- TV9 Kannada Photo gallery S. Janaki, Pride of Kannadigas and the Nightingale of Song, Falls Silent Forever; see photos
ಶಾಶ್ವತವಾಗಿ ಹಾಡು ನಿಲ್ಲಿಸಿದ ಕನ್ನಡಿಗರ ಹೆಮ್ಮೆಯ ಗಾನ ಕೋಗಿಲೆ ‘ಎಸ್ ಜಾನಕಮ್ಮ’: ಇಲ್ಲಿವೆ ಫೋಟೋಸ್
S Janaki Passes Away: ಕನ್ನಡಿಗರ ಹೆಮ್ಮೆಯ ಗಾನ ಕೋಗಿಲೆ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿ, 4 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದ ಅವರ ಸಂಗೀತ ಪಯಣ ಅವಿಸ್ಮರಣೀಯ. ಭಾರತೀಯ ಸಂಗೀತ ಲೋಕಕ್ಕೆ ಅವರ ಕೊಡುಗೆ ಅಪಾರ. ಇಲ್ಲಿವೆ ಫೋಟೋಸ್.
Updated on: Jul 11, 2026 | 9:53 PM

ಕನ್ನಡಿಗರ ಹೆಮ್ಮೆಯ ಗಾನ ಕೋಗಿಲೆ ಎಸ್. ಜಾನಕಿ ಅವರು ಇನ್ನಿಲ್ಲ. ತಮ್ಮ 88ನೇ ವಯಸ್ಸಿನಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಜೀವ ತುಂಬಿದ್ದ ಆ ದೈವಿ ಕಂಠ ಈಗ ಶಾಶ್ವತವಾಗಿ ಮೌನವಾಗಿದೆ.

ಎಸ್.ಜಾನಕಿ, ಮೂಲತಃ ಆಂಧ್ರಪ್ರದೇಶದವರು. 1938ರ ಏಪ್ರಿಲ್ 23ರಂದು ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದರು. ಇವರಿಗೆ ಬಾಲ್ಯದಿಂದಲೇ ಸಂಗೀತವೆಂದರೆ ಪಂಚಪ್ರಾಣ. ಕೇವಲ 3ನೇ ವಯಸ್ಸಿನಲ್ಲೇ ಸಂಗೀತದತ್ತ ಆಕರ್ಷಿತರಾಗಿದ್ದ ಅವರು, ಶಾಸ್ತ್ರೀಯ ಸಂಗೀತಗಾರ ಪೈಡಿ ಸ್ವಾಮಿಯವರಿಂದ ಸಂಗೀತದ ಪ್ರಾಥಮಿಕ ಪಾಠ ಕಲಿತರು.

1957ರಲ್ಲಿ ಸಿನಿಮಾ ಸಂಗೀತ ಪ್ರಪಂಚಕ್ಕೆ ಜಾನಕಿ ಪದಾರ್ಪಣೆ ಮಾಡಿದರು. ತಮಿಳಿನ ‘ವಿಧಿವಿಲಕ್ಕು’ ಚಿತ್ರದ ಮೂಲಕ ಗಾನ ಯಾನ ಆರಂಭಿಸಿದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ, 48,000ಕ್ಕೂ ಹೆಚ್ಚು ಗೀತೆಗಳಿಗೆ ಜಾನಕಿ ಅವರು ಧ್ವನಿ ಆಗಿದ್ದರು.

1957ರಲ್ಲಿ ‘ರತಿಮನ್ಮಥ’ ಚಿತ್ರದ ‘ತುಂಬಿ ಬಂದಾಡ ಭ್ರಮರ’ ಹಾಡಿನ ಮೂಲಕ ಎಸ್.ಜಾನಕಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಹುಟ್ಟಿನಿಂದ ತೆಲುಗಿನವರಾದರೂ, ಅವರಿಗೆ ಅತಿ ಹೆಚ್ಚು ಪ್ರೀತಿ, ಗೌರವ ಸಂಪಾದಿಸಿಕೊಟ್ಟಿದ್ದು ಕನ್ನಡ ನಾಡು. ಕನ್ನಡಿಗರು ಅವರನ್ನು ‘ಗಾನ ಕೋಗಿಲೆ’ ಎಂದೇ ಅಪ್ಪಿಕೊಂಡರು.

ವರನಟ ಡಾ. ರಾಜ್ಕುಮಾರ್ ಮತ್ತು ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸುವರ್ಣ ಯುಗವನ್ನೇ ಸೃಷ್ಟಿಸಿತ್ತು. ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಿಯವರು ಹಾಡಿದ ಭಾವನಾತ್ಮಕ ಯುಗಳ ಗೀತೆಗಳು ಎಂದೆಂದಿಗೂ ಸದಾ ಹಸಿರು.

ಎಸ್ ಜಾನಕಿ ಅವರು 4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ. ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ' ಗೌರವವೂ ಸಿಕ್ಕಿತ್ತು. ಅಷ್ಟೇ ಅಲ್ಲ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

60 ವರ್ಷಗಳ ತಮ್ಮ ಸುದೀರ್ಘ ಸಂಗೀತ ಪಯಣಕ್ಕೆ 2016ರಲ್ಲಿ ವಿರಾಮ ಹೇಳಿದ್ದ ಜಾನಕಿಯವರು, 2017ರಲ್ಲಿ ಮೈಸೂರಿನಲ್ಲಿಯೇ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡಿ ನಿವೃತ್ತರಾಗಿದ್ದರು.




