ಪ್ರಧಾನಿ ಮೋದಿಯಿಂದ ಪುಟಿನ್​ಗೆ ಚಹಾ, ಬೆಳ್ಳಿ ಕುಸುರಿ, ಕಾಶ್ಮೀರಿ ಕೇಸರಿ, ಭಗವದ್ಗೀತೆ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಭಾರತೀಯ ಕರಕುಶಲ ಮತ್ತು ಸಾಂಸ್ಕೃತಿಕ ಸಂಪತ್ತುಗಳನ್ನು ಒಳಗೊಂಡ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಇದರಲ್ಲಿ ಅಸ್ಸಾಂ ಕಪ್ಪು ಚಹಾ, ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್, ಮಹಾರಾಷ್ಟ್ರದ ಕರಕುಶಲ ಬೆಳ್ಳಿ ಕುದುರೆ, ಆಗ್ರಾದ ಅಮೃತಶಿಲೆಯ ಚೆಸ್ ಸೆಟ್, ಪ್ರೀಮಿಯಂ ಕಾಶ್ಮೀರಿ ಕೇಸರಿ ಮತ್ತು ಭಗವದ್ಗೀತೆಯ ರಷ್ಯನ್ ಅನುವಾದಿತ ಆವೃತ್ತಿ ಸೇರಿದೆ.

ಪ್ರಧಾನಿ ಮೋದಿಯಿಂದ ಪುಟಿನ್​ಗೆ ಚಹಾ, ಬೆಳ್ಳಿ ಕುಸುರಿ, ಕಾಶ್ಮೀರಿ ಕೇಸರಿ, ಭಗವದ್ಗೀತೆ ಉಡುಗೊರೆ
Modis Gft To Putin

Updated on: Dec 05, 2025 | 9:48 PM

ನವದೆಹಲಿ, ಡಿಸೆಂಬರ್ 5: ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ಪುಟಿನ್ (Russia President Putin) ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ಪುಟಿನ್ ಅವರಿಗೆ ನೀಡಿರುವ ಈ ಉಡುಗೊರೆಗಳು ಭಾರತ ಎಷ್ಟು ವೈವಿಧ್ಯಮಯವಾಗಿದೆ, ಯಾವ ರೀತಿಯ ನಾಗರಿಕ ಪರಂಪರೆಯನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ರಷ್ಯಾದ ಅಧ್ಯಕ್ಷರಿಗೆ ನೀಡಲಾದ ಉಡುಗೊರೆಗಳ ಪಟ್ಟಿ ಇಲ್ಲಿದೆ.

ಅಸ್ಸಾಂ ಚಹಾ:

ಬ್ರಹ್ಮಪುತ್ರದ ಬಯಲಿನಲ್ಲಿ ಬೆಳೆದ ಅಸ್ಸಾಂ ಕಪ್ಪು ಚಹಾವು ಅದರ ಉತ್ತಮ ಸುವಾಸನೆಗೆ ಹೆಸರುವಾಸಿಯಾಗಿದೆ. ಈ ಚಹಾವನ್ನು 2007ರಲ್ಲಿ ಜಿಐ ಟ್ಯಾಗ್‌ನೊಂದಿಗೆ ಗುರುತಿಸಲಾಯಿತು. ಇದು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ.


ಮಹಾರಾಷ್ಟ್ರದ ಬೆಳ್ಳಿ ಕುದುರೆ:

ಮಹಾರಾಷ್ಟ್ರದ ಕರಕುಶಲ ವಸ್ತುಗಳನ್ನು ಸಹ ಪುಟಿನ್​ಗೆ ನೀಡಲಾಯಿತು. ಬೆಳ್ಳಿಯಲ್ಲಿ ಮಾಡಲಾದ ಕುಸುರಿ ಕೆತ್ತನೆಯ ಕುದುರೆಯನ್ನು ಪುಟಿನ್​ಗೆ ನೀಡಲಾಯಿತು. ಭಾರತೀಯ ಮತ್ತು ರಷ್ಯಾದ ಸಂಸ್ಕೃತಿಗಳಲ್ಲಿ ಆಚರಿಸಲಾಗುವ ಘನತೆ ಮತ್ತು ಶೌರ್ಯವನ್ನು ಸಂಕೇತಿಸುವ ಈ ಕುದುರೆ ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ರಷ್ಯಾದ ಪ್ರವಾಸಿಗರಿಗೆ 30 ದಿನಗಳಲ್ಲಿ ಉಚಿತ ಇ-ವೀಸಾ; ಪುಟಿನ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಘೋಷಣೆ

ಕಾಶ್ಮೀರಿ ಕೇಸರಿ:

ಸ್ಥಳೀಯವಾಗಿ ಕಾಂಗ್ ಅಥವಾ ಜಾಫ್ರಾನ್ ಎಂದು ಕರೆಯಲ್ಪಡುವ ಕಾಶ್ಮೀರಿ ಕೇಸರಿಯನ್ನು ಭಾರತದ ಪರ್ವತ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಇದು ಅದರ ಉತ್ತಮ ಬಣ್ಣ, ಸುವಾಸನೆಗೆ ಹೆಸರುವಾಸಿಯಾಗಿದೆ. ಇದಕ್ಕೆ ಕೂಡ ಜಿಐ ಮಾನ್ಯತೆಯಿದೆ. ಇದನ್ನು “ಕೆಂಪು ಚಿನ್ನ” ಎಂದು ಕೂಡ ಕರೆಯಲಾಗುತ್ತದೆ.


ಬಂಗಾಳದ ಚಹಾ ಸೆಟ್:

ಚಹಾ ಎಲೆಗಳು ಮಾತ್ರವಲ್ಲ ಪುಟಿನ್ ಅವರಿಗೆ ಅದನ್ನು ಕುಡಿಯಲು ಅಲಂಕೃತ ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್ ಅನ್ನು ಸಹ ನೀಡಲಾಗಿದೆ. ಈ ಸೆಟ್ ಪಶ್ಚಿಮ ಬಂಗಾಳದ ಶ್ರೀಮಂತ ಕಲಾತ್ಮಕತೆಯನ್ನು ಪ್ರತಿಬಿಂಬಿಸುವ ಸಂಕೀರ್ಣ ಕೆತ್ತನೆಗಳನ್ನು ಹೊಂದಿದೆ. ಭಾರತ ಮತ್ತು ರಷ್ಯಾ ಎರಡು ದೇಶಗಳಲ್ಲೂ ಚಹಾಕ್ಕೆ ಆಳವಾದ ಸಾಂಸ್ಕೃತಿಕ ಪ್ರಾಮುಖ್ಯತೆ ಇದೆ. ಇದು ರೈಲ್ವೆ ನಿಲ್ದಾಣದಲ್ಲಿ ಚಹಾವನ್ನು ಮಾರಾಟ ಮಾಡುವುದರಿಂದ ರಾಷ್ಟ್ರದ ನಾಯಕನಾಗುವವರೆಗಿನ ಪ್ರಧಾನಿ ಮೋದಿಯವರ ಜೀವನದ ಹಾದಿಯನ್ನು ಕೂಡ ನೆನಪಿಸುತ್ತದೆ.

ಇದನ್ನೂ ಓದಿ: ಭಾರತಕ್ಕೆ ತೈಲ ಪೂರೈಕೆ ಮುಂದುವರೆಸುತ್ತೇವೆ; ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ

ರಷ್ಯನ್ ಭಾಷೆಯ ಭಗವದ್ಗೀತೆ:

ಹಿಂದೂ ಮಹಾಕಾವ್ಯವಾದ ಮಹಾಭಾರತದ ಒಂದು ಭಾಗವಾದ ಶ್ರೀಮದ್ ಭಗವದ್ಗೀತೆಯು ಹಿಂದೂಗಳ ಪಾಲಿಗೆ ಬಹಳ ಪೂಜ್ಯ ಗ್ರಂಥವಾಗಿದೆ. ಕರ್ತವ್ಯ, ಆಧ್ಯಾತ್ಮಿಕ ವಿಮೋಚನೆಯ ವಿಚಾರಗಳ ಕುರಿತು ಅರ್ಜುನನಿಗೆ ಶ್ರೀಕೃಷ್ಣ ನೀಡುವ ಮಾರ್ಗದರ್ಶನ ಇದರಲ್ಲಿದೆ. ರಷ್ಯನ್ ಭಾಷೆಗೆ ಅನುವಾದಿಸಿರುವ ಈ ಭಗವದ್ಗೀತೆಯ ಪ್ರತಿಯನ್ನು ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಿದರು.

ಆಗ್ರಾದ ಚೆಸ್ ಸೆಟ್:

ಉತ್ತರ ಪ್ರದೇಶದ ಆಗ್ರಾದಿಂದ ಬಂದ ಕರಕುಶಲ ಅಮೃತಶಿಲೆಯ ಚೆಸ್ ಸೆಟ್ ಅನ್ನು ಕೂಡ ಪುಟಿನ್ ಅವರಿಗೆ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ