ಸಿಎಂ ಸಿದ್ದರಾಮಯ್ಯಗೆ ಹನಿಟ್ರ್ಯಾಪ್ ದಾಖಲೆ ನೀಡಿದ ರಾಜಣ್ಣ ಪುತ್ರ ರಾಜೇಂದ್ರ: ಹೇಳಿದ್ದಿಷ್ಟು
ಸಚಿವ ರಾಜಣ್ಣರ ಪುತ್ರ ರಾಜೇಂದ್ರ ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಎಲ್ಲಾ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದು, ಶೀಘ್ರದಲ್ಲೇ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ನನಗೆ ಹನಿಟ್ರ್ಯಾಪ್ ನಡೆಸಲು ಯತ್ನ ನಡೆಸಿದ್ದರು ಎಂದಿದ್ದಾರೆ. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ.

ಬೆಂಗಳೂರು, ಮಾರ್ಚ್ 22: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಚಿವ ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ಗೆ (honeytrap) ಯತ್ನಿಸಿದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲಾ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದೇನೆ. ಸೋಮವಾರ ಅಥವಾ ಮಂಗಳವಾರ ಡಿಜಿ&ಐಜಿಪಿಗೆ ದೂರು ಸಲ್ಲಿಸುವೆ ಎಂದು ಹೇಳಿದ್ದಾರೆ.
ನನಗೆ ಹನಿಟ್ರ್ಯಾಪ್ ನಡೆಸಲು ಯತ್ನಿಸಿದ್ದರು: ರಾಜೇಂದ್ರ ರಾಜಣ್ಣ
ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಎಂಎಲ್ಸಿ ರಾಜೇಂದ್ರ ರಾಜಣ್ಣ, ನನಗೆ ಹನಿಟ್ರ್ಯಾಪ್ ನಡೆಸಲು ಕಳೆದ 3 ತಿಂಗಳಿಂದ ಯತ್ನ ನಡೆಸಿದ್ದರು. ಹನಿಟ್ರ್ಯಾಪ್ ನಡೆಸಲು ನಮ್ಮ ಮಧುಗಿರಿ ನಿವಾಸಕ್ಕೂ ಬಂದಿದ್ದರು. ಬೆಂಗಳೂರಿನ ಸರ್ಕಾರಿ ನಿವಾಸಕ್ಕೂ ಬಂದು ಹನಿಟ್ರ್ಯಾಪ್ಗೆ ಯತ್ನಿಸಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್ಗೆ ಯತ್ನಿಸಿದ್ದರೆಂದು ಗೊತ್ತಿಲ್ಲ. ಯಾರೆಂದು ಹೇಗೆ ಹೇಳೋದು?, ತನಿಖೆಯಾಗಲಿ ಎಲ್ಲ ಹೊರಬರುತ್ತೆ ಎಂದಿದ್ದಾರೆ.
ಇದನ್ನೂ ಓದಿ: ಹಲೋ ಅಂದ್ರೆ ಆ ಕಡೆಯಿಂದ ಹಲೋ ಅಂತಾರೆ: ಹನಿಟ್ರ್ಯಾಪ್ ಬಗ್ಗೆ ಡಿಕೆಶಿ ಹೇಳಿಕೆಗೆ ರಾಜಣ್ಣ ಹೇಳಿದ್ದಿಷ್ಟು
ನಮ್ಮ ತಂದೆಯವರಷ್ಟೇ ಅಲ್ಲ ಯಾರಿಗೂ ಈ ರೀತಿಯಾಗಿ ಆಗಬಾರದು. ಎಲ್ಲರ ಮನೆಯಲ್ಲೂ ಹೆಣ್ಮಕ್ಕಳು ಇರ್ತಾರಲ್ವಾ?, ಈ ರೀತ್ರಿ ಆದರೆ ಹೇಗೆ? ಪ್ರಕರಣದ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ಆಗಲಿ. ಡಿಜಿ&ಐಜಿಪಿಗೆ ದೂರು ಸಲ್ಲಿಸಿದ ನಂತರ ದೆಹಲಿಗೆ ಹೋಗುತ್ತೇವೆ ಎಂದರು.
ತನಿಖೆ ಹೇಗೆ ಮಾಡುತ್ತಾರೆ ನೋಡ್ಬೇಕಿದೆ ಅದು ಸಿಎಂಗೆ ಮತ್ತು ಪರಮೇಶ್ವರ್ಗೆ ಬಿಟ್ಟ ವಿಚಾರ ಎಂದು ತುಮಕೂರಿನ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ಹನಿಟ್ರ್ಯಾಪ್ ಬಗ್ಗೆ ಬೇಸರ ಹೊರಹಾಕಿದ್ದು, ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ. ಎಲ್ಲದಕ್ಕೂ ದಾಖಲೆ ಇದೆ ಎಂದಿದ್ದಾರೆ.
ಗರ್ಜಿಸುವ ಹುಲಿಗಳೇ ಟಾರ್ಗೆಟ್: ‘ಹನಿ’ ಕಹಾನಿಗೆ ಸತೀಶ್ ಟ್ವಿಸ್ಟ್
ಒಂದ್ಕಡೆ ರಾಜೇಂದ್ರ ಹನಿಟ್ರ್ಯಾಪ್ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ ಎನ್ನುತ್ತಿರುವಾಗಲೇ, ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಹಾಕಿದ್ದಾರೆ. ಗರ್ಜಿಸುವ ಹುಲಿಗಳಿಗೆ ಸಿಡಿ ತೋರಿಸುವ ಕೆಲಸ ನಡೀತಿದೆ ಅಂದಿದ್ದಾರೆ. ಇನ್ನು ಸಚಿವ ಎಂ.ಬಿ.ಪಾಟೀಲ್ ಇದರ ಹಿಂದಿರುವ ಡೈರೆಕ್ಟರ್, ಪ್ರೊಡ್ಯೂಸರ್ ಯಾರು ಅಂತಾ ಗೊತ್ತಾಗಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣ ಹಿಟ್ ಅಂಡ್ ರನ್ ಆಗಬಾರದು, ಟಾರ್ಗೆಟ್ ಆಗಿರುವವರು ದೂರು ಸಲ್ಲಿಸಲಿ: ಡಿಕೆ ಶಿವಕುಮಾರ್
ಇನ್ನು ನಿನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್, ಸುಮ್ಮನಿದ್ರೆ ನಿಮ್ಮತ್ರ ಯಾರಾದ್ರು ಬರ್ತಾರಾ ಎಂದು ಪ್ರಶ್ನಿಸಿದ್ರು. ನೀವು ಹಲೋ ಅಂದ್ರೆ ಹಲೋ ಅಂತಾರೆ ಅಂತಾ ಹೇಳಿಕೆ ಕೊಟ್ಟಿದ್ರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್, ರಾಜಣ್ಣರ ಬಳಿ ಹಲೋಗಿಲೋ ಇಲ್ಲ ನಡೆಯಲ್ಲ ಎಂದಿದ್ದಾರೆ. ಇನ್ನು ವಿಪಕ್ಷ ನಾಯಕ ಆರ್.ಅಶೋಕ್, ಹನಿಟ್ರ್ಯಾಪ್ನಲ್ಲಿರುವ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು ಅಂತಾ ಆಗ್ರಹ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಸಚಿವ ರಾಜಣ್ಣಗೆ ಹನಿಟ್ರ್ಯಾಪ್ಗೆ ಯತ್ನ ಮಾಡಿರೋದು ಯಾರು? ಇದ್ರ ಹಿಂದಿರೋದು ಯಾರು ಅಂತಾ ತನಿಖೆಯಿಂದ್ಲೇ ಬಯಲಾಗಬೇಕಿದೆ.
ವರದಿ: ಬ್ಯುರೋ ರಿಪೋರ್ಟ್ ಟಿವಿ9 (Daya)
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.