ಭಾರತೀಯ ಸೇನೆಯಿಂದ ಪಾಕಿಸ್ತಾನದೊಳಗೆ 100 ಕಿಮೀ ದೂರದವರೆಗೆ ಉಗ್ರರ ಶಿಬಿರಗಳ ಧ್ವಂಸ; ಆಪರೇಷನ್ ಸಿಂಧೂರ್ ಬಗ್ಗೆ ಅಮಿತ್ ಶಾ

ಭಾರತ ತನ್ನ ಮೇಲೆ ಅಷ್ಟು ಬೇಗ ದಾಳಿ ಮಾಡಬಹುದೆಂದು ಪಾಕಿಸ್ತಾನ ಊಹಿಸಿರಲಿಲ್ಲ. ನಾವು ತೆಗೆದುಕೊಂಡ ನಿರ್ಧಾರದಿಂದ ಜಗತ್ತು ಆಶ್ಚರ್ಯಚಕಿತವಾಗಿದೆ, ಪಾಕಿಸ್ತಾನ ಭಯಭೀತವಾಗಿದೆ. ಪರಮಾಣು ಬಾಂಬ್​ಗಳಿಂದ ಭಾರತವನ್ನು ಹೆದರಿಸಬಹುದು ಎಂದು ಪಾಕಿಸ್ತಾನ ಅಂದುಕೊಂಡಿತ್ತು. ಆದರೆ, ಈಗ ಪಾಕಿಸ್ತಾನವೇ ಮುಂದಾಗಿ ಕದನವಿರಾಮಕ್ಕೆ ಬೇಡಿಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತೀಯ ಸೇನೆಯಿಂದ ಪಾಕಿಸ್ತಾನದೊಳಗೆ 100 ಕಿಮೀ ದೂರದವರೆಗೆ ಉಗ್ರರ ಶಿಬಿರಗಳ ಧ್ವಂಸ; ಆಪರೇಷನ್ ಸಿಂಧೂರ್ ಬಗ್ಗೆ ಅಮಿತ್ ಶಾ
Amit Shah

Updated on: May 17, 2025 | 8:41 PM

ಗಾಂಧಿನಗರ, ಮೇ 17: ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗೆ 100 ಕಿ.ಮೀ. ದೂರದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಯನ್ನು ನಾಶಪಡಿಸಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 26 ಜನರ ಜೀವವನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಬಲವಾದ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಶ್ಲಾಘಿಸಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, 2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ನೆರೆಯ ರಾಷ್ಟ್ರ ಪಾಕಿಸ್ತಾನ ಪ್ರಾಯೋಜಿಸಿದ ಭಯೋತ್ಪಾದಕರಿಗೆ, ಅದು ಉರಿಯಾಗಿರಲಿ, ಪುಲ್ವಾಮಾ ಆಗಿರಲಿ ಅಥವಾ ಪಹಲ್ಗಾಮ್ ಆಗಿರಲಿ ಸೂಕ್ತವಾದ ಪ್ರತ್ಯುತ್ತರವನ್ನು ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ
ಬಲೂಚಿಸ್ತಾನಕ್ಕೆ ಕಾಶಿಶ್ ಚೌಧರಿ ಎಂಟ್ರಿ, ಗಡಗಡ ನಡುಗಿದ ಪಾಕ್
ಬಿಇಎಲ್​​ನ ಆಕಾಶತೀರ ಈಗ ಆಪರೇಷನ್ ಸಿಂದೂರದ ಹೀರೋ
ಉಗ್ರ ಮಸೂದ್​ ಅಜರ್​ಗೆ 14 ಕೋಟಿ ರೂ. ಪರಿಹಾರ ಕೊಡುತ್ತಾ ಪಾಕ್ ಸರ್ಕಾರ?
ಪಾಕಿಸ್ತಾನದಲ್ಲಿ ರಹಸ್ಯವಾಗಿದ್ದ ಅಮೆರಿಕದ ಅಡ್ಡೆ ಈಗ ಬಟಾಬಯಲು?


ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಪ್ರಧಾನಿ ಮೋದಿ ಭಯೋತ್ಪಾದಕ ದಾಳಿಗೆ ನೀಡಿದ ಉತ್ತರ ಜಗತ್ತನ್ನು ಬೆರಗುಗೊಳಿಸಿದೆ ಮತ್ತು ಪಾಕಿಸ್ತಾನವನ್ನು ಭಯಭೀತಗೊಳಿಸಿದೆ ಎಂದು ಒತ್ತಿ ಹೇಳಿದರು. ಪಾಕಿಸ್ತಾನದೊಳಗೆ 100 ಕಿ.ಮೀ. ದಾಳಿ ಮಾಡುವ ಮೂಲಕ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಭಯೋತ್ಪಾದಕ ಚಟುವಟಿಕೆಗಳನ್ನು ಪ್ಲಾನ್ ಮಾಡಿ ಸಿಯಾಲ್‌ಕೋಟ್ ಮತ್ತು ಇತರ ಭಯೋತ್ಪಾದಕ ಶಿಬಿರಗಳಲ್ಲಿ ಅಡಗಿಕೊಂಡಿದ್ದವರಿಗೆ ಭಾರತದ ಜನರ ವಿರುದ್ಧ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆದರೆ, ಅದರ ಪ್ರತಿಕ್ರಿಯೆ ಎರಡು ಪಟ್ಟು ಬಲವಾಗಿರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಭಾರತ ನೀಡಿದೆ ಎಂದು ಅವರು ಒತ್ತಿ ಹೇಳಿದರು.


ಇದನ್ನೂ ಓದಿ: ಉಗ್ರ ಸಂಘಟನೆಗಳು ಏಕೆ ಬೇಕು?; ಪಾಕಿಸ್ತಾನಕ್ಕೆ ತನ್ನದೇ ಮಾಜಿ ರಾಯಭಾರಿಯಿಂದ ಖಡಕ್ ಪ್ರಶ್ನೆ

“ಈ ಬಾರಿ ಆಪರೇಷನ್ ಸಿಂಧೂರ್ ಅಡಿಯಲ್ಲಿ, ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಗಳನ್ನು ನಾಶಪಡಿಸಲಾಯಿತು. ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದ್ದ ಮತ್ತು ಅವರ ಅಡಗುತಾಣಗಳಾಗಿದ್ದ 9 ಸ್ಥಳಗಳನ್ನು ನಾವು ನಾಶಪಡಿಸಿದ್ದೇವೆ. ಭಯೋತ್ಪಾದಕರನ್ನು ಮಟ್ಟ ಹಾಕಲು ನಮ್ಮ ಸೇನೆಯ ಪಾಕಿಸ್ತಾನದೊಳಗೆ 100 ಕಿ.ಮೀ. ಒಳಗೆ ನುಗ್ಗಿ ಅವರ ಶಿಬಿರಗಳನ್ನು ನಾಶಪಡಿಸಿದೆ” ಎಂದಿದ್ದಾರೆ.


ಬಾಂಬ್ ಬೆದರಿಕೆ ನಡೆಯದು:

ಪಾಕಿಸ್ತಾನದ ಪರಮಾಣು ಬೆದರಿಕೆಗಳನ್ನು ತಳ್ಳಿಹಾಕಿದ ಅಮಿತ್ ಶಾ, “ತಮ್ಮಲ್ಲಿ ಪರಮಾಣು ಬಾಂಬ್‌ಗಳಿವೆ ಎಂದು ಬೆದರಿಕೆ ಹಾಕುತ್ತಿದ್ದವರು ಅದರಿಂದ ನಾವು ಭಯಭೀತರಾಗುತ್ತೇವೆ ಎಂದು ಭಾವಿಸಿದ್ದರು. ಆದರೆ, ನಮ್ಮ ಸೇನೆ, ನೌಕಾಪಡೆ ಮತ್ತು ವಾಯುಪಡೆ ಅವರಿಗೆ ಸೂಕ್ತವಾದ ಉತ್ತರವನ್ನು ನೀಡಿವೆ. ಇಡೀ ಜಗತ್ತು ನಮ್ಮ ಮಿಲಿಟರಿಯ ತಾಳ್ಮೆ ಮತ್ತು ಪ್ರಧಾನಿ ಮೋದಿಯವರ ದೃಢನಿಶ್ಚಯದ ನಾಯಕತ್ವವನ್ನು ಹೊಗಳುತ್ತಿದೆ.” ಎಂದಿದ್ದಾರೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಾರತೀಯ ಪಡೆಗಳು ಪಾಕಿಸ್ತಾನದೊಳಗೆ 100 ಕಿ.ಮೀ. ದಾಳಿ ಮಾಡಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿವೆ ಎಂಬ ಅಂಶವನ್ನು ಅಮಿತ್ ಶಾ ಹೈಲೈಟ್ ಮಾಡಿದ್ದಾರೆ.


ಇದನ್ನೂ ಓದಿ: ಪಾಕಿಸ್ತಾನದ ಮುಖವನ್ನು ಜಗತ್ತಿನೆದುರು ಬಯಲು ಮಾಡುತ್ತೇನೆ; ಅಸಾದುದ್ದೀನ್ ಓವೈಸಿ

ಆಪರೇಷನ್ ಸಿಂಧೂರ್:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿ 26 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿತು. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ದಾಳಿಯೇ ಆಪರೇಷನ್ ಸಿಂಧೂರ್. ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದವು. ಅದರ ನಂತರ ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಡ್ರೋನ್ ದಾಳಿಗಳನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿತು. 26 ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ 10ರಂದು 8 ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ