AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surname: ಮಗುವಿನ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೂ ಇದೆ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಮಗುವನ್ನು ಹೊಸದೊಂದು ಕುಟುಂಬಕ್ಕೆ ಸೇರ್ಪಡೆಗೊಳಿಸುವ, ದತ್ತು ನೀಡುವ ಹಕ್ಕು ಸಹ ತಾಯಿಗೆ ಇದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

Surname: ಮಗುವಿನ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೂ ಇದೆ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 29, 2022 | 11:06 AM

Share

ದೆಹಲಿ: ಮಗುವಿನ ಏಕೈಕ ನೈಸರ್ಗಿಕ ಪೋಷಕಿಯಾಗಿರುವ ತಾಯಿಗೆ ತನ್ನ ಕಂದನ ಉಪನಾಮ (ಕುಟುಂಬದ ಅಥವಾ ತಂದೆಯ ಹೆಸರು – Surname) ಯಾವುದು ಇರಬೇಕು ಎಂದು ನಿರ್ಧರಿಸುವ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ (Supreme Court of India) ಗುರುವಾರ ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಮಗುವನ್ನು ಹೊಸದೊಂದು ಕುಟುಂಬಕ್ಕೆ ಸೇರ್ಪಡೆಗೊಳಿಸುವ, ದತ್ತು ನೀಡುವ ಹಕ್ಕು ಸಹ ತಾಯಿಗೆ ಇದೆ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಗೀತಾ ಹರಿಹರನ್ ಇತರರು VS ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತರರು (Githa Hariharan and Ors. vs. Reserve Bank of India and others) ಪ್ರಕರಣವನ್ನು ಇತ್ಯರ್ಥಪಡಿಸಿದ ನ್ಯಾಯಪೀಠವು, ತಂದೆಗೆ ಇರುವ ಎಲ್ಲ ಸ್ಥಾನಮಾನಗಳು ತಾಯಿಗೂ ಇದೆ ಎಂದು ಸ್ಪಷ್ಟಪಡಿಸಿತು. ‘ಹಿಂದೂ ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ದತ್ತು ಕಾಯ್ದೆ, 1956’ರ (Hindu Minority and Adoption Act, 1956) ನಿಯಮಗಳನ್ನು ಮತ್ತೊಮ್ಮೆ ನ್ಯಾಯಮೂರ್ತಿಗಳು ವಿವರಿಸಿದರು.

ನ್ಯಾಯಪೀಠದ ಪರವಾಗಿ ತೀರ್ಪು ಬರೆದಿರುವ ನ್ಯಾಯಮೂರ್ತಿ ಮುರಾರಿ, ‘ಮೊದಲ ಪತಿ ನಿಧನದ ನಂತರ, ಮಗುವಿನ ನೈಸರ್ಗಿಕ ಪಾಲಕಿ ಆಗಿರುವ ತಾಯಿಯು ಮಗುವಿನ ಉಪನಾಮ ನಿರ್ಧರಿಸುವ ಮತ್ತು ಅದನ್ನು ಹೊಸ ಕುಟುಂಬಕ್ಕೆ ಸೇರ್ಪಡೆಗೊಳಿಸುವ ಹಕ್ಕು ಪಡೆಯುತ್ತಾಳೆ ಎನ್ನುವುದನ್ನು ಗುರುತಿಸಲು ನಾವು ವಿಫಲರಾಗಿದ್ದೇವೆ’ ಎಂದು ಹೇಳಿದ್ದಾರೆ.

ಉಪನಾಮವು ಒಬ್ಬ ವ್ಯಕ್ತಿ ಯಾವ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇದನ್ನು ಕೇವಲ ಐತಿಹಾಸಿಕ, ಸಾಂಸ್ಕೃತಿಕ ಮತ್ತು ವಂಶಪಾರ್ಯದ ದೃಷ್ಟಿಯಿಂದಷ್ಟೇ ನೋಡಬಾರದು. ಸಾಮಾಜಿಕ ವಾಸ್ತವದಲ್ಲಿ ಮಗುವು ಒಂದು ನಿರ್ದಿಷ್ಟ ವಾತಾವರಣದಲ್ಲಿ ಬೆಳೆಯುತ್ತದೆ. ಇಂಥ ಸಂದರ್ಭದಲ್ಲಿ ಮಗುವಿನ ಉಪನಾಮವು ಅದಕ್ಕೆ ಕೌಟುಂಬಿಕ ಅಸ್ತಿತ್ವ ತಂದುಕೊಡುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಆಂಧ್ರ ಪ್ರದೇಶ ಹೈಕೋರ್ಟ್ 2014ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ. ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಮಹಿಳೆಯ ಪತಿ 2006ರಲ್ಲಿ ನಿಧನರಾಗಿದ್ದರು. ಆಗ ಮಗುವಿಗೆ ಕೇವಲ ಎರಡೂವರೆ ವರ್ಷವಾಗಿತ್ತು. ಈ ಮಹಿಳೆ 2007ರಲ್ಲಿ ಮರುಮದುವೆಯಾಗಿದ್ದರು.

ಆದರೆ ಮಗುವಿನ ಜೈವಿಕ ತಂದೆಯ (Biological Father) ಪೋಷಕರು ಮಗುವಿನ ಉಪನಾಮ ಬದಲಿಸಬಾರದು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್​ ಸಹ ಮಗುವಿನ ಜೈವಿಕ ತಂದೆಯ ಹೆಸರನ್ನು ದಾಖಲೆಗಳಲ್ಲಿ ಉಳಿಸಬೇಕು. ಮಹಿಳೆಯ ಎರಡನೇ ಪತಿಯ ಹೆಸರನ್ನು ಮಗುವಿನ ಹೆಸರಿನೊಂದಿಗೆ ನಮೂದಿಸಿ ಎನ್ನಬಾರದು, ದಾಖಲೆಗಳಲ್ಲಿ ಅದನ್ನು ಮಲತಂದೆ (Step Father) ಎಂದೇ ನಮೂದಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಹಿಳೆಯು ಸುಪ್ರೀಂಕೋರ್ಟ್​ಗೆ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿರುವಾಗಲೇ ಮಗುವಿನ ಮಲತಂದೆಯು ದತ್ತು ಸ್ವೀಕಾರ ನಿಯಮಗಳ ಪ್ರಕಾರ ಮಗುವನ್ನು ದತ್ತುಪಡೆದು, ಪ್ರಕ್ರಿಯೆಯನ್ನು ನೋಂದಣಿ ಸಹ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ‘ಮಕ್ಕಳ ವಿಚಾರದಲ್ಲಿ ನಾವು ಸೂಕ್ಷ್ಮವಾಗಿ ಯೋಚಿಸಬೇಕು. ಮಹಿಳೆಯ ಎರಡನೇ ಪತಿಯ ಹೆಸರನ್ನು ಮಗುವಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಮಲತಂದೆ ಎಂದು ನಮೂದಿಸುವುದು ಕ್ರೌರ್ಯ ಮತ್ತು ಮೂರ್ಖತನವಾಗುತ್ತದೆ. ಇದು ಮಗುವಿನ ಸ್ವಾಭಿಮಾನ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ದತ್ತು ಸ್ವೀಕಾರ ಪ್ರಕ್ರಿಯೆಯ ಮೂಲಕ ಒಂದು ಕುಟುಂಬಕ್ಕೆ ಸೇರ್ಪಡೆಯಾದ ಮಗು, ಆ ಕುಟುಂಬದ ಭಾಗವೇ ಆಗುತ್ತದೆ. ಹೀಗಾಗಿ ಅದರ ಉಪನಾಮವನ್ನು ಸೂಕ್ತರೀತಿಯಲ್ಲಿ ಬದಲಿಸಬಹುದು. ಮಗು ಮತ್ತು ಅದರ ನೈಸರ್ಗಿಕ ಪೋಷಕರ ಬಗ್ಗೆ ಸಮಾಜದಲ್ಲಿ ಅನಗತ್ಯ ಪ್ರಶ್ನೆಗಳು ಉದ್ಭವಿಸುವುದನ್ನು ತಡೆಯಲು ಉಪನಾಮ ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಆಂಧ್ರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದೆ. ಜೈವಿಕ ಪೋಷಕರಿಂದ ದೂರವಾದ ಮಗುವಿಗೆ ಕೌಟುಂಬಿಕ ಜೀವನ ಒದಗಿಸುವುದು ದತ್ತು ಪ್ರಕ್ರಿಯೆಯ ಮುಖ್ಯ ಉದ್ದೇಶ ಎಂದು ಅಭಿಪ್ರಾಯಪಟ್ಟಿದೆ. ಈ ಮೊದಲು ಆಂಧ್ರ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದ್ದ ಪ್ರಕರಣದಲ್ಲಿ ಮಗುವಿನ ಉಪನಾಮದ ಬಗ್ಗೆ ಯಾವುದೇ ಮನವಿ ಇರಲಿಲ್ಲ. ಆಂಧ್ರ ಹೈಕೋರ್ಟ್​ ವ್ಯಾಪ್ತಿ ಮೀರಿ ಅಭಿಪ್ರಾಯಪಡಿಸಿತ್ತು. ಅಂಥ ನಿರ್ದೇಶನಗಳನ್ನು ಅನೂರ್ಜಿತಗೊಳಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?