AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಯವರ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ ಬಗ್ಗೆ ಗೃಹ ಸಚಿವಾಲಯ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ: ಅನುರಾಗ್ ಠಾಕೂರ್

"ದೇಶದ ನ್ಯಾಯಾಂಗ ವ್ಯವಸ್ಥೆಯು ಎಲ್ಲರಿಗೂ ನ್ಯಾಯವನ್ನು ನೀಡುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಮತ್ತು ಅಂತಹ ತಪ್ಪುಗಳು ಸಂಭವಿಸಿದಾಗ, ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಮೋದಿಯವರ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ ಬಗ್ಗೆ ಗೃಹ ಸಚಿವಾಲಯ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ: ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 06, 2022 | 8:11 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಂಜಾಬ್ (Punjab) ಭೇಟಿಯ ಸಮಯದಲ್ಲಿ ಭದ್ರತಾ ಲೋಪ (security breach)ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ (MHA) ಮಾಹಿತಿಯನ್ನು ಸಂಗ್ರಹಿಸುತ್ತಿದೆ ಮತ್ತು “ದೊಡ್ಡ ಮತ್ತು ಕಠಿಣ ನಿರ್ಧಾರಗಳನ್ನು” ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಹೇಳಿದರು. ಕೇಂದ್ರ ಸಚಿವ ಸಂಪುಟ ಸಭೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭದ್ರತಾ ಲೋಪದ ಬಗ್ಗೆ ಈ ನಿಟ್ಟಿನಲ್ಲಿ ಕೆಲವರು ಈಗಾಗಲೇ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಗೃಹ ಸಚಿವಾಲಯವೂ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದೆ. ಮಾಹಿತಿ ಸಂಗ್ರಹಿಸಿದ ನಂತರ ದೊಡ್ಡ ಮತ್ತು ಕಠಿಣ ನಿರ್ಧಾರಗಳನ್ನು ಅದು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. “ದೇಶದ ನ್ಯಾಯಾಂಗ ವ್ಯವಸ್ಥೆಯು ಎಲ್ಲರಿಗೂ ನ್ಯಾಯವನ್ನು ನೀಡುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಮತ್ತು ಅಂತಹ ತಪ್ಪುಗಳು ಸಂಭವಿಸಿದಾಗ, ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಸಚಿವರು ಹೇಳಿದರು.

ಕ್ಯಾಬಿನೆಟ್ ಸಭೆ ಮತ್ತು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯ ಜೊತೆಗೆ, ಜನವರಿ 6 ರಂದು ಭದ್ರತೆಯ ಕ್ಯಾಬಿನೆಟ್ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಿದ್ದರು.  ಬುಧವಾರ ಪ್ರಧಾನಿಯವರ ಪಂಜಾಬ್ ಭೇಟಿಯ ವೇಳೆ ಭದ್ರತಾ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮೋದಿ ಭೇಟಿ ಮಾಡಿದರು.

“ಪ್ರಮುಖ ಭದ್ರತಾ ಲೋಪ” ದಲ್ಲಿ, ಜನವರಿ 5 ರಂದು ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿತು. ಇದಾದ ನಂತರ ಮೋದಿಯವರು ರ್ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪಂಜಾಬ್‌ನಿಂದ  ಮರಳಿದರು.

ಮಹಾಕಾಳಿ ನದಿಯ ಮೇಲೆ ಸೇತುವೆ ನಿರ್ಮಾಣಕ್ಕಾಗಿ ಭಾರತ ಮತ್ತು ನೇಪಾಳ ನಡುವೆ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ 7 ರಾಜ್ಯಗಳಲ್ಲಿ ಸುಮಾರು 20 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳ ಗ್ರಿಡ್ ಏಕೀಕರಣ ಮತ್ತು ವಿದ್ಯುತ್ ತೆರವಿಗೆ ಅನುಕೂಲವಾಗುವಂತೆ ರಾಜ್ಯದೊಳಗಿನ ಪ್ರಸರಣ ವ್ಯವಸ್ಥೆಯಡಿ ಹಸಿರು ಇಂಧನ ಕಾರಿಡಾರ್‌ನ ಹಂತ 2ಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಯೋಜನೆಯು 2030 ರ ವೇಳೆಗೆ 450 GW ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ದೇಶದ ದೀರ್ಘಾವಧಿಯ ಇಂಧನ ಭದ್ರತೆಗೆ ಕೊಡುಗೆ ನೀಡುತ್ತದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

“ಈ ಯೋಜನೆಯು ಸರಿಸುಮಾರು 10,750 ಸರ್ಕ್ಯೂಟ್ ಕಿಲೋಮೀಟರ್ ಟ್ರಾನ್ಸ್ಮಿಷನ್ ಲೈನ್ ಗಳನ್ನು ಮತ್ತು ಅಂದಾಜು 27,500 ಮೆಗಾ ವೋಲ್ಟ್-ಆಂಪಿಯರ್‌ಗಳ ರೂಪಾಂತರ ಸಾಮರ್ಥ್ಯವಿರುವ ಸಬ್‌ಸ್ಟೇಷನ್‌ಗಳನ್ನು ಸೇರಿಸುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಯೋಜನಾ ವೆಚ್ಚದ ಶೇ.33 ರಷ್ಟು ಕೇಂದ್ರ ಹಣಕಾಸು ನೆರವಿನೊಂದಿಗೆ, ಯೋಜನೆಯ 2ನೇ ಹಂತದ ಒಟ್ಟು ಅಂದಾಜು ವೆಚ್ಚ ₹12,031 ಕೋಟಿ ಆಗಿದೆ. ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳು ಈ ಹಂತದ ವ್ಯಾಪ್ತಿಗೆ ಬರಲಿವೆ.

ಮಹಾಕಾಳಿ ನದಿಯ ಮೇಲೆ ಸೇತುವೆಯನ್ನು ನಿರ್ಮಿಸಲು ಭಾರತ ಮತ್ತು ನೇಪಾಳ ನಡುವೆ ಸಹಿ ಮಾಡಲಾಗುವ ತಿಳುವಳಿಕೆ ಒಪ್ಪಂದದ ಅನುಮೋದನೆಯ ಬಗ್ಗೆಯೂ ಠಾಕೂರ್ ತಿಳಿಸಿದರು. ಈ ಸೇತುವೆಯು ಉತ್ತರಾಖಂಡದ ಧಾರ್ಚುಲಾ ಮತ್ತು ನೇಪಾಳ ಪ್ರದೇಶದ ಅಡಿಯಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡುತ್ತದೆ ಎಂದು ಸಚಿವರು ಒತ್ತಿ ಹೇಳಿದರು.

ಇದನ್ನೂ ಓದಿ: PM Security Breach: ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನ 20 ನಿಮಿಷ ಸಿಕ್ಕಿಹಾಕಿಕೊಂಡ ಫಿರೋಜ್‌ಪುರ ಫ್ಲೈಓವರ್‌ನಲ್ಲಿ ಏನೇನಾಯಿತು?

Published On - 7:50 pm, Thu, 6 January 22