AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧಾರ; ಅಮಿತ್ ಶಾ ಘೋಷಣೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನೂತನ ಪೀಠವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಈ ನಿರ್ಧಾರವು ಲಡಾಖ್‌ನ ಸುದೂರ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ಕಾನೂನು ಸೇವೆಗಳನ್ನು ಪಡೆಯಲು ತಗುಲುತ್ತಿದ್ದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ನ್ಯಾಯಾಂಗ ವ್ಯವಸ್ಥೆಯ ಪ್ರವೇಶವನ್ನು ಸುಲಭಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ. ಲಡಾಖ್‌ನಂತಹ ಭೌಗೋಳಿಕವಾಗಿ ಸವಾಲಿನ ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನ್ಯಾಯ ಸಮ್ಮತ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡುವುದು ಕೇಂದ್ರ ಸರ್ಕಾರದ ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.

ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧಾರ; ಅಮಿತ್ ಶಾ ಘೋಷಣೆ
Amit Shah Image Credit source: PTI
ಸುಷ್ಮಾ ಚಕ್ರೆ
|

Updated on: Aug 20, 2026 | 8:58 PM

Share

ನವದೆಹಲಿ, ಆಗಸ್ಟ್ 20: ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಜನರಿಗೆ ಮತ್ತಷ್ಟು ಸುಲಭವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir) ಹೈಕೋರ್ಟ್‌ನ ನೂತನ ಪೀಠವನ್ನು ಸ್ಥಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​​ ಖಾತೆಯಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ.

ಲಡಾಖ್‌ನಂತಹ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ನ್ಯಾಯಾಂಗ ಸೇವೆಯನ್ನು ಪಡೆಯಲು ವ್ಯಯಿಸುತ್ತಿದ್ದ ಸಮಯ ಮತ್ತು ಅಂತರವನ್ನು ಈ ನಿರ್ಧಾರವು ಗಣನೀಯವಾಗಿ ಕಡಿಮೆ ಮಾಡಲಿದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಶ್ರೀನಗರ ಹಾಗೂ ಜಮ್ಮುನಲ್ಲಿ 2 ಪೀಠಗಳನ್ನು ಹೊಂದಿದೆ. ಲಡಾಖ್‌ನಲ್ಲಿ ಸ್ಥಾಪನೆಯಾಗಲಿರುವ ಈ ಪೀಠವು ಹೈಕೋರ್ಟ್‌ನ ಮೂರನೇ ಪೀಠವಾಗಲಿದೆ.

ಇದನ್ನೂ ಓದಿ: ‘ಜಮ್ಮು ಕಾಶ್ಮೀರ ಭಾರತದ ಮುಖ್ಯ ಭಾಗ’; ಐತಿಹಾಸಿಕ ಭೇಟಿ ವೇಳೆ ಅಮೆರಿಕ ರಾಯಭಾರಿ ಸೆರ್ಗಿಯೋ ಮಹತ್ವದ ಹೇಳಿಕೆ

ಲಡಾಖ್‌ನಲ್ಲಿ ಹೈಕೋರ್ಟ್ ಪೀಠ ಏಕೆ ಮಹತ್ವದ್ದು?:

ಲಡಾಖ್ ವಿಶಾಲವಾದ ಹಾಗೂ ಪರ್ವತಮಯ ಕೇಂದ್ರಾಡಳಿತ ಪ್ರದೇಶವಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಲು ಅಥವಾ ಕಾನೂನು ನೆರವು ಪಡೆಯಲು ಬಯಸುವ ಜನರಿಗೆ ದೀರ್ಘ ದೂರ ಪ್ರಯಾಣಿಸುವುದು ಅತ್ಯಂತ ಕಷ್ಟಕರವಾಗಿತ್ತು. ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಜಂಟಿ ಹೈಕೋರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಾಂಗ ಇಲಾಖೆಯು ಜಮ್ಮು ಮತ್ತು ಶ್ರೀನಗರವನ್ನು ಹೈಕೋರ್ಟ್‌ನ ಮುಖ್ಯ ಪೀಠಗಳಾಗಿ ಪಟ್ಟಿ ಮಾಡಿದೆ. ಕೇಂದ್ರ ಸರ್ಕಾರದ ಈ ನೂತನ ನಿರ್ಧಾರದೊಂದಿಗೆ ಲಡಾಖ್‌ನಲ್ಲಿ ಸ್ಥಾಪನೆಯಾಗಲಿರುವ ಪೀಠವು, ಹೈಕೋರ್ಟ್ ವಿಷಯಗಳಿಗಾಗಿ ನಿವಾಸಿಗಳು ಕೇಂದ್ರಾಡಳಿತ ಪ್ರದೇಶದಿಂದ ಹೊರಗೆ ಪ್ರಯಾಣಿಸುವ ಅಗತ್ಯವನ್ನು ತಪ್ಪಿಸಲಿದೆ.

ಸಾಂವಿಧಾನಿಕ ಭದ್ರತೆಗೆ ಆದ್ಯತೆ:

ಲಡಾಖ್‌ನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಲ್ಲಿನ ಜನರಿಗೆ ಸಾಂವಿಧಾನಿಕ ಭದ್ರತೆ ಮತ್ತು ಹಕ್ಕುಗಳನ್ನು ಒದಗಿಸಲು ಪ್ರಧಾನಿ ಮೋದಿ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದುವರೆಗೆ ಲಡಾಖ್‌ ಪ್ರಾಂತ್ಯದ ಕಕ್ಷಿದಾರರು ತಮ್ಮ ಕಾನೂನು ವಿಚಾರಗಳಿಗಾಗಿ ಶ್ರೀನಗರ ಅಥವಾ ಜಮ್ಮು ಪೀಠಗಳನ್ನೇ ಅವಲಂಬಿಸಬೇಕಾಗಿತ್ತು. ಈ ನೂತನ ಹೈಕೋರ್ಟ್ ಪೀಠದ ಸ್ಥಾಪನೆಯಿಂದಾಗಿ ಲೇಹ್ ಮತ್ತು ಕಾರ್ಗಿಲ್ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಹೈಕೋರ್ಟ್ ಸೇವೆಗಳು ದೊರೆಯಲಿವೆ.

ಇದನ್ನೂ ಓದಿ: ‘ಜಮ್ಮು ಕಾಶ್ಮೀರ ಭಾರತದ ಪ್ರಮುಖ ಭಾಗ’ ಎಂದ ಅಮೆರಿಕಕ್ಕೆ ಪಾಕಿಸ್ತಾನದಿಂದ ಸಮನ್ಸ್!

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್‌ಸಂಘಟಿಸಿದ ನಂತರ, ಅಕ್ಟೋಬರ್ 31, 2019 ರಂದು ಲಡಾಖ್ ಕೇಂದ್ರಾಡಳಿತ ಪ್ರದೇಶವಾಯಿತು. ಈ ಪುನರ್‌ಸಂಘಟನೆಯಿಂದಾಗಿ ಅಸ್ತಿತ್ವದಲ್ಲಿದ್ದ ಹೈಕೋರ್ಟ್ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗೆ ಜಂಟಿ ಹೈಕೋರ್ಟ್ ಆಗಿ ಮಾರ್ಪಟ್ಟಿತು. ಇಲ್ಲಿಯವರೆಗೆ ಲಡಾಖ್‌ಗೆ ಪ್ರತ್ಯೇಕ ಹೈಕೋರ್ಟ್ ಇರಲಿಲ್ಲ. ಕೇಂದ್ರದ ಈ ಇತ್ತೀಚಿನ ಕ್ರಮವು ಪ್ರತ್ಯೇಕ ಹೈಕೋರ್ಟ್ ರಚಿಸುವ ಬದಲು ಕೇಂದ್ರಾಡಳಿತ ಪ್ರದೇಶದ ಒಳಗಡೆಯೇ ನ್ಯಾಯಾಂಗ ಸೌಲಭ್ಯವನ್ನು ಬಲಪಡಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us