ಬಜೆಟ್ ಮಂಡನೆಗೆ ಸಿಎಂ ಸಜ್ಜು: ಪಟ್ಟದ ಪಟ್ಟು ಮತ್ತಷ್ಟು ಗಟ್ಟಿಗೊಳಿಸಿದ ಡಿಕೆಶಿ; ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ
ಕರ್ನಾಟಕ ಕಾಂಗ್ರೆಸ್ನಲ್ಲಿ ಸಿಎಂ ಗಾದಿಗಾಗಿ ತಿಕ್ಕಾಟ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ 'ಅಜ್ಜಯ್ಯನ ಆಶೀರ್ವಾದ' ಮತ್ತು 'ಶ್ರಮಕ್ಕೆ ತಕ್ಕ ಫಲ' ಎಂಬ ಸಂದೇಶ ನೀಡಿದರೆ, ಸಿಎಂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಇದರಿಂದ ದೂರ ಉಳಿದಿದ್ದಾರೆ. ಸದ್ಯ ಫೆ.17ರ ನಂತರದ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಬೆಂಗಳೂರು, ಫೆಬ್ರವರಿ 14: ಪ್ರಸ್ತುತ ರಾಜಕೀಯ ವಿದ್ಯಮಾನ ನೋಡುತ್ತಿದ್ದರೆ ಕಾಂಗ್ರೆಸ್ನಲ್ಲಿ (Congress) ಪಟ್ಟದಪಗಡೆಯಾಟ ರೋಚಕಘಟ್ಟಕ್ಕೆ ತಲುಪಿದಂತೆ ಕಾಣಿಸುತ್ತಿದೆ. ಸಿಎಂ ಸಿದ್ರಾಮಯ್ಯ (Siddaramaiah) 17ನೇ ಬಾರಿ ಬಜೆಟ್ಗೆ ಸಿದ್ಧತೆ ಮಾಡುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಸಲು ಸಜ್ಜಾಗಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ತಮ್ಮದೇ ಆದ ರೀತಿಯಲ್ಲಿ ತಂತ್ರಗಾರಿಕೆ ನಡೆಸ್ತಿದ್ದಾರೆ. ಮೊನ್ನೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಏನು ಹೇಳ್ಬೇಕೋ ಎಲ್ಲಾ ಹೇಳಿದ್ದೀನಿ ಅನ್ನೋ ಮೂಲಕ ಪಿಕ್ಚರ್ ಅಭಿ ಬಾಕಿ ಹೈ ಅನ್ನೋ ಮೆಸೇಜ್ ಕೊಟ್ಟಿದ್ದಾರೆ.
‘ನನಗೆ ಅಜ್ಜಯ್ಯನ ಆಶೀರ್ವಾದ ಇದೆ’ ಎಂದು ಡಿಕೆ ಶಿವಕುಮಾರ್ ಟ್ವೀಟ್
ಕಾಂಗ್ರೆಸ್ನಲ್ಲಿ ಡಿಕೆ ಶಿವಕುಮಾರ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ ಅಂತಾ ನಂಬಿಕೆ ಇಟ್ಕೊಂಡಿರೋ ರಾಜಕಾರಣಿ. ಈ ನಡುವೆ ಮತ್ತೊಂದು ಸಂದೇಶ ಕೊಟ್ಟಿರುವ ಡಿಕೆ ಶಿವಕುಮಾರ್ ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗೋ ಅನ್ನೋ ಮೂಲಕ ಮಾರ್ಮಿಕವಾಗಿ ನುಡಿದಿದ್ದಾರೆ.
ಹೈಕಮಾಂಡ್ ಹೇಳಿದ್ದೇ ಫೈನಲ್: ಸಿಎಂ
ಶ್ರಮಕ್ಕೆ ತಕ್ಕ ಫಲ ಸಿಗುತ್ತೆ ಅನ್ನೋ ಡಿಕೆ ಶಿವಕುಮಾರ್ ಟ್ವೀಟ್ಗೆ ರಿಯಾಕ್ಟ್ ಮಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ನವರು ಏನಾದ್ರೂ ಟ್ವೀಟ್ ಮಾಡಿದ್ದಾರಾ? ಇಲ್ವಲ್ಲಾ? ಅಂದಿದ್ದಾರೆ. ಕುರ್ಚಿ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹೈಕಮಾಂಡ್ ಹೇಳಿದ್ದೇ ಫೈನಲ್ ಎಂದಿದ್ದಾರೆ.
ನಿನ್ನೆಯಷ್ಟೇ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಸಿಎಂ, ಡಿಸಿಎಂ ಅಕ್ಕ, ಪಕ್ಕದಲ್ಲಿ ಕುಳಿತಿದ್ರೂ, ಮಾತಿರಲಿಲ್ಲ, ಕಥೆ ಇರಲಿಲ್ಲ. ಇವತ್ತು ಹಾವೇರಿ ಸಮಾವೇಶದಲ್ಲಿ ಸಿಎಂ ಭಾಷಣ ಆರಂಭಿಸ್ತಿದ್ದಂತೆಯೇ ಡಿಕೆ ಶಿವಕುಮಾರ್ ನಿರ್ಗಮಿಸಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೇ ಹೊತ್ತಿನಲ್ಲೇ ಮುಂದಿನ ಸಿಎಂ ಘೋಷಣೆಗಳು ಮಾತ್ರ ನಿಲ್ಲಲ್ಲ. ಹಾವೇರಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಬೆಂಬಲಿಗರು 5 ವರ್ಷ ಸಿದ್ದರಾಮಯ್ಯ ಸಿಎಂ ಅಂತಾ ಘೋಷಣೆ ಕೂಗಿದರೆ, ಮತ್ತೊಂದ್ಕಡೆ ಸಮಾವೇಶಕ್ಕೆ ಡಿಕೆ ಶಿವಕುಮಾರ್ ಆಗಮಿಸ್ತಿದ್ದಂತೆಯೇ ಡಿಕೆ ಡಿಕೆ ಎಂದು ಫ್ಯಾನ್ಸ್ ಘೋಷಣೆ ಕೂಗಿದರು.
ಕುರ್ಚಿ ಕಿತ್ತಾಟ: ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ
ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಇದ್ರೂ ಕೂಡ, ಸಮಾವೇಶದಿಂದ ದೂರ ಉಳಿದಿದ್ದಾರೆ. ಹಾವೇರಿ ಸಮಾವೇಶದಲ್ಲಿ ಭಾಗಿಯಾಗದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಹೈಕಮಾಂಡ್ ಯಾಕೆ ಮೌನವಹಿಸಿದೆ ಅನ್ನೋದು ಯಕ್ಷ ಪ್ರಶ್ನೆ ಆಗಿದೆ. ಮೊನ್ನೆಯಷ್ಟೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಡಿಕೆ ಶಿವಕುಮಾರ್ ಚರ್ಚೆ ಮಾಡಿದ ಮಾಹಿತಿಯಿಂದ, ಫೆಬ್ರವರಿ 17ರ ನಂತರ ಗೇಮ್ ಪ್ಲ್ಯಾನ್ ಚೇಂಜ್ ಆಗುತ್ತಾ, ಫೆಬ್ರವರಿ 17ರ ಬಳಿ ಇಬ್ಬರಿಗೂ ಹೈಕಮಾಂಡ್ ಬುಲಾವ್ ಬರುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿವೆ.
ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರದ ಸಾಧನೆಯ ಸಮಾವೇಶ; ಬಸವರಾಜ ಬೊಮ್ಮಾಯಿ ವ್ಯಂಗ್ಯ
ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ ನಾಯಕರು, ಹೈಕಮಾಂಡ್ ಗೊಂಬೆಯಾಟ ಆಡ್ತಿದೆ ಅಂತಾ ಕಿಡಿಕಾರಿದ್ದಾರೆ. ‘ಕೈ’ ಮನೆಯಲ್ಲಿನ ಬೆಳವಣಿಗೆ ನೋಡ್ತಿದ್ರೆ ಫೆ.17 ರ ನಂತರ ಕ್ಲೈಮ್ಯಾಕ್ಸ್ ಬಿರುಗಾಳಿ ಬೀಸುತ್ತಾ ಅನ್ನೋ ಕುತೂಹಲ ಎಲ್ಲರಿಗೂ ಕಾಡ್ತಿದೆ.
ವರದಿ: ಬ್ಯೂರೋ ರಿಪೋರ್ಟ್ ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
