ಭಾರತದಲ್ಲಿ ಭ್ರಷ್ಟಾಚಾರದ ಜನಕ,​ ಭ್ರಷ್ಟರಿಗೆ ರಕ್ಷಣೆ ನೀಡುವ ಪಕ್ಷ ಕಾಂಗ್ರೆಸ್: ಪ್ರಹ್ಲಾದ್​ ಜೋಶಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ಹಾಗೂ ಅಭಿಯೋಜನೆಗೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅನುಮತಿ ನೀಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​ ಭ್ರಷ್ಟಾಚಾರದ ಜನಕ ಎಂದಿದ್ದಾರೆ.

ಭಾರತದಲ್ಲಿ ಭ್ರಷ್ಟಾಚಾರದ ಜನಕ,​ ಭ್ರಷ್ಟರಿಗೆ ರಕ್ಷಣೆ ನೀಡುವ ಪಕ್ಷ ಕಾಂಗ್ರೆಸ್: ಪ್ರಹ್ಲಾದ್​ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ​
Follow us
| Updated By: ವಿವೇಕ ಬಿರಾದಾರ

Updated on: Aug 18, 2024 | 1:33 PM

ಹುಬ್ಬಳ್ಳಿ, ಆಗಸ್ಟ್​ 18: ಭಾರತದಲ್ಲಿ ಭ್ರಷ್ಟಾಚಾರದ ಜನಕ ಕಾಂಗ್ರೆಸ್​. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆನ್ನಿಗೆ ಕಾಂಗ್ರೆಸ್ (Congress)​​ ಹೈಕಮಾಂಡ್​​ ನಿಂತಿರುವುದು ಆಶ್ಚರ್ಯ ಏನಲ್ಲ. ಕಾಂಗ್ರೆಸ್ ಹೈಕಮಾಂಡ್ ಯಾವಾಗಲೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್​ ಭ್ರಷ್ಟರಿಗೆ ರಕ್ಷಣೆ ನೀಡುತ್ತೆ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಅರ್ಥಾತ್ ಮನಮೋಹನ್​ ಸಿಂಗ್ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ (Pralhad Joshi) ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎಲ್ಲ ಅವಧಿಯಲ್ಲೂ ಕಾಂಗ್ರೆಸ್ ಭ್ರಷ್ಟಾಚಾರದ ಪರಾಕಾಷ್ಠೆ ತಲುಪಿತ್ತು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್​​ಗೆ ಜಗತ್ತಿನಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪಕ್ಷ ಎಂದು ಖ್ಯಾತಿ ಇತ್ತು. ಹೀಗಾಗಿ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುತ್ತೆ ಎಂದು ಹೇಳಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ಹಾಗೂ ಅಭಿಯೋಜನೆಗೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರೆ ನಿಮಗೆ ಆತ್ಮಸಾಕ್ಷಿ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿ. ನಿರಪರಾಧಿ ಅಂತ ಸಾಬೀತಾದ ಬಳಿಕ ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಬನ್ನಿ. ನಿಮ್ಮ ಮೇಲೆ ನಂಬಿಕೆ ಇದೆ ಇಲ್ವಾ? ಎಂದು ಪ್ರಶ್ನಸಿದರು.

ಇದನ್ನೂ ಓದಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​​: ಸಿದ್ದರಾಮಯ್ಯ ವಿರುದ್ಧ ಯಾವೆಲ್ಲಾ ಸೆಕ್ಷನ್? ಇಲ್ಲಿದೆ ವಿವರ

ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಕೂಡ ಅತ್ಯಂತ ಹಿಂದುಳಿದ ಸಮಾಜದವರು. ಭ್ರಷ್ಟಾಚಾರಕ್ಕೆ ಜಾತಿ ಇಲ್ಲ, ಭ್ರಷ್ಟಾಚಾರ ದೇಶಕ್ಕೆ ಅಂಟಿದ ರೋಗ. ಭ್ರಷ್ಟಾಚಾರದ ಪ್ರಕರಣಗಳಿಗೆ ಜಾತಿಯ ಲೇಪನ ಮಾಡಬಾರದು. ನೀವೇನು ಜಾತಿ ಬಗ್ಗೆ ಹೇಳುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.

ನ್ಯಾಯಯುತ ತನಿಖೆಗಾಗಿ ಪ್ರಾಸಿಕ್ಯೂಷನ್​ಗೆ ಅನುಮತಿ: ಸಿಟಿ ರವಿ

13 ವರ್ಷಗಳ ಹಿಂದೆ ಅಂದು ಮುಖ್ಯಮಂತ್ರಿಯಾಗಿದ್ದ ಬಿಎಸ್​ ಯಡಿಯೂರಪ್ಪ ಅವರ ವಿರುದ್ಧವೂ ತನಿಖೆಗೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದರು. ಅಂದಿನ ರಾಜ್ಯಪಾಲರ ನಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು. ನ್ಯಾಯಯುತ ತನಿಖೆಯಾಗಲಿ ಎಂದು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ಸುದೀರ್ಘ ಅನುಭವವಿದೆ. ಇದನ್ನು ಯಾವ ರೀತಿ ಕಾನೂನುಬಾಹಿರ ಅನ್ನುತ್ತಿದ್ದಾರೆ? 13 ವರ್ಷದ ಹಿಂದೆ ಏನು ಹೇಳಿದ್ದರೋ ಅದನ್ನೇ ಹೇಳಬೇಕು. ಬಿಜೆಪಿ ,ಜೆಡಿಎಸ್, ಕಾಂಗ್ರೆಸ್ ಎಲ್ಲರಿಗೂ ಒಂದೇ ಸಂವಿಧಾನ. ಪ್ರಾಮಾಣಿಕವಾಗಿದ್ದರೆ ನೀವ್ಯಾಕೆ ಹೆದರುತ್ತೀರಿ. ರಾಜ್ಯಪಾಲರು ತೀರ್ಪು ಕೊಟ್ಟಿಲ್ಲ, ಕೇವಲ ತನಿಖೆಗೆ ಅನುಮತಿ ಕೊಟ್ಟಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ