ಮುಂದುವರಿದ ಖಾತೆ ಕಿತ್ತಾಟ: ಪಟ್ಟು ಬಿಡದ ಕೃಷ್ಣಬೈರೇಗೌಡ; ಸಿದ್ದರಾಮಯ್ಯ ಭೇಟಿಯಾದ ಜಮೀರ್
ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ 10 ದಿನಗಳಲ್ಲೇ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಅಸಮಾಧಾನ ಸ್ಫೋಟಗೊಂಡಿದೆ. ಕೃಷ್ಣಬೈರೇಗೌಡ BDA, BMRDA ನೀಡುವಂತೆ ಪಟ್ಟುಹಿಡಿದಿದ್ದಾರೆ. ಇತ್ತ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ, ಖರ್ಗೆ ಭೇಟಿಯಾಗಿದ್ದಾರೆ. ಸಚಿವ ಸ್ಥಾನಕ್ಕಾಗಿ ರಾಜಣ್ಣ ಪುತ್ರ ಹಾಗೂ ಹಂಪನಗೌಡ ಬಾದರ್ಲಿ ಕೂಡ ಪ್ರಯತ್ನ ನಡೆಸಿದ್ದಾರೆ.

ಬೆಂಗಳೂರು, ಜೂನ್ 13: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನಗಳಾಗಿವೆ. 13 ಸಚಿವರು ಪ್ರಮಾಣವಚನ ಸ್ವೀಕರಿಸಿಯೂ ಆಗಿದೆ. ಆದರೆ ಖಾತೆ ಬಗ್ಗೆ ಸಚಿವರ ಕ್ಯಾತೆ ಮುಂದುವರಿದಿದೆ. BDA, BMRDA ಹೊರತುಪಡಿಸಿ ಕೇವಲ ಬೆಂಗಳೂರು ನಗರಾಭಿವೃದ್ಧಿ ನೀಡಿದ್ದಕ್ಕೆ ಕೃಷ್ಣಬೈರೇಗೌಡ ಮುನಿಸಿಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಜೊತೆಗೆ BDA, BMRDA ನೀಡುವಂತೆ ಹಾಕಿರುವ ಪಟ್ಟನ್ನು ಸಡಿಲಿಸುತ್ತಿಲ್ಲ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದು, BDA, BMRDA ಸಿಗುವ ವಿಶ್ವಾಸದಲ್ಲಿದ್ದಾರೆ.
ಕೃಷ್ಣಬೈರೇಗೌಡ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು. ಸ್ಪಷ್ಟತೆ ಇದರೆ ಉತ್ತಮ ಕೆಲಸ ಮಾಡಬಹುದು. ಸ್ಪಷ್ಟತೆ ಇಲ್ಲದಿದ್ದರೆ ನಿರೀಕ್ಷೆ ಮುಟ್ಟಲು ಆಗಲ್ಲ ಅಂತಾ ಮಾರ್ಮಿಕವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಜಮೀರ್
ಅತ್ತ ಜಮೀರ್ ಅಹ್ಮದ್ಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ, ಹುಬ್ಬಳ್ಳಿ ನಗರದಲ್ಲಿ ಧರ್ಮಗುರುಗಳು ಪ್ರತಿಭಟನೆ ಮಾಡಿದರು. ಇತ್ತ ಜಮೀರ್ ಅಹ್ಮದ್ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಇಂದು ಸಂಜೆ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಎಲ್ಲ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದಾರೆ.
ದಾವಣಗೆರೆ ಉಪಚುನಾವಣೆ ಬೆಳವಣಿಗೆ ಮಾತ್ರವಲ್ಲದೇ ಬೇರೆಬೇರೆ ಬೆಳವಣಿಗೆಗಳ ಬಗ್ಗೆಯೂ ಜಮೀರ್ ಮೇಲೆ ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರೆ. ಅವರ ಮುನಿಸಿನಿಂದಲೇ ಸಚಿವ ಸ್ಥಾನ ಮಿಸ್ ಎಂದು ಕೈ ಪಾಳಯದಲ್ಲಿ ಚರ್ಚೆ ಹಿನ್ನೆಲೆ ಅವರ ಮುನಿಸು ತಣಿಸಲು ಜಮೀರ್ ಕಸರತ್ತು ನಡೆಸಿದ್ದಾರೆ.
ಇದನ್ನೂ ಓದಿ: ‘ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ’:ಪರಮಾಪ್ತ ಜಮೀರ್ ವಿರುದ್ಧ ಸಿದ್ದರಾಮಯ್ಯ ಗರಂ
ಇನ್ನು ಸಿದ್ದರಾಮಯ್ಯ ಭೇಟಿ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನ ಜಮೀರ್ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಖರ್ಗೆ ಭೇಟಿ ಮಾಡಿ ಜಮೀರ್ ಚರ್ಚೆ ಮಾಡಿದ್ದಾರೆ.
ತಂದೆ ಪರ ಸಿಎಂ ಜೊತೆ ರಾಜೇಂದ್ರ ರಾಜಣ್ಣ ಸಂಧಾನ?
ಈಗಾಗಲೇ ಡಿಕೆ ಶಿವಕುಮಾರ್ ಜೊತೆ ಮುನಿಸಿಕೊಂಡಿರುವ ಮಾಜಿ ಸಚಿವ ರಾಜಣ್ಣ ರಾಜಿಗೆ ಮುಂದಾಗಿದ್ದಾರೆನ್ನಲಾಗಿದೆ. ಸಿಎಂ ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ರಾಜಣ್ಣ ಪುತ್ರ ರಾಜೇಂದ್ರ ಮುಂದಾಗಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿ ರಾಜೇಂದ್ರ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವನಾಗಲ್ಲ ಎಂದಿರುವ ರಾಜಣ್ಣ ಮಗನಿಗಾದರೂ ಮಂತ್ರಿಗಿರಿ ಸಿಗಲು ಅನ್ನೋ ಪ್ಲ್ಯಾನ್ ಮಾಡಿದ್ದಾರೆನ್ನಲಾಗಿದೆ. ನಿನ್ನೆ ಡಿಕೆ ಶಿವಕುಮಾರ್ ಜೊತೆಗೆ ರಾಜೇಂದ್ರ ಅರ್ಧ ಗಂಟೆ ಮಾತುಕತೆ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಡಿಕೆ ಶಿವಕುಮಾರ್ ಇಟ್ಟ 9 ಬೇಡಿಕೆಗಳು ಹೀಗಿವೆ
ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ಹಂಪನಗೌಡ ಬಾದರ್ಲಿ ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಸಿಂಧನೂರು ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಪರ ಅಭಿಮಾನಿಗಳು 20 ಕಿ.ಮೀ ಪಾದಯಾತ್ರೆ ಮಾಡಿದರು. ಸಿಂಧನೂರಿನಿಂದ ಅಂಬಾದೇವಿ ದೇಗುಲದವರೆಗೆ ಪಾದಯಾತ್ರೆ ಮಾಡಿದ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದರು.
ವರದಿ: ಬ್ಯೂರೋ ರಿಪೋರ್ಟ್, ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




