ಮದುಮಗಳ ಮುದ್ದಿನ ನಾಯಿಗೆ ಹೊಡೆದ ವರನ ಸಂಬಂಧಿಕರು; ಮದುವೆಯೇ ಕ್ಯಾನ್ಸಲ್!
ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮದುವೆಯೊಂದು ಸಾಕುನಾಯಿಯ ಕಾರಣದಿಂದ ನಿಂತುಹೋಗಿದೆ. ಖಾಗಾ ತಹಸಿಲ್ನಲ್ಲಿ 25 ವರ್ಷದ ಆಭರಣ ವ್ಯಾಪಾರಿ ಸುಮಿತ್ ಕೇಸರ್ವಾನಿ ಮತ್ತು 19 ವರ್ಷದ ತನು ಕೇಸರ್ವಾನಿ ಅವರ ಮದುವೆ ನಡೆಯಬೇಕಿತ್ತು. ಆದರೆ, ಇನ್ನೇನು ತಾಳಿ ಕಟ್ಟಲು ಕೆಲವೇ ಗಂಟೆಗಳಿವೆ ಎನ್ನುವಾಗ ಮದುವೆ ಮಂಟಪದಲ್ಲಿಯೇ ಮದುವೆ ಮುರಿದುಬಿದ್ದಿದೆ. ಈ ಮದುವೆ ನಿಲ್ಲಲು ಕಾರಣವಾದ ಸಂಗತಿಯೂ ಬಹಳ ರೋಚಕವಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ, ಫೆಬ್ರವರಿ 23: ವಧುವಿನ ಸಾಕು ನಾಯಿಯಿಂದಾಗಿ ಉತ್ತರ ಪ್ರದೇಶದಲ್ಲಿ ಮದುವೆಯೇ ರದ್ದಾಗಿರುವ ಘಟನೆ ನಡೆದಿದೆ. ಮದುಮಗನ ಸಂಬಂಧಿಕರು ನಾಯಿಗೆ ಹೊಡೆದ ಕಾರಣದಿಂದಾಗಿ ಉತ್ತರ ಪ್ರದೇಶದ ಹುಡುಗಿಯೊಬ್ಬಳು ತನ್ನ ಮದುವೆಯನ್ನೇ (Wedding) ರದ್ದುಗೊಳಿಸಿದ್ದಾಳೆ. ಈ ವೇಳೆ ವಧು-ವರರ ಸಂಬಂಧಿಕರ ನಡುವೆ ಗಲಾಟೆ ನಡೆದಿದ್ದು, ಅತಿಥಿಗಳಿಗೆ ಗಾಯಗಳಾಗಿವೆ. ವಧುವಿನ ಸಾಕು ನಾಯಿಯ ಕಾರಣದಿಂದ ಮದುವೆಯೇ ನಿಂತುಹೋಗಿದೆ. ಹೊಡೆದಾಟ ನಡೆದು ಹಲವಾರು ಅತಿಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಧುವಿನ ಸಾಕು ನಾಯಿಯ ವಿವಾದವು ಎರಡು ಕುಟುಂಬಗಳ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ. ಸಂಭ್ರಮ ತುಂಬಬೇಕಾದ ಮದುವೆ ಮಂಟಪದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇಂಡಿಯಾ ಟುಡೇ ವರದಿಯ ಪ್ರಕಾರ, ಈ ಘಟನೆ ಕಳೆದ ಬುಧವಾರ ರಾತ್ರಿ ಖಾಗಾ ಕೊಟ್ವಾಲಿ ಪ್ರದೇಶದ ಅತಿಥಿ ಗೃಹದಲ್ಲಿ ನಡೆದಿದೆ. ವಧುವಿನ ಕುಟುಂಬಸ್ಥರು ಪ್ರಯಾಗರಾಜ್ನಿಂದ ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಆಗಮಿಸಿದ್ದರು. ವರನ ಕಡೆಯವರು ಸಾಂಪ್ರದಾಯಿಕವಾದ ವಿವಾಹ ಮೆರವಣಿಗೆಯೊಂದಿಗೆ ಬಂದರು. ಹೂಮಾಲೆ ವಿನಿಮಯ ಸೇರಿದಂತೆ ಮದುವೆಯ ಆರಂಭಿಕ ಸಮಾರಂಭಗಳು ಸರಾಗವಾಗಿ ನಡೆದವು.
ಮದುವೆಯ ಸಾಂಪ್ರದಾಯಿಕ ಆಚರಣೆಗಳ ಸಮಯದಲ್ಲಿ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಅಡ್ಡಿಯಾಗಬಾರದು ಎಂದು ವಧುವಿನ ಸಾಕು ನಾಯಿಯನ್ನು ಅವಳ ಕುಟುಂಬಸ್ಥರು ಸ್ವಲ್ಪ ದೂರದಲ್ಲಿ ಕಟ್ಟಿಹಾಕಿದ್ದರು. ಅದು ಅಲ್ಲಿಂದಲೇ ಜೋರಾಗಿ ಬೊಗಳಲು ಪ್ರಾರಂಭಿಸಿತು. ಇದರಿಂದ ಸಿಟ್ಟಿಗೆದ್ದ ವರನ ಕಡೆಯ ಯುವಕ ಆ ನಾಯಿಯನ್ನು ಹೊಡೆದನು. ಇದಕ್ಕೆ ವಧುವಿನ ಕುಟುಂಬಸ್ಥರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ವಾದ ಜಗಳಕ್ಕೆ ತಿರುಗಿ ವಧು ಹಾಗೂ ವರನ ಸಂಬಂಧಿಕರು ಹೊಡೆದಾಡಿಕೊಂಡರು.
ಇದನ್ನೂ ಓದಿ: ಮೊಮ್ಮಗನ ಮದುವೆ ನೋಡುವ ಆಸೆಯಲ್ಲಿದ್ದ ಅಜ್ಜಿಗೆ ಶಾಕ್: ಇಡೀ ಊರಿಗೆ ಬಾಡೂಟ ಹಾಕಿಸಿ ಮದುಮಗ ನಾಪತ್ತೆ!
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘರ್ಷಣೆಯ ಸಮಯದಲ್ಲಿ ಕೋಲುಗಳು ಮತ್ತು ಕುರ್ಚಿಗಳನ್ನು ಹಿಡಿದುಕೊಂಡು ಹೊಡೆದಾಡಿಕೊಂಡರು. ವಧುವಿನ ಕುಟುಂಬದ ಮೂವರು ಸದಸ್ಯರಾದ ಶುಭಮ್ ಗುಪ್ತಾ, ರಿಷಭ್ ಕೇಸರ್ವಾನಿ ಮತ್ತು ಸಂಗೀತಾ ದೇವಿ ಅವರ ತಲೆಗೆ ಗಾಯಗಳಾಯಿತು. ವರನ ಕುಟುಂಬದ ಕೆಲವು ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಯಿತು. ಈ ಗಲಾಟೆಯಿಂದ ಹೆದರಿ ಅನೇಕ ಅತಿಥಿಗಳು ಓಡಿಹೋದರು.
ಕೊನೆಗೆ ಮದುವೆ ಮನೆಗೆ ಪೊಲೀಸರನ್ನು ಕರೆಸಬೇಕಾಯಿತು. ಅವರು ಮದುವೆಯ ವಿಧಿವಿಧಾನಗಳನ್ನು ನಿಲ್ಲಿಸಿ ಎರಡೂ ಕುಟುಂಬಗಳನ್ನು ಖಾಗಾ ಪೊಲೀಸ್ ಠಾಣೆಗೆ ಕರೆದೊಯ್ದರು. ಗಾಯಾಳುಗಳಿಗೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಗುರುವಾರ, ಎರಡೂ ಕುಟುಂಬಗಳು ಪೊಲೀಸ್ ಠಾಣೆಗೆ ಮತ್ತೆ ಹಾಜರಾದರು.
ಇದನ್ನೂ ಓದಿ: ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುಟ್ಟು ಭಸ್ಮ
ವಿಚಾರಣೆಯ ಸಮಯದಲ್ಲಿ, ವಧು ತಾನು ಈ ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದಳು. ನಂತರ ಎರಡೂ ಕುಟುಂಬಗಳ ಹಿರಿಯ ಸದಸ್ಯರ ನಡುವೆ ಪಂಚಾಯ್ತಿ ನಡೆಯಿತು. ಮದುವೆಯ ಸಮಯದಲ್ಲಿ ವಿನಿಮಯ ಮಾಡಿಕೊಂಡ ಉಡುಗೊರೆಗಳು ಮತ್ತು ಹಣವನ್ನು ಹಿಂತಿರುಗಿಸಲಾಯಿತು. ಎರಡೂ ಕಡೆಯವರು ಒಪ್ಪಂದಕ್ಕೆ ಬಂದರು. ಒಂದು ನಾಯಿಯ ಕಾರಣದಿಂದಾಗಿ ಮಂಟಪದಲ್ಲೇ ಮದುವೆ ನಿಂತುಹೋಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Mon, 23 February 26
