- TV9 Kannada Photo gallery Cricket photos India Crushes Afghanistan by Innings and 300 Runs: New Test Record Win!
IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ
India Dominates Afghanistan in Chandigarh Test: ನ್ಯೂ ಚಂಡೀಗಢದಲ್ಲಿ ನಡೆದ ಟೆಸ್ಟ್ನಲ್ಲಿ ಭಾರತ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್ಗಳಿಂದ ಹೀನಾಯವಾಗಿ ಸೋಲಿಸಿದೆ. ಇದು ಭಾರತಕ್ಕೆ ಟೆಸ್ಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾಗಿದ್ದು, ತನ್ನದೇ ಆದ ಎಂಟು ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್ನಲ್ಲಿ 152, ಎರಡನೇ ಇನ್ನಿಂಗ್ಸ್ನಲ್ಲಿ 112 ರನ್ಗಳಿಗೆ ಆಲೌಟ್ ಆಯಿತು.
Updated on: Jun 08, 2026 | 4:14 PM

ನ್ಯೂ ಚಂಡೀಗಢದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ, ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್ಗಳಿಂದ ಸೋಲಿಸಿತು. ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 564 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇತ್ತ ಪಂದ್ಯದ ಮೂರನೇ ದಿನದಂದು ಅಫ್ಘಾನಿಸ್ತಾನವನ್ನು ಮೊದಲ ಇನ್ನಿಂಗ್ಸ್ನಲ್ಲಿ 152 ರನ್ಗಳಿಗೆ ಆಲೌಟ್ ಮಾಡಿತು. ಹೀಗಾಗಿ 412 ರನ್ಗಳ ಮುನ್ನಡೆ ಪಡೆದ ಭಾರತ, ಅಫ್ಘಾನಿಸ್ತಾನದ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನ್ನಿಂಗ್ಸ್ನಲ್ಲಿ ಅಫ್ಘಾನಿಸ್ತಾನ ಕೇವಲ 112 ರನ್ಗಳಿಗೆ ಆಲೌಟ್ ಆಯಿತು.

ಇನ್ನಿಂಗ್ಸ್ ಮತ್ತು 300 ರನ್ಗಳ ಜಯ ಸಾಧಿಸಿದ ಭಾರತಕ್ಕೆ ಇದು ಟೆಸ್ಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು, ಭಾರತದ ಅತಿದೊಡ್ಡ ಟೆಸ್ಟ್ ಗೆಲುವು 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಂದಿತ್ತು. ಆ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 272 ರನ್ಗಳಿಂದ ಗೆಲುವು ಸಾಧಿಸಿತ್ತು. ಅಂದರೆ, ಭಾರತ ತಂಡ ತನ್ನದೇ ಆದ ಎಂಟು ವರ್ಷಗಳ ಹಳೆಯ ಅತಿದೊಡ್ಡ ಟೆಸ್ಟ್ ಗೆಲುವಿನ ದಾಖಲೆಯನ್ನು ಮುರಿದಿದೆ.

ಇದು ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ದಾಖಲಿಸಿದ ಅತಿದೊಡ್ಡ ಗೆಲುವು ಕೂಡ ಹೌದು. ಇದಕ್ಕೂ ಮೊದಲು, 2018 ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 262 ರನ್ಗಳಿಂದ ಸೋಲಿಸಿತ್ತು. ಇದರರ್ಥ ಭಾರತ ಇದುವರೆಗೆ ಅಫ್ಘಾನಿಸ್ತಾನ ವಿರುದ್ಧದ ಎರಡೂ ಟೆಸ್ಟ್ಗಳನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದಿದೆ.

ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿತ್ತು. ಅಫ್ಘನ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ ಏಕೈಕ ಬ್ಯಾಟ್ಸ್ಮನ್ ರಹಮತ್ ಶಾ, ಎರಡನೇ ಇನ್ನಿಂಗ್ಸ್ನಲ್ಲಿ ಯಾವುದೇ ಬ್ಯಾಟ್ಸ್ಮನ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ ಮೂವರು ಬ್ಯಾಟ್ಸ್ಮನ್ಗಳು ಮಾತ್ರ ಎರಡಂಕಿಯ ರನ್ ಗಳಿಸಿದರು.

ಎರಡನೇ ಇನ್ನಿಂಗ್ಸ್ನಲ್ಲಿ ಅಫ್ಘಾನಿಸ್ತಾನ ಪರ ಸೆಡಿಕುಲ್ಲಾ ಅಟಲ್ 42 ರನ್ಗಳೊಂದಿಗೆ ಗರಿಷ್ಠ ಸ್ಕೋರರ್ ಆಗಿದ್ದರು. ಇತ್ತ ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 4, ಕುಲ್ದೀಪ್ ಯಾದವ್ 3, ಮಾನವ್ ಸುತಾರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು. ಇದೀಗ ಜೂನ್ 13 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



