Raksha Bandhan 2022: ರಕ್ಷಾ ಬಂಧನ ಮಹತ್ವ, ಪ್ರಾಮುಖ್ಯತೆ ಮತ್ತು ಆಚರಣೆ ಮಾಹಿತಿ ಇಲ್ಲಿದೆ
Raksha Bandhan 2022; ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ಆಚರಿಸಬೇಕಾದ ಸಂಸ್ಕಾರಯುತವಾದ ಆಚರಣೆಯೇ ರಕ್ಷಾ ಬಂಧನ. ಇದೊಂದು ಮಹತ್ವ ಪೂರ್ಣ ಆಚರಣೆ.
![Raksha Bandhan 2022: ರಕ್ಷಾ ಬಂಧನ ಮಹತ್ವ, ಪ್ರಾಮುಖ್ಯತೆ ಮತ್ತು ಆಚರಣೆ ಮಾಹಿತಿ ಇಲ್ಲಿದೆ](https://images.tv9kannada.com/wp-content/uploads/2022/08/Untitled-design-2022-08-09T193519.128.jpg?w=1280)
ಪ್ರತಿಯೊಂದು ಮಾಸಕ್ಕೂ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು ನೀಡುವ ಮಾಸ. ಈ ಮಾಸದಲ್ಲಿ ಬರುವ ಹಬ್ಬಗಳು ಆಚರಣೆಗಳು ಭಾವಕ್ಕೆ ಹೆಚ್ಚು ಹತ್ತಿರವಾದುವುಗಳು. ಶ್ರಾವಣ ಹುಣ್ಣಿಮೆಯೆಂಬುದು ಅತ್ಯಂತ ಅಭೂತಪೂರ್ವ ದಿನ. ಇದೊಂದು ಪುಣ್ಯಪ್ರದ ಕಾಲವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ಆಚರಿಸಬೇಕಾದ ಸಂಸ್ಕಾರಯುತವಾದ ಆಚರಣೆಯೇ ರಕ್ಷಾ ಬಂಧನ. ಇದೊಂದು ಮಹತ್ವ ಪೂರ್ಣ ಆಚರಣೆ. ನಮ್ಮಲ್ಲಿ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ತಮ್ಮ ರಕ್ಷಣೆಯ ಸಲುವಾಗಿ ಸುಂದರವಾದ ದಾರ ಕಟ್ಟುವ ದಿನ / ಸಮಯ/ ಸಂದರ್ಭವೇ ರಕ್ಷಾಬಂಧನ ಎಂಬ ಭಾವನೆಯಿದೆ. ಇದು ತಪ್ಪಲ್ಲ. ಆದರೆ ಇದಕ್ಕೆ ಮಿಗಿಲಾದ ಅತ್ಯಂತ ಅದ್ಭುತವಾದ ಕಲ್ಪನೆ ಇದಕ್ಕಿದೆ.
ಸರ್ವಸಾಮಾನ್ಯವಾಗಿ (ಶ್ರಾವಣ ಹುಣ್ಣಿಮೆಯಂದು ಸರ್ವಸಾಧಾರಣ ಉಪ ಕರ್ಮವಿದೆ ) ಬರುವ ಉಪಕರ್ಮದ ದಿನದಂದೇ ಈ ರಕ್ಷಾಬಂಧನ ಬರುವುದು. ಇದರ ಸಮ್ಮಿಲನದ ತಾತ್ಪರ್ಯವೇನೆಂದರೆ ವಿದ್ಯಾರ್ಜನೆಗಾಗಿ ದೀಕ್ಷಿತನಾದ ಅಗ್ರಜನೇ / ಅನುಜನೇ ನಿನ್ನ ವಿದ್ಯೆಯೆಂಬುದು ನನ್ನನ್ನು ಮತ್ತು ನನ್ನಂತಿರುವ ಸ್ತ್ರೀಸಂಕುಲವನ್ನು ಹಾಗೆಯೇ ತಾಯಿ ಭಾರತಿಯ ಸಂರಕ್ಷಣೆಗೋಸ್ಕರವಿರಲಿ ಮತ್ತು ಅದರ ರಕ್ಷಣೆಯೂ ಕೂಡ ನಿನ್ನ ವಿದ್ಯಾರ್ಜನೆಯ ಮೂಲ ಉದ್ದೇಶ ಎಂಬುದನ್ನು ನೆನಪಿಸುವ ಸಲುವಾಗಿ ಈ ರಕ್ಷೆಯನ್ನು ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ಕಟ್ಟುತ್ತಾರೆ. ಎಂಬುದು ತಿಳಿಯಬೇಕಾದ ಸತ್ಯಾಂಶ.
ಮನುಷ್ಯ ತನ್ನ ಜೀವನದಲ್ಲಿ ಹಲವು ವಸ್ತುಗಳ ರಕ್ಷಣೆ ಮಾಡಲೇ ಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ತಾತ್ಪರ್ಯ ಅವರು ಅಬಲರು ಎಂದಲ್ಲ. ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು ಭೂಮಿಯನ್ನು (ತಾಯಿ ಎಂಬ ಭಾವದಿಂದ) ವಿದ್ಯೆ (ಸರಸ್ವತೀ ಎಂಬ ಭಾವದಿಂದ) ಸಹೋದರಿಯರು ( ತಾಯಿಸಮಾನರು ಎಂಬ ಭಾವದಿಂದ) ಹೀಗೆ ಬೇರೆಬೇರೆ ಕಾರಣಗಳಿಂದ ನಾವು ಅವರನ್ನು ರಕ್ಷಿವುದು ನಮ್ಮ ಆದ್ಯ ಕರ್ತವ್ಯ. ಸನಾತನ ಸಂಪ್ರದಾಯದ ಪ್ರಕಾರ ಯಾವುದೇ ಕಾರ್ಯಕ್ಕೂ ದೀಕ್ಷಿತರಾಗಬೇಕು ಅರ್ಥಾತ್ ಕಂಕಣಬದ್ಧರಾಗಬೇಕು . ಈ ಎಲ್ಲಾ ಕಾರಣಗಳಿಂದ ಒಂದರ್ಥದಲ್ಲಿ ರಕ್ಷಾಬಂಧನ ಸಂಘಟಿತವಾಗಿ ಹರಿದುಬಂದಿದೆ.
ಇನ್ನು ಎಲ್ಲಾ ಕಾರ್ಯದ ಆರಂಭದಲ್ಲೂ ಆಯಾಯ ಕರ್ಮದ ರಕ್ಷಣೆಯ ಹೊಣೆ ಇರುವುದರಿಂದ ರಕ್ಷೆಯಧಾರಣೆಯೆನ್ನುವುದು ಅನೂಚಾನವಾಗಿ ನಡೆದುಬಂದ ಪದ್ಧತಿ. ಹಿಂದಿನ ಕಾಲದಲ್ಲಿ ಕಂಕಣ ಧಾರಣೆಯೆನ್ನುವುದು ಒಂದು ವಿಶೇಷವಾದ ಸಂಸ್ಕಾರವಾಗಿ ಮಾಡಲ್ಪಡುತ್ತಿತ್ತು . ಮಧ್ಯಕಾಲದಲ್ಲಿ ಇದರ ಮಾಹಿತಿಯ ಕೊರೆತೆಯಿಂದಾಗಿ ಸ್ವಲ್ಪಪ್ರಮಾಣದಲ್ಲಿ ನಿಂತಂತೆ ಆಗಿತ್ತು. ಆದರೆ ವರ್ತಮಾನದಲ್ಲಿ ಇದರ ಬಗ್ಗೆ ಅರಿತು ಮಾಡುವ ಯುವ ಜನರು ಹೆಚ್ಚಾಗಿರುವುದರಿಂದ ಈ ಆಚರಣೆ ಪುನಃ ಆರಂಭವಾಗಿದೆ. ರಕ್ಷಾಬಂಧನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ದೇಶ ಕಾಯುವ ಯೋಧರು, ಮಾಹಿತಿ ನೀಡಿ ರಕ್ಷಿಸುವ ಮಾಧ್ಯಮದವರು, ಸಾಗಿಸುವ ಸಾರಿಗೆಯವರು, ಅನ್ನ ನೀಡುವ ರೈತರು, ಅಕ್ಷರ ಕಲಿಸುವ ಗುರುಗಳು,ಆರಕ್ಷಕರು ಇವರೆಲ್ಲಾ ನಮ್ಮ ರಕ್ಷಕರೇ ಹೌದು. ಹೀಗೇ ಹಲವಾರು ಪ್ರಾಮಾಣಿಕ ಶಕ್ತಿಗಳು ನಮ್ಮ ರಕ್ಷಕರೇ ಆಗಿರುವರು. ಇವರೊಂದಿಗೆ ಸಾಧ್ಯವಾದಷ್ಟು ಭಾವಬಂಧವ ದಾರದೊಂದಿಗೆ ಬೆಸೆಯೋಣ. ಈ ಸಲದ ರಕ್ಷಾಬಂಧನವನ್ನು ಅರಿತು ಅರಿವಿರುವವರೊಂದಿಗೆ ಅರಿವಿಗಾಗಿ ಆಚರಿಸೋಣ ಅಲ್ಲವೇ ?
ರಕ್ಷೆ ಧರಿಸುವಾಗ ಹೇಳುವ ಮಂತ್ರ
ಯೇನಬದ್ಧೋಬಲೀರಾಜಾ ದಾನವೇಂದ್ರೋ ಮಹಾಬಲಃ | ತೇನತ್ವಾಮಭಿಬಧ್ನಾಮಿ ರಕ್ಷೇಮಾಚಲ ಮಾಚಲ ||
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು
S.R.B.S.S College kkmanasvi@gamail.com
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ