ಎಸ್ಐಆರ್ ದುರುಪಯೋಗ ಮಾಡಿಕೊಳ್ಳೋಕೆ ಸಿಎಂ ಡಿಕೆ ಶಿವಕುಮಾರ್ ಪ್ರವಾಸ ಮಾಡುತ್ತಿದ್ದಾರೆ: ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ
ರಾಜ್ಯದಲ್ಲಿ ಕೆಲವೆಡೆ ಭಾರೀ ಮಳೆ ಆಗುತ್ತಿದ್ದರೆ, ಇನ್ನೂ ಕೆಲವೆಡೆ ಬರದ ಪರಿಸ್ಥಿತಿ ಇದೆ. ಹೀಗಾಗಿ ಜಿಲ್ಲೆ ಜಿಲ್ಲೆಗೂ ಸಿಎಂ ಡಿಕೆ ಶಿವಕುಮಾರ್ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಿದ್ದಾರೆ. ಹೀಗಿರುವಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಎಸ್ಐಆರ್ ದುರುಪಯೋಗ ಮಾಡಿಕೊಳ್ಳೋಕೆ ಸಿಎಂ ಪ್ರವಾಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ಜುಲೈ 10: ಉತ್ತರ ಕರ್ನಾಟದ ಜಿಲ್ಲೆಗಳ ಅಭಿವೃದ್ಧಿಯತ್ತ ಗಮನಹರಿಸಿರುವ ಸಿಎಂ ಡಿಕೆ ಶಿವಕುಮಾರ್ (DK Shivakumar) ಸಿಎಂ ಆದ ಮೊದಲ ಬಾರಿಗೆ ಜಿಲ್ಲೆ ಜಿಲ್ಲೆಗೂ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy), ಸಿಎಂ ಪ್ರವಾಸ ಮಾಡುತ್ತಿರುವುದು ಎಸ್ಐಆರ್ ದುರುಪಯೋಗ ಮಾಡಿಕೊಳ್ಳಲು. ಅಧಿಕಾರಿಗಳಿಗೆ ಸೂಚನೆ ನೀಡಲು ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
SIR ದುರುಪಯೋಗ ಮಾಡಿಕೊಳ್ಳುವುದಕ್ಕೆ ಸಿಎಂ ಪ್ರವಾಸ ಎಂದ ಹೆಚ್ಡಿ ಕುಮಾರಸ್ವಾಮಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ‘‘ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಸರ್ಕಾರ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವ್ಯಕ್ತಪಡಿಸಿರುವ ಆಕ್ಷೇಪಗಳಿಗೆ ನಮ್ಮ ಸಂಪೂರ್ಣ ಸಹಮತವಿದೆ. ನಿಜವಾದ ಮತದಾರರನ್ನು ಉಳಿಸೋಕೆ ಎಸ್ಐಆರ್ ಮಾಡಲಾಗುತ್ತಿದೆ. ಚುನಾವಣಾ ಆಯೋಗ ಗೊಂದಲಗಳನ್ನ ಸರಿಪಡಿಸಬೇಕು ಅನ್ನೋದು ನಮ್ಮ ಒತ್ತಾಯ’’ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ
ಮುಂದುವರಿದು ಮಾತನಾಡಿದ ಅವರು, ‘‘ಡಿಕೆ ಶಿವಕುಮಾರ್ ಪ್ರಸ್ತುತ ಮಾಡುತ್ತಿರುವ ವಿಭಾಗವಾರು ಸಭೆಗಳು ಹಾಗೂ ಜಿಲ್ಲಾ ಪ್ರವಾಸಗಳು ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗಾಗಲಿ ಅಥವಾ ಅಭಿವೃದ್ಧಿ ಕೆಲಸಗಳಿಗಾಗಲಿ ಅಲ್ಲವೇ ಅಲ್ಲ. ಅಧಿಕಾರಿಗಳಿಗೆ ಎಸ್ಐಆರ್ ದುರುಪಯೋಗದ ಕುರಿತು ಅಗತ್ಯ ಸೂಚನೆ ಹಾಗೂ ಮಾರ್ಗದರ್ಶನ ನೀಡುವ ಏಕೈಕ ಉದ್ದೇಶದಿಂದಲೇ ಈ ಪ್ರವಾಸಗಳನ್ನ ಹಮ್ಮಿಕೊಂಡಿದ್ದಾರೆ’’ ಎಂದು ನೇರವಾಗಿ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಹೆಚ್ಡಿ ಕುಮಾರಸ್ವಾಮಿ, ರಾಜ್ಯದ ಹಲವೆಡೆ ಮಳೆ, ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ, ಏನು ಕ್ರಮಕೈಗೊಂಡಿದ್ದೀರಿ. ಯಾರಿಗೆ ಹೂವು ಮುಡಿಸುತ್ತೀರಿ. ನಮ್ಮ ರಾಜ್ಯದ ಜನರಿಗೆ ಹೂವು ಮುಡಿಸುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್: ಫುಟ್ಪಾತ್ ತೆರವು ವೀಕ್ಷಣೆ ಮಾಡಿ ಹೇಳಿದ್ದೇನು ನೋಡಿ
ಪ್ರವಾಹ, ಬರದ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರಾ? ಸಾಲಮನ್ನಾ ಬಗ್ಗೆ ಮಾತಾಡ್ತೀರಿ ಈ ಕ್ಷಣದವರೆಗೆ ಆ ಕೆಲಸ ಆಗಿಲ್ಲ. ಉತ್ತರ ಕರ್ನಾಟಕ ಭಾಗದ ಹಲವು ಹಳ್ಳಿಗಳು ಸಂಕಷ್ಟದಲ್ಲಿವೆ. ಮುಖ್ಯಮಂತ್ರಿಗಳ ಬೆಳಗಾವಿ ಜಿಲ್ಲೆಯ ಪ್ರವಾಸ ಸಹ ನೋಡಿದ್ದೇನೆ, ರಾತ್ರಿ 20 ಶಾಸಕರ ಜೊತೆಗೆ ಡಿನ್ನರ್ ಪಾರ್ಟಿ ಮಾಡಿದ್ದಾರೆ. ಈ ಹಿಂದಿನ ಸಿಎಂ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ಮಾಡಿದರು. ಈಗಿನ ಸಿಎಂ ಕಾವೇರಿ, ಗೋದಾವರಿ-ಕೃಷ್ಣಾ ಜೊಡಣೆ ಬಗ್ಗೆ ಮಾತಾಡಿದ್ದಾರೆ. ಪಕ್ಕದ ಸಿಎಂಗಳನ್ನು ಕರೆಸಿ ನಮ್ಮ ಸಿಎಂ ಫೋಟೋ ತೆಗೆಸಿಕೊಂಡರು. ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿದ ಬಗ್ಗೆ ಚರ್ಚೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




