ಅಮರ್ ಜವಾನ್ ಜ್ಯೋತಿಯ ಮಹತ್ವವೇನು? ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಲೀನಗೊಳಿಸಿದ್ದೇಕೆ?

Amar Jawan Jyoti ರಾಜಕೀಯ ವಿವಾದವು ಭುಗಿಲೆದ್ದ ನಂತರ ಸರ್ಕಾರದ ಮೂಲಗಳ ಪ್ರಕಾರ ಜ್ವಾಲೆಯನ್ನು ನಂದಿಸುವುದಿಲ್ಲ. ಅದಕ್ಕೊಂದು "ಸರಿಯಾದ ದೃಷ್ಟಿಕೋನ" ನೀಡುವುದಕ್ಕಾಗಿಯೇ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನವಾಗಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅಮರ್ ಜವಾನ್ ಜ್ಯೋತಿಯ ಮಹತ್ವವೇನು? ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಲೀನಗೊಳಿಸಿದ್ದೇಕೆ?
ಅಮರ್ ಜವಾನ್ ಜ್ಯೋತಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jan 21, 2022 | 6:38 PM

ಸರ್ಕಾರವು ಇಂಡಿಯಾ ಗೇಟ್‌ನ ಕೆಳಗೆ ಅಮರ್ ಜವಾನ್ ಜ್ಯೋತಿಯ (Amar Jawan Jyoti) ಶಾಶ್ವತ ಜ್ವಾಲೆಯನ್ನು ತೆಗೆದಿದ್ದು ಅದನ್ನು ನೂರು ಮೀಟರ್‌ಗಳಷ್ಟು ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial)2019 ರಲ್ಲಿ ಸ್ಥಾಪಿಸಲಾದ ಜ್ಯೋತಿಯೊಂದಿಗೆ ಲೀನಗೊಳಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಇದು ದೇಶಕ್ಕಾಗಿ ಹೋರಾಡುವ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರಿಗೆ ಮಾಡಿದ ಅಗೌರವ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.  ಏನಿದು ಅಮರ್ ಜವಾನ್ ಜ್ಯೋತಿ ಎಂಬುದರ ಬಗ್ಗೆ ಮೊದಲು  ತಿಳಿಯೋಣ.  ಸೆಂಟ್ರಲ್ ದೆಹಲಿಯ ಇಂಡಿಯಾ ಗೇಟ್‌ನ ಕೆಳಗಿರುವ ಅಮರ್ ಜವಾನ್ ಜ್ಯೋತಿಯಲ್ಲಿನ ಶಾಶ್ವತ ಜ್ವಾಲೆಯು ಸ್ವಾತಂತ್ರ್ಯದ ನಂತರ ವಿವಿಧ ಯುದ್ಧಗಳು ಮತ್ತು ಸಂಘರ್ಷಗಳಲ್ಲಿ ದೇಶಕ್ಕಾಗಿ ಮಡಿದ ಸೈನಿಕರಿಗೆ ರಾಷ್ಟ್ರದ ಗೌರವದ ಸಂಕೇತವಾಗಿದೆ.  ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಗುರುತಿಸಲು 1972 ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು. ಡಿಸೆಂಬರ್ 1971 ರಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದ ನಂತರ 1972 ರ ಗಣರಾಜ್ಯ ದಿನದಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಉದ್ಘಾಟಿಸಿದ್ದರು. ಅಮರ್ ಜವಾನ್ ಜ್ಯೋತಿಯ ಪ್ರಮುಖ ಅಂಶಗಳು ಕಪ್ಪು ಅಮೃತಶಿಲೆಯ ಸ್ತಂಭ, ಸಮಾಧಿಯನ್ನು ಒಳಗೊಂಡಿದೆ. ಇದು ಅಜ್ಞಾತ ಸೈನಿಕನ ಸಮಾಧಿಯಂತೆ ಕಾರ್ಯನಿರ್ವಹಿಸುತ್ತದೆ. ಸ್ತಂಭವು ಬಯೋನೆಟ್​​ನೊಂದಿಗೆ ತಲೆಕೆಳಗಾದ L1A1 ಸ್ವಯಂ-ಲೋಡಿಂಗ್ ರೈಫಲ್ ಅನ್ನು ಹೊಂದಿತ್ತು, ಅದರ ಮೇಲೆ ಸೈನಿಕನ ಯುದ್ಧದ ಹೆಲ್ಮೆಟ್ ಇತ್ತು. ಈ ಇನ್​​ಸ್ಟಾಲೇಷನ್ ಮೇಲೆ ನಾಲ್ಕು ಕಲಶಗಳನ್ನು ನಾಲ್ಕು ಬರ್ನರ್​​ಗ ಳನ್ನು ಹೊಂದಿತ್ತು. ಸಾಮಾನ್ಯ ದಿನಗಳಲ್ಲಿ ನಾಲ್ಕು ಬರ್ನರ್‌ಗಳಲ್ಲಿ ಒಂದು ಉರಿಯುತ್ತಿತ್ತು, ಆದರೆ ಗಣರಾಜ್ಯೋತ್ಸವದಂತಹ ಪ್ರಮುಖ ದಿನಗಳಲ್ಲಿ, ಎಲ್ಲಾ ನಾಲ್ಕು ಬರ್ನರ್‌ಗಳನ್ನು ಬೆಳಗಿಸಲಾಗುತ್ತದೆ. ಈ ಬರ್ನರ್‌ಗಳನ್ನು ಅಮರ ಜ್ಯೋತಿ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ನಂದಿಸಲು ಎಂದಿಗೂ ಅನುಮತಿಸಲಾಗಿಲ್ಲ.

ಅಮರ ಜ್ಯೋತಿ ಹೇಗೆ ಉರಿಯುತ್ತಲೇ ಇರುತ್ತದೆ?

50 ವರ್ಷಗಳ ಕಾಲ ಇಂಡಿಯಾ ಗೇಟ್‌ನ ಕೆಳಗೆ ಶಾಶ್ವತ ಜ್ವಾಲೆಯು ನಂದಿಸದೆ ಉರಿಯುತ್ತಿತ್ತು. ಆದರೆ ಶುಕ್ರವಾರ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮತ್ತೊಂದು ಶಾಶ್ವತ ಜ್ವಾಲೆಯೊಂದಿಗೆ ವಿಲೀನಗೊಂಡ ಕಾರಣ ಜ್ವಾಲೆಯನ್ನು ನಂದಿಸಲಾಯಿತು. 1972ರಲ್ಲಿ ಇದು ಉದ್ಘಾಟನೆಗೊಂಡಾಗ ದ್ರವೀಕೃತ ಪೆಟ್ರೋಲಿಯಂ ಅನಿಲ ಅಥವಾ ಎಲ್​​ಪಿಜಿ ಸಿಲಿಂಡರ್​​ಗಳ ಸಹಾಯದಿಂದ ಅದನ್ನು ಉರಿಯುವಂತೆ ಮಾಡಲಾಯಿತು. ಒಂದು ಸಿಲಿಂಡರ್ ಒಂದು ಬರ್ನರ್ ಅನ್ನು ಒಂದೂವರೆ ದಿನ ಬೆಳಗಬಲ್ಲದು.  2006 ರಲ್ಲಿ ಅದನ್ನು ಬದಲಾಯಿಸಲಾಯಿತು. ಸುಮಾರು 6 ಲಕ್ಷ ರೂಪಾಯಿ ವೆಚ್ಚದ ಯೋಜನೆಯು ಜ್ವಾಲೆಯ ಇಂಧನವನ್ನು LPG ನಿಂದ ಪೈಪ್ಡ್ ನೈಸರ್ಗಿಕ ಅನಿಲ ಅಥವಾ PNG ಗೆ ಬದಲಾಯಿಸಲಾಯಿತು. ಈ ಕೊಳವೆ ಅನಿಲದ ಮೂಲಕವೇ ಭಾರತೀಯ ಸೈನಿಕರಿಗೆ ಗೌರವವನ್ನು ಸೂಚಿಸುವ ಜ್ವಾಲೆಯನ್ನು ಶಾಶ್ವತವಾಗಿ ಉರಿಯುವಂತೆ ಇಡಲಾಗಿದೆ.

ಇಂಡಿಯಾ ಗೇಟ್‌ನಲ್ಲಿಯೇ ಇರಿಸಿದ್ದು ಯಾಕೆ?

ಆಲ್ ಇಂಡಿಯಾ ವಾರ್ ಮೆಮೋರಿಯಲ್ ಎಂದು ಮೊದಲು ಕರೆಯಲ್ಪಡುತ್ತಿದ್ದ ಇಂಡಿಯಾ ಗೇಟ್​​ನ್ನು ಬ್ರಿಟಿಷರು 1931 ರಲ್ಲಿ ನಿರ್ಮಿಸಿದರು. ಇದನ್ನು ಬ್ರಿಟಿಷ್ ಭಾರತೀಯ ಸೇನೆಯ ಸುಮಾರು 90,000 ಭಾರತೀಯ ಸೈನಿಕರ ಸ್ಮಾರಕವಾಗಿ ನಿರ್ಮಿಸಲಾಯಿತು. ಅಲ್ಲಿಯವರೆಗೆ ಹಲವಾರು ಯುದ್ಧಗಳು ಮತ್ತು ಕಾರ್ಯಾಚರಣೆಗಳಲ್ಲಿ ಮಡಿದ ಸೈನಿಕರ ಸ್ಮಾಪಕವಾಗಿದೆ ಇದು. ಸ್ಮಾರಕದ ಮೇಲಿನ ಶಾಸನವು ಹೀಗಿದೆ: “TO THE DEAD OF THE INDIAN ARMIES WHO FELL AND ARE HONOURED IN FRANCE AND FLANDERS MESOPOTAMIA AND PERSIA EAST AFRICA GALLIPOLI AND ELSEWHERE IN THE NEAR AND THE FAR-EAST AND IN SACRED MEMORY ALSO OF THOSE WHOSE NAMES ARE HERE RECORDED AND WHO FELL IN INDIA OR THE NORTH-WEST FRONTIER AND DURING THE THIRD AFGHAN WAR.”(“ಫ್ರಾನ್ಸ್ ಮತ್ತು ಫ್ಲಾಂಡರ್ಸ್ ಮೆಸೊಪೊಟಾಮಿಯಾ ಮತ್ತು ಪರ್ಷಿಯಾ ಪೂರ್ವ ಆಫ್ರಿಕಾದ ಗ್ಯಾಲಿಪೊಲಿ ಮತ್ತು ಇತರೆಡೆಗಳಲ್ಲಿ ಹುತಾತ್ಮರಾದ ಮತ್ತು ಗೌರವಿಸಲ್ಪಟ್ಟ ಭಾರತೀಯ ಸೈನ್ಯಗಳ ಮೃತರಿಗೆ. ಅದೇ ವೇಳೆ ಭಾರತ ಅಥವಾ ವಾಯುವ್ಯ ಗಡಿಭಾಗದಲ್ಲಿ ಮತ್ತು ಮೂರನೇ ಆಫ್ಘನ್ ಯುದ್ಧದ ಸಮಯದಲ್ಲಿ ಮಡಿದವರ ಅವರ ಹೆಸರುಗಳು ಇಲ್ಲಿ ದಾಖಲಾಗಿವೆ). 13,000 ಕ್ಕೂ ಹೆಚ್ಚು ಹುತಾತ್ಮ ಸೈನಿಕರ ಹೆಸರನ್ನು ಅವರ ಸ್ಮರಣಾರ್ಥ ಸ್ಮಾರಕದಲ್ಲಿ ಉಲ್ಲೇಖಿಸಲಾಗಿದೆ. ಇದು ಯುದ್ಧಗಳಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮಾರಕವಾಗಿರುವುದರಿಂದ, ಅಮರ್ ಜವಾನ್ ಜ್ಯೋತಿಯನ್ನು 1972 ರಲ್ಲಿ ಸರ್ಕಾರವು ಇಂಡಿಯಾ ಗೇಟ್ ಕೆಳಗೆ ಅದನ್ನು ಸ್ಥಾಪಿಸಿತು.

ಅಮರ ಜ್ಯೋತಿಯನ್ನು ಅಲ್ಲಿಂದ ತೆಗೆದಿದ್ದು ಯಾಕೆ?

ಇದಕ್ಕೆ ಹಲವು ಕಾರಣಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ರಾಜಕೀಯ ವಿವಾದವು ಭುಗಿಲೆದ್ದ ನಂತರ ಸರ್ಕಾರದ ಮೂಲಗಳ ಪ್ರಕಾರ ಜ್ವಾಲೆಯನ್ನು ನಂದಿಸುವುದಿಲ್ಲ. ಅದಕ್ಕೊಂದು “ಸರಿಯಾದ ದೃಷ್ಟಿಕೋನ” ನೀಡುವುದಕ್ಕಾಗಿಯೇ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನವಾಗಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 1971 ರ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಅಮರ ಜ್ಯೋತಿಯು ಗೌರವ ಸಲ್ಲಿಸಿದೆ, ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಇಂಡಿಯಾ ಗೇಟ್ “ನಮ್ಮ ವಸಾಹತುಶಾಹಿ ಗತಕಾಲದ ಸಂಕೇತ” ಎಂದು ಮೂಲಗಳು ತಿಳಿಸಿವೆ.

“1971 ರ ಎಲ್ಲಾ ಯುದ್ಧಗಳು ಮತ್ತು ಅದರ ಮೊದಲು ಮತ್ತು ನಂತರದ ಯುದ್ಧಗಳು ಸೇರಿದಂತೆ ಎಲ್ಲಾ ಭಾರತೀಯ ಹುತಾತ್ಮರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇರಿಸಲಾಗಿದೆ. ಆದ್ದರಿಂದ ಜ್ವಾಲೆಯು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನಿಜವಾದ ಗೌರವವಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

2019 ರಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಬಂದಾಗ, ಭಾರತೀಯ ರಾಜಕೀಯ ಮತ್ತು ಮಿಲಿಟರಿ ನಾಯಕರು ಮತ್ತು ವಿದೇಶಿ ಗಣ್ಯರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ಇದು ಮೊದಲು ಅಮರ್ ಜವಾನ್ ಜ್ಯೋತಿಯಲ್ಲಿ ಸಂಭವಿಸುತ್ತಿತ್ತು ಎಂದು ರಕ್ಷಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬದಲಾವಣೆಯೊಂದಿಗೆ ಎರಡು ಜ್ವಾಲೆಯ ಅಗತ್ಯವಿಲ್ಲ ಎಂದು ಭಾವಿಸಲಾಗಿದೆ. ಆದರೆ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿದಾಗ ಅಧಿಕಾರಿಗಳು ಎರಡೂ ಜ್ವಾಲೆಗಳನ್ನು ನಂದಾ ಜ್ಯೋತಿಯಾಗಿಯೇ ಇರಿಸಲಾಗುವುದು ಎಂದು ಹೇಳಿದ್ದರು.

ಆದರೆ ಇನ್ನೊಂದು ಕಾರಣವೆಂದರೆ ಅಮರ್ ಜವಾನ್ ಜ್ಯೋತಿಯು ದೇಶದ ಭಾವನಾತ್ಮಕ ಮನಸ್ಸಿನಲ್ಲಿ ಎಷ್ಟು ಬಲವಾಗಿ ಕೆತ್ತಲ್ಪಟ್ಟಿದೆಯೆಂದರೆ, ಹೊಸ ಯುದ್ಧ ಸ್ಮಾರಕವು ಸರ್ಕಾರದ ನಿರೀಕ್ಷೆಯಂತೆ ಗಮನ ಸೆಳೆಯಲಿಲ್ಲ. ಮತ್ತು ಸರ್ಕಾರವು 2019 ರಲ್ಲಿ ನಿರ್ಮಿಸಿದ ಹೊಸ ಸ್ಮಾರಕವನ್ನು ಪ್ರಚಾರ ಮಾಡಲು ಬಯಸುತ್ತದೆ. ಇದಲ್ಲದೆ, ಇಂಡಿಯಾ ಗೇಟ್, ಅಮರ್ ಜವಾನ್ ಜ್ಯೋತಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳ ಭಾಗವಾಗಿರುವ ಸಂಪೂರ್ಣ ಸೆಂಟ್ರಲ್ ವಿಸ್ಟಾದ ಸರ್ಕಾರದ ಪುನರಾಭಿವೃದ್ಧಿಯ ಭಾಗವಾಗಿಯೂ ಇದನ್ನು ಕಾಣಬಹುದು ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್  ವರದಿ ಮಾಡಿದೆ.  ಜ್ವಾಲೆಯ ಜೊತೆಗೆ, ಇಂಡಿಯಾ ಗೇಟ್‌ನ ಮುಂದಿನ ಮೇಲಾವರಣವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಹೊಂದಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ಘೋಷಿಸಿದರು. ನೂತನ ಪ್ರತಿಮೆ 28 ಅಡಿ ಎತ್ತರ ಇರಲಿದೆ. ಪ್ರತಿಮೆ ಪೂರ್ಣಗೊಳ್ಳುವವರೆಗೆ, ಮೇಲಾವರಣದ ಅಡಿಯಲ್ಲಿ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಇರಿಸಲಾಗುವುದು ಎಂದು ಮೋದಿ ಹೇಳಿದರು, ಅದನ್ನು ಜನವರಿ 23 ರಂದು ಅವರು ಅನಾವರಣಗೊಳಿಸಲಿದ್ದಾರೆ. ಈ ಮೇಲಾವರಣವು ಕಿಂಗ್ ಜಾರ್ಜ್ V ರ ಪ್ರತಿಮೆಯನ್ನು ಹೊಂದಿತ್ತು, ಇದನ್ನು 1968 ರಲ್ಲಿ ತೆಗೆದುಹಾಕಲಾಯಿತು.

ರಾಷ್ಟ್ರೀಯ ಯುದ್ಧ ಸ್ಮಾರಕ ಎಂದರೇನು ಮತ್ತು ಅದನ್ನು ಯಾವಾಗ ನಿರ್ಮಿಸಲಾಯಿತು?

ಇಂಡಿಯಾ ಗೇಟ್‌ನಿಂದ ಸುಮಾರು 400 ಮೀಟರ್ ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಫೆಬ್ರವರಿ 2019 ರಲ್ಲಿ ಮೋದಿ ಅವರು ಸುಮಾರು 40 ಎಕರೆ ಪ್ರದೇಶದಲ್ಲಿ ಉದ್ಘಾಟಿಸಿದರು. ಸ್ವತಂತ್ರ ಭಾರತದ ವಿವಿಧ ಯುದ್ಧಗಳು, ಕಾರ್ಯಾಚರಣೆಗಳು ಮತ್ತು ಘರ್ಷಣೆಗಳಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ಸೈನಿಕರನ್ನು ಸ್ಮರಿಸಲು ಇದನ್ನು ನಿರ್ಮಿಸಲಾಗಿದೆ. ಅಂತಹ ಸೈನಿಕರಿಗೆ ಅನೇಕ ಸ್ವತಂತ್ರ ಸ್ಮಾರಕಗಳಿವೆ, ಆದರೆ ರಾಷ್ಟ್ರೀಯ ಮಟ್ಟದಲ್ಲಿ ಅವರೆಲ್ಲರನ್ನು ಸ್ಮರಿಸುವ ಯಾವುದೇ ಸ್ಮಾರಕ ಅಸ್ತಿತ್ವದಲ್ಲಿಲ್ಲ.  ಅಂತಹ ಸ್ಮಾರಕವನ್ನು ನಿರ್ಮಿಸಲು 1961 ರಿಂದ ಚರ್ಚೆಗಳು ನಡೆಯುತ್ತಿದ್ದವು, ಆದರೆ ಅದು ನಿರ್ಮಾಣದಹಂತಕ್ಕೆ ಬಂದಿರಲಿಲ್ಲ. 2015 ರಲ್ಲಿ, ಮೋದಿ ನೇತೃತ್ವದ ಸರ್ಕಾರವು ಅದರ ನಿರ್ಮಾಣವನ್ನು ಅನುಮೋದಿಸಿತು. ಸಿ ಹೆಕ್ಸಗನ್ ಆಕೃತಿಯ ಇಂಡಿಯಾ ಗೇಟ್‌ನ ಪೂರ್ವದ ಸ್ಥಳವನ್ನು ಇದಕ್ಕೆ  ಅಂತಿಮಗೊಳಿಸಲಾಯಿತು. ಸ್ಮಾರಕದ ಅಂತಿಮ ವಿನ್ಯಾಸವನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಯಿತು.

ಸ್ಮಾರಕದ ವಾಸ್ತುಶಿಲ್ಪವು ನಾಲ್ಕು ಕೇಂದ್ರೀಕೃತ ವಲಯಗಳನ್ನು ಆಧರಿಸಿದೆ. ರಕ್ಷಾ ಚಕ್ರ ಅಥವಾ ರಕ್ಷಣೆಯ ವೃತ್ತವು ದೊಡ್ಡದಾಗಿದೆ, ಇದು ಮರಗಳ ಸಾಲುಗಳಿಂದ ಗುರುತಿಸಲ್ಪಟ್ಟಿದೆ, ಪ್ರತಿಯೊಂದೂ ದೇಶವನ್ನು ರಕ್ಷಿಸುವ ಸೈನಿಕರನ್ನು ಪ್ರತಿನಿಧಿಸುತ್ತದೆ. ತ್ಯಾಗ ಚಕ್ರ, ತ್ಯಾಗದ ವೃತ್ತ, ಚಕ್ರವ್ಯೂಹದ ಆಧಾರದ ಮೇಲೆ ಗೌರವದ ವೃತ್ತಾಕಾರದ ಕೇಂದ್ರೀಕೃತ ಗೋಡೆಗಳನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಮಡಿದ ಪ್ರತಿಯೊಬ್ಬ ಸೈನಿಕರಿಗೂ ಗೋಡೆಗಳಲ್ಲಿ ಸ್ವತಂತ್ರ ಗ್ರಾನೈಟ್ ಫಲಕಗಳಿವೆ. ಇಂದಿನವರೆಗೆ, ಸುವರ್ಣಾಕ್ಷರಗಳಲ್ಲಿ ಕೆತ್ತಲಾದ ಈ ಗ್ರಾನೈಟ್ ಫಲಕಗಳಲ್ಲಿ ಅಂತಹ ಸೈನಿಕರ 26,466 ಹೆಸರುಗಳಿವೆ. ಕರ್ತವ್ಯದ ವೇಳೆ ಸೈನಿಕನು ಹುತಾತ್ಮರಾದಾಗ ಈ ಫಲಕಗಳನ್ನು ಸೇರಿಸಲಾಗುತ್ತದೆ.

ಈ ವೀರ್​​ತಾ ಚಕ್ರ, ಶೌರ್ಯದ ವೃತ್ತ, ನಮ್ಮ ಸಶಸ್ತ್ರ ಪಡೆಗಳ ಯುದ್ಧಗಳು ಮತ್ತು ಕ್ರಿಯೆಗಳನ್ನು ಚಿತ್ರಿಸುವ ಆರು ಕಂಚಿನ ಭಿತ್ತಿಚಿತ್ರಗಳೊಂದಿಗೆ ಮುಚ್ಚಿದ ಗ್ಯಾಲರಿಯನ್ನು ಹೊಂದಿದೆ.   ಕೊನೆಯದ್ದು ಅಮರ ಚಕ್ರ, ಅಮರತ್ವದ ವೃತ್ತ, ಇದು ಸ್ತಂಭ ಮತ್ತು ಶಾಶ್ವತ ಜ್ವಾಲೆಯಾಗಿದೆ. ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಜ್ವಾಲೆಯು ಈ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ. ಇದು ಸ್ಮಾರಕವನ್ನು ಅನಾವರಣಗೊಳಿಸಿದಂದಿನಿಂದ ಅಂದರೆ 2019 ರಿಂದ ಉರಿಯುತ್ತಿದೆ. ಜ್ವಾಲೆಯು ಮಡಿದ ಸೈನಿಕರ ಆತ್ಮದ ಅಮರತ್ವದ ಸಂಕೇತವಾಗಿದೆ ಮತ್ತು ಅವರ ತ್ಯಾಗವನ್ನು ದೇಶವು ಮರೆಯುವುದಿಲ್ಲ ಎಂಬುದನ್ನು ಸಾರುತ್ತದೆ.  ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆದ 21 ಸೈನಿಕರ ಪ್ರತಿಮೆಗಳನ್ನು ಸಹ ಸ್ಮಾರಕದಲ್ಲಿ ಸ್ಥಾಪಿಸಲಾಗಿದೆ.

ಇದನ್ನೂ ಓದಿ: Amar Jawan Jyoti: ಅಮರ್ ಜವಾನ್ ಜ್ಯೋತಿ ಬಗ್ಗೆ ನೀವು ತಿಳಿದಿರಲೇಬೇಕಾದ ಕುತೂಹಲಕಾರಿ ಸಂಗತಿಗಳು ಇಲ್ಲಿದೆ