ಪ್ರಧಾನಿ ಮೋದಿ ಪೋಸ್ಟ್​ಗೆ ನಿರ್ಬಂಧ; ಅಲ್ಗಾರಿದಮ್‌ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್

ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಪೋಸ್ಟ್ ಅನ್ನು ನಿರ್ಬಂಧಿಸಿದ್ದ ಮೆಟಾ (Meta) ಸಂಸ್ಥೆಯ ಜಾಗತಿಕ ತಂಡಕ್ಕೆ ಭಾರತ ಸರ್ಕಾರ ಸಮನ್ಸ್ ನೀಡಿದೆ. ಮುಂದಿನ ವಾರ ದೆಹಲಿಗೆ ಆಗಮಿಸಲಿರುವ ಮೆಟಾ ತಂಡವನ್ನು ಅಲ್ಗಾರಿದಮ್‌ಗಳ ತಾರತಮ್ಯ ಹಾಗೂ ಸಾರ್ವಜನಿಕ ಸುವ್ಯವಸ್ಥೆಯಲ್ಲಿ ಅವರ ಪಾತ್ರದ ಕುರಿತು ವಿಚಾರಣೆ ನಡೆಸಲಾಗುವುದು. ಮೆಟಾ ತಾಂತ್ರಿಕ ದೋಷದ ಕಾರಣ ನೀಡಿ ಭಾರತ ಸರ್ಕಾರಕ್ಕೆ ಕ್ಷಮಾಪಣೆ ಕೋರಿತ್ತು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಮನ್ಸ್ ನೀಡಿದೆ. ಸಂಸದೀಯ ಸಮಿತಿಯ ಮುಂದೆಯೂ ಮೆಟಾ ಪ್ರತಿನಿಧಿಗಳು ಹಾಜರಾಗಲಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​ಗೆ ನಿರ್ಬಂಧ; ಅಲ್ಗಾರಿದಮ್‌ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್
Meta
Image Credit source: Getty Image

Updated on: Jul 31, 2026 | 8:14 PM

ನವದೆಹಲಿ, ಜುಲೈ 31: ಸಾಮಾಜಿಕ ಜಾಲತಾಣ ಸಂಸ್ಥೆಯಾದ ಮೆಟಾ (Meta) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಫೇಸ್‌ಬುಕ್ ಪೋಸ್ಟ್ ಅನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಮನ್ಸ್ ನೀಡಿದ್ದು, ಮೆಟಾದ ಜಾಗತಿಕ ತಂಡವನ್ನು ಅಲ್ಗಾರಿದಮ್ ಪಕ್ಷಪಾತ ಹಾಗೂ ಸಾರ್ವಜನಿಕ ಸುವ್ಯವಸ್ಥೆಯಲ್ಲಿ ಅವರ ಪಾತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಪೋಸ್ಟ್ ಅನ್ನು ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೆಟಾಗೆ ಸಂಸದೀಯ ಸಮಿತಿಯೂ ಸಮನ್ಸ್ ನೀಡಿದ್ದು, ಹೈದರಾಬಾದ್‌ನಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥರ ವಿರುದ್ಧ ಸೈಬರ್ ದೂರು ಕೂಡ ದಾಖಲಾಗಿದೆ. ಮೆಟಾದ ಜಾಗತಿಕ ತಂಡವು ಮುಂದಿನ ವಾರದ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಮೆಟಾ ಅಲ್ಗಾರಿದಮ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅಲ್ಗಾರಿದಮ್‌ನಲ್ಲಿ ಪಕ್ಷಪಾತ ಇದೆಯೇ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಕಂಪನಿಯ ಪಾತ್ರವೇನು ಎಂಬುದರ ಕುರಿತು ಮೆಟಾದ ಜಾಗತಿಕ ತಂಡದಿಂದ ಖಚಿತವಾದ ಸ್ಪಷ್ಟೀಕರಣವನ್ನು ಸರ್ಕಾರ ಕೋರಲಿದೆ. ಜೊತೆಗೆ ಈ ತಂಡವು ಸಂಸದೀಯ ಸಮಿತಿಯ ಮುಂದೆಯೂ ಹಾಜರಾಗಲಿದೆ.

ಪ್ರಧಾನಿ ಮೋದಿ ಪೋಸ್ಟ್ ನಿರ್ಬಂಧದ ಹಿನ್ನೆಲೆ:

ಭಾರತದ ಯುವಜನತೆಯನ್ನು ಉದ್ದೇಶಿಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಸ್ವಲ್ಪ ಸಮಯದವರೆಗೆ ನಿರ್ಬಂಧಿಸಲಾಗಿತ್ತು. ಈ ಘಟನೆಯ ನಂತರ ಕೇಂದ್ರ ಸರ್ಕಾರವು ಮೆಟಾದ ಹಿರಿಯ ಅಧಿಕಾರಿಗೆ ಸಮನ್ಸ್ ನೀಡಿದ್ದರಿಂದ ಈ ಬೆಳವಣಿಗೆಯೂ ತೀವ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ

ಅಮೆರಿಕ ಮೂಲದ ಈ ಸೋಶಿಯಲ್ ಮೀಡಿಯಾ ಸಂಸ್ಥೆ ಈ ಘಟನೆಯು ತಾಂತ್ರಿಕ ದೋಷದಿಂದ (Technical glitch) ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿತ್ತು. ಆದರೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾದ ಈ ಸ್ಪಷ್ಟನೆಯನ್ನು ಅಪೂರ್ಣ ಮತ್ತು ಅಸಮರ್ಪಕ ಎಂದು ತಳ್ಳಿಹಾಕಿತ್ತು.

ಈ ವಿವಾದದ ಬೆನ್ನಲ್ಲೇ ಮೆಟಾ ಸಂಸ್ಥೆಯು ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪ್ರಧಾನಮಂತ್ರಿಯವರು ಹಾಗೂ ದೇಶದ ಕೆಲವು ಪ್ರಮುಖ ವ್ಯಕ್ತಿಗಳ ಖಾತೆಗಳಿಂದ ಪೋಸ್ಟ್ ಆಗುವ ವಿಷಯಗಳ ಮೇಲೆ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 5,000 ಕೋಟಿ ವೆಚ್ಚದ ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ

ಪ್ರಧಾನಿ ಮೋದಿ ಹಾಗೂ ಇತರ ಪ್ರಮುಖ ಖಾತೆಗಳ ಪೋಸ್ಟ್‌ಗಳ ಸುರಕ್ಷತೆಗಾಗಿ ಜಾರಿಗೆ ತರಲಾದ ಬಿಗಿಯಾದ ಹಾಗೂ ಹೆಚ್ಚುವರಿ ಸುರಕ್ಷತಾ ಕ್ರಮಗಳ ವಿವರಗಳನ್ನು ಮೆಟಾ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.

ಹೈದರಾಬಾದ್‌ನಲ್ಲಿ ಕೇಸ್ ದಾಖಲು:

ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಎಐ ತಂತ್ರಜ್ಞಾನದಿಂದ ರೂಪಿಸಲಾದ ಹಾಗೂ ತಿರುಚಲಾದ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಕ್ಕಾಗಿ ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನ ಕೆಲವು ಖಾತೆಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರವು ಈ ಕೆಳಗಿನ ಪ್ರಮುಖ ಅಂಶಗಳ ಕುರಿತು ಮೆಟಾದಿಂದ ಉತ್ತರಗಳನ್ನು ಕೋರುವ ಸಾಧ್ಯತೆಯಿದೆ.

  • ರಾಜಕೀಯ ಪೋಸ್ಟ್‌ಗಳನ್ನು ಹೇಗೆ ಪರಿಶೀಲಿಸಲಾಗುತ್ತದೆ?
  • ಸ್ವಯಂಚಾಲಿತ ವ್ಯವಸ್ಥೆಗಳು (Automated systems) ಯಾವುದೇ ರೀತಿಯ ತಾರತಮ್ಯ ತೋರಿಸುತ್ತವೆಯೇ?
  • ತಪ್ಪಾಗಿ ವಿಧಿಸಲಾದ ನಿರ್ಬಂಧಗಳನ್ನು ಹೇಗೆ ಹಿಂಪಡೆಯಲಾಗುತ್ತದೆ?
  • ಸಾರ್ವಜನಿಕ ಪ್ರತಿಭಟನೆಗಳು ಮತ್ತು ಗಲಭೆಗಳ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳು ಹೇಗೆ ವ್ಯವಹರಿಸುತ್ತವೆ?
  • ನಿಯಮಗಳನ್ನು ಉಲ್ಲಂಘಿಸಿದಾಗ ಹೊಣೆಗಾರಿಕೆಯನ್ನು ಹೇಗೆ ನಿಗದಿಪಡಿಸಲಾಗುತ್ತದೆ?

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us