ಟಿಎಮ್ಸಿ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕಿ ಸೋನಾಲಿ ಗುಹಾ ವಾಪಸ್ಸು ಟಿಎಮ್ಸಿಗೆ ಸೇರಿಸಿಕೊಳ್ಳುವಂತೆ ದೀದಿಯನ್ನು ಅಂಗಲಾಚುತ್ತಿದ್ದಾರೆ!
ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಸೋನಾಲಿ ಅವರು ಹಿಂದೊಮ್ಮೆ ಮಮತಾ ಅವರ ನೆರಳು ಅನಿಸಿಕೊಂಡಿದ್ದರೂ ಚುನಾವಣೆಗೆ ಮೊದಲು ಹಲವಾರು ಟಿಎಮ್ಸಿ ನಾಯಕರೊಂದಿಗೆ ಬಿಜೆಪಿಗೆ ಗುಳೆ ಹೋಗಿದ್ದರು.

ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಗೆ ಮೊದಲು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ್ದ ಮಾಜಿ ಶಾಸಕಿ ಸೋನಾಲಿ ಗುಹಾ ಶನಿವಾರದಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರವೊಂದನ್ನು ಬರೆದು ತಾವು ಪಕ್ಷ ತೊರೆದದ್ದಕ್ಕಾಗಿ ಕ್ಷಮೆ ಯಾಚಿಸಿ ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಸಾಮಾಜನ ಜಾಲತಾಣಗಳಲ್ಲಿ ಪತ್ರದ ಪ್ರತಿಯನ್ನು ಹರಿಬಿಟ್ಟಿರುವ ಸೋನಾಲಿ ಅವರು ತಾನು ಭಾವುಕಳಾಗಿ ಪಕ್ಷ ಬಿಟ್ಟೆ ಎಂದು ಹೇಳಿದ್ದಾರೆ.
‘ನಾನು ತಪ್ಪು ನಿರ್ಣಯ ತೆಗೆದುಕೊಂಡೆ ಅಂತ ಒಡೆದ ಹೃದಯದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ, ಭಾವೋದ್ವೇಗತೆಯಲ್ಲಿ ಆ ನಿರ್ಧಾರ ತೆಗೆದುಕೊಂಡಿದ್ದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ನನಗೆ ಸಾಧ್ಯವಾಗುತ್ತಿಲ್ಲ,’ಎಂದು ಸೋನಾಲಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
‘ಹೇಗೆ ಮೀನು ನೀರನ್ನು ಬಿಟ್ಟು ಬದುಕಲಾರದೋ ಹಾಗೆಯೇ ನಾನು ದೀದಿ ಇಲ್ಲದೆ ಬದುಕಲಾರೆ. ನಿಮ್ಮ ಕ್ಷಮೆಯನ್ನು ಕೇಳುತ್ತೇನೆ, ನೀವು ನನ್ನನ್ನು ಕ್ಷಮಿಸದೆ ಹೋದರೆ ನಾನು ಬದುಕಲಾರೆ. ಪಕ್ಷಕ್ಕೆ ವಾಪಸ್ಸಾಗಲು ಮತ್ತು ನನ್ನ ಬದುಕಿನ ಉಳಿದ ಭಾಗವನ್ನು ನಿಮ್ಮ ವಾತ್ಸಲ್ಯದೊಂದಿಗೆ ಕಳೆಯಲು ಅವಕಾಶ ಮಾಡಿಕೊಡಿ.’ ಎಂದು ಸೋನಾಲಿ ಗೋಗರೆದಿದ್ದಾರೆ.
ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಸೋನಾಲಿ ಅವರು ಹಿಂದೊಮ್ಮೆ ಮಮತಾ ಅವರ ನೆರಳು ಅನಿಸಿಕೊಂಡಿದ್ದರೂ ಚುನಾವಣೆಗೆ ಮೊದಲು ಹಲವಾರು ಟಿಎಮ್ಸಿ ನಾಯಕರೊಂದಿಗೆ ಬಿಜೆಪಿಗೆ ಗುಳೆ ಹೋಗಿದ್ದರು.
ಚುನಾವಣೆಯಲ್ಲಿ ಮಮತಾ ಅವರು ಟಿಕೆಟ್ ನೀಡದ ಕಾರಣ ಸೋನಾಲಿ ಟಿವಿ ಚ್ಯಾನೆಲ್ಗಳೆದರುರು ಭಾವುಕರಾಗಿ ಕೂಗಾಡಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರು.
ಅವರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲವಾದರೂ ಬಂಗಾಳದಲ್ಲಿ ಬಿಜೆಪಿಯು ನೆಲೆಯನ್ನು ಭದ್ರಗೊಳಿಸಲು ಶ್ರಮಿಸುವುದಾಗಿ ಹೇಳಿದ್ದರು. ಮಾಧ್ಯಮದವರು ಆಕೆಯನ್ನು ಸಂಮರ್ಕಿಸಿ ನಿರ್ಧಾರದ ಹಿಂದಿನ ಕಾರಣ ಕೇಳಿದಾಗ ಸೋನಾಲಿ, ಬಿಜೆಪಿಯಲ್ಲಿ ತಾನು ಬೇಡದ ವ್ಯಕ್ತಿಯಾಗಿರುವ ಭಾವನೆ ಹುಟ್ಟಿತು ಅಂತ ಹೇಳಿದರು.
‘ಬಿಜೆಪಿ ಸೇರುವ ನನ್ನ ನಿರ್ಧಾರ ತಪ್ಪು ಅಂತ ನನಗೆ ಈಗ ಅನಿಸುತ್ತಿದೆ. ಬಿಜೆಪಿಯನ್ನು ಬಿಡುತ್ತಿರೆವೆನೆಂದು ಅವರಿಗೆ ತಿಳಿಸುವ ಗೋಜಿಗೂ ನಾನು ಹೋಗಲಿಲ್ಲ. ನಾನು ಅಲ್ಲಿ ಸಲ್ಲುತ್ತಿಲ್ಲ ಅಂತ ನನಗೆ ಸದಾ ಅನಿಸುತ್ತಿತ್ತು. ಅವರು ನನ್ನನ್ನು ಉಪಯೋಗಿಸಿಕೊಂಡು ಮಮತಾ-ದಿ ಅವರನ್ನು ಹೀಯಾಳಿಸುವಂತೆ ಹೇಳಿದರು. ನನಗೆ ಅದನ್ನು ಮಾಡುವುದು ಸಾಧ್ಯವಿರಲಿಲ್ಲ,’ ಎಂದು ಸೋನಾಲಿ ಹೇಳಿದರು.
ಹಿಂದೆ ಪಶ್ಚಿಮ ಬಂಗಾಳ ವಿಧಾನ ಸಭೆಯ ಡೆಪ್ಯುಟಿ ಸ್ಪೀಕರ್ ಆಗಿದ್ದ ಸೋನಾಲಿ ಅವರು ಟಿಎಮ್ಸಿಗೆ ಮರಳಲು ಮಮತಾ ಅವರನ್ನು ಭೇಟಿಯಾಗುವ ಇಚ್ಛೆಯಿದೆ ಎಂದು ಹೇಳಿದರು.
‘ದೀದಿಯನ್ನು ವೈಯಕ್ತಿಕವಾಗಿ ಭೇಟಿಯಾಗಲು ನಾನು ಪ್ರಯತ್ನಿಸುತ್ತಿರುವೆ. ಆದರೆ ಮುಖ್ಯಮಂತ್ರಿಯಾಗಿರುವ ಅವರು ಬ್ಯುಸಿಯಾಗಿರುತ್ತಾರೆ, ನಾನು ಕೇಳಿದ ಕೂಡಲೇ ಅವರು ಭೇಟಿಯಾಗುವ ಅವಕಾಶ ಕಲ್ಪಿಸುತ್ತಾರೆ ಅಂತ ನಿರೀಕ್ಷಿಸುವುದು ಸರಿಯಲ್ಲ,’ ಎಂದು ಸೋನಾಲಿ ಹೇಳಿದರು.
‘ಇತ್ತೀಚಿಗೆ ನಿಧನ ಹೊಂದಿದ ಅವರ ಸಹೋದರನ ಅಂತಿಮ ವಿಧಿಗಳು ಮುಂದಿನ ವಾರ ನಡೆಯಲಿವೆ. ಆಗ ನಾನು ದೀದಿಯ ಮನೆಗೆ ಹೋಗಿ ಅವರೊಂದಿಗೆ ಮಾತನಾಡುವ ಪ್ರಯತ್ನ ಮಾಡುತ್ತೇನೆ,’ ಎಂದು ಆಕೆ ಹೇಳಿದರು.
Published On - 9:02 pm, Sat, 22 May 21




