ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಆತ್ಮಹತ್ಯೆಗೆ ಶರಣು
ಆತ ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಆಸ್ತಿಯಲ್ಲಿ ಕೂಡ ಸ್ಥಿತಿವಂತ, ಸಾಕಷ್ಟು ಸಮಾಜ ಸೇವೆ ಮಾಡುವ ಮೂಲಕ ಹೆಸರು ಮಾಡಿದ್ದ ವ್ಯಕ್ತಿ, ಅಲ್ಲದೆ ಮನುಷ್ಯರಿಗೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಗಳಿಗೂ ಕೂಡ ಅನ್ನದಾತನಾಗಿದ್ದ, ಆದರೆ ಇಂತಹ ವ್ಯಕ್ತಿ ಏಕಾಏಕಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಈ ಅತ್ಮಹತ್ಯೆ ನಿಜಕ್ಕೂ ಇಡೀ ಜಿಲ್ಲೆಯ ಜನರನ್ನು ನಿಬ್ಬೇರಗಾಗುವಂತೆ ಮಾಡಿದೆ.
Updated on: Jan 11, 2026 | 4:12 PM

ದಾವಣಗೆರೆ ಪಾಲಿಕೆಯ ಬಿಜೆಪಿ ಮಾಜಿ ಸದಸ್ಯ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ BJP ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ್ ಸಂಕೋಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ದಾವಣಗೆರೆ ತಾಲೂಕಿನ ನಾಗನೂರು ಬಳಿಯ ತೋಟದಲ್ಲಿ ಈ ಘಟನೆ ನಡೆದಿದೆ.

ಈ ಘಟನೆಗೂ ಮುನ್ನ ಚಂದ್ರಶೇಖರ್ ಸಂಕೋಲ್ ಅವರ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಇತ್ತ ಚಂದ್ರಶೇಖರ್ ಸಂಕೋಲ್ ಕಾರಿಗೆ ಬೆಂಕಿ ಹಚ್ಚಿಕೊಂಡು ಸುಟ್ಟು ಕರಕಲಾಗಿದ್ದಾರೆ.

ದಾವಣಗೆರೆ ಹೊರ ವಲಯದಲ್ಲಿರುವ ನಾಗನೂರು ಗ್ರಾಮದ ಪಕ್ಕದಲ್ಲಿರುವ ಅವರದ್ದೇ ಜಮೀನಿನನಲ್ಲಿ ಅವರದ್ದೇ ಕಾರಿನಲ್ಲಿ ಕೂತು ಜೊತೆಗೆ ಟಯರ್ ಗಳನ್ನಿಟ್ಟು ಪೆಟ್ರೋಲ್ ಸುರಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ಜಿಲ್ಲೆಯ ಜನರು ನಿಬ್ಬೇರಗಾಗುವಂತೆ ಮಾಡಿದೆ. ಕೌಟುಂಬಿಕ ಕಲಹದಿಂದ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಶೇಖರ್ ಸಂಕೋಳ್ ಶಾಮನೂರು ಗ್ರಾಮದಲ್ಲಿ ಸಿಮೆಂಟ್, ಕಬ್ಬಿಣದ ಅಂಗಡಿಯನ್ನು ನಡೆಸುತ್ತ ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು. ಅಲ್ಲದೇ ಬಿಜೆಪಿಯ ಪ್ರಮುಖ ಮುಂಖಂಡನಾಗಿ ಪಕ್ಷ ಸಂಘಟನೆಯಲ್ಲಿ ಕೂಡ ಹೆಚ್ಚು ತೊಡಗಿಸಿಕೊಂಡಿದ್ದರು. ಅಲ್ಲದೆ ಅಡಿಕೆ ತೋಟ, ಕಾಂಪ್ಲೆಕ್ಸ್ ಗಳನ್ನು ಕೂಡ ಹೊಂದಿದ್ದ ಚಂದ್ರಶೇಖರ್, ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು ಎನ್ನಲಾಗಿದ್ದು, ನಿನ್ನೇ ಸಹ ಮನೆಯಲ್ಲಿ ಗಲಾಟೆಯಾಗಿದೆ.ಬಳಿಕ ಚಂದ್ರಶೇಖರ್ ಮಕ್ಕಳಾದ ಮಗ 20 ವರ್ಷದ ನರೇಶ್ ಹಾಗೂ 23 ವರ್ಷ ಮಗಳು ಪವಿತ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಈ ವಿಚಾರ ತಿಳಿದ ಚಂದ್ರಶೇಖರ್ ಸಂಕೋಳ್ ನಾಗನೂರು ಹೊರ ವಲಯದ ತೋಟಕ್ಕೆ ಬಂದು ಕಾರಿನಲ್ಲಿ ಮೂರ್ನಾಲ್ಕು ಟಯರ್ ಗಳನ್ನು ಇಟ್ಟು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಕರು ಹಾಗೂ ಆಪ್ತರು ಆಗಮಿಸಿ ಕಣ್ಣೀರು ಹಾಕಿದ್ದು, ದುಡುಕುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು ಎಂದು ಕಣ್ಣೀರಿಟ್ಟರು. ಇನ್ನು ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಭೇಟಿ ನೀಡಿ ಕಣ್ಣೀರು ಹಾಕಿದರು.

ಇನ್ನು ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಹಾಗೂ ಸೊಕೋ ಟೀಮ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರಿನಲ್ಲಿದ್ದ ಚಂದ್ರಶೇಖರ್ ಮೃತದೇಹ ಹಾಗೂ ಕಾರು ಅಸ್ಥಿಪಂಜರದಂತಾಗಿದೆ. ಯಾವ ರೀತಿ ಘಟನೆಯಾಗಿದೆ ಎನ್ನುವುದನ್ನು ಸೊಕೋ ಟೀಮ್ ಕ್ರೈಂ ಸೀನ್ ರೀ ಕ್ರೀಯೇಟ್ ಮಾಡುತ್ತಿದ್ದು, ಸ್ಥಳಕ್ಕೆ ಎಸ್ ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೌಟುಂಬಿಕ ಕಲಹದಿಂದಲೇ ಅತ್ಮಹತ್ಯೆ ಆಗಿರಬಹುದು. ಇಲ್ಲ ಅವರ ಮಕ್ಕಳು ಕೂಡ ಅತ್ಮಹತ್ಯೆಗೆ ಯತ್ನಿಸಿದ ಹಿನ್ನಲೆ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಹದಡಿ ಠಾಣೆಯ ಪೊಲೀಸರ ತನಿಖೆ ನಂತರ ಮಾಹಿತಿ ತಿಳಿಯಲಿದೆ.