ಆಂಧ್ರಪ್ರದೇಶದ ಪಲ್ನಾಡು ಬಳಿ ಭೀಕರ ರಸ್ತೆ ಅಪಘಾತ: ಆಟೋಗೆ ಡಿಕ್ಕಿ ಹೊಡೆದ ಖಾಸಗಿ ಬಸ್ , 7 ಮಂದಿ ದಾರುಣ ಸಾವು
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ನಾಲ್ವರು ಮಕ್ಕಳು ಸೇರಿದಂತೆ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿದ್ದು, ಬಸ್ ಅತಿಯಾದ ವೇಗದಲ್ಲಿ ಬಂದಿದ್ದೇ ಈ ದುರಂತಕ್ಕೆ ಮುಖ್ಯ ಕಾರಣ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಣಿ ಅಪಘಾತಗಳು ಹೆಚ್ಚುತ್ತಿರುವುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಕಳವಳ ಮೂಡಿಸಿದೆ.

ಪಲ್ನಾಡು, ಆಗಸ್ಟ್ 27: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಅಡ್ಡರೋಡ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ(Road Accident)ದಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಖಾಸಗಿ ಟ್ರಾವೆಲ್ಸ್ ಬಸ್ ಹಾಗೂ ಆಟೋರಿಕ್ಷಾ ಮುಖಾಮುಖಿ ಡಿಕ್ಕಿಯಾಗಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಸೇರಿದಂತೆ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ವೇಲೂರು ಗ್ರಾಮದ ನಿವಾಸಿಗಳಾದ ಬೊಂತಾ ಮಂಗಮ್ಮ, ಬೊಂತಾ ಗಂಗಮ್ಮ, ಬೊಂತಾ ಸಂಪೂರ್ಣಮ್ಮ, ಬೊಂತಾ ಮರಿಯಮ್ಮ, ಲಕ್ಷ್ಮಮ್ಮ, ಸುವಾರ್ತಾ ಮತ್ತು ಬೊಂತಾ ಬಾಬುರಾವ್ ಎಂದು ಗುರುತಿಸಲಾಗಿದೆ. ಬಾಪಟ್ಲ ಜಿಲ್ಲೆಯ ಕೊಂಡಮಂಜುಲೂರಿನಲ್ಲಿ ಕುಟುಂಬದ ಸದಸ್ಯರೊಬ್ಬರ ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡು ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಒಂದೇ ಆಟೋದಲ್ಲಿ ತಮ್ಮ ಸ್ವಗ್ರಾಮ ವೇಲೂರಿಗೆ ವಾಪಸಾಗುತ್ತಿದ್ದರು.
ವಿಜಯವಾಡದಿಂದ ತಿರುಪತಿಗೆ ಅತಿವೇಗವಾಗಿ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಆಟೋಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ತಕ್ಷಣವೇ ಚಿಲಕಲೂರಿಪೇಟೆ ಹಾಗೂ ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತಷ್ಟು ಓದಿ: Madhya Pradesh Accident: ಗ್ವಾಲಿಯರ್ನಲ್ಲಿ ಭೀಕರ ಅಪಘಾತ, ಕಾರ್ಮಿಕರಿದ್ದ ವಾಹನಕ್ಕೆ ಟ್ರಕ್ ಡಿಕ್ಕಿಯಾಗಿ 8 ಮಂದಿ ಸಾವು
ತೆಲಂಗಾಣದ ಸೂರ್ಯಪೇಟೆಯಲ್ಲಿ ಖಾಸಗಿ ಬಸ್ ಕಂಟೇನರ್ಗೆ ಡಿಕ್ಕಿಯಾಗಿ ಐವರು ಮೃತಪಟ್ಟ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು, ತೆಲುಗು ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಣಿ ಅಪಘಾತಗಳು ಆತಂಕ ಸೃಷ್ಟಿಸಿವೆ. ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಆಟೋಗಳಲ್ಲಿ ತುಂಬುವುದು ಮತ್ತು ಹೆದ್ದಾರಿಗಳಲ್ಲಿ ಖಾಸಗಿ ಬಸ್ಗಳ ಅತಿಯಾದ ವೇಗ, ಅಜಾಗರೂಕ ಓವರ್ಟೇಕಿಂಗ್ ನಿಯಂತ್ರಿಸಲು ಕಟ್ಟುನಿಟ್ಟಿನ ಪೊಲೀಸ್ ಪೆಟ್ರೋಲಿಂಗ್ ಜಾರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




