ಕಾಂಗ್ರೆಸ್ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಶಶಿ ತರೂರ್

ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಸದರ ನಿಯೋಗದಲ್ಲಿ ವಿದೇಶಕ್ಕೆ ಹೋಗಿ ಭಯೋತ್ಪಾದನೆ ವಿರುದ್ಧ ಭಾರತದ ನಿಲುವಿನ ಬಗ್ಗೆ ಮಾಹಿತಿ ನೀಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಜೆಪಿ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದರು. ಈ ಬಗ್ಗೆ ಕಾಂಗ್ರೆಸ್ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಇದೀಗ ಕಾಂಗ್ರೆಸ್‌ನ ಕೆಲವು ನಾಯಕರೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

ಕಾಂಗ್ರೆಸ್ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಶಶಿ ತರೂರ್
Shashi Tharoor

Updated on: Jun 19, 2025 | 5:20 PM

ನವದೆಹಲಿ, ಜೂನ್ 19: ಕಾಂಗ್ರೆಸ್‌ ನಾಯಕ ಶಶಿ ತರೂರ್ (Shashi Tharoor) ಇಂದು (ಗುರುವಾರ) ಪಕ್ಷದ ನಾಯಕತ್ವದ ಕೆಲವು ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ನೀಲಂಬೂರ್ ಕ್ಷೇತ್ರದ ಉಪಚುನಾವಣೆಯಿಂದಾಗಿ ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಕ್ಕೆ ಬಯಸುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವದೊಂದಿಗೆ ಸಾಂದರ್ಭಿಕ ಭಿನ್ನಾಭಿಪ್ರಾಯಗಳಿದ್ದರೂ ಈ ಸಮಸ್ಯೆಗಳನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಲಾಗುವುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಕಾಂಗ್ರೆಸ್, ಅದರ ತತ್ವಗಳು ಮತ್ತು ಅದರ ಕಾರ್ಯಕರ್ತರ ಬಗ್ಗೆ ತಮ್ಮ ಆಳವಾದ ಬದ್ಧತೆಯನ್ನು ಒತ್ತಿ ಹೇಳಿದರು. “ನಾನು 16 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದೇನೆ. ಅವರನ್ನು ಆಪ್ತ ಸ್ನೇಹಿತರು ಮತ್ತು ಸಹೋದರರು ಎಂದು ಪರಿಗಣಿಸುತ್ತೇನೆ. ಆದರೆ, ಕಾಂಗ್ರೆಸ್ ನಾಯಕತ್ವದ ಕೆಲವರೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿವೆ. ನಾನು ಏನು ಮಾತನಾಡುತ್ತಿದ್ದೇನೆಂದು ನಿಮಗೆ ತಿಳಿದಿದೆ. ಏಕೆಂದರೆ ಆ ಕೆಲವು ಸಮಸ್ಯೆಗಳು ಸಾರ್ವಜನಿಕ ವಲಯದಲ್ಲಿವೆ, ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿವೆ. ನಿಲಂಬೂರಿನ ಉಪಚುನಾವಣೆಯ ಫಲಿತಾಂಶಗಳ ನಂತರ ಆ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುತ್ತೇನೆ” ಎಂದು ಶಶಿ ತರೂರ್ ಹೇಳಿದ್ದಾರೆ ಎಂದು ಪಿಟಿಐ ತಿಳಿಸಿದೆ.

ಇದನ್ನೂ ಓದಿ
ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದ ಎದುರು ಗುಂಡಿನ ದಾಳಿ
ಉತ್ತರ ಪ್ರದೇಶ: ಲವರ್ ಜತೆ ಸಿಕ್ಕಿಬಿದ್ದ ಹೆಂಡತಿಯ ಮೂಗು ಕಚ್ಚಿದ ಪತಿ
ಕ್ರೊಯೇಷಿಯಾ ಪ್ರಧಾನಿಯಿಂದ ಮೋದಿಗೆ 1790ರ ಸಂಸ್ಕೃತ ವ್ಯಾಕರಣದ ಉಡುಗೊರೆ
ಕ್ರೊಯೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಂಸ್ಕೃತ ಶ್ಲೋಕಗಳ ಸ್ವಾಗತ

ಇದನ್ನೂ ಓದಿ: ಅಮೆರಿಕದಲ್ಲಿ ಟ್ರಂಪ್ ಜೊತೆಗಿನ ಪ್ರಧಾನಿ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘನೆ

“ಕಾಂಗ್ರೆಸ್ ಪಕ್ಷ, ಅದರ ಮೌಲ್ಯಗಳು ಮತ್ತು ಅದರ ಕಾರ್ಯಕರ್ತರು ನನಗೆ ತುಂಬಾ ಪ್ರಿಯರು. ನಾನು ಕಳೆದ 16 ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಅವರ ಬದ್ಧತೆ, ಸಮರ್ಪಣೆ ಮತ್ತು ಆದರ್ಶವಾದವನ್ನು ನಾನು ನೋಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಹಾಗೇ, ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಇತ್ತೀಚಿನ ಮಾತುಕತೆಗಳ ಕುರಿತು, ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದಂತೆ ವಿವಿಧ ದೇಶಗಳಿಗೆ ನಿಯೋಗಗಳ ಭೇಟಿ ಮತ್ತು ಅಲ್ಲಿ ನಡೆದ ಚರ್ಚೆಗಳ ಬಗ್ಗೆ ತರೂರ್ ಹೇಳಿದರು. “ಮೋದಿಯವರೊಂದಿಗೆ ಯಾವುದೇ ದೇಶೀಯ ರಾಜಕೀಯವನ್ನು ಚರ್ಚಿಸಿಲ್ಲ” ಎಂದು ಅವರು ಹೇಳಿದರು.


ನಿಯೋಗಗಳಲ್ಲಿ ಒಂದನ್ನು ಮುನ್ನಡೆಸಲು ಕೇಂದ್ರದ ಆಹ್ವಾನವನ್ನು ಸ್ವೀಕರಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ, “ನಾನು ನನ್ನ ಮಾರ್ಗವನ್ನು ಬದಲಾಯಿಸಿಲ್ಲ. ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯ ಬಂದಾಗ ನಾವೆಲ್ಲರೂ ದೇಶಕ್ಕಾಗಿ ಕೆಲಸ ಮಾಡಲು ಮತ್ತು ಮಾತನಾಡಲು ಬದ್ಧರಾಗಿದ್ದೇವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ನಾನು ಹೇಳಿದ್ದು ನನ್ನ ಸ್ವಂತ ಅಭಿಪ್ರಾಯವಾಗಿತ್ತು. ಕೇಂದ್ರವು ನನ್ನ ಸೇವೆಗಳನ್ನು ಕೇಳಿತು. ಒಬ್ಬ ಭಾರತೀಯ ಪ್ರಜೆಯಾಗಿ ನಾನು ಹೆಮ್ಮೆಯಿಂದ ನನ್ನ ಕರ್ತವ್ಯವನ್ನು ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾವಿನ್ನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅಮೆರಿಕದಲ್ಲಿ ಭಯೋತ್ಪಾದನೆ, ಪಾಕಿಸ್ತಾನದ ವಿರುದ್ಧ ಶಶಿ ತರೂರ್ ವಾಗ್ದಾಳಿ

ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ನಂತರ ಭಾರತದ ನಿಲುವನ್ನು ತಿಳಿಸಲು ಅಮೆರಿಕ ಮತ್ತು ಇತರ 4 ದೇಶಗಳಿಗೆ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿದ್ದ ರಾಜತಾಂತ್ರಿಕ ಕಾರ್ಯಾಚರಣೆಯ ಬಳಿಕ ಶಶಿ ತರೂರ್ ಇತ್ತೀಚೆಗೆ ಭಾರತಕ್ಕೆ ಮರಳಿದ್ದಾರೆ. ಇದಾದ ನಂತರ ಮೋದಿ ಆಯೋಜಿಸಿದ್ದ ಔತಣಕೂಟದಲ್ಲೂ ಅವರು ಪಾಲ್ಗೊಂಡಿದ್ದರು.


ಮೋದಿ ಸರ್ಕಾರವು ನಿಯೋಗಕ್ಕೆ ಶಶಿ ತರೂರ್ ಅವರನ್ನು ನೇಮಿಸಿದ್ದು, ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವುದು ಸೇರಿದಂತೆ ಪ್ರವಾಸದ ಸಮಯದಲ್ಲಿ ಶಶಿ ತರೂರ್ ನೀಡಿದ ಕೆಲವು ಹೇಳಿಕೆಗಳು ಕಾಂಗ್ರೆಸ್‌ನ ಕೆಲವು ಭಾಗಗಳಿಂದ ಟೀಕೆಗೆ ಗುರಿಯಾದವು. ಯುಪಿಎ ಅವಧಿಯಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಎತ್ತಿ ತೋರಿಸದಿದ್ದಕ್ಕಾಗಿ ಮತ್ತು ಮೋದಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಶ್ಲಾಘಿಸಿದ್ದಕ್ಕಾಗಿ ಶಶಿ ತರೂರ್ ಅವರನ್ನು ಪಕ್ಷದ ಸಹೋದ್ಯೋಗಿಗಳು ಟೀಕಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ