನ್ನೂ ಸಲ್ಲಿಸಿದರು. ಮಣಿಪುರದ ಜಿರಿಬಾಮ್‌ನ ಸುಮಾರು 1,700 ನಿವಾಸಿಗಳು ಕಳೆದ ತಿಂಗಳು ಜನಾಂಗೀಯ ಘರ್ಷಣೆಯಿಂದ ಪೀಡಿತ ರಾಜ್ಯದಲ್ಲಿ ಹಿಂಸಾಚಾರದ ಹೊಸ ಉಲ್ಬಣಗೊಂಡ ನಂತರ ನೆರೆಯ ಅಸ್ಸಾಂಗೆ ಪ್ರವೇಶಿಸಿದ್ದರು.

ರಾಹುಲ್ ಗಾಂಧಿ ಟ್ವೀಟ್

ಪರಿಹಾರ ಶಿಬಿರಕ್ಕೆ ತಮ್ಮ ಪ್ರವಾಸದ ನಂತರ, ರಾಹುಲ್ ಗಾಂಧಿಯವರು ರಸ್ತೆಯ ಮೂಲಕ ಮಣಿಪುರದ ಜಿರಿಬಾಮ್‌ಗೆ ಪ್ರಯಾಣಿಸುತ್ತಾರೆ, ಅಲ್ಲಿ ಅವರು ಜಿರಿಬಾಮ್ ಹೈಯರ್ ಸೆಕೆಂಡರಿ ಶಾಲೆಯಲ್ಲಿನ ಪರಿಹಾರ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸಿಲ್ಚಾರ್ ಗೆ ಹಿಂತಿರುಗಿ ವಿಶೇಷ ವಿಮಾನದಲ್ಲಿ ಮಣಿಪುರ ರಾಜಧಾನಿ ಇಂಫಾಲಕ್ಕೆ ತೆರಳಲಿದ್ದಾರೆ.

ಇಂಫಾಲ್ ತಲುಪಿದ ನಂತರ, ಅವರು ರಸ್ತೆ ಮೂಲಕ ಚುರಾಚಂದ್‌ಪುರ ಜಿಲ್ಲೆಗೆ ಪ್ರಯಾಣಿಸಲಿದ್ದು ಟುಯುಬಾಂಗ್‌ನಲ್ಲಿರುವ ಮಂಡಪ್‌ನಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ: ನಮ್ಮೊಂದಿಗೆ ಗೆಳೆತನ ಇಟ್ಟುಕೊಂಡರೆ ಪಾಕಿಸ್ತಾನದ ಪ್ರಗತಿ, ಹಗೆತನವಿದ್ದರೆ ಇದೇ ದುಸ್ಥಿತಿ: ಫಾರೂಕ್ ಅಬ್ದುಲ್ಲಾ

ಮರುದಿನ ಅವರು ರಸ್ತೆಯ ಮೂಲಕ ಮೈತಿ ಪ್ರಾಬಲ್ಯದ ಮೊಯಿರಾಂಗ್‌ಗೆ ಪ್ರಯಾಣಿಸಲಿದ್ದು ಫುಬಾಲಾ ಹೈಸ್ಕೂಲ್‌ನಲ್ಲಿರುವ ಮತ್ತೊಂದು ಪರಿಹಾರ ಶಿಬಿರಕ್ಕೆ ಭೇಟಿ ನೀಡುತ್ತಾರೆ. ಇಂಫಾಲಕ್ಕೆ ತೆರಳಲಿರುವ ಗಾಂಧಿ ಅಲ್ಲಿ ರಾಜಭವನದಲ್ಲಿ ರಾಜ್ಯಪಾಲ ಅನುಸೂಯಾ ಉಯಿಕೆ ಅವರನ್ನು ಭೇಟಿಯಾಗಲಿದ್ದಾರೆ.

ರಾಹುಲ್ ಅವರ ಭೇಟಿ ರಾಜಕೀಯವಲ್ಲ

ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮಣಿಪುರದ ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್  “ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ನಂತರ ರಾಹುಲ್ ಅವರದ್ದು ಮಣಿಪುರಕ್ಕೆ ಮೊದಲ ಅಧಿಕೃತ ಭೇಟಿಯಾಗಿದೆ. ಅವರು ಹಾಥರಸ್ ಮತ್ತು ಅಹಮದಾಬಾದ್‌ಗೆ ಭೇಟಿ ನೀಡಿದ್ದಾರೆ. ಮಣಿಪುರವು ಭಾರತದ ಒಂದು ಭಾಗವಾಗಿದೆ ಎಂದು ನಾವು ತೋರಿಸಲು ಬಯಸುತ್ತೇವೆ… ರಾಹುಲ್ ಜಿ ಅವರ ಭೇಟಿ ರಾಜಕೀಯವಲ್ಲ,ಅವರು ಮಣಿಪುರದ ಜನರ ನೋವನ್ನು ಹಂಚಿಕೊಳ್ಳುವುದಕ್ಕಾಗಿ  ಬಂದಿದ್ದಾರೆ. ಪ್ರೀತಿಯ ಸಂದೇಶದೊಂದಿಗೆ ಅವರು ಅಲ್ಲಿಗೆ ಹೋಗುತ್ತಿದ್ದಾರೆ. ದ್ವೇಷ ಇರುವ ಕಡೆ ಪ್ರೀತಿಯಿಂದ ಹೋಗುತ್ತಾನೆ. ಹಿಂಸಾಚಾರ ಆರಂಭವಾದಾಗಿನಿಂದ ರಾಹುಲ್ ಗಾಂಧಿ ಮೂರನೇ ಬಾರಿಗೆ ಅಲ್ಲಿಗೆ ಹೋಗಿರುವುದನ್ನು ನೋಡಿದ ನಂತರ ಪ್ರಧಾನಿಯೂ ಅಲ್ಲಿಗೆ ಹೋಗುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಮಣಿಪುರ ಬಿಕ್ಕಟ್ಟಿನ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Mon, 8 July 24