ಆಗಸದಲ್ಲೇ ಸಿಲುಕಿದ ಮುಂಗಾರು ಎಕ್ಸ್ಪ್ರೆಸ್, ದೇಶಾದ್ಯಂತ ಸಾಮಾನ್ಯಕ್ಕಿಂತ ಶೇ.28ರಷ್ಟು ಕಡಿಯಾದ ಮಳೆ, ಜೂ. 20ರ ನಂತರ ಭಾರಿ ಮಳೆ
Monsoon Rain 2026: ದೇಶಾದ್ಯಂತ ಮುಂಗಾರು ಮಳೆ ಸಾಮಾನ್ಯಕ್ಕಿಂತ ಶೇ. 28ರಷ್ಟು ಕಡಿಮೆಯಾಗಿದೆ. ವಾತಾವರಣದಲ್ಲಿ ಅಸಾಮಾನ್ಯ ಗಾಳಿಯ ಸೆಳೆತದಿಂದ ಮೋಡಗಳ ಮುನ್ನಡೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ, ಜೂನ್ 20ರ ನಂತರ ಮುಂಗಾರು ತನ್ನ ಪೂರ್ಣ ವೇಗವನ್ನು ಪಡೆದುಕೊಳ್ಳಲಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ಜಲಮೂಲಗಳನ್ನು ತುಂಬಲಿದೆ.

ನವದೆಹಲಿ, ಜೂನ್ 15: ಧರಗೆ ಧಾರಾಕಾರವಾಗಿ ಮಳೆ ತರಬೇಕಿದ್ದ ಮುಂಗಾರು(Monsoon) ಎಕ್ಸ್ಪ್ರೆಸ್ ಆಗಸದಲ್ಲೇ ನಿಂತುಬಿಟ್ಟಿದೆ. ತೀವ್ರ ಬೇಸಿಗೆಯಿಂದ ಕಂಗಾಲಾಗಿದ್ದ ಭಾರತಕ್ಕೆ ಕಳೆದ ಒಂದು ವಾರದಿಂದ ಮಳೆ ಸ್ವಲ್ಪ ಮುದ ನೀಡಿದೆ. ಆದರೂ ಕೂಡ ಜೂನ್ ಮೊದಲ ಎರಡು ವಾರಗಳಲ್ಲಿ (ಜೂನ್ 4 ರಿಂದ ಜೂನ್ 14) ದೇಶಾದ್ಯಂತ ಮಳೆ ಸಾಮಾನ್ಯಕ್ಕಿಂತ ಶೇ. 28 ರಷ್ಟು ಕಡಿಮೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಈ ಅವಧಿಯಲ್ಲಿ ದೇಶದಲ್ಲಿ ಸರಾಸರಿ 47.7 ಮಿಮೀ ಮಳೆಯಾಗಬೇಕಿತ್ತು, ಆದರೆ ವಾಸ್ತವದಲ್ಲಿ 34.3 ಮಿಮೀ ದಾಖಲಾಗಿದೆ. ವಿಜ್ಞಾನಿಗಳ ಪ್ರಕಾರ, ಸಾಗರದಲ್ಲಿ ತೇವಾಂಶದ ಕೊರತೆಯೇನೂ ಇಲ್ಲ. ಬದಲಿಗೆ, ಮೇಲಿನ ವಾತಾವರಣದಲ್ಲಿ ಉಂಟಾಗಿರುವ ಅಸಾಮಾನ್ಯ ಗಾಳಿಯ ಸೆಳೆತವು ಮೋಡಗಳ ಮುನ್ನಡೆಯನ್ನು ತಾತ್ಕಾಲಿಕವಾಗಿ ತಡೆದಿದೆ.
ಜೂನ್ 20 ರ ನಂತರ ಕಳೆದುಹೋದ ವೇಗ ಪಡೆದುಕೊಳ್ಳಲಿರುವ ಮುಂಗಾರು ಮೇ ತಿಂಗಳ ದೀರ್ಘಾವಧಿ ಮುನ್ಸೂಚನೆಗಳಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಊಹಿಸಲಾಗಿತ್ತು, ಆದರೆ ಮಳೆ ಕಡಿಮೆಯಾಗಿತ್ತು, ಸಮುದ್ರದಲ್ಲಿರುವ ಸಕಾರಾತ್ಮಕ ಪರಿಸ್ಥಿತಿಗಳು ಇಂದಿಗೂ ಹಾಗೇ ಇರುವುದರಿಂದ, ಸದ್ಯ ಎದುರಾಗಿರುವ ವಾತಾವರಣದ ಅಡಚಣೆ ಶೀಘ್ರದಲ್ಲೇ ದೂರವಾಗಲಿದೆ ಎಂದು ಹವಾಮಾನ ಮುನ್ಸೂಚಕರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಜೂನ್ 20ರಿಂದ ಮುಂಗಾರು ಕಳೆದುಹೋದ ತನ್ನ ಸಂಪೂರ್ಣ ಆವೇಗವನ್ನು ಪುನಃ ಪಡೆದುಕೊಳ್ಳಲಿದೆ. ಹವಾಮಾನ ಇಲಾಖೆಯ ವಿಜ್ಞಾನಿಗಳು ವಾತಾವರಣದ ಪ್ರಸ್ತುತ ಬದಲಾವಣೆಗಳನ್ನು ಜಾಗರೂಕತೆಯಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜೂನ್ ದ್ವಿತೀಯಾರ್ಧದಲ್ಲಿ ಪ್ರಕೃತಿಯು ಮರುಸೃಷ್ಟಿಸಲಿರುವ ಈ ಸಕಾರಾತ್ಮಕ ಬದಲಾವಣೆಯು ಕೃಷಿ ಚಟುವಟಿಕೆಗಳಿಗೆ ಭಾರಿ ವೇಗವನ್ನು ನೀಡಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಜಲಮೂಲಗಳು ತುಂಬಿ ತುಳುಕಲಿವೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಮತ್ತು ಮಧ್ಯ ಭಾರತದ ಕೆಲವು ಭಾಗಗಳಿಗೆ ಮಾನ್ಸೂನ್ ಮತ್ತಷ್ಟು ಪ್ರವೇಶಿಸುತ್ತಿದ್ದರೂ ಸಹ ಈ ನಿಧಾನಗತಿ ಕಂಡುಬಂದಿದೆ.
ಮತ್ತಷ್ಟು ಓದಿ: ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
ಕರ್ನಾಟಕದಲ್ಲಿ ಮಳೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ. ಬೆಂಗಳೂರು, ಬ್ರಹ್ಮಾವರ, ಕುಂದಾಪುರ, ಗೇರುಸೊಪ್ಪ, ಗೋಕರ್ಣ, ಕಾರವಾರ, ಕೋಟಾ, ಮಾನ್ವಿ, ಆಗುಂಬೆ, ಚಿಕ್ಕನಹಳ್ಳಿಮ ಕುಡತಿನಿ, ರಾಯಚೂರು, ಸೈದಾಪುರ, ಪರಶುರಾಂಪುರ, ಗುರುಮಿಟ್ಕಲ್, ಅಂಕೋಲಾ, ಮಾಣಿ, ಮುನೀರಾಬಾದ್, ಸೋಮವಾರಪೇಟೆಯಲ್ಲಿ ಮಳೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Mon, 15 June 26




