- TV9 Kannada Photo gallery Cricket photos Sikandar Raza Praises Vaibhav Sooryavanshi: India vs Zimbabwe T20 Star Potential
IND vs ZIM: ‘ವೈಭವ್ ಮಹಾನ್ ಆಟಗಾರನಾಗುತ್ತಾರೆ’; ಜಿಂಬಾಬ್ವೆ ನಾಯಕ ಸಿಕಂದರ್ ರಝಾ
Sikandar Raza Praises Vaibhav Sooryavanshi: ಭಾರತದ 15ರ ಹರೆಯದ ವೈಭವ್ ಸೂರ್ಯವಂಶಿ ಅವರನ್ನು ಜಿಂಬಾಬ್ವೆ ನಾಯಕ ಸಿಕಂದರ್ ರಝಾ ಶ್ಲಾಘಿಸಿದ್ದಾರೆ. ಸರಿಯಾಗಿ ಪೋಷಿಸಿದರೆ, ವೈಭವ್ ಮಹಾನ್ ಆಟಗಾರನಾಗುತ್ತಾರೆ ಎಂದು ರಝಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಅಂತಾರಾಷ್ಟ್ರೀಯ ಪಾದಾರ್ಪಣೆಯಲ್ಲಿ ವೈಫಲ್ಯದ ಹೊರತಾಗಿಯೂ, ರಝಾ ವೈಭವ್ ಅವರ ಪ್ರತಿಭೆಯನ್ನು ಬೆಂಬಲಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ವೈಭವ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
Updated on: Jul 22, 2026 | 8:43 PM

ಜುಲೈ 23 ರಿಂದ ಹರಾರೆಯಲ್ಲಿ ಪ್ರಾರಂಭವಾಗಲಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ 20 ಸರಣಿಗೆ ಮುಂಚಿತವಾಗಿ ಜಿಂಬಾಬ್ವೆ ನಾಯಕ ಸಿಕಂದರ್, 15 ವರ್ಷದ ಭಾರತೀಯ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ ಅವರ ಆಟವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಸರಿಯಾಗಿ ಪ್ರೋತ್ಸಾಹಿಸಿದರೆ, ವೈಭವ್ ಒಂದು ಪೀಳಿಗೆಯವರೆಗೆ ನೆನಪಿನಲ್ಲಿ ಉಳಿಯುವ ಶ್ರೇಷ್ಠ ಆಟಗಾರನಾಗಿ ಬೆಳೆಯುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ(PC-PTI).

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, 3 ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ವೈಭವ್ ಮೇಲೆ ಟೀಕೆಗಳ ಸುರಿಮಳೆಯನ್ನೇ ಸುರಿಸಲಾಯಿತು. ಆದಾಗ್ಯೂ ಜಿಂಬಾಬ್ವೆಯ ಆಲ್ರೌಂಡರ್ ಸಿಕಂದರ್ ರಝಾ ವೈಭವ್ ಅವರನ್ನು ಬೆಂಬಲಿಸಿದ್ದಾರೆ(PC-PTI).

ಈ ಬಗ್ಗೆ ಮಾತನಾಡಿರುವ ರಝಾ, ‘ವೈಭವ್ ಅಪಾರ ಪ್ರತಿಭೆಯ ಆಟಗಾರ. ಕೇವಲ 15 ವರ್ಷ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟ ತಲುಪುವುದು ಸಾಮಾನ್ಯವಲ್ಲ. ಎರಡು ಅಥವಾ ಮೂರು ಪಂದ್ಯಗಳಲ್ಲಿ ಉತ್ತಮವಾಗಿ ಆಡದಿದ್ದಕ್ಕಾಗಿ ಅವರನ್ನು ಟೀಕಿಸುವುದು ನ್ಯಾಯವಲ್ಲ. ಅವರಿಗೆ ಭಾರತೀಯ ತಂಡದ ಹಿರಿಯ ಆಟಗಾರರಿಂದ ಉತ್ತಮ ಮಾರ್ಗದರ್ಶನವಿದೆ ಎಂಬುದನ್ನು ನಾವು ಮರೆಯಬಾರದು(PC-PTI).

ಭಾರತೀಯ ಕ್ರಿಕೆಟ್ ಆಡಳಿತ ಮತ್ತು ಆಯ್ಕೆದಾರರು ವೈಭವ್ ಅವರನ್ನು ಸರಿಯಾಗಿ ನಿರ್ವಹಿಸಿ ಅವರಿಗೆ ಸರಿಯಾದ ಅವಕಾಶಗಳನ್ನು ನೀಡಿದರೆ, ಅವರು ಈ ಪೀಳಿಗೆಗೆ ಅಪರೂಪದ ಬೆಳಕಿನ ಕಿರಣವಾಗುತ್ತಾರೆ. ಹದಿನೈದನೇ ವಯಸ್ಸಿನಲ್ಲಿ ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದು ಮತ್ತು ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸುವಂತಹ ಪವಾಡಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ(PC-PTI).

ಇನ್ನು ಈ ವರ್ಷದ ಆರಂಭದಲ್ಲಿ ಹರಾರೆಯಲ್ಲಿ ಇದೇ ಸ್ಥಳದಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ವೈಭವ್ ಇಂಗ್ಲೆಂಡ್ ವಿರುದ್ಧ 175 ರನ್ಗಳ ದಾಖಲೆಯ ಇನ್ನಿಂಗ್ಸ್ ಆಡಿದರು. ಇದರಿಂದ ತಂಡ ಕೂಡ ಚಾಂಪಿಯನ್ ಆಗಿತ್ತು. ಇದೀಗ ವೈಭವ್ ಮತ್ತೊಮ್ಮೆ ಅದೇ ವೇದಿಕೆಯಲ್ಲಿ ಹಿರಿಯ ಭಾರತೀಯ ತಂಡಕ್ಕಾಗಿ ಆಡುತ್ತಿರುವುದರಿಂದ, ಅವರ ಮೇಲೆ ಭಾರಿ ನಿರೀಕ್ಷೆಗಳಿವೆ(PC-PTI).

ಜಿಂಬಾಬ್ವೆ ಪ್ರವಾಸದಿಂದ ಸಂಜು ಸ್ಯಾಮ್ಸನ್ಗೆ ವಿಶ್ರಾಂತಿ ನೀಡಿರುವುದರಿಂದ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ನಲ್ಲಿ ಹೀನಾಯ ಸೋಲುಗಳನ್ನು ಅನುಭವಿಸಿದ ಭಾರತ ತಂಡ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಈ ಸರಣಿಯನ್ನು ಗೆಲ್ಲುವ ದೃಢಸಂಕಲ್ಪ ಹೊಂದಿದೆ(PC-PTI).




